ವೈದೇಹಿ
*ನನ್ನ ಆರೋಗ್ಯ ಪೂರ್ತಿ ಸರಿಹೋಗುತ್ತಿಲ್ಲ. ಕೆಟ್ಟ ಚಾಳಿಗಳು ಬೇರೆ. ಅವು ಕೂಡ ಕಮ್ಮಿಯಾಗುತ್ತಿವೆ its terrible!
* ದೇಹ ಮನಸ್ಸು ಚುರುಕಾಗುತ್ತಿಲ್ಲ. ಬೇಸರವಾಗುತ್ತಿದೆ. ಕುಡಿಯುವುದು, ಸೇದುವುದು ಎಲ್ಲ ಬಿಟ್ಟಾಯಿತು. ತಿನ್ನುವುದೂ ಬಿಡಬೇಕಾಗಬಹುದು. That’s death
* ತುಂಬ depressionನಲ್ಲಿ ಬಳಲುತ್ತಿದ್ದೇನೆ. ದೀಪಾವಳಿ ಸಂಚಿಕೆಗೆ ಏನೂ ಬರೆಯಲಾಗಿಲ್ಲ. ಲೇಖನ ಪದ್ಯ ಬಂದಿವೆ. ನೋಡುವುದು ಕಷ್ಟವಾಗುತ್ತಿದೆ.
* ನನಗೆ ಇದೇ ತಿಂಗಳು ಇಪ್ಪತ್ತೆಂಟನೆಯ ತಾರೀಖು ಎರಡನೇ ಶಸ್ತ್ರಚಿಕಿತ್ಸೆ ಮದ್ರಾಸ್ನಲ್ಲಿ. ನಾಲ್ಕು ಹೆಜ್ಜೆ ಎಲ್ಲೂ ಹೋಗಲಾಗುತ್ತಿಲ್ಲ. ಇಡೀ ಜಗತ್ತು ವಿಚಿತ್ರವಾಗಿ ನರಕಸದೃಶವಾಗಿ ಕಾಣುತ್ತಿದೆ.
* ನನಗೆ ಈ ಶಸ್ತ್ರ ಚಿಕಿತ್ಸೆ ಎಂದರೆ ತುಂಬ nervousnessದಿಗ್ಭ್ರಮೆ. ಮಾನಸಿಕವಾಗಿ ಸಿದ್ಧವಾಗುತ್ತಿದ್ದೇನೆ… ಇದೆಲ್ಲ ಗೋಳಿನ ಮಧ್ಯೆ ಸಂಕಟ, ನೋವು ಇದೆ. ಇಂಥ ಒಬ್ಬಂಟಿತನ ಮತ್ತು anxiety ನನಗೆ ಮಾತ್ರ ಇದೆಯೋ ಬೇರೆಯವರಲ್ಲೂ ಎಂದಾದರೊಮ್ಮೆ ಇರುತ್ತದೆಯೋ ಎಂದು ಗೊಂದಲವಾಗುತ್ತಿದೆ.
* ಮದ್ರಾಸ್ನಿಂದ ಕಳೆದ ಭಾನುವಾರ ಬಂದೆ. ಮೂರನೆ ಶಸ್ತ್ರಚಿಕಿತ್ಸೆಯ ನಂತರ. ಆವತ್ತೇ ಇಸ್ಪೀಟಾಡಿದ್ದಾಯಿತು. ಜನ ಇಸ್ಪೀಟು ಕೂಡಾ ಆಡಕೂಡದೆಂದು ಈ ಶ್ವಪಚ ದೇವೇಗೌಡ ಕಟ್ಟುನಿಟ್ಟು ಮಾಡುತ್ತಿದ್ದಾನೆ. ಮನುಷ್ಯನ ಬಗ್ಗೆ ಅವನಿಗೆ ಏನೇನೂ ಗೊತ್ತಿರುವಂತಿಲ್ಲ. ಮತ್ತೇನು? ಎಲ್ಲ disgusting ಆಗಿದೆ. ಬದುಕುವ ಹುಮ್ಮಸ್ಸೇ ಕಡಿಮೆಯಾಗುತ್ತಿದೆ. ಒಂದು ಪುಟ್ಟ ಕಾದಂಬರಿ ಬರೆದು ನನ್ನ ನೆನಪಿನ ಪುಸ್ತಕ ಮುಗಿಸಬೇಕೆಂದಿದ್ದೆ. ಅವೆಲ್ಲ ಒಂದು ಸಾಲೂ ಆಗಿಲ್ಲ. 8.3.1995ರಂದು ನನಗೆ 60! i can’t believe it. ಆದರೆ ಒಪ್ಪಿಕೊಳ್ಳಲೇ ಬೇಕು.
94-95ರ ಅವಧಿಯಲ್ಲಿ ಲಂಕೇಶ್ ನನಗೆ ಬರೆದ ಕೆಲ ಪತ್ರಗಳ ಕೆಲಭಾಗಗಳನ್ನು ಇಲ್ಲಿ ಕೊಡುವ ಉದ್ದೇಶ ಇಷ್ಟೆ. ಒಳಗೆ ಹೀಗೆ ದಿಗ್ಭ್ರಮೆ ಸಂಕಟ ಗೊಂದಲ ಒಬ್ಬಂಟಿತನದಲ್ಲಿ ಇರುತ್ತಿದ್ದ ಲಂಕೇಶ್ ಮರುಸಂಚಿಕೆಯಲ್ಲಿಯೇ ಜಿಗುಪ್ಸೆಯ ನೆರಳಿನೆಳೆ ಕೂಡಾ ಗೋಚರವಾಗದಂತೆ ಎಷ್ಟು ತೀವ್ರವಾಗಿ ಮಿಡಿಯುತ್ತ ಸಂಪಾದಕೀಯ ಬರೆಯುತ್ತಿದ್ದರು! ಕಂಡು ಮಾತು ಹಾರುವಷ್ಟು ಅಚ್ಚರಿ ಕವಿಯುತ್ತಿತ್ತು. ಸೃಜನಶೀಲ ಚೇತನವೊಂದು ಮೈ ಕೊಡವಿ ಎದ್ದು ಖಿನ್ನತೆ ಓಡಿಸಿ ಮತ್ತೆ ತನ್ನನ್ನು ಪ್ರಜ್ವಲಿಸಿಕೊಳ್ಳುವ, ಲೇಖನಿಯನ್ನು ಹುರಿಗೊಳಿಸಿ ಉರಿಸುವ ರೀತಿಗೆ ಉದಾಹರಣೆ ಅವರು. ಒಬ್ಬ ವರಲೇಖಕ ಮಾತ್ರವಲ್ಲ, ಹತಾಶೆಯ ಕ್ಷಣಗಳಲ್ಲಿ ನೆನಪಾಗುವ ಒಂದು ಘನಜೀವ ಲಂಕೇಶ್
ಕೃಪೆ: ವಿಕ್ರಾಂತ ಕರ್ನಾಟಕ
0 ಪ್ರತಿಕ್ರಿಯೆಗಳು