ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಹಯಾನಕ್ಕೆ ಸಹಿ

ಆರ್. ವಿ. ಭಂಡಾರಿಯವರು ನಮ್ಮನ್ನಗಲಿ 3 ವರುಷ.

ಅವರ ನೆನಪಿಗೆ – ವಿಷ್ಣು ನಾಯ್ಕ ಅವರು ಬರೆದಿರುವ ಈ ಕವಿತೆ

(ಡಾ. ಆರ್.ವಿ.ಭಂಡಾರಿ ಒಡನಾಟದ ಮೆಲುಕು)

1

ನಿನ್ನ `ಸಹಯಾನಕ್ಕೆ’ ಸಹಿಮಾಡಿದ ಖುಷಿಯಲ್ಲಿ

ಬಂದಿರಲಿಲ್ಲ ನಿದ್ದೆ, ಕಾರಣ ಗೊತ್ತು ನಿನಗೇ! ಬಾಗಿಲು

ತೆರೆದಿತ್ತು!…

ಒಣ ಜಬ್ಬು ಪಳದಿ ಹರಡಿದ `ಘಮ ಘಮ’ದ ಮಧ್ಯೆ

ನಿಲ್ಲಿಸಿ ಧರೆದೊರೆಗಳ, ಅಂಗುಲಂಗುಲ ಅಳೆವ

ಮಾತಿನೂಟಕೆ, ಗೊತ್ತೇ ಇರಲಿಲ್ಲ ಕಳೆದ ಹೊತ್ತು!

 

ಹಿಂಡುಹಿಂಡಾಗಿ ಜಿಗಿವ ಜಿಂಕೆಗಳ ಜಗ್ಗಿ ಕಿವಿ

ಹಿಂಡುವಾಗಲೂ ಮರೆಯದ ಮುಗುಳ್ನಗೆ ಬಗೆ

ಗೆ ಹುಡುಕುತ್ತಿದ್ದೇನೆ ಮಾದರಿ, ಸಿಗಲಿಲ್ಲ ನನಗೆ!

ಉಂಬಾಗ ತಾಟಿಗೆತಾಟು ತಾಗಿಸಿ ಬಳಿಕರೆದು `ಚಿಟ್ಟಿ’

ಅರುಳುತ್ತಿದ್ದ ಎದೆಬಾಗಿಲ ನಗೆನಂಟಿನ ನಡುವೆ

ಕೆಂಪಾಗುವ ಕಣ್ಣು ನಿನ್ನ, ನೆತ್ತಿಗೇರುತ್ತಿದ್ದ

ಅಮಲು – ಆಕ್ರೋಶ ! ಚಕ್ಕನೆ ಮಾತಿನ ಮಧ್ಯೆ

ಹೊಳೆವ ಮಿಂಚು! ಮತ್ತದೇ ಒಳದನಿಯ ಅಳು!

ಅಲ್ಲ ಹೆದರಿ, ಕಳಕೊಂಡವರ ಕತೆಯ ಕರುಳ ಕಂಬನಿ!

2

ಎಷ್ಟು ವರ್ಷಗಳಾಗಿರಬಹುದಣ್ಣ ಒಡನಾಡಿದ

ದಾರಿ ಸುಖ – ದುಃಖ? ನೆನಪಿದೆಯೇ ನಿನಗೆ?

ಆಯಿತಿಂದಿಗೆ ಸರಿ ಅರ್ಧಶತಮಾನ! ಕೋಡಿಬಾಗ

ದಿಂದ ಕೆರೆಕೋಣದವರೆಗೂ ಅಂಗಂಗಿ ಹಿಡಕೊಂಡು

ನಡೆದು ಬಂದುದ ನೆನೆಯೆ, ಗಮ್ಮೆನ್ನುವುದು ಮೊದಲು

`ಮೀನಪಳದಿ’ಯ ಬೆನ್ನತ್ತಿ ಸವೆಸಿದ `ಕೃಷ್ಣ ಭವನ’ದ ದಾರಿ!

ತಿನ್ನುವಾಗಲೂ ಬಂಗಡೆ ತೋರಿ ಕಾಣುತ್ತಿದ್ದೆ ನೀನು

ಮುಳ್ಳಿನಲ್ಲೇ ವರ್ಣ ಮತ್ತು ವರ್ಗ ಸಂಘರ್ಷದ ದಾರಿ

ಎಂಥ ರುಚಿಯಿತ್ತಣ್ಣ ಪಳದಿಗೆ ಆ ದಿನ ! ನೀನು

ಬೇಕೆಂದೆ ಮತ್ತೂ, ಸಾಕೆಂದೆ ನಾನು ; ಹಾಗೇ ತಾನೆ

ಅಲ್ಲಿಂದ ಇಲ್ಲಿತನ ಭಾವಗರ್ಭದ ಅದ್ವೈತ ಭ್ರೂಣ ?…

 

3

ನನ್ನ ಬಾಲ್ಯ ಹೆಕ್ಕುವಾಗೆಲ್ಲ ಆರ್ವಿ, ನೆನಪಾಗುತ್ತೀಯೆ

ನೀನು, ಹೆಗಲ ಬಾರುಕೋಲು! ಎತ್ತಿನಗಾಡಿ! ಹಸಿದ ತಟ್ಟೆ!

ಹರಕುಬಟ್ಟೆ !

