ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಹಕರಿಸಿ, ಕಳೆದುಹೋಗಿದ್ದಾರೆ ಮುದಿಪ್ರಾಯದವರು..

ಕಾಣೆಯಾಗಿದ್ದಾರೆ…..

ಶೇಷಗಿರಿ ಜೋಡಿದಾರ್ 

ಹಿರಿಯ ನಾಗರಿಕರೊಬ್ಬರ ನಾಪತ್ತೆಯ ಸುದ್ದಿ
ಹಳಸಿ, ಹದವಾಗಿ, ಸುಮಾರು ಸಮಯ ಆಯ್ತು,
ಆತಂಕ, ಶ್ರೀಸಾಮಾನ್ಯನಂತೆ ಕಾಣುವ ಇವರು ಸ್ವಲ್ಪ ನಿಗೂಢ
ಕಾರಣ ಇಷ್ಟೇ….ಮರೆವಿನ ರೋಗ ಡಿಮೆಂಷಿಯಾ….
ಇದ್ದಕ್ಕಿದ್ದಂತೆ ಮಾಯವಾಗುವ,
ಅಭ್ಯಾಸ ರೂಢಿಸಿಕೊಂಡಿದ್ದಾರೆ
ಇವರ ನಿಕಟವರ್ತಿಗಳಿಗೆ ಅನುಮಾನ ಬಾರದ ಹಾಗೆ
ಕುರುಹು, ಸುಳಿವುಗಳಿಲ್ಲದೆ ಕಳೆದುಹೋಗುತ್ತಾರೆ

ಆಗಾಗ್ಗೆ, ಅಪರೂಪವಲ್ಲದಿದ್ದರೂ
ಮುದಿದೇಹಕ್ಕಾದರೂ ಮರುಕ ಮಡುಗಟ್ಟಬಹುದು
ಮೌನದಲ್ಲಿ ಜ್ಞಾನಿಗಳಂತೆ ಭ್ರಮೆ ಬಿತ್ತುತ್ತಾರೆ
ಮಾತಿಗೆ ಇಳಿದಾಗ ಮೊಳಕೆ ಕರಟಿ ನಿರ್ಜೀವ ಭ್ರೂಣ
ಕರ್ಕಶ ಪ್ರತಿಧ್ವನಿ ಕಿವುಡಾಗಿಸುತ್ತದೆ..
ಅಡ್ಡಿ ಇಲ್ಲ… ಹುಚ್ಚರ ಸಹವಾಸವೇ ಹಾಗೆ
ಅತಿ ಸ್ನೇಹಮಯಿ, ಕಂಡ, ಕಂಡವರನ್ನು ನಿಲ್ಲಿಸಿ
ರಸ್ತೆಯಲ್ಲಿ ಮಾತಿಗೆಳೆಯುವ ಪರಿಗೆ
ಮಾನಸಿಕ ಅಸ್ವಸ್ಥ ಎಂಬ ಪ್ರಶಂಸೆ
ಅದೇಕೋ ಈ ಬಾರಿ ಅವರ ಕಾಣದಿರುವಿಕೆ
ಅಸಹಜ ಅನ್ನಿಸುತ್ತಿಲ್ಲ, ಕಾಲ ಮೀರಿಲ್ಲ
ಮರೆಯುವಷ್ಟು ನೀವೆಲ್ಲಾ
ಆಗಮಿಸಬಹುದು ಆಕಸ್ಮಿಕವಾಗಿ ನಿಮ್ಮಲ್ಲಿಗೆ
ಬಂದಾಗ ಅಭಿನಯಿಸಿ, ಒಂದು ಫ್ಹೋನಾಯಿಸಿ
ಖುದ್ದಾಗಿ ನಾನೇ ಬಂದು ಕರೆತರುತ್ತೇನೆ ಪುಸಲಾಯಿಸಿ
ಮತ್ತೆ ಹೊರಹೋಗದ ಹಾಗೆ ಬೀಗ ಜಡಿಯುತ್ತೇನೆ
ಸಹಕರಿಸಿ, ಕಳೆದುಹೋಗಿದ್ದಾರೆ ಮುದಿಪ್ರಾಯದವರು
ಸುಳಿವು ಸಿಕ್ಕದ ಹಾಗೆ, ಎಲ್ಲ ಅಳಿಸಿ, ಕುರುಹುಗಳ ಕುರುಡಾಗಿಸಿ.
ತನ್ನನ್ನೇ ಹುಡುಕುತ್ತಿರುವ ಅಲೆಮಾರಿ ಆತ್ಮ……

‍ಲೇಖಕರು avadhi

31 May, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading