ಸಂಧ್ಯಾರಾಣಿ
ಸಂಗಾತವೆಂದರೆ ಸರಳವಲ್ಲ
ಸಲೀಸು ಮೊದಲೇ ಅಲ್ಲ
ಕರೆ ಮಾಡಿದ ನಲ್ವತ್ತು ನಿಮಿಷಗಳಲ್ಲಿ
ಪೊಟ್ಟಣ ಹಿಡಿದು ಯಾರೂ
ಕರೆಗಂಟೆ ಒತ್ತುವುದಿಲ್ಲ
ಸಂಗಾತ ಎನ್ನುವುದೊಂದು
ಸಮುದ್ರ ಮಥನ
ನುಂಗಿಕೊಂಡಿದ್ದೇವೆ ಆಗಿಂದಾಗ್ಗೆ
ಅವನಿತ್ತ ವಿಷವನ್ನು ನಾನೂ
ನಾ ಬಡಿಸಿದ ಉದಾಸೀನವನ್ನು ಅವನೂ
ಇನ್ನಾಗದು ಎಂದು ಎದ್ದು ನಡೆದಾಗ
ಹೆಜ್ಜೆ ಗುರುತು ಹುಡುಕಿ ಅವನು ಬಂದಿದ್ದಾನೆ
ಅವನು ಹಾದಿ ಮರೆತಾಗ
ಮತ್ತೆ ಬರುವವರೆಗೂ ರಸ್ತೆ ತಿರುವಿನಲ್ಲಿ ಕುಳಿತು
ನಾನು ಕಾದಿದ್ದೇನೆ
ಪ್ರೀತಿಯ ಪ್ರತಿಜ್ಞೆಗಳಲ್ಲಿ ಕೆಲವನ್ನು
ಅವನು ಮುರಿದಿದ್ದಾನೆ
ಕೆಲವನ್ನು ನಾನು ಮರೆತಿದ್ದೇನೆ
ಒಮ್ಮೆ ಸಿಕ್ಕ ಹನಿ ಅಮೃತ
ಕಾಪಾಡುತ್ತಿದೆ ಬದುಕ
ಹಾಲು ಹೆಪ್ಪಿಡುವುದೊಂದು ಧಾರಣೆ
ಕಾದು ಕುದಿಯುವಾಗ ಹುಳಿ ಚಿಮುಕಿಸಿದರೆ
ಹಾಲು ಒಡೆಯುತ್ತದೆ
ತಣ್ಣಗಾಗಲು ಬಿಟ್ಟುಬಿಟ್ಟರೆ
ಮೊಸರು ಕಟ್ಟುವುದಿಲ್ಲ
ಅಣಿಯಾಗಬೇಕು
ಅಣಿಯಾಗಿಸಲೂ ಬೇಕು
ಹಾಲು ಹದವಾಗಿ ಮೊಸರಾಗುವಾಗ
ಕಾಲ ಸರಿದಿತ್ತು
ಪ್ರೀತಿ ಗೆಳೆತನವಾಗಿತ್ತು





ತುಂಬಾ ಚೆಂದದ ಕವಿತೆ. ಬದುಕು ಅಂದರೆ ಹದ. ಸಮತೋಲ ಸಾಧಿಸದಿದ್ದರೆ ಅದು ಹದಗೆಡುತ್ತದೆ.
ಸುಂದರ ಕವಿತೆಗೆ ಅಭಿನಂದನೆಗಳು ಸಂಧ್ಯಾ
thank you so much…..ಆ ಹದ ಸಾಧಿಸುವ ಪಯಣ ಬಹುಶಃ ಮುಗಿಯುವುದೇ ಇಲ್ಲ ಅನ್ನಿಸುತ್ತದೆ.
Nice poem
Nice Sandhyakka 🙂
Thank you 🙂
ಕವನ ತುಂಬಾ ಚೆನ್ನಾಗಿ ದೆ.
ಥ್ಯಾಂಕ್ಯೂ!
ಅರ್ಥ ಪೂರ್ಣ ಕವಿತೆ
ಥ್ಯಾಂಕ್ಯೂ!
ಕವನ ತುಂಬ ಕಾಡುತ್ತದೆ ಸಂಧ್ಯಾ ಜಿ….ಬದುಕಿನ ಸೂತ್ರಗಳ ಹುಡುಕಾಟ ಬಲು ಸಂಕೀರ್ಣ. ಅದನ್ನು ಗೆಲ್ಲುವುದು ಬಹುಶಃ ಸುಲಭ ಸಾಧ್ಯವಲ್ಲ. ಕೊನೆಗೂ ಅದೊಂದು ರಿಲೇಟಿವ್ ಸಬ್ಜೆಕ್ಟ್ ಆಗುತ್ತದೆ. ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. ಹಾಗೆಯೇ ವ್ಯಕ್ತಿಯಿಂದ ವ್ಯಕ್ತಿಗೂ…
ಥ್ಯಾಂಕ್ಯೂ ಸರ್. ನಿಜ ನಿಮ್ಮ ಮಾತು, ಕಡೆಗೂ ಅದು ರಿಲೆಟಿವ್ ಸತ್ಯ ಹೌದು…
ಮೇಡಂ..ಎಂಥಹ ಕವನ..ವ್ಹಾ..
..ಹೆಜ್ಜೆ ಗುರುತು ಹುಡುಕಿ ಅವನೂ ಬಂದಿದ್ದಾನೆ..
…ಕೊನೆಗೆ ಪ್ರೀತಿ ಗೆಳೆತನವಾಗಿಯಾದರೂ ಉಳಿಸಿಕೊಂಡಿದ್ದು..ಕಾಡಿತು..ಸಾಲು
thank you! ಕಳೆದುಕೊಂಡದ್ದು ಹೆಚ್ಚೋ, ಉಳಿದದ್ದು ಹೆಚ್ಚೊ? ಲೆಕ್ಕ ಯಾರಿಗೆ ಬೇಕು?!
ಅರ್ಥವತ್ತಾದ ಸಂಬಂಧ ಕಡೆಯವರೆಗೂ ಉಳಿದರೆ ಎಷ್ಟು ಚೆನ್ನ …ಗೆಳೆತನವಾಗಿ ಮಾರ್ಪಾಡಾಗಿಯಾದರೂ .
Feeling motivated to write…. Thanks a lot Sandhya
thanks vinod 🙂