ವೈಶಾಲಿ ಹೆಗಡೆ

ಮೆತ್ತನೆಯ ಕುಸುರಿನ ತಿಳಿ ನೀಲಿ ಶಾಲು
ಉದ್ದವೋ ಅದೋ ಒಂದೂವರೆ ಮೈಲು
ಅಂಚಿನ ನೂಲುಗಂಟನು ಹಿಡಿದ ನಾನು
ಆ ತುದಿಯಲ್ಲಿ ಮಡಚುತ್ತ ನಡೆಯುತ್ತ
ಮತ್ತೆ ನಡುನಡುವೆ ನಿಲ್ಲುವ ನೀನು
ನಡುವೆ ಸಿಕ್ಕಾಗ ಬೆರಳಾದರೂ ಸೋಕೀತೆಂದು ಹೂ ಅಂದೆ
ನೀನೋ ಮಡಿಕೆ ಸರಿಯಿಲ್ಲ, ಪದರ ನೇರಿಲ್ಲ ಎನ್ನುತ
ಮತ್ತೆ ಬಿಡಿಸುತ್ತ ಕೊಡವುತ್ತ ..
ಇದು ಇಷ್ಟೇ ಎಂದು ಹೇಳಿಬಿಡು ಸುಮ್ಮನೆ
ಮಡಚುವ ಆಟದಲ್ಲಿ ಬೆರಳು ತಾಕುವುದಿಲ್ಲ ಎಂದು
**
ಕಲ್ಲಗುಡುಗಿನ ಸಪ್ಪಳವ ಮೀರಿಸಿದಂತೆ ಒಡಲಿನದನಿ
ಹೊರಬಿದ್ದಾಗ ನಿರ್ವಾಣ ಮೌನ
ಚೂರು ಚೂರೇ ಬಿರುಕಿಸಿ
ಹರಿದ ಹರಿವಿಗೆ ಕಟ್ಟು ಕಟ್ಟುವ
ನನ್ನಾತ್ಮವನು ಬಿಗಿದಿಟ್ಟ ನಿನ್ನ ಯಾಚನೆ
ಕಾರ್ಗಾಲ ಮಳೆಯ ಇಂಬಳದಂತ
ನಿನ್ನ ಒಲವು
ನಾಳಹರಿದು ನೆತ್ತರ ಬಸಿದರೂ ಗೊತ್ತಾಗದು ನೋಡು
ಬಿಚ್ಚಿಟ್ಟ ಗೆಜ್ಜೆ ಯಲಿ ಉಳಿದ ಒಂದು ಕಿಂಕಿಣಿ ಮಾತ್ರ
ಬೇರೇನೋ ಹುಡುಕುವಾಗ ತಾಕಿ ಸಣ್ಣಗೆ ಘಂಟಿಸುವುದು
ಕಿರುಬೆರಳಿನ ಕಿಲ್ಲುಗುರೆದ್ದಂತ ನಿನ್ನ ಪ್ರೀತಿಯ ರೀತಿ
ಎಳೆದಂತೆಲ್ಲ ಹೊಕ್ಕುಳ ಸಂದಿಯಿಂದ ಚುಚ್ಚುವ ಸೆಳಕು






ತುಂಬಾ ಇಷ್ಟವಾಯಿತು ಕವಿತೆ
ಸಂಗೀತ ರವಿರಾಜ್
ಎರಡು ಕಿರುಗವಿತೆಗಳೂ ಚೆನ್ನಾಗಿವೆ.
ಕವಿತೆ ಚನ್ನಾಗಿದೆ
ಚೆನ್ನಾಗಿದೆ.
uttama kavitegaLu..
“Madachuva aatadalli beralu taaguvudilla saameepya doorada prateekavaagi kavite chennaagi moodibandide
Awesome!!