ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲಜ್ಜೆಗೆಟ್ಟ ಕತ್ತಲಿಗೆ..

ವೀರೇಶ ನಾಯಕ

ಕಾವ್ಯವನ್ನೋದಿಸುವ ಸಮಯದಲ್ಲಾದರೂ
ನೀ ಬರಬೇಕಿತ್ತು
ಇನ್ನೂ ಹೇಳದೆ ಉಳಿದ ಎಷ್ಟೋ ಸಾಲುಗಳ
ಕಣ್ಣ ಗರ್ಭದಿಂದ ತೊಟ್ಟಿಕ್ಕಿದ
ಕನಸುಗಳ ಜತನಕ್ಕಾದರೂ
ನೀ ಬರಬೇಕಿತ್ತು.

ದುಂಬಿ ಕೂತ ಸಾಕ್ಷಿಗೆ
ಹೂದಳದ ಮಾತನ್ನು ಕೇಳಿಸಿಕೊಳ್ಳುವದಕ್ಕಾದರೂ
ನಿನ್ನದೊಂದು ಕಿವಿ ಇರಬೇಕಿತ್ತು
ನನ್ನ ಮುದಿ ನಾಯಿಯ ಬಾಯಿಂದ
ಸ್ಖಲಿಸಿದ ಹಸಿವಿಗಾದರೂ
ನಿನ್ನ ನೆನಪಿನ ಉರಿಗಣ್ಣ ಕೆಂಡದಲಿ
ಬೆಂದ ಈ ಎದೆ ಮೇಲೆ
ತುಂಡು ರೊಟ್ಟಿಯಾದರೂ
ಬೇಯಿಸಬೇಕಿತ್ತು.

ಸತ್ತ ಹರಪ್ಪ, ಮೆಹೆಂಜೊದಾರೊ ಕಥೆ
ಮಾಸಿದ ಬಣ್ಣದಿಂದ ಇತಿಹಾಸ ಸೇರಿರುವಾಗ
ಮುಗಿಲ ಚಿತ್ರದಲಿ
ಬಾಯಾರಿದ ಕೊಕ್ಕರೆಯಂತೆ ಮೂಡಿದ
ಮಾತುಗಳ ಜೀವಂತಿಕೆಗಾದರೂ
ನೀನಿರಬೇಕಿತ್ತು.

ಕೊನೆಯ ಘಳಿಗೆಯಲಿ
ನನ್ನ ನೆರಳಲ್ಲಿ ಅರಳಿದ ನಿನ್ನ ಕಣ್ಣ ಬಯಲ ದಾರಿಗೆ
ಬಿಸಿಲ ಸೋಕಿಸದೆ ಅಡ್ಡಗಟ್ಟಿ ನಿಂದ
ನನ್ನ ಬೆನ್ನಿನಿಂದಾದರೂ
ನೀ ನಲಿಯಬೇಕಿತ್ತು.

‍ಲೇಖಕರು avadhi

23 July, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading