ರಾಜಸ್ಥಾನವೆಂಬ ಸ್ವರ್ಗದ ತುಣುಕು : ಪ್ರೀತಿಯ ಕತ್ತಿಯಲಗಿಗೆ ಜೀವಕೊಟ್ಟ ಜೀವಕೆ..

ಲಕ್ಷ್ಮಿಕಾಂತ ಇಟ್ನಾಳ್ ’ಅವಧಿ’ಗಾಗಿ ಬರೆದ ಪ್ರವಾಸ ಲೇಖನ ’ರಾಜಾಸ್ಥಾನವೆಂಬ ಸ್ವರ್ಗದ ತುಣುಕು’ ದ ಕೊನೆಯ ಕಂತು ಇಲ್ಲಿದೆ

***

ಪುಷ್ಕರದ ಬ್ರಹ್ಮ ಮಂದಿರದಲ್ಲಿ

ಹಜರತ್ ಖ್ವಾಜಾ ಮೊಯಿನುದ್ದೀನರ ಶಿಷ್ಯನಾದ ಕುತ್ಬುದ್ದೀನ್ ಬಕ್ತಿಯಾರ್ಕಾಕಿ ಒಮ್ಮೆ 1235 ರಲ್ಲಿ ಒಂದು ದಿನ ಸಮಾ (ಕವ್ವಾಲಿಯ ಮೊದಲಿನ ಹೆಸರು) ಮೆಹಫಿಲ್ದಲ್ಲಿ ಶೇಖ್ ಅಹ್ಮದ ಜಾಮ್ನ ಪಸರ್ಿಯನ್ ಕವ್ವಾಲಿಯ ದ್ವಿಪದಿಯೊಂದನ್ನು ಸುಶ್ರಾವ್ಯ ಹಾಡುಗಾರನೊಬ್ಬನ ಕಂಠದಲ್ಲಿ ತದೇಕವಾಗಿ ಆಲಿಸುತ್ತ ಧ್ಯಾನದಲ್ಲಿ ಲೀನವಾಗಿಬಿಟ್ಟರು. ಅಖಂಡ ನಾಲ್ಕುದಿನಗಳವೆರೆಗೆ ಧ್ಯಾನಸ್ಥ (ಟ್ರಾನ್ಸ್) ಸ್ಥಿತಿಯಲ್ಲಿಯೇ ಇದ್ದು, ಅದೇ ಧ್ಯಾನದಲ್ಲಿಯೇ ಕೊನೆಯುಸಿರೆಳೆದದ್ದು, ಸಂಗೀತಕ್ಕಿರುವ ಅಗಾಧ ಶಕ್ತಿ ಹಾಗೂ ಭಕ್ತಿಗೊಂದು ಉತ್ಕಟ ಉದಾಹರಣೆಯಾಗಿ ನಿಲ್ಲುತ್ತದೆ ಈ ಘಟನೆ. ಅದೇ ಸಂಗೀತವಿಂದು ಸೂಫಿ ಸಂಗೀತವೆಂದು ಜನಾನುರಾಗಿ.
ಆ ಸಾಲುಗಳು ಇಲ್ಲಿವೆ:
ಕುಶ್ತಗಾಂ- ಎ -ಖಂಜರ್- ಎ -ತಸ್ಲೀಮ್ ರಾ
ಹರ್ ಜಮಾನಾ ಅಜ್ ಘೆಬ್ ಜಾನ್ -ಎ- ದೀಗರ ಅಸ್ತ್
 
ಪ್ರೀತಿಯ ಕತ್ತಿಯಲಗಿಗೆ ಜೀವಕೊಟ್ಟ ಜೀವಕೆ
ಕ್ಷಣಕ್ಷಣವೂ ಮರುಜೀವ ಕೊಡುತ ಸಲಹುವನು ದೇವನು
ಈ ಘಟನೆಯನ್ನೇ ನೆನೆಯುತ್ತ ಸಂಗೀತಕ್ಕಿರುವ ಸೆಳೆತ, ಆಳ ವಿಸ್ತಾರದ ಬಗ್ಗೆ ಚರ್ಚಿಸುತ್ತ ಅಜ್ಮೇರ್ನಿಂದ ನಾವು ನೇರವಾಗಿ ಪುಷ್ಕರದತ್ತ ಪಯಣಿಸಿದೆವು.
ಪುಷ್ಕರ್… ಇದೊಂದು ಅತೀ ಪುರಾತನ ಪಟ್ಟಣ. ಇದನ್ನು ಯಾವಾಗ ಸ್ಥಾಪಿಸಲಾಯಿತೆಂಬ ಮಾಹಿತಿ ಇಲ್ಲದಿದ್ದರೂ, ಇದು ಬ್ರಹ್ಮನಿಂದ ಸ್ಥಾಪಿತವಾದ ಯಜ್ಞ ನಗರಿ ಎಂದು ಪುರಾಣಗಳು ಹೇಳುತ್ತವೆ. ಪುಷ್ಕರವೆಂದರೆ ನೀಲ ಕಮಲ ಪುಷ್ಪ ಎಂದರ್ಥ. ಮಹಾಭಾರತದಲ್ಲಿ ಮಹಾರಾಜಾ ಯುಧಿಷ್ಠಿರನು ಪುಣ್ಯಸ್ನಾಣ ಮಾಡಿದ ಪವಿತ್ರ ಪುಷ್ಕರಣಿ ಇರುವುದು ಇಲ್ಲೇ ಪುಷ್ಕರದಲ್ಲಿಯೇ. ವಾಮನ ಪುರಾಣದಲ್ಲಿ ಪ್ರಹ್ಲಾದನು ಈ ಪುಷ್ಕರಣಿಗಳ ಸ್ಥಳಕ್ಕೆ ಯಾತ್ರೆಗೈದಿದ್ದು ಇಲ್ಲಿ ಉಲ್ಲೇಖಿಸಲ್ಪಟ್ಟಿದೆ. ಭರತಖಂಡದ ಪವಿತ್ರ ಚಾರಧಾಮಗಳ ನಂತರ ಐದನೇ ಧಾಮವೇ ಪುಷ್ಕರ. ಇಲ್ಲಿ ಪೂಜೆಗೊಳ್ಳದಿದ್ದರೆ ಆ ನಾಲ್ಕೂ ಧಾಮಗಳ ಚಾರಣಕ್ಕೆ ಅಂತ್ಯವಿಲ್ಲ ಎನ್ನುವ ನಂಬಿಕೆ ಇದೆ. ಅಷ್ಟೊಂದು ಪವಿತ್ರ ಪುಣ್ಯ ಕ್ಷೇತ್ರವಿದು. ಸ್ವತ: ಬ್ರಹ್ಮನಿಂದ ನಾಮಕರಣಗೊಳಿಸಲ್ಪಟ್ಟು ಪ್ರಸಿದ್ಧಿ ಪಡೆದ ಈ ಪುಷ್ಕರದಲ್ಲಿ ಬ್ರಹ್ಮ ಮಂದಿರವನ್ನು 14ನೇ ಶತಮಾನದಲ್ಲಿ ಸ್ಥಾಪಿಸಲಾಯಿತೆಂದು ಹೇಳಲಾದರೂ ಇನ್ನೊಂದು ಮೂಲದಿಂದ ಈ ಮಂದಿರವು 2000 ವರ್ಷಗಳಷ್ಟು ಹಳೆಯದೆಂದು ನಂಬಲಾಗಿದೆ. ಮಂಡೋದರದ ರಾಜ ನಹದರ್ವನು 7ನೇ ಶತಮಾನದಲ್ಲಿ ಈ ಪುಷ್ಕರಣಿಗಳನ್ನು ಪುನರುಜ್ಜೀವನಗೊಳಿಸಿದ ಹಾಗೂ ಲೂನಿ ನದಿಗೆ ಅಡ್ಡಲಾಗಿ ಒಡ್ಡು ಹಾಕಿ ಅನೇಕ ಘಾಟಿಗಳನ್ನು ಹಾಗೂ ಅನೇಕ ಧರ್ಮಶಾಲೆಗಳನ್ನು ನಿರ್ಮಿಸಿದ.
ಪುರಾಣಗಳ ಪ್ರಕಾರ ಬ್ರಹ್ಮನೊಮ್ಮೆ ಮಹಾಯಾಗ ಮಾಡಬೇಕೆಂದಾಗ ಭೂಲೋಕದಲ್ಲಿ ಸೂಕ್ತ ಸ್ಥಳಕ್ಕಾಗಿ ಹಂಸವನ್ನು ಬಿಟ್ಟು ಹುಡುಕುತ್ತಿರುವಾಗ, ಈ ಜಾಗವು ಸೂಕ್ತವೆನಿಸುತ್ತದೆ, ಆದರೆ ಇಲ್ಲಿ ವಜ್ರನಾಶನೆಂಬ ರಕ್ಕಸ ಇಲ್ಲಿ ಜನಪದಕ್ಕೆ ಲೋಕಕಂಟಕನಾಗಿ ಕಾಡುತ್ತಿರುವುದನ್ನು ಕಂಡು, ತನ್ನ ಕಮಲ ಪುಷ್ಪಕ್ಕೆ ಮಂತ್ರ ಪ್ರೋಕ್ಷಿಸಿ ಅವನನ್ನು ಸಂಹರಿಸಲು ಕಳುಹಿಸಿದಾಗ ಭಯಂಕರ ಯುದ್ಧ ನಡೆದು, ಆ ಯುದ್ಧದಲ್ಲಿ ವಜ್ರನಾಶ ಹತನಾದರೂ, ಆ ಕಮಲದ ಮೂರು ದಳಗಳು ಉದುರುತ್ತವೆ. ಅವೇ ಜೇಷ್ಠ , ಮಧ್ಯಮ, ಹಾಗೂ ಕನಿಷ್ಠ ಪುಷ್ಕರಗಳಾಗಿ ಮಾರ್ಪಟ್ಟವು ಎಂಬುದು ಪುರಾಣ.
ಮುಂದೆ ಬ್ರಹ್ಮ ಇಲ್ಲಿ ಯಜ್ಞ ಕೈಗೊಂಡು ಯಜ್ಞಕ್ಕೆ ಆಹುತಿ ನೀಡಲು ಅವನು ಪತ್ನಿ ಸಮೇತನಾಗಿ ಅದನ್ನು ನೀಡಬೇಕಾಗಿದ್ದು, ಸರಸ್ವತಿಯು ಆಗ ಲಕ್ಷ್ಮಿ, ಪಾರ್ವತಿ ಇಂದ್ರಾಣಿಯರ ಬರುವಿಗಾಗಿ ಕಾಯುತ್ತಿದ್ದಳು, ಆದರೆ ಯಜ್ಞದ ಸಂದರ್ಭದಲ್ಲಿ ಯಜ್ಞಕ್ಕೆ ಆಹುತಿ ನೀಡಬೇಕಾದ ಸಂದರ್ಭದಲ್ಲಿ ಸರಸ್ವತಿಯು ಇನ್ನೂ ದೂರದಲ್ಲಿದ್ದುದರಿಂದ, ಆಹುತಿಯನ್ನು ದಂಪತಿ ಸಮೇತ ನೀಡಬೇಕಾದುದರಿಂದ ಅದೇ ಸಂದರ್ಭದಲ್ಲಿ ಗಾಯಿತ್ರಿ ಎಂಬ ಗುರ್ಜರ ಕನ್ಯೆಯು ಆ ಅಮೃತ ಕಲಶವನ್ನು ತಲೆಮೇಲೆ ಹೊತ್ತು ಅಲ್ಲಿಯೇ ಪಕ್ಕದಲ್ಲಿ ಕಾಯುತ್ತಿದ್ದು, ಅವಳನ್ನೇ ವಿವಾಹವಾಗಿ ಯಜ್ಞಕ್ಕೆ ನೀಡಬೇಕಾದ ಆಹುತಿ ನೀಡಿ ಸಾಂಗಗೊಳಿಸುತ್ತಾನೆ. . ಇದು ಸರಸ್ವತಿ (ಸಾವಿತ್ರಿ)ಗೆ ನಂತರ ಗೊತ್ತಾಗಿ ಬ್ರಹ್ಮನು ಕೇವಲ ಆ ಸ್ಥಳದಲ್ಲಿ ಅಂದರೆ ಪುಷ್ಕರದಲ್ಲಿ ಮಾತ್ರ ಪೂಜಿಸಲ್ಪಡಲಿ ಎಂದು ಶಾಪ ಹಾಕಿಬಿಡುತ್ತಾಳೆ. ಯಾಕೆ ಈ ಬ್ರಹ್ಮನ ಮಂದಿರಕ್ಕೆ ಇಷ್ಟೊಂದು ವಿಶೇಷತೆ ಎಂದರೆ ಇಲ್ಲಿ ಪೂಜೆ ಸಲ್ಲಿಸುವುದರಿಂದ ಮಾತ್ರ ಬ್ರಹ್ಮನಿಗೆ ಬೇಡಿಕೆಗಳು ಕೇಳಿಸುತ್ತವೆ ಹಾಗೂ ಈಡೇರುತ್ತವೆ ಎಂದಾಯಿತು. ಇಲ್ಲಿಂದ ಮಾತ್ರ ಆತ ತನ್ನ ಭಕ್ತರಿಗೆ ವರ ದಯಪಾಲಿಸಬಲ್ಲ ಎಂದಂತಾಯಿತಲ್ಲವೇ.

ಹಾಗೆಯೇ ಇದು ಪರಾಶರ ಮುನಿಯ ಜನ್ಮಭೂಮಿಯೂ ಹೌದು. ಅವರ ಅನುಯಾಯಿಗಳಾದ ಪರಾಶರ ಬ್ರಾಹ್ಮಣರು ಇಲ್ಲಿ ಈಗಲೂ ಸುತ್ತಲೂ ನೆಲೆಸಿದ್ದಾರೆ. ಇಲ್ಲಿ ಇವರ ಕುಲದೇವತೆ ಜಿನಮಾತಾ ಮಂದಿರವು ಕಳೆದ ಸುಮಾರು ಸಾವಿರ ವರ್ಷಗಳಿಂದಲೂ ಆರಾಧನೆಯಲ್ಲಿದೆ. ಅಲ್ಲದೇ ಮೂಲವಾಗಿ ಈ ಜಾಗವನ್ನು ಆಳುತ್ತಿದ್ದ, ಗುರ್ಜರ ಪಂಗಡದ ಸಂಪ್ರದಾಯದ ಪೂಜಾರಿಗಳೂ, ಆರಾಧಕರು ಕೂಡ ಈಗಲೂ ಇಲ್ಲಿ ಕಾಣಸಿಗುತ್ತಾರೆ. ಗೌತಮ ಮುನಿಯ ಮಂದಿರವೂ ಇಲ್ಲಿದೆ.
ಪ್ರತಿವರ್ಷವೂ ಇಂಗ್ಲೀಷ ಕ್ಯಾಲೆಂಡರಿನ ಅಕ್ಟೋಬರ್ ನವೆಂಬರ್ ತಿಂಗಳಲ್ಲಿ ಬರುವ ಕಾರ್ತಿಕ ಮಾಸದ ನವಮಿಯಿಂದ ಪೂರ್ಣಮೆಯವರೆಗೆ ಪುಷ್ಕರ ಮೇಳಾ ಜರುಗುತ್ತದೆ. ಒಂಟೆಗಳ ಮೇಳಾ ಎಂದೆ ಜಗತ್ಪ್ಡಸಿದ್ಧ ಇದು. ಒಂಟೆಗಳ ಪ್ರದರ್ಶನ ಖರೀದಿ ಬಲು ಜೋರು ಈ ಜಾತ್ರೆಯಲ್ಲಿ. ತಮ್ಮ ತಮ್ಮ ಒಂಟೆಗಳನ್ನು ಸಜಾಯಿಸಿ, ಶೃಂಗರಿಸಿ ಕರೆತರಲಾಗುತ್ತದೆ, ಇಲ್ಲಿ ಆಭರಣ ಮತ್ತೆ ಕುಶಲಕಲೆಗಳ ಅಂಗಡಿಗಳ ಸಾಲುಗಳೇ ಬಂದಿರುತ್ತವೆ, ನಮ್ಮ ಸಲುವಾಗಿ ಎಂದು ತಿಳಿದುಬಿಟ್ಟೀರಿ ಮತ್ತೆ, …. ಅಲ್ಲ ಅಲ್ಲ ಅವು ಒಂಟೆಗಳಿಗಾಗಿ ತೆರೆದ ಅಂಗಡಿಗಳು ಮಾತ್ರ.. ……ನಮಗೂ ಇರುತ್ತವೆ ಬಿಡಿ ಅದು ಬೇರೆ ಮಾತು. ತಮ್ಮ ತಮ್ಮ ಒಂಟೆಗಳಿಗೆ ಬೆಳ್ಳಿಯ ಗೆಜ್ಜೆಗಳು, ಕಂಕಣಗಳು, ಬೆಲ್ಟಗಳನ್ನು ಯಥೇಚ್ಛವಾಗಿ ತೊಡಿಸುತ್ತ, ತರ ತರಹದ ರೂಪಗಳಲ್ಲಿ ಅದರ ಕೇಶ ಶೃಂಗಾರ ನೋಡುವಂತಿರುತ್ತದೆ. ಅವುಗಳ ಧಿರಿಸುಗಳ ಬಹುದೊಡ್ಡ ಬಾಜಾರ ಇರುತ್ತದೆ ಅಲ್ಲಿ. ಕುದುರೆ ರೇಸ್, ಒಂಟೆಗಳ ರೇಸ್ ಗಳನ್ನು ಏರ್ಪಡಿಸಿ ಗೆದ್ದ ಒಂಟೆ, ಕುದುರೆಗಳಿಗೆ, ಅದರ ಮಾಲೀಕರಿಗೆ ಆದರಿಸಿ ಬಹುಮಾನಿಸಲಾಗುತ್ತದೆ, ಈ ಜಾತ್ರೆಯಲ್ಲಿ ಕನಿಷ್ಠ 50 ರಿಂದ 60 ಸಾವಿರದಷ್ಟು ಒಂಟೆಗಳ ತಲೆಗಳು ಈ ಹದಿನೈದು ದಿನಗಳಲ್ಲಿ ಕೈ ಬದಲಿಸುತ್ತವೆ ಎಂದರೆ ಇದರ ಅಗಾಧತೆ ಅರಿಯಬಹುದು.
ಜಾತ್ರೆಗೆ ಸೇರುವ ಇಡೀ ಸಮುದಾಯ ಪವಿತ್ರ ಪುಷ್ಕರಗಳಲ್ಲಿ ಮಿಂದು ಬ್ರಹ್ಮನ ದರ್ಶನಗೈಯ್ಯುತ್ತಾರೆ. ಈ ಸಂದರ್ಭದಲ್ಲಿ ರಾಜಸ್ಥಾನೀ ಲೋಕಸಂಗೀತ, ನೃತ್ಯ, ಕುಣಿತಗಳನ್ನು ಯಥೇಚ್ಛವಾಗಿ ಆಯೋಜಿಸಲಾಗುತ್ತದೆ, ಪ್ರತಿಯೊಬ್ಬರು ಈ ದಿನಗಳಿಗಾಗಿ ಎದುರು ನೋಡುವ ಸುಂದರ ಸೊಗಡಿನ ತಾಣವಿದು ಆಗ, ಎಲ್ಲ ಸ್ಥಳೀಯರನ್ನೊಳಗೊಂಡಂತೆ ಪ್ರವಾಸಿಗರೂ ಕೂಡ ಆ ಮಾಹೋಲನ್ನು ಮನಪೂರ್ತಿ ಅನುಭವಿಸಿ ಆನಂದಿಸುತ್ತಾರೆ,. ಈ ತರಹದ ಮೇಳ ಮತ್ತೊಂದು ಇಲ್ಲವೇ ಇಲ್ಲ ಎಂದೇ ಹೇಳಬಹುದು. ಅದಕ್ಕಾಗಿಯೇ ಆ ಸಂದರ್ಭದಲ್ಲಿ ಭೇಟಿ ನೀಡುವ ಪ್ರವಾಸಿಗರ ಸಂಖೆಯೂ ಲಕ್ಷಗಳನ್ನು ಮೀರುತ್ತದೆ. ಉಳಿದ ದಿನಗಳಲ್ಲಿ ಈ ಸಂಖ್ಯೆ ಐದಾರು ಸಾವಿರದಷ್ಟು ಇರುವುದೆಂದು ತಿಳಿಯಿತು.
ಇದೇ ಸಂದರ್ಭದಲ್ಲಿ ