ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಮಾಯಣಕ್ಕೆ ಕವಿದಿರುವ ಮೋಡ  

‘ನಿಜ ರಾಮಾಯಣದ ಅನ್ವೇಷಣೆ’ ಕೃತಿ ರಾಮಾಯಣಗಳ ಬಗ್ಗೆ ಹೊಸದೇ ನೋಟ ಕಟ್ಟಿಕೊಡುತ್ತದೆ

ಜಿ ಎನ್ ನಾಗರಾಜ್ ಅವರ ಅಪಾರ ಓದು, ಸಮರ್ಥ ವಿಶ್ಲೇಷಣೆ ಎರಡನ್ನೂ ‘ಅವಧಿ’ಯಲ್ಲಿ, ಫೇಸ್ ಬುಕ್ ನಲ್ಲಿ ನೀವೆಲ್ಲರೂ ಓದಿದ್ದೀರಿ

ಹಲವು ದಶಕಗಳ ಕಾಲ ನಡೆಸಿದ ಅಧ್ಯಯನದ ಫಲ ಈ ಕೃತಿ

‘ಬಹುರೂಪಿ’ ಹೊರತಂದಿರುವ ಈ ಕೃತಿಗೆ ಜಿ ಎನ್ ಮೋಹನ್ ಬರೆದ ಮಾತು ಇಲ್ಲಿದೆ-


-ಜಿ ಎನ್ ಮೋಹನ್

ಎಂದಾದರೊಂದು ದಿನ ನಾನು ಮಿಥಿಲೆಗೆ ಹೋಗಿ / ಬೀದಿಬೀದಿಯನಲೆದು ನೋಡಬೇಕು / ಅಲ್ಲಿ ಎಲ್ಲಾದರೂ ಮರದ ನೆರಳಿಗೆ ಕುಳಿತು / ರಾಮಭದ್ರನ ಮಹಿಮೆ ಹಾಡಬೇಕು.. ಎನ್ನುತ್ತಾರೆ ಕವಿ ಸುಬ್ಬಣ್ಣ ರಂಗನಾಥ ಎಕ್ಕುಂಡಿ. ಅದು ಅವರದ್ದು ಮಾತ್ರವಲ್ಲ, ಎಷ್ಟೊಂದು ಜನರ ಎದೆಯಾಳದ ಬಯಕೆಯೂ ಆಗಿತ್ತು. ಆದರೆ ರಾಮಾಯಣದ ಬಗ್ಗೆ, ರಾಮನ ಬಗ್ಗೆ, ರಾವಣನ ಬಗ್ಗೆ, ಸೀತೆಯ ಬಗ್ಗೆ ಮಾತನಾಡುವುದು ಅಪರಾಧವಾಗಿ ಹೋಗಿದ್ದು ಯಾವಾಗ?

ಜಗತ್ತಿನಲ್ಲಿ ಒಂದಲ್ಲ ಎರಡಲ್ಲ..ಹಲವು ರಾಮಾಯಣಗಳಿವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ರಾಮಾಯಣ ಭಾರತ ದೇಶದ್ದು ಮಾತ್ರವಲ್ಲ ಇಡೀ ಏಷ್ಯಾ ಖಂಡದ್ದು. ತಮ್ಮದೇ ರೂಪದಲ್ಲಿ, ತಮ್ಮ ಬದುಕನ್ನು ರಾಮಾಯಣದ ಮೂಲಕ ಬಣ್ಣಿಸಿರುವ ಕಥೆಗಳಿಗೆ ಲೆಕ್ಕವಿಲ್ಲ.

ಅಷ್ಟೇ ಅಲ್ಲ ನಾವು ಅಯೋಧ್ಯೆ ರಾಮನ ಜನ್ಮಸ್ಥಳ ಎಂದು ಹೇಳುತ್ತಿರುವಾಗಲೇ ಏಷ್ಯಾದ ಹಲವು ದೇಶಗಳಲ್ಲಿ ಅವರೂ ರಾಮನ ಜನ್ಮ ಸ್ಥಳ ಎಂದು ಗುರುತಿಸಿದ ಹಲವು ಜಾಗಗಳಿವೆ.

ಇಲ್ಲಿ ಸಂಭ್ರಮಿಸಬೇಕಾದದ್ದು ಒಂದು ಕಥೆ ಹೇಗೆ ವಿಶ್ವ ವ್ಯಾಪಕತೆ ಪಡೆಯುತ್ತದೆ ಎನ್ನುವುದರ ಬಗ್ಗೆ. ರಾಮಾಯಣಗಳ ಸಂಖ್ಯೆ ಮುನ್ನೂರಕ್ಕೂ ಹೆಚ್ಚು ಎನ್ನುವುದನ್ನು  ಜಾನಪದ ಕಥೆಗಳ ಬೆನ್ನು ಹತ್ತಿದ ಎ ಕೆ ರಾಮಾನುಜನ್ ನಮ್ಮ ಮುಂದೆ ಇಟ್ಟು ಸಾಕಷ್ಟು ಕಾಲವಾಗಿದೆ. ರಾಮಾಯಣಗಳು ಹೇಗೆಲ್ಲಾ ವೈವಿಧ್ಯಮಯ ರೂಪ ತಾಳಿದೆ ಎನ್ನುವುದನ್ನು ಕಾಣಬೇಕಾದರೆ ಪೌಲಾ ರಿಚ್ಮನ್ ಅವರ ‘ಮೆನಿ ರಾಮಾಯಣಾಸ್’ ಕೃತಿಯನ್ನು ಓದಬೇಕು.

ಗಂಡಿಗೊಂದು ರಾಮಾಯಣವಾದರೆ, ಹೆಣ್ಣಿಗೆ ಅವಳದ್ದೇ ಒಂದು ರಾಮಾಯಣವಿದೆ, ಮಕ್ಕಳು ರಾಮಾಯಣವನ್ನು ತಮ್ಮ ಕಣ್ಣುಗಳಿಂದಲೂ ಪುನರ್ರಚಿಸಿಕೊಂಡಿದ್ದಾರೆ. ಆಳುವವನಿಗೆ ಒಂದು ರಾಮಾಯಣವಾದರೆ, ಉಳುವವನ ರಾಮಾಯಣ ಹೇಳುವುದೇ ಬೇರೆ, ಜಾನಪದರ ರಾಮಾಯಣ ಓದಿದವರು ಶಿಷ್ಟ ರಾಮಾಯಣ ಹೊಕ್ಕರೆ ಅಲ್ಲಿರುವುದೆಲ್ಲಾ ಬೇರೆ ಬೇರೆ. ಇಷ್ಟೊಂದು ವೈವಿಧ್ಯಮಯ ರಾಮಾಯಣಗಳು ಇರುವಾಗ ‘ವಾಲ್ಮೀಕಿ ರಾಮಾಯಣ’ವನ್ನು ಮಾತ್ರವೇ ರಾಮಾಯಣ ಎನ್ನುವುದನ್ನು ಹೇರಬೇಕು ಏಕೆ? ಒಂದು ಸಂಸ್ಕೃತಿ, ಒಂದು ಆಹಾರ, ಒಂದು ಧಿರಿಸು, ಒಂದು ಭಾಷೆ ಎನ್ನುವಂತೆ ಒಂದು ಆಲೋಚನೆ, ಒಂದು ವಿಚಾರ ಎನ್ನುವ ಬೇಲಿಗಳನ್ನೂ ಸದ್ದಿಲ್ಲದಂತೆ ಎಬ್ಬಿಸುತ್ತಿರುವುದರ ಸೂಚನೆ ಇದು.

ಬಹುತ್ವದ ಭಾರತದಲ್ಲಿ ಏಕ ಸಂಸ್ಕೃತಿಯನ್ನು ಹರಡಬೇಕಾದ ತುರ್ತು ಪ್ರಭುತ್ವಕ್ಕಿದೆ. ‘ಒಂದಾನೊಂದು ಊರಿನಲ್ಲಿ ಒಬ್ಬ ರಾಜಕುಮಾರಿ ಇದ್ದಳು..’ ಎಂದರೆ ಒಬ್ಬೊಬ್ಬರೂ ಒಬ್ಬೊಬ್ಬ ರಾಜಕುಮಾರಿಯರನ್ನು ಕಣ್ಣ ಮುಂದೆ ನಿಲ್ಲಿಸಿಕೊಳ್ಳಲು ಸಾಧ್ಯವಿರುವ ದೇಶದಲ್ಲಿ ಒಂದೇ ರೂಪವನ್ನು ಸ್ಥಾಪಿಸುವ ಹುನ್ನಾರ ನಡೆಯುತ್ತಿದೆ. ರಾಮನೆಂದರೆ ಹೀಗೆ ಎಂದು ನಾವು ಕಟ್ಟಿಕೊಂಡಿದ್ದ ಪ್ರತಿಮೆಗಳನ್ನು ಒಡೆದು ‘ಮರ್ಯಾದಾ ಪುರುಷೋತ್ತಮ’ನನ್ನು ಮಾತ್ರ ಮುಂದಿಡಲಾಗುತ್ತಿದೆ.

ರಾವಣನು ದ್ರಾವಿಡರ ಪ್ರತಿನಿಧಿ ಎಂದು ಹೇಳುವುದು ಧರ್ಮ ನಿಂದನೆ. ಹೆಲಿಕಾಪ್ಟರ್ ನಿಂದ ಮೇಕಪ್ ಮಾಡಿಕೊಂಡು ಇಳಿದ ರಾಮ ಸೀತೆಯನ್ನು ಪೂಜಿಸುವ ಕಾಲ ಬಂದಿದೆ. ‘ರಾಮಾಯಣ ಎಕ್ಸ್ ಪ್ರೆಸ್’ ದೇಶದಾದ್ಯಂತ ತಿರುಗುತ್ತಿದೆ. ರಾಮಾಯಣ ಹೆರಿಟೇಜ್ ಟೂರ್ ಗಳನ್ನೂ ಆರಂಭಿಸಲಾಗಿದೆ. ಆಕಾಶದೆತ್ತರದ ರಾಮನ ಪ್ರತಿಮೆ ಸ್ಥಾಪಿಸುವ ಹುಮ್ಮಸ್ಸಿನಲ್ಲಿ ನಮ್ಮೆಲ್ಲರ ಎದೆಗೂಡಲ್ಲಿದ್ದ ರಾಮನನ್ನು ಇಲ್ಲವಾಗಿಸಲಾಗಿದೆ.

ಎಂದಾದರೊಂದು ದಿನ ನಾನು ಮಿಥಿಲೆಗೆ ಹೋಗಿ / ಬೀದಿಬೀದಿಯನಲೆದು ನೋಡಿ ಬರುವೆ / ರಾಮಭದ್ರನ ಕಥೆಯ ಹಾಡಿ ಕರಡಿಗೆಯಲ್ಲಿ / ಜನಕರಾಜನ ಹೊಲದ ಮಣ್ಣು ತರುವೆ.. ಎನ್ನುವ ಕನಸುಗಳೆಲ್ಲವೂ ಈ ರೈಲು, ಈ ಆಳೆತ್ತರದ ಪ್ರತಿಮೆಗಳ ಮಧ್ಯೆ ಕಳೆದುಹೋಗಿದೆ. ‘ರಾಮಾಯಣ  ನಮ್ಮ ದೇಶದ ಸಾಮಾಜಿಕ ಬೆಳವಣಿಗೆಯ ಹಂತಗಳ ಇತಿಹಾಸ ರಚನೆಗೆ ಇರುವ ಮುಖ್ಯ ಆಕರ. ಆದರೆ ಅದು ಇತಿಹಾಸವಲ್ಲ. ಈ ಆಕರಗಳನ್ನು ಎಚ್ಚರದ, ಕೂಲಂಕಷ ಅಧ್ಯಯನಕ್ಕೆ ಒಳಪಡಿಸಬೇಕು. ಅವುಗಳನ್ನು ಅಂದಿನ ಸಮಾಜ ರಚನೆ, ಬೆಳವಣಿಗೆಯ ಸಂದರ್ಭದಲ್ಲಿಟ್ಟು ವಿಶ್ಲೇಷಣೆಗೆ ಒಳಪಡಿಸಬೇಕು. ಇದು ನಮ್ಮನ್ನು ರೂಪಿಸಿದ ನಂಬಿಕೆಗಳು, ಐತಿಹ್ಯಗಳು ಆಚರಣೆಗಳನ್ನು ಅರಿತುಕೊಳ್ಳುವುದಕ್ಕೆ ಬಹಳ ಅವಶ್ಯಕ’ ಎನ್ನುತ್ತಾರೆ ಜಿ ಎನ್ ನಾಗರಾಜ್.

ಪ್ರಶ್ನೆ ಕೇಳುವುದು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ರಹದಾರಿಯಾಗಿತ್ತು. ಆದರೆ ಈಗ ಪ್ರಶ್ನೆ ಕೇಳುವುದೇ ಅಪರಾಧ ಎನ್ನುವಂತಾಗಿದೆ. ಅದಕ್ಕೆ ವ್ಯತಿರಿಕ್ತವಾಗಿ ಪ್ರಶ್ನೆ ಕೇಳುವ ಬಾಯಿಗಳನ್ನು ಕಟ್ಟಿಹಾಕುವ ಕೆಲಸ ನಡೆಯುತ್ತಿದೆ. ‘ಪುಸ್ತಕವೆಂದರೆ ಪುಸ್ತಕವಲ್ಲ, ಅರಿವಿನ ಗೂಡು’ ಎನ್ನುವುದು ಪ್ರಭುತ್ವಕ್ಕೂ ಗೊತ್ತಾಗಿಹೋಗಿದೆ ಹಾಗಾಗಿಯೇ ಅದಕ್ಕೆ ಪುಸ್ತಕಗಳನ್ನು ಕಂಡರೆ ಇನ್ನಿಲ್ಲದ ಅಸಹನೆ. ಮೊದಲು ಸಂವಾದ ವಾಗ್ವಾದವಿದ್ದವು ನಂತರ ಸೆನ್ಸಾರ್ ಗಳು.. ಈಗ ಬಾಯಿ ಕಟ್ಟಿ ಹಾಕಲು ಭಯದ ಪಹರೆ.

ಇಂತಹ ಕಾಲಘಟ್ಟದಲ್ಲಿ ಜಿ ಎನ್ ನಾಗರಾಜ್ ಅವರ ‘ನಿಜ ರಾಮಾಯಣದ ಅನ್ವೇಷಣೆ’ ಮೂಡಿ ಬಂದಿದೆ. ಜಗತ್ತಿನ ಎಲ್ಲೆಡೆ ಹರಡಿರುವ ನೂರಾರು ರಾಮಾಯಣಗಳನ್ನು ಮುಂದಿಟ್ಟುಕೊಂಡು ಅದರ ಮೂಲಕ ಆಯಾ ಸಮಾಜದ ನೋಟವನ್ನು ಕಟ್ಟಿಕೊಡುವ ಕೃತಿ ಇದು. ರಾಮಾಯಣಗಳು ಬದಲಾದದ್ದರ ಹಿಂದೆ ಇರುವ ಹುನ್ನಾರಗಳನ್ನು ಹುಡುಕಲು ಪ್ರಯತ್ನಿಸಿದ ಕೃತಿ ಇದು.

ಜಿ ಎನ್  ನಾಗರಾಜ್ ನಮ್ಮ ನಡುವಿನ ಮಹತ್ವದ ವಿಚಾರವಂತರು. ಒಂದು ಪ್ರಶ್ನೆಯನ್ನು ಬೆನ್ನತ್ತುವುದು ಹೇಗೆ ಉತ್ತರ ಪಡೆಯುವವರೆಗೆ.. ಎನ್ನುವುದನ್ನು ಅವರಿಂದ ಕಲಿತ ವಿಸ್ತಾರ ಬಳಗವೇ ಇದೆ. ಕುವೆಂಪುರವರ ‘ರಾಮಾಯಣ ದರ್ಶನಂ’ ಓದಿ, ಭಾಸನ ನಾಟಕಗಳನ್ನು ಓದಿ ರಾಮಾಯಣವನ್ನು ಅರಿಯಲು ೧೪ ವರ್ಷ ಮಾತ್ರವಲ್ಲ ಅದರ ಮೂರು ಪಟ್ಟು ವರ್ಷಗಳನ್ನು ಕಳೆದಿದ್ದಾರೆ. ಅವರ ಶೋಧಕ ಮನಸ್ಸಿಗೆ ಈ ಕೃತಿ ಸಾಕ್ಷಿ.

ಫಿಡೆಲ್ ಕ್ಯಾಸ್ಟ್ರೊ ‘ಈ ಜಗತ್ತಿನಲ್ಲಿ ಒಂದು ಸೂರ್ಯ ಮಾತ್ರ ಅಲ್ಲ, ಅದಕ್ಕೆ ಕವಿದುಕೊಂಡಿರುವ ಮೋಡ ಹನಿಯಾಗಿ ನೆಲಕ್ಕುರುಳಿದರೆ ಪ್ರತಿಯೊಬ್ಬನಿಗೂ ಒಂದೊಂದು ಸೂರ್ಯನಿದ್ದಾನೆ’ ಎಂದಿದ್ದರು. ಹಾಗೆಯೇ ರಾಮ ಒಬ್ಬನೇ ಅಲ್ಲ, ರಾಮಾಯಣಕ್ಕೆ ಕವಿದಿರುವ ಮೋಡ ಇಲ್ಲವಾದರೆ ಪ್ರತಿಯೊಬ್ಬರಿಗೂ ಅವರವರದ್ದೇ ರಾಮನಿದ್ದಾನೆ

‍ಲೇಖಕರು avadhi

31 December, 2018

1 Comment

  1. ಮಹೇಶ್ವರಿ.ಯು

    ಸರ್, ಆದರೂ ನನ್ನದೊಂದು ಸಂದೇಹ . ‘ನಿಜರಾಮಾಯಣದ ಅನ್ವೇಷಣೆ ‘ಎನ್ನುವಾಗ ರಾಮಾಯಣದ ಒಂದು ವರ್ಶನ್ ಅನ್ನು ಮಾತ್ರ ಒಪ್ಪಿಕೊಳ್ಳುವ ಮನಸ್ಸು ಕಾಣಿಸುವುದಿಲ್ಲವೇ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading