ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀದೇವಿ ಕೆರೆಮನೆ ಹೊಸ ಕವಿತೆ-ಧರಿಸಬೇಡ ಮುಖವಾಡ

ಶ್ರೀದೇವಿ ಕೆರೆಮನೆ 

ಕಳೆದು ಹೋಗಿರುವ ನಂಬಿಕೆ ಮತ್ತೆ ಮರಳುವುದಿಲ್ಲ ಧರಿಸಬೇಡ ಮುಖವಾಡ 
ದೂರ ತಳ್ಳಿದ ಮೇಲೆ ಪ್ರೀತಿ ಮತ್ತೆ ಸಿಗುವುದಿಲ್ಲ ಧರಿಸಬೇಡ ಮುಖವಾಡ 

ಮೊದಲೆ ಅರ್ಥೈಸಿಕೊಳ್ಳಬೇಕಿತ್ತು  ಬಳಸಿ ಬಿಸಾಡಿ ಬಿಡುವ ನಿನ್ನ ಗುಣವನ್ನು 
ಉಂಡೆಸೆದ ಕುಡಿ ಬಾಳೆ ಎಲೆಯ ಮತ್ತೆ ಬಳಸುವುದಿಲ್ಲ ಧರಿಸಬೇಡ ಮುಖವಾಡ 

ಕತ್ತಲಾಗಸದಲಿ ನೂರಾರು ಚುಕ್ಕೆಗಳು ಮಿನುಗಿವೆ ನಿನ್ನೆದೆಯಲ್ಲಿರುವಂತೆ 
ಪಂಚಮಿಯ ಮರುದಿನ ಮತ್ತೆ ಹುಣ್ಣಿಮೆಯಾಗುವುದಿಲ್ಲ ಧರಿಸಬೇಡ ಮುಖವಾಡ 

ಒಂದಾದ ಮೇಲೊಂದು ಹೂಜಿಯೆತ್ತಿ ಗಂಟಲಿಗೆ ಶರಾಬು ಸುರಿಯುವ ರೂಢಿ ಬಿಡು  
ಮಜ್ಜಿಗೆ ಕುಡಿದ  ನಂತರ ಮತ್ತೆ ನಶೆಯೇರುವುದಿಲ್ಲ ಧರಿಸಬೇಡ ಮುಖವಾಡ 

ಗೊತ್ತಿದೆ ಎಲ್ಲರಿಗೂ ಕಾಲಡಿಯಲ್ಲಿ ಬಿದ್ದ ಮೊಗ್ಗು ಹೊಸಕಿದ್ದು ನೀನೆ ಎಂದು 
ನೀರೆರೆದರೂ ಬಾಡಿದ ಹೂ ಮತ್ತೆ ಅರಳುವುದಿಲ್ಲ ಧರಿಸಬೇಡ ಮುಖವಾಡ 

ಸನಿಹ ಹಾದು ಹೋದ ನಾಗರಹಾವು ಮಾಮರದ ಚಿಗುರಿಗೆ ವಿಷ ಸುರಿಯಲಾಗದು
ಕತ್ತು ಮುರಿದು ಕೊಂಡ ಕೋಗಿಲೆ ಮತ್ತೆ ಹಾಡುವುದಿಲ್ಲ ಧರಿಸಬೇಡ ಮುಖವಾಡ 

ತಿಳಿನೀರ ಕೊಳಕೆ ಪಾತಾಳಗರಡಿಯನಿಟ್ಟು  ತಿರುವಿದವರ ಹೆಸರು ಬೇಕಿಲ್ಲ 
ಒಡೆದ ಕನ್ನಡಿಯೊಳಗೆ ಬಿಂಬ ಮತ್ತೆ ಕಾಣುವುದಿಲ್ಲ ಧರಿಸಬೇಡ ಮುಖವಾಡ 

ನೀಲಿಗಟ್ಟಿದೆ ಸಿರಿ, ಕಡಲದಂಡೆಯಲಿ  ಬಲೆಗೆ ಸಿಲುಕದೆಯು ಸತ್ತು ಬಿದ್ದ ಮೀನು 
ದೂರ ತಳ್ಳಿದ ಮನಸ್ಸು ಮತ್ತೆ  ಒಂದಾಗುವುದಿಲ್ಲ ಧರಿಸಬೇಡ ಮುಖವಾಡ

‍ಲೇಖಕರು Avadhi

11 February, 2021

2 Comments

  1. ಶುಭಲಕ್ಷ್ಮಿ ಆರ್ ನಾಯಕ

    ಸುಂದರ ಸಂದೇಶ ಶ್ರೀ …

  2. Leeladhar Narayan Moger

    ಅಭಿನಂದನೆಗಳು ಮೇಡಂ….

    ಉತ್ತಮ ಕವನ….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading