ರೇಖಾ ರಂಗನಾಥ
ಕವಲೊಡೆದ ಹಾದಿಯಲಿ ಜೊತೆಯಾಗದಿರು ಬೆಳಕೇ
ಕಡು ರಾತ್ರಿಲಿ ಹೆಜ್ಜೆಗಳಿಗೆ ಕವಲು ಹಾದಿ ಕಾಣದು
ಬಿರಿದ ನೆಲದಲಿ ಹನಿಯೊಡೆಯದಿರು ಮೋಡವೇ
ತುಂಬಿಕೊಳ್ಳದ ಬಾಯಾರಿಕೆಯೊಂದು ಕರಗತವಾಗಿದೆ
ಸುಕೂನದ ಕನಸುಗಳನು ಬಿತ್ತದಿರಿ ರೆಪ್ಪೆಗಳೇ
ಬಿಂಬವೇ ಪ್ರತಿಫಲಿಸದ ನೋಟಗಳು ಮಿಳಿತವಾಗಿವೆ
ಗೀಚಿದ ಗೆರೆಯೊಳಗೆ ಬಣ್ಣ ತುಂಬದಿರು ಚಿತ್ರಕಾರನೆ
ಚಿತ್ತದೊಳಗಿನ ಚಿತ್ರದ ಬಣ್ಣವೊಂದು ಕಾಡಿತು..

ಮುಸ್ಸಂಜೆಲಿ ಸನಿಹಕೆ ಸುಳಿಯದಿರು ತಂಗಾಳಿಯೇ
ನೀನಿರದ ಸಂಜೆಗಳಲಿ ಕಾಯುವುದೇ ಹಿತವಾಗಿದೆ
ಜನಸಂದಣಿಯಲಿ ನೋಟ ಬೆರೆಸದಿರು ಮುರುಳಿ
ಕಣ್ಣ ಹನಿಯೊಂದು ಜಾರದೇ ಇಂಗಿ ಬಿಡಲಿ ಸುಮ್ಮನೆ
ಮೀರೆಗೆ .. ಆರಾಧನೆಯ ಸುಖವಿದೆ
ಊರ ದಿಬ್ಬಣದಲಿ ನೀ ಎದುರಾಗದಿರು ಮಾಧವ.






0 Comments