ಸತೀಶ
ಕುಲಕರ್ಣಿ
ಅರ್ಧ ಮೈಮುಚ್ಚಿಗೆ
ಇನ್ನರ್ಧ ಗಾಳಿ ಬಿಸಿಲಿಗೆ
ಅಂದು ಆ ಬಾವಿ ಕಟ್ಟೆಯ ಮೇಲೆ ನಿಂತವಳ ಬಾಳು
ಇಂದೂ ಮಳೆ ಬಿಸಿಲು ತೋಳಿಗೆ
ಮಹಾತ್ಮನನ್ನು
ಅರ್ಧ ಸೀಳಿದ
ಆ ಹೆಣ್ಣು ಮಗಳು ಈಗ ಈಗೆಲ್ಲಿ ?
ಇಲ್ಲಿಯೇ
ಹರಕು ಉಡಿಯಲ್ಲಿ
ತಂಗಳೂಟವ ಕಟ್ಟಿಕೊಂಡು
ತಿರುಗುತ್ತಿರವಳೋ ಅವಳು ?
ಗುಡಿ ಗುಂಡಾರ, ಜೋಪಡಾ ಪಟ್ಟಿ
ಮಹಾನಗರ, ಮುನಸಿ ಪಾಲ್ಟಿ
ಫುಟ್ ಪಾತೋ, ಪ್ಲೈ ಓಹರೊ
ಎಲ್ಲೊ ಮಾನಮುಚ್ಚಲು ಅಡಗಿಕೊಂಡಿರವಳೊ ?
ಅಥವ
ಐಡಿ, ಆಧಾರ್, ರೇಷನ್ ಕಾರ್ಡುಗಳಿಗಾಗಿ
ಸೌಧ ಸೌಧಗಳ ಸುತ್ತುತ್ತಿರುವಳೊ ?
ಇಲ್ಲ,
ಸಾಕ್ಷಿಗಳಿಲ್ಲದೆ ಅತ್ಯಾಚಾರಕ್ಕೆ
ತಲೆಬಾಗಿ ಕಟಕಟೆಗಳಲ್ಲಿ ನಿಂತಿರುವಳೊ ?
ಅವಳು,
ಅಖಂಡ ಭಾರತದ
ಖಂಡ ಮಾಂಸಗಳಲಿ
ಕ್ವಾರಂಟೈನೊ, ಬ್ಯಾರಿಕೇಡುಗಳ
ಭೇದಿಸುತ್ತ ಅಂಡಲಿಯುತ್ತಿರುವಳೋ ?
ಈ ಜೀವಾತ್ಮ ಭರವಸೆಯ ಮಹಾಭಾರತದಲ್ಲಿ
0 ಪ್ರತಿಕ್ರಿಯೆಗಳು