ನಮ್ಮ ನಿಮ್ಮೆಲ್ಲರ ನೆಚ್ಚಿನ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರ ಹುಟ್ಟು ಹಬ್ಬವನ್ನು ಜುಲೈ 17 ಕ್ಕೆ ಅರ್ಥಪೂರ್ಣವಾಗಿ ಆಚರಿಸಲು ಹೊರಟಿದ್ದೇವೆ. ವಿಜಯ್ ಅವರು ಸಿನಿಮಾದಷ್ಟೇ ಪುಸ್ತಕವನ್ನು ಪ್ರೀತಿಸುತ್ತಿದ್ದರು. ಆ ಪುಸ್ತಕಗಳ ಕುರಿತು ಇತರರ ಜತೆ ಹಂಚಿಕೊಳ್ಳುತ್ತಿದ್ದರು. ಹಾಗಾಗಿ ಅವರ ಕುರಿತಾದ ಜೀವನ ಕಥನವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ, ಅದನ್ನು ಈ ಬಾರಿಯ ಹುಟ್ಟು ಹಬ್ಬಕ್ಕೆ ಉಡುಗೊರೆಯಾಗಿ ನೀಡುತ್ತಿದ್ದೇವೆ.
ಇದೊಂದು ಬಯೋಗ್ರಫಿ ಮಾದರಿಯಲ್ಲೇ ರೂಪಗೊಂಡ ಪುಸ್ತಕ. ವಿಜಯ್ ಅವರ ಬಾಲ್ಯ ಮತ್ತು ಜೀವನದ ಬಗ್ಗೆ ವಿಜಯ್ ಸಹೋದರರು ಮತ್ತು ಕುಟುಂಬ ಮಾತನಾಡಿದ್ದರೆ, ಅವರ ಬಾಲ್ಯದ ಗೆಳೆಯರು, ಶಾಲಾ ಗೆಳೆಯರು, ಜತೆಗಿದ್ದವರು ನೆನೆಪುಗಳನ್ನು ಹಂಚಿಕೊಂಡಿದ್ದಾರೆ. ರಂಗಭೂಮಿ, ಕಿರುತೆರೆ, ಸಿನಿಮಾ, ಸಂಗೀತ ಹೀಗೆ ವಿಜಯ್ ಅವರು ಸಾಗಿ ಬಂದ ನಾನಾ ಕ್ಷೇತ್ರಗಳ ಬಗ್ಗೆ ಅವರ ಒಡನಾಡಿಗಳು, ಸಿನಿಮಾ ನಿರ್ದೇಶಕರು, ರಂಗಭೂಮಿ ಗೆಳೆಯರು, ಸಂಗೀತದ ಸಹಪಾಠಿಗಳು ನೆನಪಿಸಿಕೊಂಡಿದ್ದಾರೆ.
ವಿಜಯ್ ಅವರ ಮೊದಲುಗಳಿಗೆ ಸಾಕ್ಷಿಯಾದವರು ಕೂಡ ಈ ಪುಸ್ತಕದ ಜತೆಗಿರುವುದು ಮತ್ತೊಂದು ವಿಶೇಷ. ಅಂಬರೀಶ್, ಸುದೀಪ್ ಅವರ ಬಯೋಗ್ರಫಿ ಬರೆದಿರುವ ರಾಜ್ಯ ಪ್ರಶಸ್ತಿ ವಿಜೇತ ಬರಹಗಾರ ಮತ್ತು ಪತ್ರಕರ್ತ ಡಾ.ಶರಣು ಹುಲ್ಲೂರು ಅವರ ಸಂಪಾದಕತ್ವದಲ್ಲಿ ಈ ಕೃತಿ ಬರುತ್ತಿದೆ.
ಖ್ಯಾತ ಲೇಖಕರಾದ ವಸುಧೇಂದ್ರ, ಜೋಗಿ, ಸಂಧ್ಯಾರಾಣಿ, ನಿರ್ದೇಶಕರಾದ ಬಿ.ಎಸ್. ಲಿಂಗದೇವರು, ಮಂಸೋರೆ, ಅರವಿಂದ್ ಕುಪ್ಳಿಕರ್, ಎಂ.ಎಸ್ ರಮೇಶ್, ರಂಗ ನಿರ್ದೇಶಕಿ ಮಂಗಳಾ, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ, ರಾಷ್ಟ್ರ ಪ್ರಶಸ್ತಿ ವಿಜೇತ ಲೇಖಕ ಕೆ. ಪುಟ್ಟಸ್ವಾಮಿ ಹೀಗೆ ಸಿನಿಮಾ ರಂಗದ ಹಾಗೂ ವಿಜಯ್ ಅವರನ್ನು ಬಲ್ಲ 32 ಕ್ಕೂ ಹೆಚ್ಚು ಲೇಖಕರು ಬರೆದ ಬರಹಗಳು ಇದರಲ್ಲಿವೆ. ಜಿ.ಎನ್. ಮೋಹನ್ ಈ ಪುಸ್ತಕಕ್ಕೆ ಹಿನ್ನುಡಿ ಬರೆದಿದ್ದಾರೆ.
ಬೆಂಗಳೂರಿನ ಕಾಯಕ ಪ್ರಕಾಶನದಿಂದ ಈ ಕೃತಿ ಹೊರಬರುತ್ತಿದೆ. ಜು.17 ರಂದು ಪುಸ್ತಕ ಬಿಡುಗಡೆ ಆಗಲಿದೆ.
ಜಿ ಎನ್ ಮೋಹನ್ ಅವರು ಬರೆದ ಬೆನ್ನುಡಿ ಇಲ್ಲಿದೆ-
‘ಸಂಚಾರಿ ವಿಜಯ್’ ಎಂಬ ಸುಂದರ ಕೌದಿ
ಜಿ ಎನ್ ಮೋಹನ್
‘ಏಕ್ ತಿತಲಿ, ಅನೇಕ ತಿತಲಿಯಾ, ಏಕ್.. ಏಕ್.. ಏಕ್.. ಅನೇಕ್ ‘ ಎನ್ನುವ ಸಾಲು ನನಗೆ ಖಂಡಿತಾ ಅರ್ಥವಾಗುತ್ತಿರಲಿಲ್ಲ. ಶರಣು ಹುಲ್ಲೂರು ಈ ಕೃತಿಯನ್ನು ನನ್ನ ಕೈಗೆ ದಾಟಿಸುವವರೆಗೆ. ಅರೆ..! ಸಂಚಾರಿ ವಿಜಯ್ ಎಂದರೆ ಆತನೊಬ್ಬನೇ ಅಲ್ಲ ನಾನು, ನೀವು ಅವರು ಇವರು ಎಲ್ಲರೂ ಸೇರಿ ರೂಪುಗೊಂಡ ಒಂದು ಸುಂದರ ಚಿಟ್ಟೆ ಎನ್ನುವುದು ಗೊತ್ತಾಗುವುದೇ ಈ ಕೃತಿ ಓದಿದಾಗ. ಸಂಚಾರಿ ವಿಜಯ್ ನಮ್ಮನ್ನೆಲ್ಲ ಆಗಲಿ ಹೋದಾಗ ಪ್ರತಿಯೊಬ್ಬರಿಗೂ ತಮ್ಮೊಳಗಿನ ಏನನ್ನೋ ಕಳೆದುಕೊಂಡ ಭಾವ. ಯಾಕೆಂದರೆ ವಿಜಯ್ ಎಲ್ಲರೊಳಗೂ ಆಳವಾಗಿ ಇಳಿದುಹೋಗಿದ್ದ.
ವಿಜಯ್ ಇಲ್ಲದ ವೇಳೆಯಲ್ಲಿ, ವಿಜಯ್ ಇಲ್ಲವಾದ ಕಾರಣಕ್ಕೆ ತುಂಬಿದ ಕಣ್ಣು ಇನ್ನೂ ಆರದಿರುವ ಸಮಯದಲ್ಲಿಯೇ ಸಂಚಾರಿ ವಿಜಯ್ ಕುರಿತ ಆತ್ಮ ಕಥನದಂತಹ ಕೃತಿಯನ್ನು ಕಟ್ಟಿಕೊಡುವುದೆಂದರೆ ಸುಲಭದ ಮಾತಲ್ಲ. ಅದನ್ನು ಶರಣು ಹುಲ್ಲೂರು ಸಾಧ್ಯವಾಗಿಸಿದ್ದಾರೆ.
‘ಸಂಚಾರಿ’ ಎನ್ನುವುದು ವಿಜಯ್ ಗೆ ಸರಿಯಾಗಿ ಹೊಂದುವ ವಿಶೇಷಣ. ‘ಇಲ್ಲಿರಲಾರೆ.. ಅಲ್ಲಿಗೆ ಹೋಗಲಾರೆ’ ಎನ್ನುವಂತೆ ಆತ ನಿಲ್ಲದೆ ಹೊರಟೇ ಹೋದ.
ಈಗ ನಮ್ಮ ಮುಂದಿರುವುದು ಆತನ ನೆನಪು ಮಾತ್ರ. ಆ ನೆನಪುಗಳನ್ನೇ ಇಲ್ಲಿ ಸಹೋದರರು, ಗೆಳೆಯರು, ವೃತ್ತಿ ಬಂಧುಗಳು ಎಷ್ಟು ಚೆನ್ನಾಗಿ ಹೆಣಿಗೆ ಹಾಕಿದ್ದಾರೆ. ಪ್ರತೀ ಪುಟದಲ್ಲೂ ವಿಜಯ್ ಉಸಿರಾಡುತ್ತಿರುವುದು ಗೊತ್ತಾಗಿ ಹೋಗುತ್ತದೆ. ಇಂತಹ ಸುಂದರ ಕೌದಿಯನ್ನು ಕೊಟ್ಟ ಶರಣುವಿಗೆ ಶರಣು…
0 ಪ್ರತಿಕ್ರಿಯೆಗಳು