ವಿಜಯಶ್ರೀ ಎಂ ಹಾಲಾಡಿ
ತೊಟ್ಟು ಕಳಚಿ ಬೀಳುವುದೆಂದರೆ
ಮಣ್ಣಿಗೆ ಮರಳುವುದು
ಬಂದ ದಾರಿಗೆ ಸೇರುವುದು
ಸೌರಮಂಡಲ, ನೀಹಾರಿಕೆಯ
ಹೊಳಪು ಕಣ್ಣು ಕೋರೈಸಿದರೂ
ಮಣ್ಣ ಘಮವೇ ಬೇಕು
ಜೀವಕೋಶಗಳಿಗೆ
ಉಸಿರಾಡಲು, ನಗೆಯಾಡಲು
ಹಗೂರ ಪಾದಗಳನ್ನು
ಮಣ್ಣಿನೊಳಗೆ ಮುಳುಗಿಸಿದರೆ
ಜಗದ ಭಾರ, ಹಿಂಸೆ
ಕರಗಿ ಹೋಗಬಹುದು
….
ಕೊನೆಯ ದಿನವೆಂದರೆ
ಹೇಗಿರಬಹುದು?

ದೇಹದಿಂದ ಉಸಿರು
ಹೊರಟು ಹೋದಮೇಲೆ
ಕೊರಡಿನಂತಹಾ ಬೆರಳುಗಳು
ಬಿಟ್ಟ ಹಾಗೆ ಬಿಟ್ಟುಕೊಂಡ
ಕಣ್ಣ ರೆಪ್ಪೆಗಳು….
ಆಗ ‘ನಾನು’ ಎಲ್ಲಿರಬಹುದು
ಇನ್ನೆಲ್ಲಿಗೆ ತಲುಪಲಿಕ್ಕಿರಬಹುದು?
ನನ್ನವರೆಲ್ಲ ಅಳಬಹುದೇ
ಅಥವಾ
ಆದಷ್ಟು ಬೇಗ ಹೂಳಿ ಬಂದು
ಊಟ ಮಾಡಿಬಿಡಬೇಕೆಂಬ
ಹಸಿವಿನ ತುರ್ತಿನಲ್ಲಿ
ನರಳಬಹುದೇ?
ಹೌದು, ಬೇಗನೇ ಕೆಲಸ
ಮುಗಿದುಹೋಗಲಿ
ಮಣ್ಣಿಗೆ ಮರಳುವುದ ಮರಳಿಸಿ
ಅವರು ಊಟ ಮಾಡಲಿ.






0 Comments