ಡಾ. ವೃಂದಾ ಸಂಗಮ್
–ಪ್ರಯಾಣಕೆ ಬರುವ ಹೋಗುವ ದಿನಾಂಕ
ಪ್ರಯಾಣಕೆ ಬರುವ ಹೋಗುವ ದಿನಾಂಕ
ಎರಡೂ ಮೊದಲೇ ನಿರ್ಧಾರವಾಗಿವೆ.
ಬರುವುದು ಹೇಗೇ ಇದ್ದರೂ ಕೊನೆಯಂಕ
ಮಲಗಿ ಹೋಗುವ ಆಸನ ಕಾಯ್ದಿರಿಸಿದೆ.
ಬರುವಾಗ ಸ್ವಾಗತಿಸಿದವರ ಕಂಡಿಲ್ಲ,
ಸವಿಯುಂಡ ನೆನಪು ನಮಗಿಲ್ಲ,
ಹೋಗುವಾಗ ಕಳಿಸುವವರ ಗಳಿಸಿಲ್ಲ,
ಯಾರಿಗೆ ಪುರಸೊತ್ತು ಗೊತ್ತಿಲ್ಲ.
ಉಸಿರಾಡುವವರೆಗೆ ಮಹಲು ಮಣ್ಣು,
ಬಸಿರ ಮಕ್ಕಳು ಮಡದಿ ಹೊನ್ನು,
ಉಸಿರು ನಿಂತರೆ ಸೇರಬೇಕು ಮಣ್ಣು,
ಕಿಸಿರುಗೊಂಡರೆ ಕೇಳದು ಇನ್ನು.
ಧನಿಕನೋ ಧನ ಹೀನನೋ ಒಂದೆ,
ಸಾವಿನ ಸಂತೆಯ ಮುಂದೆ.
ಮನಕೆ ನಂಬಿಸದಿರು ಶಾಶ್ವತವೆಂದೆ,
ಠಾವನು ಬಿಡದು ಸಾವು ಎಂದೆ.
ಜೀವನವು ನಡೆಯುತಿರಬೇಕು ಎಲ್ಲ
ನಮ್ಮದೆಂಬ ಸಂಭ್ರಮದಲಿ,
ಸಾವು ಬಂದರೆ ನನ್ನದಿಲ್ಲಿ ಏನಿಲ್ಲ
ಎಂಬ ಧೈರ್ಯದ ಸಂಗಮದಲಿ.






0 Comments