ಜಿ ಎನ್ ನಾಗರಾಜ್
ಅನಂತ ಮೂರ್ತಿ,ಪ್ರತಿಭಟನೆಗಳು, ವಿವಾದಗಳು ಮತ್ತು ಸಾರ್ತ್ ಎಂಬ ಸಾಹಿತಿ :
ಇಂದು ಅನಂತ ಮೂರ್ತಿಯವರ ಬಗೆಗೆ ಬೇಕಾದಷ್ಟು ಮಾತುಗಳ ಹೊಳೆ ಹರಿದಿದೆ. ಅವರು ಸಮಾಕಾಲೀನ ಸಾಮಾಜಿಕ, ಸಾಂಸ್ಕೃತಿಕ , ರಾಜಕೀಯ ಸಂಗತಿಗಳಿಗೆ ಪ್ರತಿಕ್ರಿಯಿಸುತ್ತಾ ವಿವಾದಗಳಿಗೆ ಸಿಕ್ಕಿ ಹಾಕಿಕೊಳ್ಳುತ್ತಿದ್ದ ಬಗ್ಗೆ, ತಾವೇ ವಿವಾದಗಳನ್ನು ಆಹ್ವಾನಿಸಿಕೊಳ್ಳುತ್ತಿದ್ದ ಬಗ್ಗೆ ಸಾಕ್ಷೀ ಪ್ಪ್ರಜ್ಞೆಯಾಗಿದ್ದ ಬಗ್ಗೆ ಇತ್ಯಾದಿ .ಅವರ ಈ ಗುಣಗಳಿಗೆ ಪ್ರೇರಣೆ ನೀಡಿದ ತತ್ವಗಳು, ವ್ಯಕ್ತಿಗಳ ಬಗ್ಗೆ ಈ ಚರ್ಚೆಗಳು ಮಾತುಗಳು ಹೊಳಹು ನೀಡಲಿಲ್ಲ ಎಂದೆನ್ನಿಸಿತು.
ನಾನು ಅವರ ಸಾಹಿತ್ಯ ಬರಹಗಳನ್ನು ಬಹಳ ಹಿಂದೆಯೇ ಓದಿದ್ದೆನಾದರೂ ಕೊನೆಯ ಎರಡು ದಶಕಗಳಲ್ಲಿ , ಮುಖ್ಯವಾಗಿ ಅವರ ಸಾಹಿತ್ಯೇತರ ಕ್ರಿಯಾಶಾಲಿತನದ ಅವಧಿಯಲ್ಲಿಯೇ ಅವರೊಂದಿಗೆ ಬಹಳ ಒಡನಾಡಿದ್ದು. ಈ ಸಮಯದಲ್ಲಿ ಅವರ ವರ್ತನೆಯಲ್ಲಿ ಒಂದು ಪ್ಯಾಟರ್ನ್ ಗಮನಿಸಿದ್ದೇನೆ. ಅನೇಕ ಕಾರ್ಯಕ್ರಮಗಳಿಗೆ ಜನರು ಅತಿಥಿಗಳನ್ನಾಗಿ ಆಹ್ವಾನಿಸಲು ಬರುತ್ತಿದ್ದರು. ಅದರಲ್ಲಿ ಅನಂತಮೂರ್ತಿಯವರು ಯಾವುದನ್ನು ಒಪ್ಪಿಕೊಳ್ಳುತ್ತಿದ್ದರು ಎಂಬುದು ಕುತೂಹಲಕಾರಿ.
ಈ ಕಾರ್ಯಕ್ರಮ ಅವರಿಗೆ ಪ್ರಿಯವಾದದ್ದು ,ಮುಖ್ಯವಾದದ್ದು ಅವರು ಒಪ್ಪಿಕೊಳ್ಳುತ್ತಾರೆ ಎಂದು ನೀರೀಕ್ಷಿಸುವ ಅನೇಕ ಕಾರ್ಯಕ್ರಮಗಳನ್ನು ನಯವಾಗಿ ತಿರಸ್ಕರಿಸಿಬಿಡುತ್ತಿದ್ದರು . ಅಂದು ನಡೆಯುತ್ತಿದ್ದ ಕೆಲವು ಘಟನೆ, ಪ್ರಸಂಗಗಳ ಬಗ್ಗೆ ಅವರಿಗೆ ತಮ್ಮ ವಿಚಾರಗಳನ್ನು ಹಂಚಿಕೊಳ್ಳಬೇಕು , ಒಂದು ಚರ್ಚೆ ಎಬ್ಬಿಸಬೇಕು ಎಂದು ಎನ್ನಿಸುತ್ತದೆಯೋ ಅದಕ್ಕೆ ಅವಕಾಶವಾಗುವ ಕಾರ್ಯಕ್ರಮ ಅದು ಎಷ್ಟೇ ಅಮುಖ್ಯವಾದುದಾದರೂ ಒಪ್ಪಿಕೊಳ್ಳುತ್ತಿದ್ದರು. ಅಲ್ಲಿ ಬೇಕೆಂತಲೇ ವಿವಾದವಾಗುವ ರೀತಿಯಲ್ಲಿಯೇ ಪದಗಳ ಬಳಕೆ ಮಾಡುತ್ತಿದ್ದರು. ಉದ್ದೇಶ ಸ್ಪಷ್ಟ. ಆ ವಿಚಾರಗಳು ಬಹಳ ಕಾಲ ಚರ್ಚೆಯಾಗಬೇಕು . ಸುಮ್ಮನೆ ಪತ್ರಿಕೆಗಳಿಗೆ ಒಂದು ದಿನದ ಸುದ್ದಿಯಾಗುವುದರಲ್ಲಿ ಮುಗಿದುಹೋಗಬಾರದು . ಹೀಗಾಗಿಯೇ ಅವರು ಕರ್ನಾಟಕದಲ್ಲಿ ಒಂದು ಎಚ್ಚರ ಮೂಡಿಸಲು ಸಾಧ್ಯವಾಗಿದ್ದು.
ಹೀಗೆ ಸಾಕ್ಷೀ ಪ್ರಜ್ಞೆಯಾಗುವ ಉಮೇದು ,ಸಾಮಾಜಿಕ ಕ್ರಿಯಾಶೀಲತೆಯ ಮಾದರಿ ಅವರಿಗೆ ದೊರಕಿದ್ದು ಪ್ರಸಿದ್ಧ ಫ್ರೆಂಚ್ ಸಾಹಿತಿ ಸಾರ್ತ್ರ ಅವರಿಂದ ಮತ್ತು ಇಂಗ್ಲೆಂಡಿನ ಹೊಸ ಎಡ ಪಂಥದ ಸಾಹಿತಿಗಳಿಂದ . ಸಾರ್ತ್ರ ಅವರಿಗೆ ಪ್ರಿಯವಾದ ಲೇಖಕರಲ್ಲಿ ಒಬ್ಬ . ಅಸ್ತಿತ್ವವಾದದ ನಿರೂಪಕ .ನನಗೆ ಗೊತ್ತಿರುವಂತೆ ಅವರ ತ್ರಿವಳಿ ಅನಂತಮೂರ್ತಿಯವರಿಗೆ ಪ್ರಿಯವಾದ ಕೃತಿಗಳು. ಅವರು ಫ್ರಾನ್ಸ್ ನಲ್ಲಿ ಏಕ ವ್ಯಕ್ತಿ ಸೈನ್ಯವಾಗಿದ್ದವರು. ಒಬ್ಬ ಲೇಖಕ ತನ್ನ ಜೀವನದಲ್ಲಿ ಅವರಷ್ಟು ಧಾಳಿಗಳಿಗೆ-ಬಹಳ ವೈವಿಧ್ಯಮಯ ಶತ್ರುಗಳಿಂದ , ಬಹಳ ಬಲಶಾಲಿಗಳಿಂದ -ಒಳಗಾದವರು ಮತ್ಯಾರೂ ಇಲ್ಲ . ಎಂಬ ಹೆಸರು ಪಡೆದಿದ್ದವರು.
ಸಾರ್ತ್ ರವರ ಜೀವನ ತತ್ವ ಹೀಗಿತ್ತು : ತಾನು ಜೀವಿಸುವ ಸಮಾಜದ ಕಾಳಜಿಗಳ ಬಗ್ಗೆ ಭಾವನಾತ್ಮಕ ಬದ್ಧತೆ , ಅವುಗಳ ಮೂಲಕ ಇಂದಿನ ಜೀವನದಲ್ಲಿ ಒಂದು ವೇಗವರ್ಧಕವಾಗಿ ಮತ್ತು ಭವಿಷ್ಯಕ್ಕೆ ಒಂದು ಕೊಂಡಿಯಾಗಿ ಬದುಕುವುದು. ಅವರು ಬರೆಯುತ್ತಾರೆ : ಒಬ್ಬ ಲೇಖಕನಿಗೆ ಈ ಪ್ರಮಾಣವನ್ನು ಶಿಫಾರಸು ಮಾಡುತ್ತೇನೆ.ಅವನ ಕೃತಿಗಳು ಸಿಟ್ಟನ್ನು, ತಳಮಳವನ್ನು, ನಾಚಿಕೆಯನ್ನು ದ್ವೇಷವನ್ನು, ಪ್ರೀತಿಯನ್ನು ಉಂಟುಮಾಡಬೇಕು ಆಗ ಅವನು ಜೀವಿಸುತ್ತಾನೆ.
ಅನಂತ ಮೂರ್ತಿಯವರೂ ಈ ಆಶಯಗಳಲ್ಲಿ ಹಲವನ್ನು ಜೀವಿಸಲು ಪ್ರಯತ್ನಿಸಿದ್ದಾರೆ ಎಂಬುದು ಸ್ವಯಂ ಸ್ಪಷ್ಟ . ಹಾಗೆಯೇ ಬ್ರಿಟನ್ನಿನ ರೇಮಂಡ್ ವಿಲಿಯಮ್ಸ್ , ಮತ್ತಿತರರು ಕೂಡ ವಿವಿಧ ವಿಷಯಗಳ ಬಗ್ಗೆ ಪ್ರಶ್ನೆಗಳನ್ನೆತ್ತುವುದು , ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುವುದು ಇವುಗಳ ಮೂಲಕ ವರಿಗೆ ಸಾಮಾಜಿಕ ಕ್ರಿಯಾಶೀಲತೆಯ ವಿಷಯದಲ್ಲಿ ಮಾದರಿಯಾಗಿದ್ದರು. ಆದರೆ ಅವರ ಮೇಲೆ ಗಾಢವಾಗಿ ಪ್ರಭಾವ ಬೀರಿದ ಅವರ ವ್ಯಕ್ತಿತ್ವದಲ್ಲಿ ಅತ್ಯಂತ ಪ್ರಭಾವಶಾಲಿಯಾದ ಇಂತಹ ಅನೇಕ ವಿಷಯಗಳೂ ಇಂದಿನ ಚರ್ಚೆಗಳಲ್ಲಿ ಕಾಣದಾಯಿತು.
ಸಂಧ್ಯಾರವರೇ , ಇದನ್ನು ಫೇಸ್ ಬುಕ್ ನಿಂದ ಆಯ್ಕೆ ಮಾಡಿ ‘ಅವಧಿ’ಗೆ ಹಾಕಿಕೊಂಡಿದ್ದಕ್ಕೆ ವಂದನೆಗಳು. ಫೇಸ್ ಬುಕ್ ಗೆ ಪೋಸ್ಟ್ ಮಾಡಿದ ಮೇಲೆ ಕೆಲ ಸಣ್ನಪುಟ್ಟ ತಿದ್ದು ಪಡಿ ಮಾಡಿ ಎಡಿಟ್ ಮಾಡಿದ್ದೆ. ನಿಮ್ಮ ಗಮನಕ್ಕೆ