ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದಾಶಿವ ದೊಡಮನಿ ಕವಿತೆ- ವಿಷಾದ ಗೀತೆ…

ಡಾ ಸದಾಶಿವ ದೊಡಮನಿ

ಎದೆಯ ನೋವು ಹೂಗಳ ಪೋಣಿಸಿ
ಮಾಲೆ ಕಟ್ಟಿದ್ದೇನೆ
ಸಂತೆ, ಪೇಟೆಯಲ್ಲಿ ಇಟ್ಟು
ಕೊಳ್ಳುವವರ ಮುಖ, ಮನ ಹೊತ್ತಿಗೆ
ಓದುತ್ತಲೇ ಇದ್ದೇನೆ
ಮುಟ್ಟುವವರಿಲ್ಲ, ಮುಡಿಯುವವರಿಲ್ಲ
ಬರೀ ವಿಷಾದ, ಲೊಚುಗುಟ್ಟುವಿಕೆಯ ಧ್ವನಿಗಳೊಂದಿಗೆ ಮುಂದೆ ಸಾಗುತ್ತಿದ್ದಾರೆ
ಕರುಳು ಹಿಂಡುತ್ತಿದ್ದಾರೆ

ಘಮ್ ಎನ್ನುವ ವಾಸನೆಯತ್ತಲೇ
ಎಲ್ಲರ ನೋಟ, ಕೂಟ
ಮೆಚ್ಚುಗೆಯ ಸ್ವರೋಚ್ಚಾರ, ಸ್ವೇಚ್ಛಾಚಾರ
ಮೈ, ಕೈ ಮುಟ್ಟುವ, ಮುಡಿಯುವ
ಕಣ್ಣಲೇ ಕುಚದ್ವಯಗಳ ಮರ್ಧಿಸುವ ತವಕ!
ಹಸಿರು ಎಲೆಗಳ ಮೇಲೆ ವೀರ್ಯ ಸ್ಖಲಿಸಿ
ಪುರುಷತ್ವ ಸಾಬೀತು ಪಡಿಸುವ ಕುಹಕ!

ಒಬ್ಬರಲ್ಲ, ಇಬ್ಬರಲ್ಲ ಸರತಿಯಲ್ಲಿ
ಸಾಲು, ಸಾಲಾಗಿ ನಿಂತಿದ್ದಾರೆ
ಮುದುಕ ಭೀಷ್ಮರ ಸೊಲ್ಲು
ಯಾರ ಕಿವಿಗೂ ಬೀಳುತ್ತಿಲ್ಲ
ಮುಗಿಬಿದ್ದು, ಹಿಗ್ಗಿನ ಸಗ್ಗದಲ್ಲಿ
ತೇಲುತ್ತ, ಬೀಗುತ್ತ ಅಗ್ಗದ ದಾರಿ
ತುಳಿಯುತ್ತಿದ್ದಾರೆ
ವಾಂಚೆಯ ಹಗ್ಗ ಕುಡಿಯುತ್ತಲೇ ಇದ್ದಾರೆ

ಎದೆಯ ನೋವು ಹೂಗಳ ಮಾಲೆ
ಮುಟ್ಟುವವರಿಲ್ಲ, ಮುಡಿಯುವವರಿಲ್ಲ
ಉರಿವ ಸೂರ್ಯನ ಉಪಟಳದ ಎದಿರು
ಎದೆಯ ನೋವು ಹೂಗಳ ನಿತ್ಯ ಸಾವು!!
ಅಳುವವರಿಲ್ಲ, ಹೊರುವವರಿಲ್ಲ!

‍ಲೇಖಕರು avadhi

15 March, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading