ಆರ್ ಜಿ ಹಳ್ಳಿ ನಾಗರಾಜ್
ಬೆಂಗಳೂರಿನ ಕಲಾಗ್ರಾಮದ ಬಯಲು ರಂಗಮಂದಿರದಲ್ಲಿ ಸಾಣೇಹಳ್ಳಿ ಶಿವಸಂಚಾರ ನಾಟಕೋತ್ಸವ. ಶೇ.೯೦ ಭಾಗ ತುಂಬಿದ ರಂಗಮಂದಿರ. ಮೂರು ವರ್ಷದಿಂದ ರಂಗಭೂಮಿ ಭಣಗುಡುತ್ತಿತ್ತು. ಈ ಸಾರಿಯ “ಶಿವಸಂಚಾರ” ನಾಟಕಕ್ಕೆ ಬೆಂಗಳೂರಿನ ಪ್ರೇಕ್ಷಕರಿಂದ ಭರ್ಜರಿ ಸ್ವಾಗತ ಸಿಕ್ಕಿದೆ.
ಹಿಂದೆಂದೂ ಸೇರದ ಜನ ಈ ನಾಟಕೋತ್ಸವಕ್ಕೆ ಬರುತ್ತಿದ್ದಾರೆ. ೨೬, ೨೭, ೨೮ರಂದು ನಾಟಕೋತ್ಸವ. (ಈ ಮೊದಲು ಕೆಂಗೇರಿಯ ನಾಗದೇವನಹಳ್ಳಿಯ ಬಯಲು ರಂಗಮಂದಿರದಲ್ಲೂ ೩ ದಿನ ನಾಟಗಳ ಪ್ರದರ್ಶನ ನಡೆದಿದೆ).
೨೬ರ ಶನಿವಾರ ಡಾ. ಲಿಂಗದೇವರು ಹಳೆಮನೆ ಅವರ ಐತಿಹಾಸಿಕ ಘಟನೆಯ ಎಳೆಯೊಂದರ ಹಂದರ – ಕನ್ನಡಿಗರ ಹಿತ ಕಾಯ್ವ “ಗಡಿಯಂಕ ಕುಡಿಮುದ್ದ”ನ ಸುತ್ತ ನೇಯ್ದ ನಾಟಕ. ನಾಟಕೀಯ ತಿರುವುಗಳಿಂದ ನಟರ ಲವಲವಿಕೆಯ ಅಭಿನಯದಿಂದ ನಾಟಕ ಯಶಸ್ವಿ ಆಯ್ತು. ಕತ್ತಿವರಸೆ, ಹಾಡು, ಪ್ರಣಯ ಸನ್ನಿವೇಶಗಳಲ್ಲಿ ಹಾಗೂ ಜೋಗತಿಯರ ಸಾಂಪ್ರದಾಯಿಕ ನೃತ್ಯ… ಗಡಿಯಂಕನ ಆತ್ಮಾಭಿಮಾನದ ಮಾತು – ಅಭಿನಯ, ರಾಜಕುಮಾರನ ಪಾತ್ರಧಾರಿಯ ಹಾವಭಾವಾಭಿನಯ…
ರಂಗದ ಮೇಲೆ ಬಂದ ಎಲ್ಲ ಕಲಾವಿದರ ಅಭಿನಯ, ಇತ್ಯಾದಿ ನಾಟಕ ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯಿತು. ಈ ನಾಟಕದಲ್ಲಿ ಜಗದೀಶರ ನಿರ್ದೇಶನದ ಯಶಸ್ಸು ಕಾಣುತ್ತದೆ. ಲಿಂಗದೇವರು ಹಳೆಮನೆ ನಮ್ಮ ನಡುವೆ ಇಲ್ಲದಿದ್ದರೂ, ಅವರು ಬಿಟ್ಟುಹೋದ ಹಲವು ಉತ್ತಮ ನಾಟಕಗಳಲ್ಲಿ ಇದೂ ಒಂದು. ಸಾಣೇಹಳ್ಳಿ ಶಿವಸಂಚಾರಕ್ಕೆ, ಬೆಂಗಳೂರಲ್ಲಿ ವ್ಯವಸ್ಥೆ ಮಾಡಿದ ಪ್ರಚಂಡ, ಹರಿವನೀರಿನ ಕೆ.ವಿ. ನಾಗರಾಜಮೂರ್ತಿ ಹಾಗೂ ಮಿತ್ರರಿಗೆ ಧನ್ಯವಾದ.
ಇಂದು (ಭಾನುವಾರ) ವಿಶ್ವರಂಗಭೂಮಿಯ ವಿಶೇಷ ಉಪನ್ಯಾಸ – ಪತ್ರಕರ್ತ ಜಿ.ಎನ್. ಮೋಹನ್ ಮಾಡಲಿದ್ದು, ಹಾಸ್ಯ ನಾಟಕ, ವೃತ್ತಿರಂಗಭೂಮಿಯಲ್ಲಿ ಯಶಸ್ವಿ ಆದ ಅರಿಶಿಣಗೋಡಿ ಅವರ “ಬಸ್ ಕಂಡಕ್ಟರ್” ಇದೆ. ಇದರ ನಿರ್ದೇಶಕ ವೈ.ಡಿ. ಬದಾಮಿ.
ಸೋಮವಾರ ಕೊನೆಯ ದಿನ. ಕವಿ ಚಂದ್ರಶೇಖರ ತಾಳ್ಯ ಬರೆದ ಅಪರೂಪದ ವಚನಕಾರ “ಒಕ್ಕಲಿಗರ ಮುದ್ದಣ್ಣ”ನ ಸುತ್ತ ನೇಯ್ದ ನಾಟಕ ಇದೆ. ಇದರ ನಿರ್ದೇಶನ ಛಾಯಾ ಭಾರ್ಗವಿ.
0 ಪ್ರತಿಕ್ರಿಯೆಗಳು