ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೇಖಾ ರಂಗನಾಥ ಓದಿದ ‘ದೇವರಿಗೂ ಬೀಗ’

ರೇಖಾ ರಂಗನಾಥ

ಇತ್ತೀಚಿಗೆ ಕೈಗೆತ್ತಿಗೊಂಡು ಓದಿ ಮುಗಿಸಿದ ಪುಸ್ತಕ ನಾಮದೇವ ಕಾಗದಗಾರ ಅವರ ‘ದೇವರಿಗೂ ಬೀಗ’. ತನ್ನ ತಲೆ ಬರಹದಿಂದಲೇ ಆಕರ್ಷಿಸುವ ಪುಸ್ತಕ. ನಾಮದೇವ ಕಾಗದಗಾರರು ಮೂಲತಃ ಒಬ್ಬ ಚಿತ್ರಕಾರರು. ವನ್ಯ ಜೀವಿ ಛಾಯಾಗ್ರಹಣಕಾರರಾಗಿದ್ದು; ಸಾಹಿತ್ಯದ ಒಲವಿನ ತೊಡಕಲಿ ಸಿಲುಕಿಕೊಂಡ ಇವರು ಬಹುಮುಖಿ ಹವ್ಯಾಸಗಾರರು.

ಈ ಹೊತ್ತಿಗೆ ಇವರ ಲೇಖನಗಳ ಸಂಖ್ಯೆ ಸಾವಿರಕ್ಕೇರಿದೆ. ವ್ಯಂಗ ಚಿತ್ರ, ರೇಖಾ ಚಿತ್ರಗಳೊಂದಿಗೆ ಬಹುತೇಕ ಲೇಖನಗಳು ರಾಜ್ಯದ ಅನೇಕ ಮುದ್ರಣ ಮಾಧ್ಯಮದ ಸಾಪ್ತಾಹಿಕ ಪುರವಣಿಗಳಲಿ, ವಾರಪತ್ರಿಕೆಗಳಲಿ ಪ್ರಕಟಗೊಂಡ ಒಟ್ಟು 39 ಲೇಖನಗಳನ್ನು ಒಟ್ಟುಗೂಡಿಸಿ ‘ದೇವರಿಗೂ ಬೀಗ’ ಕೃತಿಯನು ಲೋಕಾರ್ಪಣೆಗಿಳಿಸಿರುವರು.

ಪ್ರತಿ ಲೇಖನಗಳು ಅಬ್ಬರವಿಲ್ಲದೆ ಸಹಜವಾಗಿ ಓದಿಸಿಕೊಳ್ಳುವ ಸಮಕಾಲಿನ ವಿದ್ಯಮಾನಗಳಿಂದ ಕೂಡಿದ್ದು, ನಮ್ಮ ಸುತ್ತ ಜಗತ್ತಿನ ಅರಿವು ಮೂಡಿಸುವುದು. ಪತ್ರಕರ್ತರು ಸಾಹಿತಿಗಳಾದ ಎಂ. ಮಂಜುನಾಥ ಬಮ್ಮನಕಟ್ಟಿಯವರ ಮುನ್ನುಡಿ. ಹಾಗೂ ಹಿರಿಯ ಸಾಹಿತಿಗಳಾದ ಶ್ರೀಯುತ ಸತೀಶ ಕುಲಕರ್ಣಿಯವರು ಬೆನ್ನುಡಿಯಿಂದ ಬೆನ್ನು ತಟ್ಟಿರುವರು. ಒಟ್ಟು 39 ಲೇಖನಗಳು 6 ಸುಳಿವುಗಳಲ್ಲಿ ತೆರೆದುಕೊಳ್ಳುವುದು. ಬೆವರು ಬದುಕು, ನೆಲನಕ್ಷತ್ರ, ವಿಶಿಷ್ಟ-ವಿಭಿನ್ನ, ಧರ್ಮ ಸಿರಿ, ನೆಲಸಿರಿ, ತಿಳಿತೇಜ.. ಹೀಗೆ ಲೇಖನಗಳು ಹರಡಿಕೊಂಡಿವೆ.

ಬೆವರು ಬದುಕು 7 ಉಪವಿಭಾಗಗಳಾಗಿವೆ. ರಟ್ಟೆ ಮುರಿದು.. ಹರಿಯುವ ಒಂದೊಂದು ಬೆವರು ಹನಿ ಹಿಂದೆ ಇರುವ ಸೆಣಸಾಟವೆಲ್ಲ ಗೇಣುದ್ದ ಹೊಟ್ಟೆ ತುಂಡು ಬಟ್ಟೆಗಾಗಿ. ನಿತ್ಯ ತುತ್ತು ಅನ್ನಕ್ಕಾಗಿ ಬದುಕಿನುದ್ದಕ್ಕೂ ಹೋರಾಟದಲ್ಲಿ ತೊಡಗಿಕೊಂಡಿರುವ ಅಲೆಮಾರಿ ಜನಾಂಗ ;ಕಂಬಳಿ ನೇಕಾರ, ಕಮ್ಮಾರ, ಜಾನುವಾರು ಪಾದರಕ್ಷೆ ಸಾವಯವ ನಾರು ತಯಾರಿಕೆಯಲಿ ತೊಡಗಿಕೊಂಡಿರುವ ಬದುಕಿನ ಚಿತ್ರಣವನ್ನು ತೆರೆದಿಟ್ಟಿದ್ದಾರೆ. ವಿಶೇಷ ಎನ್ನಬಹುದಾದ ಬಾತುಕೋಳಿ ಸಾಕಾಣಿಕೆ ಉದ್ಯಮ ಅಚ್ಚರಿ ಮೂಡಿಸುವಂಥದ್ದು.

ನೆಲ ನಕ್ಷತ್ರ ವಿಭಾಗದಲ್ಲಿ 5 ಉಪವಿಭಾಗಗಳಿವೆ. ಬೇಲಿ ಮೇಲಿನ ಹೂವು ; ಸಸ್ಯ ಸಂಪನ್ಮೂಲವೆಲ್ಲದು ನೆಲನಕ್ಷತ್ರದಂತೆ ಭಾಸವಾದವು. ಸಸ್ಯಗಳಲಿ ಅಡಗಿರುವ ಆಯುರ್ವೇದ ಗುಣ, ಅಂತರ ಗಂಗೆ, ಸಾವಯವ ಗೊಬ್ಬರ, ಗುಲ್ಲಮೋಹರ್ ಚೆಲುವು; ಸಾವಿನ ಸೂಚ್ಯಕವಾಗಿ ಹೆಚ್ಚಿನ ಸಂಖ್ಯೆ ಹೂವು ಅರಳಿ ನಿಲ್ಲುವಂತಹದ್ದು ಕುತೂಹಲ ಮೂಡಿಸುವುದು. ಆಫ್ರಿಕಾದ ನೀರುಗಾಯಿ ಬೆರಗು ಹುಟ್ಟಿಸಿತು.

ವಿಶಿಷ್ಟ -ವಿಭಿನ್ನ ವಿಭಾಗದಲ್ಲಿ 7 ಉಪವಿಭಾಗಳಿವೆ. ಧಾರ್ಮಿಕ ಆಚರಣೆಗಳಲ್ಲಿ ಸ್ಥಾನಿಕವಾಗಿ ಜನರ ನಂಬುಗೆಗಳನ್ನ ಬಿತ್ತರಿಸುವುದು. ರೋಗರುಜಿನಗಳಿಂದ ದೂರವಿರಲು ದೇವರ ಗಡಿಪಾರು, ಹರಿಕೆ ಕೈಗೂಡಲು ದೇವರಿಗೂ ಬೀಗ, ಚಪ್ಪಲಿ ತೊಡದ ಅಜ್ಜಿಯೊಬ್ಬಳ ದೇವರಿಗೆ ಪಾದುಕೆ ಸೇವೆ ಕಥೆ, ಸೋಜಿಗವನ್ನುಂಟು ಮಾಡುವ ಜೀವಂತ ರತಿ ಮನ್ಮಥರ ಕಥೆ ವಿಶಿಷ್ಟವು ವಿಭಿನ್ನವು ಆದಂಥಹದ್ದು.

ಧರ್ಮಸಿರಿ ವಿಭಾಗದಲ್ಲಿ ಪರಂಪರೆಯಾಗಿ ನಡೆದು ಬಂದ ಆಚಾರ-ವಿಚಾರಗಳಲ್ಲಿ ಮನುಷ್ಯ ಸಂಬಂಧಗಟ್ಟಿಗೊಳಿಸುವ ಜಾತ್ರೆಗಳು, ವಾಸ್ತು ಶಿಲ್ಪ ವೈಭವದ ದೇಗುಲಗಳು, ಮುಕ್ತೇಶ್ವರ, ಗಳಗನಾಥ, ಭೀಮೇಶ್ವರ ಹೀಗೆ ದೇವಸ್ಥಾಗಳ ಪರಿಚಯಾತ್ಮಕ ಲೇಖನಗಳಿವೆ. ನೆಲಸಿರಿ ವಿಭಾಗದಲ್ಲಿ 6 ಲೇಖನಗಳಿವೆ. ಮಣ್ಣಿನಲ್ಲಿ ಮಣ್ಣಾಗಿ ದುಡಿದು ಪರರ ಹೊಟ್ಟೆ ತುಂಬಿಸುವ ರೈತರ ಬಗ್ಗೆ, ಕುರಿಗಾಹಿಯೊಬ್ಬ ವಿಶ್ವವಿದ್ಯಾಲಯದಲ್ಲಿ ಕೃಷಿ ಪಾಠ, ಅನುಭವಿ ಕೃಷಿತಜ್ಞನಾಗಿ ಬೆಳೆದ ಮುತ್ತಣ್ಣ ಒಳಗೊಂಡಂತೆ ವಿವಿಧ ಸಾಧಕರ ಪರಿಚಯವಿದ್ದು, ನಾಮದೇವ ಕಾಗದಗಾರರ ನೆಲಶ್ರೀಮಂತಿಕೆ ಬರಹಗಳನ್ನೊಳಗೊಂಡಿದೆ.

ಕೊನೆ ವಿಭಾಗ ತಿಳಿ ತೇಜ ಕೂಡ 6 ವಿಭಾಗಗಳಿಂದ ಕೂಡಿದ್ದು; ಮನನ ಮಾಡಿ ನಮ್ಮೊಳಗೆ ಕಂಡುಕೊಳ್ಳಬೇಕಾದ ಸಂಗತಿಗಳ ಲೇಖನಗಳಿವೆ. ಬದುಕು ಕಲಿಸುವ ಮಕ್ಕಳ ಸಂತೆ, ಬಾಲ್ಯವಸ್ಥೆಯಲ್ಲೆ ಹಾವು ಹಿಡಿಯುವ ಕಾಯಕಕ್ಕೆ ಬಿದ್ದ ಅಣ್ಣ -ತಂಗಿ, ಕೊನೆಯಲ್ಲಿ ಪ್ಲಾಸ್ಟಿಕ್ ಮಾಹಾಮಾರಿ ಬಗ್ಗೆ ಎಚ್ಚರಿಸುವ ಅಂಕಿ ಅಂಶಗಳು, ಜೀವ ಸಂಕುಲ ಸಿಲುಕಿರುವ ಆತಂಕವನ್ನು ಬಿಚ್ಚಿಡುವ ಲೇಖನಗಳಿವೆ. ನಾಮದೇವ ಕಾಗದಗಾರರ ಲೇಖನಗಳೆಲ್ಲದೂ ಸಾಮಾಜಿಕ ಕಳಕಳಿಯಿರುವ ಸಮಕಾಲಿನ ಸಂಗತಿಗಳಾಗಿವೆ.

‍ಲೇಖಕರು Admin

21 August, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading