ವಸುಂಧರಾ ಕದಲೂರು
….. ಹಾಗೆಂದು
ಸಮಾಧಾನ ಪಡಬೇಕು
ಈಗ
ಇದ್ದೂ ಇಲ್ಲದ ಹಾಗೆ ಇರಲು
ಬಯಸುವವರು ಕಾಣೆ
ಆಗಬಹುದು ಕಣ್ಣೆದುರಿಂದ
ಯಾವಾಗಲಾದರು..
ಕಣ್ಮರೆಯಾಗುವವರು
ನಮ್ಮ ಮನದ ಯವನಿಕೆಯಲಿ
ಸೊಗಸು ಚಿತ್ರವಾಗಿ, ಕನಸುಗಳಲಿ ಕನವರಿಕೆಯಾಗಿರುತಾರೆ..
ಹಾಗೆ.. ಚಿತ್ತ ಭಿತ್ತಿಯಲಿ ಮನೆ ಮಾಡಿ
ನೆಲೆಯಾದವರು ದಿಢೀರ್
ಮರೆಯಾಗಿ ಕಣ್ಣ ಹನಿಯಾಗಿ
ಉಳಿದು ಕಾಣೆಯಾಗುತ್ತಾರೆ..
ರೆಪ್ಪೆ ಬಡಿದು ಜಾರಿಸಿ ಬಿಡುವ
ಅವಕಾಶವಿದ್ದರೂ ಒಲವ
ಹುಚ್ಚು ದಿಗ್ಬಂಧನ ನಮ್ಮ ರೆಪ್ಪೆ
ಬಡಿಸದು…
ಆದರೂ ಹೀಗೆಲ್ಲಾ ಕಾಯುವಿಕೆಯ
ನೋವ ನುಂಗಿ ನರಳುವ,
ವ್ಯರ್ಥ ನಿರೀಕ್ಷೆಯಲೇ ಕಾಲ
ನೂಕುವ ಮಹಾ ಸಂಕಟವನೇ
ಉಣ್ಣುವ ಬದಲು,
ಅವರು ಕಾಣೆಯಾಗಿದ್ದಾರೆ!
ಎಂದು ಸಮಾಧಾನ ಪಡುವುದು
ನೂರು ಪಾಲು ಉತ್ತಮ..
0 ಪ್ರತಿಕ್ರಿಯೆಗಳು