‘ಅವಧಿ’ಯಲ್ಲಿ ಆನಂದ ಋಗ್ವೇದಿ ಅವರ ‘ರಾಧಾ ಶ್ಯಾಮರು ಪ್ರೇಮಿಗಳೇ?’ ಲೇಖನ ಪ್ರಕಟವಾಗಿತ್ತು
ಅದು ಇಲ್ಲಿದೆ
ಈ ಲೇಖನಕ್ಕೆ ರಾಘವೇಂದ್ರ ಜೋಶಿ ಅವರು ಪ್ರತಿಕ್ರಿಯಿಸಿದ್ದಾರೆ
ರಾಘವೇಂದ್ರ ಜೋಶಿ
‘ರಾಧಾ ಶ್ಯಾಮರು ಪ್ರೇಮಿಗಳೇ?’ ಋುಗ್ವೇದಿಗಳ ಪ್ರಶ್ನೆ ಕುತೂಹಲಕಾರಿಯಾಗಿದೆ. ಹಾಗೆ ನೋಡಿದರೆ, ರಾಧಾಶ್ಯಾಮರ ಕತೆಗಳು ಜನಪದರಿನಲ್ಲಿ ಸಾಕಷ್ಟಿವೆ. ಆದರೆ ಇಂಥ ಪರಿಣಯ ಭಾವದ ಕತೆಗಳ ಮಧ್ಯೆ ‘ಗೀತೆ’ಯಲ್ಲಿ ಕೃಷ್ಣ ನಿಜಕ್ಕೂ ಹೇಳಿದ್ದೇನು? ಎಂಬುದು ಮುಸುಕಾಗಿ ಹೋಗಿರುವದು ದುರದೃಷ್ಟಕರ ಅಂತನಿಸುತ್ತದೆ.
ಕೃಷ್ಣನ ಬಗ್ಗೆ ಆಧ್ಯಾತ್ಮ ಪ್ರಪಂಚಕ್ಕೆ ಯಾವುದೇ ಗೋಜಲುಗಳಿಲ್ಲ. ಆದರೆ ರಾಧೆಯ ಬಗ್ಗೆ ಇದೇ ಭಾವ ಇದ್ದಂತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಓಶೋ ಒಂದು ಕುತೂಹಲದ ವಿವರಣೆ ಕೊಡುತ್ತಾರೆ. ತಮ್ಮ ಈ ವಿವರಣೆಗೆ ಅವರು ಸಂತ ಕಬೀರರ ದೋಹೆಯೊಂದನ್ನು ಕೋಟ್ ಮಾಡುತ್ತಾರಾದರೂ ಸದ್ಯಕ್ಕೆ ಅದು ನನಗೆ ನೆನಪಾಗುತ್ತಿಲ್ಲ.
ಇನ್ನು ವಿವರಣೆಯನ್ನು ಗಮನಿಸುವದಾದರೆ, ಕೃಷ್ಣ ಒಬ್ಬ ಮಹಾನ್ ಯೋಗಿ. ಜನ್ಮಜಾತ ವಿಭೂತಿ(ಸಿದ್ಧಿ)ಗಳನ್ನು ಹೊತ್ತುಕೊಂಡು ಬಂದಿರುವಾತ. (ಅವತಾರಿಗಳು ಜನ್ಮತಾಳುವದಿಲ್ಲ. ಸಂದರ್ಭ ಬಂದಾಗ ಪ್ರಕಟಗೊಳ್ಳುತ್ತಾರೆ!) ಇಂಥ ಯೋಗಿಯ ಸಾಂಗತ್ಯ ಯಾರಿಗೆ ತಾನೇ ಬೇಕಿಲ್ಲ? ಆದರೆ ಆತನ ಸಾಂಗತ್ಯ ಅಷ್ಟು ಸುಲಭವೇ? ಹಾಗೆ ಮಾಡಬೇಕಾದರೆ, ನಾವು ನಮ್ಮ ಸಕಲ ಇಂದ್ರಿಯಗಳನ್ನು ಒಳಗೆ ಸೆಳೆದುಕೊಳ್ಳಬೇಕು.
ಅಂದರೆ, ಬಹಿರ್ಮುಖವಾಗಿರುವ ನಮ್ಮೆಲ್ಲ ವಿಚಾರಧಾರೆಗಳನ್ನು ಅಂತರ್ಮುಖ ಮಾಡಿಕೊಳ್ಳಬೇಕು. ಈ ವಿಚಾರಧಾರೆಗಳನ್ನೇ ಓಶೋ, ಕಬೀರರೀರ್ವರೂ ಸಂಕ್ಷೇಪವಾಗಿ ‘ಧಾರಾ’ ಎಂದು ಕರೆದರು. ಯೋಗದ ವಿವಿಧ ಮಾರ್ಗಗಳಲ್ಲಿ ಸಾಧಕರು ಹೀಗೆ ತಮ್ಮ ತಮ್ಮ ‘ವಿಚಾರಧಾರಾ’ವನ್ನು ಅಂತರ್ಮುಖಗೊಳಿಸುತ್ತಾರೆ. ಅಂದರೆ, ಲೋಕದ ಭೌತಿಕ ವಿಷಯಗಳ ಬಗ್ಗೆ ಅನಾಸಕ್ತರಾಗುತ್ತಾರೆ.
ಅಲ್ಲಿಗೆ, ಒಂದು equation ತಯಾರಾಗಿ ಹೋಯಿತು. ಸಾಧಕನಲ್ಲಿ ಇದೂವರೆಗೂ ಬಹಿರ್ಮುಖವಾಗಿದ್ದ ವಿಚಾರಧಾರೆಗಳು ‘ಧಾರಾ’ ಎಂದು ಕರೆಯಲ್ಪಟ್ಟಿದ್ದವು. ಈಗ ಸಾಧಕನು ಅವೆಲ್ಲವನ್ನೂ ಹಿಮ್ಮುಖಗೊಳಿಸಿ, ಅಂತರ್ಮುಖಗೊಳಿಸಿಬಿಟ್ಟಿದ್ದರಿಂದ ‘ಧಾರಾ’ ಎಂಬುದು ಉಲ್ಟಾ ಆಯಿತು. ಆ ಮೂಲಕ, ‘ಧಾರಾ’ ಎಂಬುದು ಉಲ್ಟಾ ಆಗಿ ‘ರಾಧಾ’ ಅಂತಾಯಿತು!
ರಾಧಾ ಅನ್ನುವದು ಯಾವುದೇ ಹೆಣ್ಣಲ್ಲ. ಅದು ಕೃಷ್ಣನ ಸಾಮಿಪ್ಯ ಹೊಂದುವ ಪರಿ. ಇಂದ್ರಿಯಗಳನ್ನು ಒಳಕ್ಕೆ ಸೆಳೆದುಕೊಳ್ಳುವದು, ಹಿಮ್ಮುಖಗೊಳಿಸುವದು ಯೋಗದಲ್ಲಿ ಪ್ರತಿ ಸಾಧಕನ ಮೊದಲ ಆದ್ಯತೆಯೇ ಆಗಿದೆ.
ಹೀಗಿರುವಾಗ, ಭಗವಂತನ ಸಾಮಿಪ್ಯ ಹೊಂದಲೆಂದೋ ಅಥವಾ ಯೋಗದ ಪರಮಸ್ಥಿತಿ ಗಳಿಸಲೆಂದೋ, ಈ ‘ಧಾರಾ’ ಮತ್ತು ‘ರಾಧಾ’ಗಳೆಂಬ ಬಹಿರ್ಮುಖ, ಅಂತರ್ಮುಖ ಸ್ಥಿತಿಗಳ ಬಗ್ಗೆ ನಮ್ಮ ಪೂರ್ವಸೂರಿಗಳು ಒಂದು ನಿಗೂಢ ಸೂಚನೆ ಕೊಟ್ಟಿರಬಹುದೇ?
ತನ್ಮೂಲಕ, ಈ ಪುಟ್ಟ ಪ್ರತಿಕ್ರಿಯೆ ಮೂಡಿಸಲು ಚೋದಿಸಿದ ಋುಗ್ವೇದಿಗಳಿಗೆ ನಮಸ್ಕಾರ.
ಆಸಕ್ತಿದಾಯಕವಾಗಿದೆ