ಎಂ.ವಿ. ಶಶಿಭೂಷಣ ರಾಜು
*
ಇರುಳು ಮುಗಿಯುವಾಗ
ಮುಕ್ಕಳಿಸಿ ಉಗಿದ ಬೆಳಕಿನ ಚೂರು ಜಗವೆಲ್ಲಾ
ಬೆಳಗಿದರೂ, ಕೆಲ ಜೀವಿಗಳು
ಯಾರದೋ ನೆರಳಲಿ ಬಾಳು ಮುಗಿಸುತ್ತವೆ
ಗತ್ಯಂತರವಿಲ್ಲದೆ, ಎಲ್ಲವ ಅರಿತೂ
ಉಗುಳ ನುಂಗುವುದು
ವ್ಯಂಗ್ಯವೊಂದು ಕಿವಿತೂರಿ ಮಿದುಳ
ಹೆಪ್ಪುಗಟ್ಟಿಸಿದರೂ
ಮುಗುಳ್ನಗುವುದು
ಪ್ರಶ್ನಿಸುವ ಮನಗಳ ಚಿವುಟುತ್ತಿರುವಾಗ
ಅನ್ಯಾಯಕ್ಕೆ ಪ್ರತಿಭಟಿಸದಿದ್ದರೆ
ಅನ್ಯಾಯಕ್ಕೊಳಗಾದಾಗ ಒಂಟಿಯಾಗಬೇಕಾಗುತ್ತದೆ
ಅನ್ಯಾಯ ತನಗಾದಾಗ ಮಾತ್ರ
ಪಾತಾಳ ಕಾಣಿಸುವುದು
ತನ್ನ ಸ್ವರ್ಗದಲಿ ಎಲ್ಲವೂ
ಸೊಗಸಾಗಿರುತ್ತದೆ, ಧಗೆ ಕಾಲಬುಡಕ್ಕೆ ಬರುವವರೆಗೆ
ಎಲ್ಲವೂ ಸರಿಯಿದೆ ಎಂದು ಭ್ರಮಿಸಿ
ಸಂಭ್ರಮಿಸಿ
ಗತಕಾಲದ ವೈಭವದ ಬೆಳಕಲಿ
ಭವಿಷ್ಯದ ನೀಲಿನಕ್ಷೆ ಬದಲಾಯಿಸುವುದು
ಇರಲಿ
ನರಕ ಇಲ್ಲವೆನ್ನುವಾಗುವ ಖುಷಿ
ಸ್ವರ್ಗವಿಲ್ಲವೆಂದರೆ ಆಗುವುದಿಲ್ಲ
ನರಕ, ಸ್ವರ್ಗಗಳು ಅದೃಶ್ಯವಾಗುವಾಗ
ಭುವಿ ಸ್ವರ್ಗವಾಗುತ್ತದೆ






0 Comments