ಮೂಲ: ಕೆಲ್ಲಿ ರಸೆಲ್ಸ್

ಕನ್ನಡ ಭಾವಾನುವಾದ : ಧನಂಜಯ ದಿಡಗ
ಒಂದು ದಿನ;
ಸಂಜೆಯ ಏಕಾಂತ…
ಕಪ್ಪು ಹೆಮ್ಮೋಡಗಳು
ಬದುಕಿನ ಆರ್ಧ್ರತೆಯನ್ನು ಕದ್ದು ಅಡಗಿಸಿಟ್ಟು ಕೊಂಡ ದಿನ
ಪ್ಯಾಬ್ಲೋರ ಗಡಸು ಕಂಠ ಕವಿತೆಯಾಗುತ್ತಿದೆ,
ಬಿಸಿಯಾದ ಗಾಳಿಪದರದ ಮೇಲೆ
ಅಕ್ಷರಗಳ ಕೆತ್ತುತ್ತಾ.
ತೆಂಗುಗರಿಗಳ ಸುಳಿ ಪಟಗುಟ್ಟುತ್ತಿದೆ
ಕವಿತೆಯಾಳದ ಕಚಗುಳಿಗೆ ಮನಸೋತು.
ಅವರ ಟೋಪಿ ಅಲ್ಲೇ ದಿಣ್ಣೆಯ ಮೇಲೆ…ಅನಾಥ.
ತೆರದ ಕಿಟಕಿಯಾಚೆ ನಿಶಬ್ಧ ಮಂದ ಮಾರುತ
ಉರಿ ಸೆಕೆಯ ಝಳುಕು, ಮುಖವ ತೊಯ್ದು, ಮತ್ತುಗಳುದುರಿ,
ಕವಿತೆಯೂ ಬೆವರು ಮುತ್ತಿನ ಜೋಡಿ ಜತ್ತಾಗಿ
ಕೆಳಗೆ ಸಮುದ್ರ ಕಿನಾರೆಯಲ್ಲಿ ಮೇಲೆದ್ದು ಬರುವ ಅಲೆಗಳು
ಮಲಗಿದ ನೆರಳುಗಳ ತಂಪಾಗಿಸುತ್ತಿದ್ದರೂ
ದಡದಾಚೆ ನೆಡೆವ ಪ್ಯಾಬ್ಲೋರ ಒರಟು ಕೆನ್ನೆಯ ತುಂಬಾ
ಬಿಸಿಯಾದ ಉಪ್ಪು ನೀರು.

ಮತ್ತೆ ಹ್ಯಾಟ್ ಪ್ಯಾಬ್ಲೋರ ಬೋಳುತಲೆಯನ್ನಾಕ್ರಮಿಸಿತು
ಎಷ್ಟು ತಂಪು! ವ್ಹಾವ್… ಕಣ್ಣು ನಿಲುಕಿದಷ್ಟೇ ನೋಟ,
ಅಂಚಿನಲಿ ಕಡುನೀಲಿ ಬೆಟ್ಟಗಳು; ಕಣ್ಣು ಕಂಡಷ್ಟೇ ಕನಸುಗಳು,
ಅಂತರಾಳದ ಯುದ್ಧಗಳು ಕೆಂಪಾಗಿ ಪಿಸುಗುಡುತ್ತವೆ.
‘ಪ್ಯಾಬ್ಲೋ ಸುಂದರವಾದದ್ದು ಬರೀ ಸುಂದರವಲ್ಲ.
ಸುಂದರತೆಯ ಹಿಂದೆ ಭೀಕರತೆ ಅಡಗಿದೆ’
ತೆಂಗಿನ ಗಿಡದ ಹಸಿರು , ಸಮುದ್ರದ ಬಸಿರು, ಅದರೊಳಗಿನ ನಿಗೂಢ,
ಅದರೊಳಗಿನ ಆಕಾಶ, ಆಕಾಶದೊಳಗಿನ ಕಪ್ಪು, ಕಪ್ಪಿನೊಳಗಿನ ಮಿಂಚು,
ಮಿಂಚು ಫಳ್ಳೆಂದು ಕೋರೈಸಿದಾಗ ಎಷ್ಟು ಆರ್ತರ ಕಣ್ಣಬಾನಿನ ತುಂಬಾ
ಬೆಂಕಿ ಬೆಳಕು? ಬಿರುಗಾಳಿ ಬಿರುಮಳೆ?
ಆದರೂ ಮೇಲಿನಲೆಗಳು ಎಷ್ಟು ಮನಮೋಹಕ.
ಪ್ಯಾಬ್ಲೋ ತಲೆಯಮೇಲಿನ ಟೋಪಿ ತೆಗೆದೊಗೆಯುತ್ತಾರೆ.
ಮತ್ತದೇ ನಿಶಬ್ಧ ಮಂದ ಮಾರುತ,
ಖಾಲಿ ನೀಲಿ ಆಕಾಶ, ಬಿಸಿಲು ಕಾರುವ ಸೂರ್ಯ.
ಪ್ರತಿ ಹೆಜ್ಜೆಯನೂ ಸಾಗರ ಅಳಿಸುತ್ತಲೇ ಇದೆ.
ಕವಿತೆಯೂ ಪ್ರಶ್ನೆಯಾಗುತ್ತಿದೆ, ಕಾವಳದ ಮಬ್ಬಿನಲಿ





0 Comments