ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಹಾಬ್ ಸರ್ ಇನ್ನಿಲ್ಲ..

ಡಾ.ವಹಾಬ್ ದೊಡ್ಡಮನೆ ನಾನು ಕಂಡ ಅತಿ ಸಜ್ಜನ ಸ್ನೇಹಿತ.ಮೃದು ಮಾತು ,ತಂದೆಯಿಂದ ಬಂದ ಹೋಮಿಯೋಪತಿ ವೈದ್ಯ ವೃತ್ತಿ ಮಾಡುತ್ತಲೇ ತುಳುನಾಡಿನ ಮುಸ್ಲಿಮರ ಬಗ್ಗೆ ವಹಾಬ್ ನಡೆಸಿದ ಅಧ್ಯಯನ ಮತ್ತು ಪ್ರಕಟಿಸಿದ ‘Muslims in Dakshina kannada ‘ (1993) ಒಂದು ಆಚಾರ್ಯ ಕೃತಿ. ಯಾವುದೇ ವಿಶ್ವವಿದ್ಯಾಲಯದ ಪದವಿಗೆ ಕಡಮೆ ಇಲ್ಲದಂತೆ ಸ್ವಂತ ಆಸಕ್ತಿಯಿಂದ ಏಕಲವ್ಯನಂತೆ ಸಂಶೋಧನೆ ನಡೆಸಿದ ವಹಾಬ್ ಒಬ್ಬ ಅವಧೂತನಂತೆ ಇದ್ದರು.ನಾನು ಮಂಗಳೂರಿನಲ್ಲಿ ಅವರನ್ನು ಅನೇಕ ಬಾರಿ ಭೇಟಿ ಆಗಿ ಚರ್ಚಿಸಿದ್ದೆ. ವಿನಯ, ಮುಕ್ತ ಮನಸ್ಸು, ಎಲ್ಲ ಧರ್ಮಗಳ ಬಗೆಗಿನ ಗೌರವ, ಕನ್ನಡ-ತುಳು ಸಂಸ್ಕೃತಿಗಳ ಬಗೆಗಿನ ಪ್ರೀತಿ ಮತ್ತು ಅಧ್ಯಯನ -ಹೀಗೆ ವಹಾಬ್ ಒಬ್ಬ ಅನೌಪಚಾರಿಕ ವಿದ್ವಾಂಸರಾಗಿದ್ದರು. ನಿನ್ನೆ ದಿನ ಅವರು ನಿಧನ ಆದರು ಎಂಬ ಸುದ್ದಿ ಕೇಳಿದಾಗ ತುಂಬಾ ದುಃಖ ಆಯಿತು.ಅದು ದೊಡ್ಡ ಸುದ್ದಿ ಆಗುವುದಿಲ್ಲ ,ಆದರೆ ಕರಾವಳಿಯ ಸಂಸ್ಕೃತಿ ಶೋಧದ ದೊಡ್ಡ ಕೊಂಡಿ ಒಂದು ಕಳಚಿದ ನೋವು ಮತ್ತು ನಷ್ಟ ನನ್ನ ಹೃದಯದಲ್ಲಿ ದೊಡ್ಡ ಸದ್ದು ಮಾಡಿತು. -ಬಿ ಎ ವಿವೇಕ ರೈ ವಹಾಬ್ ದೊಡ್ಡಮನೆ ಪರಿಚಯ– ಡಾ.ವಹಾಬ್ ದೊಡ್ಡಮನೆ (೧೯೪೨.೧೨.೨೬-೨೦೧೦ .೧೦.೦೧) ಮಂಗಳೂರು ಸರಕಾರಿ ಕಾಲೇಜ್ ವಿದ್ಯಾರ್ಥಿದೆಸೆಯಲ್ಲಿ ‘ಅಪ್ಸರಾ’ ಎನ್ನುವ ಮಾಸಿಕದ ಸಂಪಾದಕರಾಗಿದ್ದರು. ವೃತ್ತಿಯಲ್ಲಿ ವೈದ್ಯರು, ಪ್ರವೃತ್ತಿಯಲ್ಲಿ ಸಾಹಿತಿ,ಸಂಶೋಧಕ. ತುಳುನಾಡಿನ ಬದುಕು ಸಂಸ್ಕೃತಿ ಇವರ ಆಸಕ್ತಿಯ ವಿಷಯ. ‘Muslims in Dakshina Kannada’ ಎನ್ನುವುದು ಇವರು ೧೯೯೩ರಲ್ಲಿ ಇಂಗ್ಲಿಶ್ ಭಾಷೆಯಲ್ಲಿ ಪ್ರಕಟಿಸಿರುವ ಅಧ್ಯಯನ ಗ್ರಂಥವಾಗಿದೆ. ಇದೊಂದು ಮಹತ್ವದ ಆಕರ ಗ್ರಂಥ. ಇದೇ ಗ್ರಂಥವನ್ನು ಪರಿಷ್ಕರಿಸಿ ೨೦೦೮ರಲ್ಲಿ ತುಳುನಾಡಿನ ಮುಸ್ಲಿಮರು ಎನ್ನುವ ಹೆಸರಲ್ಲಿ ಪ್ರಕಟಿಸಿರುತ್ತಾರೆ. ಈ ವಿದ್ವಾಂಸರು ಮಾಡಿರುವ ಇನ್ನೊಂದು ಸಾಧನೆಯೆಂದರೆ ‘ಇಂಗ್ಲಿಶ್-ಕನ್ನಡ-ಬ್ಯಾರಿ ‘ ಅರ್ಥ ಕೋಶ(೧೯೯೭). Wahab’s Travel Guide ಎನ್ನುವ ಮಾಹಿತಿ ಕೈಪಿಡಿ ಇವರ ಇನ್ನೊಂದು ಸಾಧನೆ.ಹಾಗೆಯೇ’ ಓದು ಕಿಡಾವು ಓದು’ ಎನ್ನುವ ಮಕ್ಕಳ ಪುಸ್ತಕ ರಚಿಸಿದ್ದಾರೆ. ‘ಬ್ಯಾರಿ ಅಡುಗೆ ‘ ಪುಸ್ತಕ ಸಿದ್ಧ ಪಡಿಸಿರುವರಾದರೂ ಅದು ಪ್ರಕಟವಾಗಿಲ್ಲ. ಶ್ರೀ ಎಂ. ಮುಕುಂದ ಪ್ರಭುಗಳ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟವಾದ ಕೆನರಾ ೨೦೦ ‘ಪೊಲಿ’ ಆಕರ ಗ್ರಂಥ ಸಂಪಾದಕ ಮಂಡಳಿಯಲ್ಲಿ ಇವರೂ ಒಬ್ಬರು.’ ಧಾರ್ಮಿಕ ಸಾಮರಸ್ಯ ‘ ಎನ್ನುವ ಇವರ ವಿಶಿಷ್ಟ ಲೇಖನವೂ ಇದರಲ್ಲಿದೆ. ಕಳೆದ ವರ್ಷ ನಡೆದ ‘ವಿಶ್ವ ತುಳು ಸಂಮೇಳನೋ-೨೦೦೯’ ನೆನಪಿಗಾಗಿ ಡಾ. ವಾಮನ ನಂದಾವರ ಅವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟಗೊಂಡ ‘ಕೊಡಿಪು’ ನೆಂಪು ಸಂಚಿ ಮತ್ತು ೫೧ ಪುಸ್ತಕಗಳ ಸಂಪಾದಕ ಸಮಿತಿಯಲ್ಲಿ ಇವರೂ ಒಬ್ಬರು.’ ಪಿರಾಕ್ದ ತುಳುನಾಡ್ಗ್ ಬತ್ತಿನ ಬಿನ್ನೆರ್ ‘ ಎನ್ನುವ ಇವರ ಲೇಖನ’ ಕೊಡಿಪು ‘ ನೆಂಪು ಸಂಚಿಯಲ್ಲಿದೆ.ಅಲ್ಲದೆ ೫೧ ಪುಸ್ತಕ ಮಾಲೆಯ ‘ನಿರ್ಸಾನಿ’ ಎನ್ನುವ ಹಿರಿಯ ತುಳುವೆರೆ ಪರಿಚಯೋ ಪುಸ್ತಕದಲ್ಲಿ ‘ನೂರಿ ಸಾಹೇಬ್’, ಸಿ . ರಾಘವನ್, ಜಕ್ರಿಯಾಕ ಮೊದಲಾದವರ ಸಾಧನೆಗಳ ಪರಿಚಯ ಮಾಡಿದ್ದಾರೆ. ವಿಶ್ವ ತುಳು ಸಮ್ಮೇಳನದ ಅಂಗವಾಗಿ ಉಡುಪಿ ತಾಲೂಕಿನಲ್ಲಿ ನಡೆದ ಪ್ರಾದೇಶಿಕ ಸಮಾವೇಶದಲ್ಲಿ ‘ತುಳುನಾಡ್ದ ಬ್ಯಾರಿಲೆನ ತುತ್ತೈತ -ಬಂಗಾರ್ ‘ ವಿಷಯದಲ್ಲಿ ಪ್ರಬಂಧ ಮಂಡಿಸಿರುತ್ತಾರೆ.(ನೋಡಿ ತುಳುವ ಅಕ್ಟೋಬರ್ -ಡಿಸೆಂಬರ್ ೨೦೦೯,ಪು.೨೭-೨೮) -ನಂದಾವರ .]]>

‍ಲೇಖಕರು avadhi

2 October, 2010

3 Comments

  1. kohimavittal

    Wahab and myself were college mates at Government College at Mangalore. I had an opportunity to act in plays directed by him. It is very sad to hear the demise of such a lovely and friendly person. I had lost touch with him after leaving college in pursuit of my career. He was there in Mangalore doing his best to change societies ills to the extent possible by him.
    It is a great loss. May his soul rest in peace

  2. V.N.Laxminarayana

    ಕೇಳಿ ತುಂಬಾ ಬೇಸರಪಟ್ಟೆ.

  3. ಆನಂದ ಕೋಡಿಂಬಳ

    ಡಾ. ವಹಾಬ್ ದೊಡ್ಡಮನೆಯವರ ಅಕಾಲಿಕ ನಿಧನ ದುಃಖ, ಬೇಸರ ತಂದಿತು. ಮಾನವೀಯತೆಗೆ ಬಹಳ ಮಹತ್ವ ನೀಡುವ ಮನುಷ್ಯರಾಗಿದ್ದರು ಅವರು. ಅವರು ಅಧ್ಯಯನಪೂರ್ವಕವಾಗಿ ರಚಿಸಿದ ಗ್ರಂಥ ‘ತುಳುನಾಡಿನ ಮುಸ್ಲಿಮರು’ ವನ್ನುವುದು ತುಳುನಾಡಿನ ಇಸ್ಲಾಮ್ ಸಂಸ್ಕ್ರತಿ ಕುರಿತ ಅಪೂರ್ವವಾದ ಗ್ರಂಥ. ನಾನು ಮತ್ತು ಕವಿತಾ ಸಂಶೋಧನೆ ಮಾಡುತ್ತಿರುವ ‘ದಕ್ಷಿಣ ಕನ್ನಡ ಕಾಸರಗೋಡು ಮತ್ತು ಕೊಡಗು ಪ್ರದೇಶಗಳ ಮುಸ್ಲಿಮ್ ಸಮಾಜ ಮತ್ತು ಸಂಸ್ಲೃತಿ’ ಎಂಬ ಕೆಲಸಕ್ಕೆ ವಹಾಬ್ ಸರ್ ಅವರ ಅಧ್ಯಯನ ಗ್ರಂಥ ಮಹತ್ವದ ಒಳನೋಟ ಮತ್ತು ತುಳುನಾಡಿನ ಮುಸ್ಲಿಮರ ಕುರಿತು ಸಾಕಷ್ಟು ಮಾಹಿತಿಯನ್ನು ನೀಡಿತ್ತು. ಅವರ ಅವರ ಅಗಲಿಕೆ ನಮಗೆ ತುಂಬಲಾರದ ನಷ್ಟವಾಗಿಬಿಟ್ಟಿತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading