ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಿವು, ಪ್ರಕಾಶ್ ಹೆಗಡೆ ಬ್ಲಾಗ್ ಸಮ್ಮೇಳನಕ್ಕೆ ಸಜ್ಜಾಗಿದ್ದಾರೆ…

ಕೆ ಶಿವು ಪತ್ರ

ಇಪ್ಪತ್ತು ದಿನಗಳ ಹಿಂದೆ ನನ್ನ ಮೊಬೈಲಿಗೆ ಪೋನೊಂದು ಬಂತು. “ಹಲೋ ಸರ್ ಹೇಗಿದ್ದೀರಿ, ನೀವು ಶಿವು ಅಲ್ವಾ, ನಾನು ಉದಯ್ ಇಟಗಿ, ಬೆಂಗಳೂರಿಗೆ ಬಂದಿದ್ದೇನೆ. ನನಗೊಂದು ಆಸೆಯಿದೆ. ನಮ್ಮ ಆತ್ಮೀಯ ಬ್ಲಾಗ್ ಗೆಳೆಯರನ್ನೆಲ್ಲಾ ಒಮ್ಮೆ ಬೇಟಿಯಾಗಬೆಕೆನಿಸುತ್ತದೆ, ನಿಮ್ಮ ಬಳಿ ನಮ್ಮ ಬ್ಲಾಗ್ ಗೆಳೆಯರ ಫೋನ್ ನಂಬರುಗಳಿದ್ದರೇ ಕೊಡಿ” ಎಂದರು. ಅವರು ಕೇಳಿದಾಗ ನನಗಂತೂ ಆಶ್ಚರ್ಯವೇ ಆಯಿತು. ನಮ್ಮ ರಾಜ್ಯದ ಇಟಗಿಯಲ್ಲಿ ಹುಟ್ಟಿ ಬೆಳೆದು ಉದ್ಯೋಗಕ್ಕಾಗಿ ದೂರದ ಲಿಬಿಯಾ ದೇಶದಲ್ಲಿ ಲೆಕ್ಚರರ್ ಆಗಿರುವ ಉದಯ ಸರ್ ಫೋನನ್ನು ನಾನು ನಿರೀಕ್ಷಿಸಿರಲಿಲ್ಲವಾದ್ದರಿಂದ ಒಂದು ರೀತಿಯ ಅಚ್ಚರಿ, ಖುಷಿ ಒಟ್ಟೊಟ್ಟಿಗೆ ಆಗಿತ್ತು. ತಕ್ಷಣವೇ ನನ್ನ ಬಳಿಯಿರುವ ಅನೇಕ ಬ್ಲಾಗ್ ಗೆಳೆಯರ ಫೋನ್ ನಂಬರುಗಳನ್ನು ಮೆಸೇಜ್ ಮಾಡಿದ್ದೆ.
ಮತ್ತೆ ನಾನು ಕೆಲವು ದಿನಗಳು ಕೆಲಸದಲ್ಲಿ ಬ್ಯುಸಿಯಾಗಿಬಿಟ್ಟೆ. ಅವರು ಇಲ್ಲಿ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರೂ ಆಗಾಗ ಫೋನ್ ಮಾಡುತ್ತಿದ್ದರು.
ನಾಲ್ಕು ದಿನಗಳ ನಂತರ ಮತ್ತೆ ಫೋನ್ ಮಾಡಿ “ಕನಕಪುರ ರಸ್ತೆಯಲ್ಲಿರುವ ಹೋಟಲ್ ಅತಿಥಿ ಗ್ರ್ಯಾಂಡ್‍ನಲ್ಲಿ ಮಂಗಳವಾರ ಸಂಜೆ ಸೇರೋಣ ಎಲ್ಲರೂ ಬರುತ್ತಿದ್ದಾರೆ ನೀವು ಕುಟುಂಬ ಸಮೇತರಾಗಿ ಬನ್ನಿ.” ಎಂದು ಆಹ್ವಾನವಿತ್ತರು. ಅನೇಕ ಬ್ಲಾಗ್ ಗೆಳೆಯರನ್ನು ಈ ಮೂಲಕ ಬೇಟಿಯಾಗುವ ಅವಕಾಶ ಸಿಕ್ಕಿರುವಾಗ ಬಿಡುವುದುಂಟೆ! ಒಪ್ಪಿಕೊಂಡೆ.

ಪ್ರಕಾಶ್ ಹೆಗಡೆ, ಮಲ್ಲಿಕಾರ್ಜುನ್ ಮತ್ತು ನಾನು ಕೊನೆಯಲ್ಲಿ ತಡವಾಗಿ ಹೋಗಿದ್ದರಿಂದ ಬೇರೆ ಬ್ಲಾಗಿಗರೆಲ್ಲಾ ಆಗಲೇ ಸೇರಿದ್ದರು. ಸಂಪದದ ಹರಿಪ್ರಸಾದ್ ನಾಡಿಗ್, ಚಾಮರಾಜ ಸಾವಡಿಯವರ ಕುಟುಂಬ, ಶಿವಪ್ರಕಾಶ್, ಓಂ ಪ್ರಕಾಶ್, ಡಾ.ಸತ್ಯನಾರಾಯಣ್ ಕುಟುಂಬ, ಪರಂಜಪೆ ಜೊತೆಗೆ ನಾವು ಮೂವರು ಅತಿಥಿಗಳಾಗಿದ್ದರೇ, ಉದಯ ಇಟಗಿ ಅವರ ಶ್ರೀಮತಿಯವರು ಮತ್ತು ಅವರ ಮಗಳು ಭೂಮಿಕ ಅತಿಥೇಯರಾಗಿದ್ದರು. ಪರಸ್ಪರ ಪರಿಚಯ ಉಭಯ ಕುಶಲೋಪರಿಯಿಂದ ಶುರುವಾಗಿ ಅಲ್ಲಿ ಅನೇಕ ಆರೋಗ್ಯಕರ ಚರ್ಚೆಗಳು ಇತ್ತು. ವಿಕಿಪೀಡಿಯ ಬಳಸುವ ವಿಧಾನ ಇತ್ಯಾದಿಗಳ ಬಗ್ಗೆ ಹರಿಪ್ರಸಾದ್ ನಾಡಿಗ್ ವಿವರಿಸಿ ಅದರ ಬಗ್ಗೆ ಇಡೀ ರಾಜ್ಯಾ ಎಲ್ಲಾ ಜಿಲ್ಲೆಯ ವಿಶ್ವವಿದ್ಯಾಲಯಗಳಲ್ಲೂ ಕಾರ್ಯಕ್ರಮ ಆಗುತ್ತಿದ್ದು ಅದರ ಪಲಿತಾಂಶ ಅದ್ಬುತವಾಗಿದೆ ಎನ್ನುವುದನ್ನು ಅಂಕಿಅಂಶ ಸಹಿತ ವಿವರಿಸಿದರು. ಎಪ್ಪತ್ತು ವರ್ಷದ ವೃದ್ಧರು ವಿಕೀಪೀಡಿಯಾ ಬಳಕೆಯಿಂದ ಈಗ ಇಂಟರ್ ನೆಟ್ ಬಳಸಲು ಅಸಕ್ತಿ ತೋರಿರುವುದನ್ನು ವಿವರಿಸಿದರು. ಚಾಮರಾಜಸಾವಡಿಯವರು ಇತ್ತೀಚಿನ ಪತ್ರಿಕೋದ್ಯಮ ಬೆಳವಣಿಗೆ ಬಗ್ಗೆ ಕಳವಳ ವ್ಯಕ್ತಪಡಿಸಿ ಸ್ವಲ್ಪ ಗಂಭೀರ ವಿಚಾರದ ಬಗ್ಗೆ ಮಾತಾಡಿದರೆ, ಡಾ.ಸತ್ಯನಾರಯಣ್ ಸರ್ ತಮ್ಮ ಬ್ಲಾಗಿನ ಇತ್ತೀಚಿನ ಬರಹದ ಬಗ್ಗೆ ಮಾತಾಡಿದರು. ಅದರಲ್ಲಿ ಬೀಡಿ ಸೇದುವ ಪ್ರಕರಣವಂತೂ ಅಲ್ಲಿದ್ದ ಅನೇಕ ಬ್ಲಾಗಿಗರಿಗೆ ತಮ್ಮ ಬಾಲ್ಯದ ಅನುಭವಗಳನ್ನು ಅದರಲ್ಲೂ ಮೊದಲು ಬೀಡಿ ಸಿಗರೇಟು ಸೇದಿದ ಬಗ್ಗೆ ಬರೆಯಲು ಮುಂದಾದರು. ನಡುನಡುವೆ ಪ್ರಕಾಶ್ ಹೆಗಡೆಯವರು ತಮ್ಮ ಮೂಲನಿವಾಸಿಗಳ ಬಗ್ಗೆ ನಾಗು ಬಗ್ಗೆ, ಮತ್ತೆ ಪುಸ್ತಕದ ಬಗ್ಗೆ ಅಲ್ಲಲ್ಲಿ ತಮ್ಮ ಎಂದಿನ ನಗೆ ಚಟಾಕಿಗಳನ್ನು ಹಾರಿಸುತ್ತ ಎಲ್ಲರನ್ನು ರಂಜಿಸುತ್ತಿದ್ದರು. ಬ್ಲಾಗ್ ಎನ್ನುವ ವಿಚಾರ ಮೊದಲು ತಲೆಗೆ ಹೇಗೆ ಬಂತು ಮೊದಲು ಕಬ್ಬಿಣ ಕಡಲೆಯೆನಿಸಿದ್ದ ಅದು ಹೇಗೆ ನಂತರ ಸುಲಭವಾಯಿತು, ಅದಕ್ಕೆ ಸ್ಪೂರ್ತಿಯಾರು…..ಹೀಗೆ ಶುರುವಾಗಿ ಎಲ್ಲರ ಬ್ಲಾಗಿಂಗುಗಳ ತರಲೇ ಆಟಗಳು, ಬರಹಗಳಿಗೆ ಯಾರ್ಯಾರು ಪ್ರೋತ್ಸಾಹ ನೀಡಿದ್ದರು ಎನ್ನುವ ವಿಚಾರಗಳೆಲ್ಲಾ ಚರ್ಚೆಗೆ ಬಂತು. ಪ್ರೋತ್ಸಾಹದ ವಿಚಾರದಲ್ಲಿ ನಾಗೇಶ್ ಹೆಗಡೆಯವರು ಎಲ್ಲಿರುವ ಎಲ್ಲರಿಗೂ ಒಂದಲ್ಲ ಒಂದು ರೀತಿ ಪ್ರೋತ್ಸಾಹ ನೀಡಿರುವುದನ್ನು ತಿಳಿದಾಗ ನಮಗಂತೂ ಅವರ ಬಗ್ಗೆ ಗೌರವ ಇಮ್ಮಡಿಯಾಗಿತ್ತು. ಊಟದ ನಡುವೆ ಕ್ಯಾಷ್ಟ್ ಅವೆ, ಲೈಪ್ ಇಸ್ ಬ್ಯುಟಿಪುಲ್, ಮಾಜಿದ್ ಮಜ್ದಿಯ ಚಿಲ್ಡ್ರನ್ ಆಪ್ ಹೆವನ್, ಬಾರನ್, ಸಾಂಗ್ ಅಪ್ ಸ್ಪ್ಯಾರೋ, ಶ್ಯಾಮ್ ಬೆನಗಲ್ ರವರ ಜರ್ನಿ ಟು ಸಜ್ಜನ್ ಪುರ್….ಕೊನೆಗೆ ಇತ್ತೀಚಿನ ಮೊಗ್ಗಿನ ಮನಸ್ಸು, ನಟ ಪ್ರಕಾಶ್ ರೈ ಇತ್ಯಾದಿ ನಟರ ಬಗ್ಗೆ ಆರೋಗ್ಯಕರವಾದ ಚರ್ಚೆಯೂ ಆಯಿತು. ಎಲ್ಲರು ತಮ್ಮ ತಮ್ಮ ಅನುಭವವನ್ನು ಹಂಚಿಕೊಂಡರು.
ನಾನು ಮತ್ತು ಮಲ್ಲಿಕಾರ್ಜುನ್ ಸುಮ್ಮನಿರಲಿಲ್ಲ ಎಲ್ಲರ ಮಾತುಗಳನ್ನು ಕೇಳುತ್ತಾ ಆಗಾಗ ಅವರ ಸಹಜ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದೆವು. ಉದಯ್ ಇಟಗಿಯವರು ಲಿಬಿಯ ದೇಶ, ಅಲ್ಲಿನ ಅಗ್ಗದ ಪೆಟ್ರೋಲ್, ಜನರ ವಿದ್ಯಾಬ್ಯಾಸದ ಪರಿಸ್ಥಿತಿ, ವಾತಾವರಣದ ಬಿಸಿ, ರಾಜಧಾನಿ ಟ್ರಿಪೋಲಿಯ ಹಸಿರುವಾತವರಣ ಉಳಿದೆಡೆಯಲ್ಲಾ ಮರಳುಗಾಡು, ಅಲ್ಲಿನ ಆರ್ಥಿಕ ಪರಿಸ್ಥಿತಿ, ಎಲ್ಲಾ ವಿಚಾರವನ್ನು ನಮ್ಮೊಂದಿಗೆ ಅಲ್ಲಲ್ಲಿ ಹಾಸ್ಯ ಮಾತುಗಳಲ್ಲಿ ಹಂಚಿಕೊಂಡರು.
ನಡುವೆಯೇ ಚಾಮರಾಜ್ ಸಾವಡಿಯವರ ಇಬ್ಬರು ಮಕ್ಕಳು, ಉದಯ್ ಇಟಗಿಯವರ ಮಗಳು ಭೂಮಿಕ, ಸತ್ಯನಾರಾಯಣ್ ಮಗಳು ಇಂಚಿತ, ಆಟವಾಡಿಕೊಳ್ಳುತ್ತಾ ಇಡೀ ರೂಮಿನ ತುಂಬಾ ಓಡಾಡಿಕೊಂಡು ತಮ್ಮದೇ ಲೋಕದಲ್ಲಿ ಮುಳುಗಿದ್ದರು.
” ಸರ್, ನೀವೆಲ್ಲಾ ಬಂದಿದ್ದು ನನಗಂತೂ ತುಂಬಾ ಖುಷಿಯಾಯ್ತು….ಈ ಸಂಜೆ ತುಂಬಾ ಚೆನ್ನಾಗಿತ್ತು.” ಖುಷಿಯಿಂದ ಹೇಳಿದರು ಉದಯ್ ಇಟಗಿ.
“ನಮಗೂ ತುಂಬಾ ಖುಷಿಯಾಗಿದೆ ಸರ್, ನಿಮ್ಮ ಕರೆಯ ನೆಪದಲ್ಲಿ ನಾವು ಚೆನ್ನಾಗಿ ತಿಂದು ಮನಸಾರೆ ಮಾತಾಡಿದ್ದೇವೆ,” ನಾನಂದೆ.
” ಹೌದು ಸರ್, ಎಲ್ಲಾ ತುಂಬಾ ಚೆನ್ನಾಗಿತ್ತು. ಮತ್ತೆ ಮುಟ್ಟಾದ ಮೇಲೆ ಸಿಗೋಣ” ಪ್ರಕಾಶ ಹೆಗಡೆಯವರ ಬಾಯಿಂದ ಪಟ್ಟನೆ ಬಂತು ಮಾತು.
“ಏನ್ ಸರ್ ನನಗೆ ಗೊತ್ತಾಗಲಿಲ್ಲ ಮತ್ತೆ ಹೇಳಿ” ಎಂದರು. ಇಟಗಿ.
“ಅದೇ ಸರ್, ಮುಟ್ಟಾದ ಮೇಲೆ ಸಿಗೋಣ” ಮತ್ತೊಮ್ಮೆ ಅವರ ಮಾತಿನ ಒಳ ಅರ್ಥವನ್ನು ಗಮನಿಸಿ ಎಷ್ಟು ನಕ್ಕಿದ್ದೆವೆಂದರೆ, ಅಲ್ಲಿದ್ದ ಹೋಟಲ್ಲಿನ ಬೇರೆ ಜನಗಳೆಲ್ಲಾ ನಮ್ಮತ್ತ ತಿರುಗಿ ನೋಡುವಂತಾಗಿತ್ತು. ಅನೇಕ ಗಹನವಾದ ವಿಚಾರಗಳ ಹಿತಕರವಾದ ಮಾತಿನ ನಾಡುವೆ ಪ್ರಕಾಶ್ ಹೆಗಡೆಯವರ ಇಂಥಹ ಮಾತುಗಳು ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸುತ್ತಿದ್ದವು.
ಎಲ್ಲರ ಮಾತುಗಳ ನಡುವೆ ಆಂದ್ರ ಶೈಲಿಯ ಸೊಗಸಾದ ಊಟ, ಐಸ್‍ಕ್ರೀಮ್, ಮೊಗಲಾಯ್ ಬೀಡ, ಕೊನೆಗೆ ಗ್ರೂಪ್ ಫೋಟೊ ಇಟಗಿ ಕುಟುಂಬದ ಫೋಟೋ ಇತ್ಯಾದಿಗಳೆಲ್ಲಾ ಸಾಂಗವಾಗಿ ಜರುಗಿ ಒಂದು ಉತ್ತಮ ಸಂಜೆಯನ್ನು ನಮ್ಮ ಆತ್ಮೀಯ ಬ್ಲಾಗ್ ಗೆಳೆಯರ ಜೊತೆ ಕಳೆದಿದ್ದು ನನ್ನ ತುಂಬಾ ಚೆನ್ನಾಗಿತ್ತು.
ಬಿಸಿಲಹನಿ ಬ್ಲಾಗಿನ ಉದಯ ಇಟಗಿಯವರ ಒಂದು ಸೊಗಸಾದ ಇಚ್ಛಾಶಕ್ತಿಯಿಂದ ಒಂದಷ್ಟು ಬ್ಲಾಗ್ ಗೆಳೆಯರು ತಮ್ಮ ನಿತ್ಯದ ದುಗುಡ ದುಮ್ಮಾನಗಳನ್ನು ಮರೆತು ಮನೆಸಾರೆ ನಕ್ಕು ಒಂದು ಒಳ್ಳೆಯ ಊಟವನ್ನು ಮಾಡಿ ಎಲ್ಲರೂ ಬೀಳ್ಕೊಡುವಾಗ ಬ್ಲಾಗ್ ಎನ್ನುವ ಲೋಕದಲ್ಲಿ ಎಷ್ಟು ಸೊಗಸಾದ ಸಂತೃಪ್ತಿಯಿದೆ ಅನ್ನಿಸಿತ್ತು. ಅದಕ್ಕಾಗಿ ಉದಯ ಇಟಗಿಯವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.
ಈಗ ಮುಖ್ಯ ವಿಚಾರಕ್ಕೆ ಬರೋಣ.
ಕಳೆದ ವರ್ಷ ಹತ್ತಾರು ಜನರು ಆತ್ಮೀಯವಾಗಿ ಸೇರಿದ ನಾವೆಲ್ಲಾ ನೂರಾರು ಜನರಾಗಿ ಏಕೆ ಸೇರಬಾರದು ಅನ್ನುವ ಪ್ರಶ್ನೆಯೊಂದು ಅವತ್ತೇ ನನಗೆ ಮೂಡಿತ್ತು. ಆತ್ಮೀಯ ಹೃದಯಗಳೆಲ್ಲಾ ಸೌಹಾರ್ದಯುತವಾಗಿ ಒಂದು ದಿನ ಸೇರಿ ಬೆಳಗಿನಿಂದ ಸಂಜೆಯವರೆಗೆ ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ, ಒಂದಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡರೇ ಹೇಗೆ ಅನಿಸಿದ್ದು ನಿಜ. ಈಗ ನೀವೇ ಹೇಳಿ ನಾವೆಲ್ಲಾ [ಬ್ಲಾಗಿಗರು ಮತ್ತು ಬ್ಲಾಗ್ ಓದುಗರೆಲ್ಲಾ] ಸೇರಿದರೆ ಚೆನ್ನಾಗಿರುತ್ತದೆ ಅಲ್ಲವೇ……ನನ್ನ ಮನಸ್ಸಿನ ಅನಿಸಿಕೆಯೇ ನಮ್ಮ ಅನೇಕ ಬ್ಲಾಗ್ ಗೆಳೆಯರಲ್ಲಿ ಮೂಡಿತ್ತು. ಎಲ್ಲರ ಮನಸ್ಸಿನಲ್ಲಿದ್ದ ಈ ವಿಚಾರ ಡಾ.ಆಜಾದ್ [ಜಲನಯನ ಬ್ಲಾಗ್] ಮೂಲಕ ಒಂದು ಕಾರ್ಯಕ್ರಮದ ಚೌಕಟ್ಟು ಪಡೆದು ಸದ್ಯ ದಿನಾಂಕ ನಿಗದಿಯಾಗಿದೆ. ಅವರು ನಮ್ಮ ಅನೇಕ ಬ್ಲಾಗ್ ಗೆಳೆಯರಿಗೆ ಕಾರ್ಯಕ್ರಮದ ವಿಚಾರವಾಗಿ ಮೇಲ್ ಮಾಡಿದ್ದಾರೆ. ವಿಚಾರ ತಿಳಿದವರು ತಮ್ಮ ತಮ್ಮ ಬ್ಲಾಗ್ ಗೆಳೆಯರಿಗೂ, ಬ್ಲಾಗ್ ಓದುಗರಿಗೂ ತಲುಪಿಸಿದರೆ ಒಳ್ಳೆಯದೆಂದು ನನ್ನ ಭಾವನೆ. ಸದ್ಯ ನಮ್ಮ ಬ್ಲಾಗಿಗರ ಕೂಟ ಆಗಸ್ಟ್ 22-2010 ಎಂದು ನಿಗದಿಯಾಗಿದೆ. ಅವತ್ತು ನಾವೆಲ್ಲಾ ಸೇರಿ ಆ ದಿನವನ್ನು ನಮ್ಮ ದಿನವನ್ನಾಗಿ ಮಾಡಿಕೊಳ್ಳೋಣ. ಅದಕ್ಕೆ ನೀವೆಲ್ಲರೂ ಬರಲೇ ಬೇಕು. ಮತ್ತೆ ಇಲ್ಲಿ ನಾನು ಕರೆಯಬೇಕು ಎಂದು ಎನಿಸುತ್ತಿಲ್ಲ. ಏಕೆಂದರೆ ಅದು ನಿಮ್ಮದೇ ಕಾರ್ಯಕ್ರಮ ನೀವೇ ರೂಪಿಸಿ, ಯಶಸ್ವಿಗೊಳಿಸಬೇಕಾದ ಕಾರ್ಯಕ್ರಮ. ಈ ಕಾರ್ಯಕ್ರಮವು ರೂಪುರೇಶೆ, ಚೌಕಟ್ಟು, ಇತ್ಯಾದಿ ವಿಚಾರಗಳನ್ನು ಚರ್ಚಿಸಲು, ವಹಿಸಿಕೊಳ್ಳಲು ಮುಂದೆ ಬರುವ ಬ್ಲಾಗಿಗರನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಅದಕ್ಕಾಗಿ ನೀವು ಪ್ರಕಾಶ್ ಹೆಗಡೆ, ಅಜಾದ್, ದಿನಕರ್, ನನಗೆ ಮೇಲ್ ಮಾಡಬಹುದು ಅಥವ ಫೋನ್ ಮಾಡಬಹುದು.[ಸದ್ಯ ನಮ್ಮ ಬ್ಲಾಗಿಗರ ಕೂಟವನ್ನು ಬೆಂಗಳೂರಿನಲ್ಲಿ ಮಾಡಬಹುದೆಂದು ಪ್ರಕಾಶ್ ಹೆಗಡೆಯವರ ಬ್ಲಾಗಿನಲ್ಲಿ ಅನೇಕ ಬ್ಲಾಗಿಗರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ] ಇದಕ್ಕೆ ನಿಮ್ಮ ಅಭಿಪ್ರಾಯವನ್ನು ನಿರೀಕ್ಷಿಸುತ್ತಿದ್ದೇನೆ. ಇನ್ನೇಕೆ ತಡ, ಇನ್ನೂ ಕೆಲವೇ ದಿನಗಳಿವೆ…ತಡಮಾಡದೇ ಬನ್ನಿ ಸಕ್ರೀಯವಾಗಿ ಎಲ್ಲಾ ವಿಧದಲ್ಲೂ ಭಾಗವಹಿಸಿ ಬ್ಲಾಗಿಗರ ದಿನವನ್ನು ನಮ್ಮ ದಿನವನ್ನಾಗಿಸೋಣ

