-ಶಿವಯೋಗಿ ಕಳ್ಳಿಮಠ
ಜಾನಕಿ.
ನನ್ನ ಮಾತು ಹಾಗಿರಲಿ,
ಹನುಮ.
ಹೇಗಿರುವನು ಹೇಳು ರಾಮ?
ನಾನು ಹಾಗೂ ಹೀಗೂ ಇರುವೆನು
ರಾಮ ಸೌಖ್ಯವೇ? ಹನುಮ.
ಅಶೋಕವನದಲ್ಲಿ ಶೋಕವಿದೆ.
ರಕ್ಕಸರ ಪರಿವಾರವೇ ನೆರೆಹೊರೆ
ಗಾಳಿ ಬೀಸುತ್ತಿದೆ,
ದುಗುಡಗಳ ಒಳ ಹೊರಗೆ.
ಎದೆ ಬಡಿತ ದಾವಂತವನೇ ನುಡಿಸುತ್ತಿದೆ ನಿಜ.
ಹೇಳು ಹನುಮ, ಹೇಗಿರುವನು ರಾಮ ?
ಸರಹೊತ್ತಲ್ಲಿ ರಾವಣ ಬರುವನೆಂಬ ಭಯವಿದೆ.
ಉರಿಯುವ ಈ ದೀಪಗಳು
ಬರಿ ಕತ್ತಲೆಯ ಬೆಳಗುತ್ತಿವೆ
ಈ ಅರಮನೆ ಕುಸಿಯಲೆಂದೇ ಎಣಿಸುತ್ತಿದ್ದೇನೆ
ಅನು ಕ್ಷಣ,
ದಿಟ.
ರಾಮ ಹೇಗಿರುವನು ಹೇಳು ಹನುಮ.
ಹಗಲೆಲ್ಲ ನನ್ನದೇ ಮನಸು
ಓದುವ ಕಡಲು
ಇರುಳಲ್ಲಿ ಹಿಗ್ಗಿಸಿ ಹಿಗ್ಗಿಸಿ
ಅನುರಣಿಸುತ್ತಿದೆ.
ಆಗಾಗ ನಿಷ್ಬ್ದವು ಘೋರ
ಸಿಡಿಲುಗಳ ಅರೆಯುತ್ತಿದೆ.
ಪರಿಚಾರಿಕೆಯರು ಕೊಟ್ಟ
ಊಟ ವಿಷವಾಗಿರಲೆಂದೇ
ಎಣಿಸುತ್ತೇನೆ.
ರಾಮನಿಗೆ ನನ್ನ ಕ್ಷೇಮವನೇ ತಲುಪಿಸು.
ಹೇಳು ಹನುಮ ಹೇಗಿರುವನು ರಾಮ?






0 Comments