ಸಂಘಮಿತ್ರೆ ನಾಗರಘಟ್ಟ
ಎಷ್ಟೇ ಕಾಲ ಮಾಸಿದರು
ನಿಮ್ಮ ಮನದ ಕೊಳೆ ಮಾತ್ರ
ಹಾಗೇ ಉಳಿದಿದೆ-
ಅಳಿಸಲಾಗದ ಬರೆಯಂತೆ
ಅದನ್ನು ಉಜ್ಜಿ ಉಜ್ಜಿ ತೊಳೆದಷ್ಟು
ಹೊಳಪು ಹೆಚ್ಚಾಗುತ್ತಿದೆ…
ಪಾಪದ ಮಕ್ಕಳು
ಕಣ್ ಅರಳಿಸಿ ನಿಮ್ಮತ್ತ ನೋಡುತ್ತಿದ್ದರೆ..
ನೀವು ಅವುಗಳತ್ತ ಒಮ್ಮೆ ಎಸೆವ ಬಿಸ್ಕತ್ತು
ಅವರ ಕ್ಷಣದ ಹಸಿವ ನೀಗಿಸಬಹುದು
ಆ ಕೃತಜ್ಞತೆಯ ಕುರುಹಿಗೆ ಅವು
ನಿಮಗೆ ಕೈಮುಗಿದು, ಕಂಬನಿಗರೆಯಬಹುದು
ನೀವು ಉಬ್ಬಿ ಹೋಗಲೂಬಹುದು…
ಮತ್ತೊಂದು ದಿನ ಅದೇ ಮಕ್ಕಳು
ಬೀದಿ ಬದಿಯಲಿ ಕೈ ಚಾಚುತ ನಿಂತಾಗ
ನೀವು ಅವರ ಗಮನಿಸಿಯೂ-
ಗಮನಿಸದ ಹಾಗೆ ಬಿರುಸಿನಲಿ ಸಾಗಬಹುದು
ಹಾದಿಯಲಿ ನಡೆಯುವಾಗ ಕಾಲ್ ಜಾರಿ
ಧೊಪ್ ಎಂದು ಬೀಳಲೂಬಹುದು…
ಬಿದ್ದಾಗ – ‘ಅಮ್ಮಾ’ ಎನ್ನಲೂ ಬಹದು
ಆಗ ಆ ಮಕ್ಕಳು ನಿಮ್ಮತ್ತ ಧಾವಿಸಿ
ಬಂದಾಗ… ನೀವು ಮೇಲೇಳಲು ಕೈ ನೀಡುವ
ಬದಲು ಮುಟ್ಟಿಸಿಕೊಳ್ಳದೆ ದೂರ ಉಳಿಯುತ್ತೀರಿ-
ಸ್ಪರ್ಶ ಬಯಸದೆ ನೀವುಗಳೇ ಅಸ್ಪೃಶ್ಯ ಶವವಾಗಿಬಿಡುತ್ತೀರಿ…
ಚೆನ್ನಾಗಿದೆ