‍ಲೇಖಕರು avadhi

18 May, 2010

5 Comments

  1. gopinatha

    ಹಲ್ಲೋ ಸರ್
    ನಾನು ಬೆಳ್ಳಾಲ ಗೋಪಿನಾಥ ರಾವ್
    ದಯವಿಟ್ಟು ದಿನಾಂಕ ಮತ್ತು ಸಮಯ ತಿಳಿಸಿದರೆ ನಾನೂ ನಿಮ್ಮೊಂದಿಗೆ
    ಭಾಗವಹಿಸಲು ಆಸಕ್ತಿ ಹೊಂದಿರುತ್ತೇನೆ.

  2. ananthkonambi

    nanagU thilisi sar

  3. shivu.k

    ಬೆಳ್ಳಾಲ ಗೋಪಿನಾಥ ರಾವ್ ಸರ್,
    ಈ ಲೇಖನದಲ್ಲೇ ಕಾರ್ಯಕ್ರಮದ ದಿನಾಂಕವನ್ನು ನಿಗದಿಪಡಿಸಲಾಗಿದೆ. ನಿಮ್ಮ ಇ- ಮೇಲ್ ಐಡಿ ಕೊಡಿ. ನಿಮಗೆ ಮತ್ತಷ್ಟು ವಿವರಗಳನ್ನು ಕಳಿಸುತ್ತೇನೆ.
    ಶಿವು.ಕೆ
    shivuu.k@gmail.com

  4. gopinatha

    My e-mail
    rgbellal@gmail.com
    Bellala Gopinatha Rao

  5. veena d souza

    thanks for d invite… will be joining d event
    Regards,
    veena
    Bangalore

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading