ದಾರಿ ತಪ್ಪಿದ ಚಳವಳಿ
ರಮೇಶ್ ಹಿರೇಜಂಬೂರು
ನ್ಯಾಯ, ನೀತಿ, ಧರ್ಮಕ್ಕಾಗಿ
ಸಂಪು ಹೂಡಿ ಸತ್ತವರೆಲ್ಲ
ಮತ್ತೆ ಹುಟ್ಟಿ ಬರಲಿ
ನಮಗಾಗಿ, ನಮ್ಮ ಬಾಳ್ವೆಗಾಗಿ
ಇಲಿ, ಹೆಗ್ಗಣಗಳೂ ಇಲ್ಲಿ ನಾಯಕರೇ!
ನ್ಯಾಯಕ್ಕೂ ನರಕ ದರ್ಶನ
ಬಡಪಾಯಿಗಳ ಬದುಕಿನ್ನೂ… ಬರುಡು
ಸತ್ಯ, ಧರ್ಮ, ರತಾಯಚಃ ಎಂದ್ಹೇಳಿ
ಬಲಿಕೊಡುತ್ತಿಹರು ಎಲ್ಲವನ್ನ
ಕೇಸರಿ, ನೀಲಿ, ಕಪ್ಪು
ಬಗೆ ಬಗೆ ಬಾವುಟ ಹಿಡಿದು
ಹಾದಿ ಬೀದಿಯಲಿ ಧರಣಿ ಕೂತಿಹರು
ನ್ಯಾಯಕ್ಕಾಗಿ ಅಲ್ಲ; ನಾಯಕರ ಪ್ರತಿಷ್ಠೆಗಾಗಿ!
ತೆವಲು ತೀರಿಸಿಕೊಳ್ಳುವುದಕ್ಕಾಗಿ…
ಬಡವ ಬಲ್ಲಿದರೆಲ್ಲ ಕೈ ಚೆಲ್ಲಿ ನಿಂತಿಹರು
ಹಸಿದ ಹೊಟ್ಟೆಯ ಹೊತ್ತು ಬಿಸಿಲಿನಲ್ಲಿ
ಜೈಲು ಸೇರಿದವರೆಲ್ಲ ಜೈಕಾರ ಹಾಕುತ್ತ
ಹೊರಟಿಹರು ದಿಕ್ಕು ತೋಚಿದತ್ತ
ಉಳ್ಳವರ ಜೊತೆ ಶಿವಾಲಯ ಕಟ್ಟಲು!
ಗೊತ್ತಿಲ್ಲ, ಗುರಿಯಿಲ್ಲ;
ಗಾಂಭೀರ್ಯ ಮೊದಲಿಲ್ಲ
ಚಳವಳಿ ನಡೆಸುತಿಹರು
ನಿತ್ಯ ಕೂಲಿ ಕೊಟ್ಟು
ಗುಂಡು, ತುಂಡು ಬಾಯಿಗಿಟ್ಟು
ದೇಶ ಪ್ರೇಮದ ಹೆಸರಲಿ
ಬಸಿರ ಸೀಳಿ ಹರಿಸಿದರು ನೆತ್ತರು
ಧಮಕಿ ದರ್ಭಾರುಗಳೇ ಉಸಿರು
ಒಸರುತ್ತಿದೆ ಹವಾಲ ಹಣದ ಕೆಸರು
ನೆಲೆ ಕಾಣದ ಬದುಕು
ಕಮರುತ್ತಿದೆ ಕಣಕಣವೂ
ಯೋಗಿಯ ನೇಗಿಲ ಮೊನೆಯಲ್ಲಿ
ಅನುದಿನವೂ ಗೇಯ್ಯುವ ಶ್ರಮಿಕರ ಅಂಗಯ್ಯಲ್ಲಿ
ಕಸ ಮುಸುರೆ ತಿಕ್ಕಿ, ಸವೆದ ಬಳೆಗಳ ಅಂಚಿನಲ್ಲಿ…
ಕಾಸು ಚೆಲ್ಲಿದರಿಲ್ಲಿ ಕಾಯಕಕ್ಕೆ ಕೊನೆ ಹಾಡಿ
ಬರುವರು ಬಾವುಟ ಹಿಡಿದು; ಧಿಕ್ಕಾರ ಕೂಗಿ
ಚಳವಳಿಗೆ ಗುರಿಯಿಲ್ಲ; ದಾರಿ ತಪ್ಪಿದೆಯಲ್ಲ
ಕೆಚ್ಚಿನೆದೆಯಿಲ್ಲ; ಕರ್ಮದ ಖಬರಿಲ್ಲ
ಬೇಳೆ ಬೇಯಿಸಿಕೊಳ್ಳಲು ಇವು ಪಾತ್ರೆಗಳೇ ಎಲ್ಲ!
ಚರಿತ್ರೆ ತಿರುಚಿ-ಮಗುಚಿ, ತಿದ್ದಿ ತೀಡಿ
ನಿಜ ದೇಶಪ್ರೇಮಿಗಳನು ಹೊಸಕಲು ಹಪಹಪಿಸುತಿಹರು
ಮತಾಂಧ, ಭಟ್ಟಂಗಿ, ಬಾಯಿಬಡುಕರು
ಸಮಾಧಿ ಸೇರಿದ ಸಾಕ್ಷಿಗಳೆಲ್ಲ ಮೇಲೇಳಲೂ ಹೇಸಿ
ಪಿಸುಗುಟ್ಟುತ್ತಿವೆ ಪರಮಪಾಪಿಗಳ ಕಂಡು
ನ್ಯಾಯ, ನೀತಿ, ಧರ್ಮಕ್ಕಾಗಿ
ಸಂಪು ಹೂಡಿ ಸತ್ತವರೆಲ್ಲ
ಮತ್ತೆ ಹುಟ್ಟಿ ಬರಲಿ
ನಮಗಾಗಿ, ನಮ್ಮ ಬಾಳ್ವೆಗಾಗಿ..



ಧನ್ಯವಾದಗಳು, ಅವಧಿಗೆ, ಸಂಧ್ಯಾರಾಣಿ ಅವರಿಗೆ ಹಾಗೂ ಸಂಪಾದಕರಾದ ಜಿ.ಎನ್. ಮೋಹನ್ ಅವರಿಗೆ 🙂
kavite channagide,good luck ramesh h., basavaraj sampalli,prajavani, bagalakote
bahu arthapoorna kavana. ruupakagalu chennaagive.indu nadeyuttiruva dongi chalavali bagge maarmika saalugalu.
chennagide kavana.
hindigintha Bhayanaka dhinagalu mundive hallave?