ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಮಯ್ಯ ಮತ್ತು ಕಾವ್ಯ

ಹಸಿದ ಕಂದನ ಒಡಲ ತುಡಿತ

ಹುಲಿಕುಂಟೆ ಮೂರ್ತಿ
ರಾಮಯ್ಯನವರು ಬಂದರು.. ತಮ್ಮ ಪದ್ಯಗಳನ್ನು ಓದಿದರು. ಕಳೆದ ಮೂವತ್ತು ಮೂವತ್ತೈದು ವರ್ಷಗಳಿಂದ ತಮ್ಮೆದೆಯಲ್ಲಿ ಕಾಪಿಟ್ಟುಕೊಂಡಿದ್ದ ಕಾವ್ಯದ ಜಲಧಾರೆ ಹರಿಸಿದರು. ಅವರ ಕಾವ್ಯ ದಲಿತ ಸಂಘರ್ಷ ಸಮಿತಿಯ ಹುಟ್ಟು, ಬೆಳವಣಿಗೆ, ಮೂರ್ನಾಲ್ಕು ದಶಕಗಳ ಕನ್ನಡ ಜನತೆಯ ಪ್ರತಿಸ್ಪಂಧನ, ಸಮಕಾಲೀನ ತಲ್ಲಣಗಳು, ಅದರೆದುರಿಗೆ ನಾವು ಕಂಡುಕೊಳ್ಳಬೇಕಾದ ಜಾಡು.. ಹೀಗೆ.. ಸಿಟ್ಟಾಗಿ, ಬೆಂಕಿಯಾಗಿ, ನೀರಾಗಿ, ಹಸಿದ ಕಂದನ ಒಡಲ ತುಡಿತವಾಗಿ.. ಕಂದನಿಂದ ದೂರವಾದ ತಾಯಿಯ ಎದೆಜಿನುಗಾಗಿ.. ಅವರ ಕಾವ್ಯ ರೂಪು ಪಡೆಯುತ್ತಿದ್ದರೆ, ಇದಕ್ಕೆ ಸಾಕ್ಷಿಯಾಗಿದ್ದ ಅರವತ್ತೈದು-ಎಪ್ಪತ್ತು ಎದೆಗಳಲ್ಲಿ.. ತಾವು ಉಂಡ ಅನ್ನದ ಹಿಂದಿನ ಬೆವರಿನ, ಆ ಬೆವರ ನೆತ್ತರ- ಅತ್ತರಿನ ಲೆಕ್ಕಾಚಾರ..
‘ಎಲ್ಲಿದ್ದಾರೆ ಬೇಂದ್ರೆ..?’ ಎಂಬ ಪದ್ಯದಿಂದ ಆರಂಭವಾದ ಈ ಕಾವ್ಯಧಾರೆ, ಕೂಡಲ ಸಂಗಮ, ಸಮಕಾಲೀನ ಅಕ್ಷರ ರಾಜಕಾರಣ, ಅನ್ನದ ರಾಜಕಾರಣ, ಯೂನಿವರ್ಸಿಟಿ, ಅಕ್ಯಾಡೆಮಿಕ್ ಅತಂತ್ರತೆ, ದಲಿತ ಸಂಸ್ಕೃತಿಯ ವಿಸ್ಮೃತಿಯ ನೆಲೆ, ಆಂದ್ರದ ನಕ್ಸಲೀಯ ಚಳವಳಿಯ ಮುಗ್ಗುರಿಕೆ, ಉತ್ತರ ಕರ್ನಾಟಕದ ದಲಿತ ಹೆಣ್ಣುಮಕ್ಕಳ ಬಾಳ ಬೆಳೆಕಿನ ಕಗ್ಗೊಲೆ.. ಎಲ್ಲವೂ, ಎಲ್ಲವು… ಪದ್ಯದ ವಸ್ತುಗಳೇ.. ಪದ್ಯ ಕೇಳಿ ಗಂಟಲು ಒಣಗಿದ್ದ ಕಾವ್ಯಾಸಕ್ತರಿಗೆ ಈಗ ಸಮಕಾಲೀನ ಭೀಕರ ತಲ್ಲಣಗಳನ್ನು ಎದುರಿಸಲು ಯಾರು ಏನು ಮಾಡುತ್ತಿದ್ದೀರಿ..? ಎಂಬ ಚಾಟಿ ಬೀಸು…
ಒಟ್ಟು ನಾಲ್ಕು ಕಾಲು ಗಂಟೆಗಳ ಈ ಕಾವ್ಯ ಜಿಜ್ಞಾಸೆ ಕನ್ನಡ ಕಾವ್ಯ ವಾಚನ ಸಂಸ್ಕೃತಿಗೆ, ಆ ಕುರಿತ  ಜಿಜ್ಞಾಸೆಗೆ ಏನನ್ನೋ ಕೂಗಿ ಹೇಳುವಂತಿತ್ತು.. ಎಲ್ಲರಿಗೂ ಕೇಳಿಸೀತೆ..? ‘ಬಯಲು ಬಳಗ’ಕ್ಕೆ ಇಂಥ ಒಂದು ಕಾರ್ಯಕ್ರಮ ನಡೆಸಿದ್ದಕ್ಕೆ  ಧನ್ಯತಾ ಭಾವ. ಇಂಥ ಕಾರ್ಯಕ್ರಮಕ್ಕೆ ನಮಗೆ ಸಹಕರಿಸಿದ ಗುರುಗಳಾದ ಡಾಮ್ನಿಕ್, ಕೆವೈಎನ್ ಅವರಿಗೆ ಧನ್ಯವಾದಗಳು.
]]>

‍ಲೇಖಕರು G

9 January, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading