ರೇಶ್ಮಾ ಭಟ್ ಕವಿತೆ- ಮಸಿ ಮತ್ತೆ ಲೆಗಸಿ

ರೇಶ್ಮಾ ಭಟ್

‘ಹಿಂದೆಲ್ಲ ನಿಮ್ಮಲ್ಲಿ ಶ್ರೌತಯಾಗವ ಮಾಡಿದವರಿದ್ದರು

ಹಿಮಾಲಯದ ತಪ್ಪಲಿಂದ ಸೋಮಲತೆಯ ತಂದು

ರಸವ ಹಿಂಡಿ ಕುಡಿದು ನೂರರ ಮೇಲೆ ಬಾಳಿದವರಿದ್ದರು.

ಈಗಲೂ ಈ ಇದನ್ನು ಮಾಡಬಹುದು

ಅಷ್ಟೇನು ಖರ್ಚುಬಾರದು. ಕುಟುಂಬದ 

ಘನತೆಯನ್ನು ಇಲ್ಲಿ ಇನ್ನಷ್ಟು ಹೆಚ್ಚಿಸಬಹುದು’

ಪುರೋಹಿತ ಭಟ್ಟನ ಸಲಹೆಗಳು

ಘನತೆಯನ್ನು ಎತ್ತಿ ಹಿಡಿಯಲೆಂದೇ ಇರುವುದಾದರೂ,

ಗೇಟಿನ ಕಂಬದಲ್ಲಿ, ಗ್ರಾನೈಟಿನ ಗೋಡೆಯಲ್ಲಿ

ಅಧಿಕಾರದಿಂದೊತ್ತುವ ಮೊಹರುಗಳಲ್ಲಿ,

ಶಹರಗಳ ನೂರೆಂಟು ಪ್ರವರಗಳಲ್ಲಿ 

ಘನತೆಯ ಕುರುಹು ಈಗಾಗಲೇ ಉಳಿದುಕೊಂಡಿತ್ತು.

ಆ ಮನೆಯ ಪಾತ್ರೆಗಳ ತಳಕ್ಕೆ 

ಒಲೆಯ ಬೂದಿಯನ್ನು ಕಲಸಿ  ಮೆತ್ತಿ 

ಮಸಿ ಹಿಡಿಯದಂತೆ ಅಟ್ಟುಂಡಿರುವುದೂ ಗೊತ್ತಿತ್ತು.

ಬೂದಿ ಕಲಸಿ ಲಾಗಾಯ್ತಿನಿಂದ  

ಮೆತ್ತುತ್ತಿದ್ದ ಅವಳಾದರು ಒಮ್ಮೆ ಕೇಳಿದ್ದೇನು?

‘ಯಾವ ತೋಟದಲ್ಲೋ ವಿಷ ಸಿಂಪರಿಸಿಕೊಂಡು

ಬೆಳೆದ ದ್ರಾಕ್ಷೆಯಾದರೂ ಸರಿ… 

ಅದರ ರಸ ಸಿಕ್ಕರೆ ಇಂತಿಷ್ಟು ತಂದು ಕೊಡಿ,

ಕಣ್ಣೆವೆ ಕೂಡಿ ಸುಖನಿದ್ರೆ ಬಂದರೂ ಬರಬಹುದು

ಹಳೆಯ ಹುಳಿತಕ್ಕೆ ಹಳತನ್ನು ಮರೆಯಿಸುವ

ಶಕ್ತಿ ಇದ್ದರೂ ಇರಬಹುದು’

ಉತ್ತರದ ತಪ್ಪಲಿಂದ ಸೋಮಲತೆ ತಂದವರಿಗೆ

ಇದೊಂದು ಮಾತೆ?

ಈ ಮೊದಲು ಅಲ್ಲಿ ಕೆಲವರು

ಒಲೆಯ ಬೂದಿಯನ್ನು ಕಲಸಿ ಮೆತ್ತದೆ

ಪಾತ್ರೆಯ ತಳಕ್ಕೆ ಮಸಿ ಹಿಡಿಸಿದ್ದರು. 

ಆ ನಂತರ ಬಂದವರು ಮರು ಮಾತಿಲ್ಲದೆ 

ಆ ಮಸಿಯನ್ನು ತಿಕ್ಕಿ ತೊಳೆದಿದ್ದರು.

ಇದೆಲ್ಲ ಎಲ್ಲೆಲ್ಲು ಇದ್ದದ್ದೇ…

ಆದರೆ ಈ ಬೇಡಿಕೆ ಮಾತ್ರ ಹೊಸತು.

ಅವಳಿಗದು ದಕ್ಕಿತೋ ಇಲ್ಲವೋ ತಿಳಿಯದು

ಅವಳ ಸಮಾಧಿಯ ಮೇಲೆ

ಅವಳ ಜನನ ಮರಣದ ದಿನಾಂಕಗಳ ನಡುವೆ

‘ಇವಳು ಕುಟುಂಬದ ಘನತೆಯನ್ನು ಎತ್ತಿ

ಹಿಡಿದು ಸತ್ತಳು’ ಎಂದು ಖಂಡಿತವಾಗಿಯೂ

ಬರೆಯಬಹುದೆಂದು ಅವಳು ಮಗನಲ್ಲಿ

ಹೇಳಿದ್ದಂತೂ ಸತ್ಯವಾಗಿತ್ತು.

‍ಲೇಖಕರು Admin

July 8, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಲಲಿತಾ ಸಿದ್ಧಬಸವಯ್ಯ

    ವಾಹ್!!!! ಬಹು ಆಯಾಮದ ಕವಿತೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: