ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೂಪಕಗಳ ರೂಪ ಬದಲಾಗಬೇಕಿದೆ!..

ರಾಘವೇಂದ್ರ ಜೋಶಿ

ಕನಸು-ಕನವರಿಕೆ

ರೋಮಾಂಚನ ತರದ ಪ್ರಯಾಣವಿದು

ಸರಕಾರಿ ಬಸ್ಸಿಗೆ ವೇಗವಿಲ್ಲ
ಕಿಟಕಿಯಲ್ಲಿ ಗಾಳಿಯಿಲ್ಲ
ಪದಬಂಧದಲ್ಲೂ ಮನಸ್ಸಿಲ್ಲ.
ಸುಂದರಿ ಬಂದು
ಪಕ್ಕದಲ್ಲಿ ಪವಡಿಸಿದ್ದೇ ತಡ;
ಬಸ್ಸಿಗೂ ಮನಸಿಗೂ ನಾಗಾಲೋಟ!

ವೇಗ ಹೆಚ್ಚಿದಂತೆ ಹಾದಿಬದಿಯ
ಕರೆಂಟ್ ತಂತಿಗಳು
ಭ್ರಮೆ ಹುಟ್ಟಿಸಿ ಸಂಭ್ರಮಿಸುತ್ತವೆ:
ಒಂದಕ್ಕೊಂದು ತಬ್ಬಿಕೊಂಡಂತೆ
ಎರಡೂ ಒಂದಾಗಿ ಹೋದಂತೆ.
ವೇಗ ಕಳೆದುಕೊಂಡಾಗ
ಮುಚ್ಚಿಟ್ಟ ಸತ್ಯವೊಂದು ತೋರಿದೆ;
ಮೂರನೇ ತಂತಿಯೊಂದು ಕಂಡಿದೆ!

ರೂಪರೇಖೆಗಳೇ ಬದಲಾಗುವ
ಈ ಹೊತ್ತಿನಲ್ಲಿ ರೂಪಕಗಳ
ರೂಪ ಬದಲಾಗಬೇಕಿದೆ
ರೂಹೂ ಬದಲಾಗಬೇಕಿದೆ.

ಯತಿಗಳು ಒತ್ತುವ ಬಿಸಿಮುದ್ರೆ
ಪೋಸ್ಟ್ ಆಫೀಸಿನ ಕರಿಮುದ್ರೆ
ಭರತನಾಟ್ಯದ ಬೆರಳಮುದ್ರೆ –
ತ್ರಿಭುಜದ ಈ ಮೂರು ಬಿಂದುಗಳಿಗೂ
ಪೈಥಾಗೊರಸ್ ಪ್ರಮೇಯಕ್ಕೂ ಸಂಬಂಧವಿಲ್ಲ
ಆದರೆ ಯಾವತ್ತೋ ಅವಳ
ಹಣೆಗೆ ಒತ್ತಿದ ತುಸುಮುದ್ರೆ
ಮಾತ್ರ ತ್ರಿಭುಜ ಸೀಳಿದ
ರೇಖೆಯಾಗಿ ಮುನ್ನುಗ್ಗಿದೆ;
ಏಳೂ ಬಣ್ಣ ಒಟ್ಟಿಗೆ ಚಿಮ್ಮಿಸಿದೆ;
ಕಾಮನಬಿಲ್ಲಿನ ಇಂದ್ರಜಾಲ ತೋರಿಸಿದೆ!

ಸದ್ಯ,ಕವಿಯ ಮುಲಾಜಿಗೆ
ಬೀಳುವ ರೂಪಕಗಳನ್ನು
ಇನ್ನೂ ಯಾರೂ ಖರೀದಿಸಿಲ್ಲ.
ಆದರೂ ಒಮ್ಮೊಮ್ಮೆ ರೂಪಕಗಳು
ಹೀಗೂ ಹುಟ್ಟಿ
ಹಾಗೆ ಸತ್ತು ಹೋಗುತ್ತವೆ.
ಕೊನೆಗೆ
ರೂಪ ಅಳಿಯುತ್ತದೆ
ರೇಖೆ ಉಳಿಯುತ್ತದೆ..
***

‍ಲೇಖಕರು avadhi

12 October, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading