ನೋವೇ ಅನಾರೋಗ್ಯ
ಸಂತೋಷವೇ ಆರೋಗ್ಯ
ಶುಭ ಸಂಕಲ್ಪದೊಂದಿಗೆ ಗುಣಮುಖರಾಗುವುದೇ ಭಾಗ್ಯ
ಗುಣಮುಖಿಗಳಿಗೆ ಮಾತ್ರ!
ನೀನು ಏನನ್ನಾದರೂ ಬರಿ, ಪ್ರಕಟಿಸು ಆದರ ಸಮಾಜಕ್ಕೆ ನೀತಿ ಪಾಠ ಬೋಧಿಸಬೇಡ ಎಂದು ನನ್ನ ಗುರುಗಳಲ್ಲಿ ಒಬ್ಬರಾಗಿದ್ದ ದಿವಂಗತ ವೈಎನ್ಕೆ ಆಗಾಗ ಹೇಳುತ್ತಿದ್ದರು. ಆಯ್ತು ಸಾರ್, ನೀತಿ ಪಾಠ ಹೇಳೋದಿಲ್ಲ ಆದ್ರೆ ನೀತಿ ಕಥೆಗಳನ್ನು ಆಗಾಗ ಪತ್ರಿಕೆಯಲ್ಲಿ ಹಾಕುತ್ತೇನೆ. ನಿಮ್ಮ ಕಣ್ಣು ಅದರ ಕಡೆಗೆ ಹೋಗೇ ಹೋಗ್ತದೆ, ಎನಿ ಬೆಟ್ಸ್? ಎನ್ನುತ್ತಿದ್ದೆ. ಅಗ ಅವರ ಕಣ್ಣುಗಳಲ್ಲಿ ಹೊಳೆಯುವ ಮುಗುಳ್ನಗೆ ನನ್ನ ಕಣ್ಣಿಗೆ ಬೀಳುತ್ತಿತ್ತು.
ನಮ್ಮ ಕಾಲಿಗೇ ನಾವೇ ಸುತ್ತಿಕೊಂಡ ನೀತಿಗಳನ್ನು ಪೋಷಿಸಲು ನಮಗೇ ವ್ಯವಧಾನ ಇಲ್ಲದಿರುವಾಗ ಇನ್ನೊಬ್ಬರ ನೀತಿ ಪಾಠಗಳನ್ನು ಮೈಗೆ ಮೆತ್ತಿಕೊಳ್ಳಲು ಹೇಗೆ ಸಾಧ್ಯ? ಆದ್ರೆ ಓದುಗನ ಮನದಲ್ಲಿ ಸ್ಪೂರ್ತಿ ತುಂಬುವ ಕಥೆಗಳ ಕಥೆಯೇ ಬೇರೆ. ಇಂಟರ್ ನೆಟ್ ಬಂದಾದ ಮೇಲಂತೂ ಸರಣಿ ಇ ಮೇಲುಗಳಲ್ಲಿ ಹರಿದಾಡುವ ಮನಕಲಕುವ, ಮನೋಜ್ಙ ಪ್ರಸಂಗಗಳಿಗೆ ಕೊರತೆಯಿಲ್ಲ. ಒಂದು ಪ್ರಾಜೆಕ್ಟಿನಲ್ಲಿ ಮಗ್ನನಾಗಿರುವಾಗ ತಟಕ್ಕನೆ ನುಸುಳುವ ಇಂಗ್ಲಿಷ್ ಕತೆಯೊಂದನ್ನ ಓದಿದರೂ ಅದು ರಕ್ತಕ್ಕೆ ಇಳಿಯುವುದಿಲ್ಲ. ಅದೇ ಕತೆಗಳು, ಸ್ಪೂರ್ತಿ ಕಥೆಗಳಾಗಿ ಗೊಂಚಲು ಗೊಂಚಲಾಗಿ ಕನ್ನಡದಲ್ಲಿ ಅರಳಿದರೆ ಅದರ ಸೊಗಸೇ ಬೇರೆ.
‘ಗುಣಮುಖ’ ಸ್ಪೂರ್ತಿ ತುಂಬಿದ, ತುಂಬುವ ಕಥೆಗಳ ಮಾಲಿಕೆಯನ್ನು ಅಂತರ್ ಜಾಲಕ್ಕೆ ಬರೆಯುವ ಕೋರಿಕೆ ಇಟ್ಟಾಗ ಸಂತೋಷದಿಂದಲೇ ಒಪ್ಪಿಕೊಂಡೆ. ರಾಜಕೀಯ, ರೇಪ್, ವ್ಯಭಿಚಾರ, ಅಪಘಾತ ಮತ್ತು ಆತ್ಮಹತ್ಯೆಯ ಸುದ್ದಿಗಳಿಂದ ನನಗೂ ಕೊಂಚ ಬಿಡುವು ಬೇಕಾಗಿತ್ತು. ಇದರ ಫಲವೇ ವೆಬ್ ಸೈಟಿನಲ್ಲಿ ಮೂಡಿಬಂದ ಸ್ಪೂರ್ತಿಕಥೆಗಳ ಅಂಕಣ ‘ಶುಭಸಂಕಲ್ಪ’.
ಚೆನ್ನಾಗಿರುವುದನ್ನು ಹಂಚಿಕೊ ಎಂಬ ಒಂದು ವಾಕ್ಯದ ಕಥೆಗಳ ಓದುಗನಾದ ನಾನು ‘ಗುಣಮುಖ’ ಅವರು ಧ್ಯಾನಸ್ಥ ಸ್ಥಿತಿಯಲ್ಲಿ ನಿರಂತರವಾಗಿ ಬರೆದ ಕಥೆಗಳನ್ನು ವೆಬ್ ಸೈತ್ ಮುಖಾಂತರ ಹಂಚಿಕೊಂಡೆ. ಲಕ್ಶಾಂತರ ಓದುಗರನ್ನು ತಲುಪಿ ಮನಸ್ಸುಗಳನ್ನು ಶಾಂತಗೊಳಿಸಿದ ಈ ಮಾಲಿಕೆ ಈಗ ಪುಸ್ತಕ ರೂಪದಲ್ಲಿ ಬೆಳಕು ಕಂಡಿದೆ. ನಾನು ನಿಮ್ಮಲ್ಲಿ ಕೇಳಿಕೊಳ್ಳುವುದು ಇಷ್ಟೇ – ನೀವು ಓದಿದ ನಂತರ ಇನ್ನೊಂದು ಪುಸ್ತಕ ಖರೀದಿಸಿ ‘ಅವರಿಗೆ’ ಬಳುವಳಿ ನೀಡಿ. ಶುಭಸಂಕಲ್ಪದೊಂದಿಗೆ ನೀವೂ ಗುಣಮುಖರಾಗಿರಿ.
ಎಸ್. ಕೆ. ಶಾಮಸುಂದರ
0 ಪ್ರತಿಕ್ರಿಯೆಗಳು