ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಧ್ವಂಸಕರಿಗೆ ನನ್ನ ನಮಸ್ಕಾರ..

ನಾನು ಅಂಬೇಡ್ಕರ್!

ಎನ್.ರವಿಕುಮಾರ್ ಟೆಲೆಕ್ಸ್

ವಿಧ್ವಂಸಕರಿಗೆ ನನ್ನ
ನಮಸ್ಕಾರ,

ನನ್ನ ತಲೆ ಕಡಿದು ಕುಟ್ಟಿ , ಕೆಡವಿ..
ಹೊಟ್ಟೆ ಹರಿದು ಪುಡಿ ಪುಡಿ ಮಾಡಿ
ಕಾಲದಸೆಯಲ್ಲಿ ಹಾಕಿಕೊಂಡು ತುಳಿದು
ಕೇಕೆ ಹಾಕುತ್ತಿರುವ ನಿಮಗೆ ನನ್ನ ನಮಸ್ಕಾರಗಳು.

ನನ್ನದೇ ನೆಲದ ರಸ್ತೆಯಲ್ಲಿ ನಡೆದು ಹೋಗುವಾಗ
ತನ್ನ ಪಾಡಿಗೆ ತಾನು ನಡೆಯುತ್ತಿದ್ದ
ಹೆಜ್ಜೆಗಳಿಗೆ ತಲೆ ಬುರುಡೆಯೊಂದು
ಉರುಳಿಕೊಂಡು ಬಂದು ತಡವಿದಂತಾಯಿತು
ಅಲ್ಲೊಂದು ಗುಂಪು ಕೇಕೆ ಹಾಕುತ್ತಾ
ತಲೆ ಇಲ್ಲದ ದೇಹದ ಕೈ- ಕಾಲು ಕಡಿದು
ಹೊಟ್ಟೆ ಹರಿದು ಊರ ತುಂಬಾ ಚೆಲ್ಲಾಡುತ್ತಿತ್ತು.

ಅದೆಷ್ಟೋ ಕಾಲದ ರೋಗವೊಂದು
ಈ ಮಟ್ಟಿಗೆ ಜನರನ್ನು ಬಿಡದೆ ಕಾಡುತ್ತಿರುವ
ಬಗ್ಗೆ ನಾನಿನ್ನೂ ಚಿಂತಿತನಾಗಿದ್ದೇನೆ.
ನಾನು ಕೊಟ್ಟ ಸಂವಿಧಾನದ ಮದ್ದು ಕುಡಿಯದ
ಜನರಿನ್ನೂ ನನ್ನ ದೇಶದಲ್ಲಿದ್ದಾರಾ?!

ಉರುಳಿಸಿದ್ದು.ತುಂಡರಿಸಿದ್ದು
ನನ್ನ ತಲೆ – ದೇಹವನ್ನು ಮಾತ್ರವಲ್ಲ
ಈ ನೆಲದ ಬದುಕಿನ ಹಕ್ಕು- ಸ್ವಾತಂತ್ರ್ಯ, ಸಮಾನತೆಯ
ಮಹಾ ಪತನದ ದಾರಿಯೂ ಅದು;
ಕಲ್ಲು.ಕತ್ತಿ ಬೀಸುವ ನಿಮ್ಮ
ಕೈಗಳಿಗೆ- ನಂಜು ಕಾರುವ ನಾಲಿಗೆಗಳಿಗೂ
ಕೊಂದು ಕೆಡವಿ ಕುಣಿವ ನಿಮ್ಮ ಜಾಡಿಗೂ
ಚರಿತ್ರೆ ಇದೆ
ಕಾಲ…ಕಾಲದಿಂದಲೂ
ಕಲ್ಲು.ಮಣ್ಣು, ನಿಮ್ಮ ನಾಲಿಗೆಯ
ಹಲ್ಲೆ – ಹತ್ಯೆಗಳಿಂದ
ಕಲ್ಲಿಗೆ ಕಲ್ಲಾಗಿ ಮಣ್ಣಿಗೆ ಮಣ್ಣಾಗಿ ಹೋದ
ನನ್ನವರ ಕಥೆಯೇ ಭಾರತದ ಚರಿತ್ರೆ
ಅದೊಂದು ’ಅಮಾನುಷ ಭಾರತ’

ಕೆಡವಿ.., ಕಡೆವಿ….ಕೊಂದು , ಕೊಂದು…
ಕೈ,ಮೈ-ಮನಸ್ಸುಗಳೆಲ್ಲಾ ರಕ್ತದ ವಾಸನೆಯಿಂದ
ನಾರುತ್ತಿದ್ದರೂ ದಾಹ ನೀಗಿಲ್ಲದಂತೆ ಕಾಣುತ್ತಿದೆ.
ಸಂವಿಧಾನದ ‘ಮಹಾಮದ್ದು’ ಕುಡಿಯಿರಿ
ಗುಣಮುಖರಾಗುವುದು ಈ ಹೊತ್ತಿನ ಜರೂರತ್ತಿದೆ.

ನೀವು ನನ್ನ ತಲೆ ಕಡಿದು
ದೇಹವನ್ನು ಕತ್ತರಿಸಿ .ತುಂಡು ತುಂಡು ಮಾಡಿ
ಚೆಲ್ಲಾಡುವಾಗ
ನನ್ನೊಳಗೆ ನಿಮಗಾಗಿ ಉಳಿದದ್ದು
ಕನಿಕರ ಮಾತ್ರ!

ಬುದ್ಧನ ತೊಡೆಯ ಮೇಲೆ ಕುಳಿತು
ಚಣ ಕಾಲವಾದರೂ ಧ್ಯಾನಿಸಿ
ಬಸವನ ಅಂಗೈಲಿ ಲಿಂಗವಾಗಿ ಎದೆ ತುಂಬಿಕೊಳ್ಳಿ
ಬೇಗ ಮನುಷ್ಯರಾಗಿ……….

ಇಂತಿ ನಿಮ್ಮ
– ಅಂಬೇಡ್ಕರ್

 

‍ಲೇಖಕರು avadhi

31 August, 2019

1 Comment

  1. ಸುಧಾರಾಣಿ. ನಾಯ್ಕ,ಸಿದ್ದಾಪುರ

    ಸಂವಿಧಾನ ರಚನೆಗೆ ಸುದೀರ್ಘ ಮೂರು ವರ್ಷದ ಪರಿಶ್ರಮವಿದೆ.ಪ್ರಯತ್ನವಿದೆ. ತಪಸ್ಸಿದೆ.ಅಂತಹ ಕೊಡುಗೆ ಕೊಟ್ಟ ಧೀಮಂತರ ಮೂರ್ತಿ ಕೆಡವಿ ಖುಷಿ ಪಡುವವರು ಅದೇನು ಸಾಧಿಸಿವರೋ ಗೊತ್ತಿಲ್ಲ.ನಿಮ್ಮ ಕವನ ಅವರನ್ನು ಮಾನವರನ್ನಾಗಿಸುವ ಪ್ರಯತ್ನ ಮಾಡಿದೆ…ಅಭಿನಂದನೆಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading