ಕುಂ. ವೀರಭದ್ರಪ್ಪ
ಶಂಕರನಾಗ್ ಯಾವ ಕೆಲಸದ ನಿಮಿತ್ತ ಬಳ್ಳಾರಿಗೆ (1988ರಲ್ಲಿ) ಬಂದಿದ್ದರೆನ್ನುವುದು ತಿಳಿಯದು.
ರಾಘವ ಕಲಾಮಂದಿರದಲ್ಲಿ ನಡೆಯುತ್ತಿದ್ದ ಕಥಾ ಕಮ್ಮಟದ ಸಮಾರೋಪ ಸಮಾರಂಭಕ್ಕೆ ಆಗಮಿಸಿದರು. ವೇದಿಕೆ ಮೇಲಿದ್ದ ಸಚಿವ ಎಂ.ಪಿ. ಪ್ರಕಾಶರ ಸಂಗಡ ಮಾತಾಡಿದರು. ಅವರು ಪರಿಚಯಿಸಿದ್ದಕ್ಕೊ ಉದಯವಾಣಿ ವಿಶೇಷಾಂಕದಲ್ಲಿ ಓದಿದ್ದಕ್ಕೊ! ನನ್ನ ಕಥೆ ‘ನಿಜಲಿಂಗ’ ಬಗ್ಗೆ ಪುಷ್ಕಳ ಮಾತಾಡಿದರು, ಆದರೆ ಬಳಿಕ ಆ ಕನಸುಗಾರ ಕನಸುಗಳ ಅಪಘಾತಕ್ಕೆ ಬಲಿಯಾದರು.
‘ನಿಜಲಿಂಗ’ ಕಥೆಯನ್ನು ಕಾದಂಬರಿಯ ಕ್ಯಾನ್ವಾಸ್ ಗೆ ವಿಸ್ತರಿಸಲು ಅವತ್ತಿನಿಂದ ಚಡಪಡಿಸುತ್ತಿದ್ದೆ. ‘ಒಳಚರಂಡಿ’ ಹೆಸರಿನ ರಾಜಕೀಯ ಕಾದಂಬರಿ ಬರೆಯುತ್ತಿದ್ದೆನಷ್ಟೆ, ಆದರೆ ಅದು ವಿಶ್ರಾಂತಿ ಬಯಸಿತು. ಅದಕ್ಕೆ ಇದನ್ನು ವರ್ಷದ ಹಿಂದೆಯೆ ಕೈಗೆತ್ತಿಕೊಂಡೆ.
ತಮ್ಮ ಆರನೆ ಇಂದ್ರಿಯದ ಮೂಲಕ ನಿಗಾ ಇರಿಸಿದ್ದ ಹಿರಿಯ ವಿಮರ್ಶಕ ಡಾ ಸಿಎನ್ನಾರ್ ‘ಕುಂವೀ ನಾವೆಲ್ಲು ಮುನ್ನೂರು ಪುಟದ ಮಿತಿಯಲ್ಲಿರಲಿ’ ಎಂದು ಎಚ್ಚರಿಸಿದರು. ಆಗ ಐದುನೂರು ಪುಟಗಳಿಗೆ ಹತ್ತಿರವಿದ್ದ ಇದನ್ನು ಮೂರು ನೂರು ಪುಟಗಳ ವ್ಯಾಪ್ತಿಗೆ ಅಳವಡಿಸಲು ಹರಸಾಹಸಪಟ್ಟೆ, ಎರಡು ಮೂರು ಸಲ ಪುನಃ ಪುನಃ ಬರೆದೆ.
ಪ್ರತಿ ರಿ ರೈಟಿಂಗು ವಸ್ತುವಿನ ಚೆಹರೆ ಬದಲಿಸಿತು. ಕೃತಿಯ ಕರ್ತೃವಾದ ನನಗೆ ಸಂತೃಪ್ತಿ ತಂದಿತು. ನನ್ನ ಉಳಿದೆಲ್ಲ ಕಾದಂಬರಿಗಳಿಗಿಂತ ಇದು ಎಲ್ಲಾ ಅರ್ಥಗಳಲ್ಲು ಭಿನ್ನವಿದೆ, ವರ್ಷದ ಸೃಜನಶೀಲ ಪ್ರಸೂತ್ಯಾಯಾಸದ ಸಂದರ್ಭದಲ್ಲಿ ಅಥಣಿಯ ಸನ್ಮಿತ್ರ ಪ್ರೊ ಸಿದ್ದಣ್ಣ ಉತ್ನಾಳ ‘ನನಗಿದನ ಕೊಡ್ರಿ ಪ್ರಕಟಿಸಲಿಕ್ಕ’ ಎಂದು ತಮ್ಮ ನೆರಳನ್ನು ನನ್ನ ನೆರಳಿಗೆ ಜೋಡಿಸಿದರು.
ಅವರು ನನ್ನ ಯಾವುದೆ ಕಥೆ ಕಾದಂಬರಿ ಓದಿರದಿದ್ದರು ನನ್ನನ್ನು ಲೇಖಕನೆಂದು ಅಪಾರ್ಥ ಮಾಡಿಕೊಂಡಿದ್ದರು. ಅದನ್ನು ಪ್ರಾಂಜಲ ಮನಸ್ಸಿನಿಂದ ಒಪ್ಪಿದ್ದರು. ನನ್ನ ಶಾಮಣ್ಣ ಕಾದಂಬರಿಗೆ ಶಿರಸಂಗಿ ಲಿಂಗರಾಜ ಪ್ರತಿಷ್ಠಾನ ಪ್ರಶಸ್ತಿ ನೀಡಿದಂದಿನಿಂದ ಅಥಣಿಯ ಸಿದ್ದಣ್ಣ ಹಲೋ ಹಲೋ ಆತ್ಮೀಯರು. ಒಂದೆರಡು ಸಲ ಬಿಳಿಜೋಳ ಬಟವಾಡೆ ಮಾಡಿ ಅಂತಃಕರಣದ ಶೃಂಖಲೆಯಿಂದ ಬಂಧಿಸಿದರು.
ಆತಿಥ್ಯ ಹಾಗು ಭ್ರಾತೃತ್ವದ ರಿಣ ತೀರಿಸಲು ‘ಆಗ್ಲಿ ತಗೋರಿ’ ಎಂದೆ ತಡಮಾಡದೆ. ಅಗಣಿತ ಪುಸ್ತಕಗಳನ್ನು ಪ್ರಕಟಿಸಿದ ಹೆಗ್ಗಳಿಕೆ ಸಿದ್ದಣ್ಣನ ಅನುಪಮ ಪ್ರಕಾಶನದ್ದು, ಅದು ಕಳೆದಿಪ್ಪತ್ತೈದು ವರ್ಷಗಳಲ್ಲಿ! ನನ್ನ ಈ ಕಾದಂಬರಿ ಅವರ ಅನುಪಮ ಪ್ರಕಾಶನದ ಬೆಳ್ಳಿಹಬ್ಬದ ಕೊಡುಗೆ ಎಂದು ಹೇಳಿದರು. ಪ್ರೀತಿ ವಿಶ್ವಾಸಕ್ಕಿಂತ ಮಿಗಿಲೆನಿಪ ಕೃತಿ ಯಾವುದಿದೆ ಈ ಲೋಕದೋಳ್?
ತವಕ ತಲ್ಲಣಗಳು ಆರಂಭವಾಗಿದೆ ಓದುವ ಕುತೂಹಲ ಇಮ್ಮಡಿಯಾಗಿದೆ ಗುರುಗಳೇ ಶುಭವಾಗಲಿ……
ಪ್ರೀತಿ ವಿಶ್ವಾಸಕ್ಕಿಂತ ಮಿಗಿಲೆನಿಪ ಕೃತಿ ಯಾವುದಿದೆ ಈ ಲೋಕದೋಳ್?
Wah