ಕೆಚ್ಚಿತ್ತು ಅಲ್ಲಿ, ಮಾಸ್ತರನಾದೆ, `ಮಕ್ಕಳ ಮನೆ’ ಕಟ್ಟಿ ಹಾಡಿದೆ

ಕವಿತೆ, ಕೊಲೆಗಾರನ ಪತ್ತೆಯಾಗದಿರಲು ಹೊರಳಿ

ಕೊಂಡೆ, ನಿಂತೆ ಬೆಂಕಿನ ಮಧ್ಯೆ, ಮಾತು ಮಾತು ಮಾತು!

ಕತೆ-ಕಾದಂಬರಿ ನಾಟಕಗಳೇನೇ ಇರಲಿ, ಬೆಳಕು ತೂರಿದ್ದು

ಕಂದಮ್ಮಗಳ ಕಾವಳದ ಎದೆಗಳಲಿ! ನೀ ಹುಟ್ಟಿದ್ದೂ ಮತ್ತೆ

ಅಲ್ಲೇ ಅಲ್ಲೇ !

ಮಾತು ಮೀರಿ ಮೂಡಿದ ಹೆಜ್ಜೆಗಳಣ್ಣ, ದೊಡ್ಡವರ

ದರಕಾರು ಬಿಟ್ಟು, ಬಿಟ್ಟವನು ಬಾಣ, ತರ್ಕದ ತರಕು

ಗಳ ಸುಟ್ಟು ಚಳಿಕಾಯಿಸಿ ಪಟ್ಟವನು

ಖುಷಿ, `ನಿಜದನಿ’ ಕೊನೆಗೂ ನಿನ್ನದೇ ಒಳದನಿ !

 

4

ಮರೆಯಲಾರೆ ನಿನ್ನ – ಗನರ್ಾಲು ತುಂಬಿಕೊಂಡ

ಹೆಗಲಚೀಲ, ಚಡಪಡಿಕೆಗಳಿದ್ದವು ನಿನ್ನ ಗೌಜಿಗೆ!

ಮುಂದೆ ಪತ್ರಿಕೆ ತುಂಬ `ಪರ-ವಿರೋಧ’ ಯುದ್ಧ !

ಸಿಕ್ಕಾಗ ಎದುರಾಳಿ ಕತ್ತಿ ಬದಿಗಿಟ್ಟು ಮುತ್ತು

ಕೊಟ್ಟವನು – ಚಾಕಲೇಟುಬಾಯಿಗಿಟ್ಟು!

ಹೀಗೆ ಹೀಗೇ, ಅಲ್ಲಿ ಇಲ್ಲಿ ಆಗೆಲ್ಲ ನೀನೇ,

ಬೆಳಕು ಹಂಚಿದ ಬಾಲಕ, ಬಾರುಕೋಲಿನ ಚಾಲಕ

ಊರೋಟ್ಟಿನ ಸೇವಕ.

 

5

ಬೆಂಕಿ ಹಿಮವಾದ ನೆನಪುಗಳೂ ಇವೆ ನನ್ನಲ್ಲಿ:

ಬಂದೊಂದು ದಿನ, ಅಂದೆ – ಕೊಟ್ಟು ಕೈಗೊಂದು ಕವಿತೆ,

`ಇದು ನನಗೇ ಬಿಟ್ಟ ಬಾಣ, ಏನು ಮಾಡೋಣ!’ ಅನು

ವಾಗ – ಇತ್ತು ಕಣ್ಣಂಚಿನಲ್ಲೊಂದು ಕರುಳಹನಿ!

 

6

ಬರುತ್ತಿದ್ದಿ ಆಗಾಗ ಗೌಜು ಗದ್ದಲವಿಲ್ಲದ ದಿನ

ಹೆಕ್ಕಿ, ಹೇಲಿಸಲಿಕ್ಕೆ ಬುದ್ಧಿ: ಆಗಿತ್ತದು ನಿನ್ನ

ಮುಗ್ಧಯತ್ನ, ಇರಲಿಲ್ಲ ಅಂಥ ಯಾವ ಕಾರಣ,

ಆದರೂ ಯಾಕೆ ಕಾಡಿತ್ತು ನಿನಗೆ ಆ ಅಂಥ ಆಭದ್ರ

ಸ್ವಪ್ನ?…

ಮರು `ಮಾತು’ಕೊಟ್ಟೆನಲ್ಲವೇ ನಿನಗೆ?…ನಗು

ವಿತ್ತೊ ತುಟಿಯೊಳಗೆ, ನೋವಿತ್ತೊ ಅದ ಕೇಳಿ!

ಎದ್ದು ಹೋದೆ ನೀನು `ಅಮ್ಮಿ’ಯ ಗಲ್ಲ ಮುಟ್ಟಿ

ಬರಲಿಲ್ಲ ಮುಂದೆ, – ಸಿಗಲಿಲ್ಲ ಮನೆಮಕ್ಕಳಿಗೆ

ಕರುಳ ಮಾತು!…

—————–

ಚಿಟ್ಟಿ- ನನ್ನ ಮನೆಯಲ್ಲಿ – ನನ್ನ ಆಶ್ರಯದಲ್ಲೇ ಬೆಳೆದ ತಮ್ಮನ (ಅನಂತ) ಮಗಳು, ಕ್ಷಮಾ

ಅಮ್ಮಿ- ನನ್ನ ಎರಡನೆಯ ಮಗಳು, ಅಮಿತಾ

ಸಹಯಾನ- ಇದು ಆರ್. ವಿ. ಭಂಡಾರಿಯವರ ಹೆಸರಿನಲ್ಲಿ ರಚನೆಗೊಂಡ ಅಧ್ಯಯನ ಕೇಂದ್ರ

 

‍ಲೇಖಕರು avadhi

25 October, 2011

1 Comment

  1. raju hegade

    masta ide kavite sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading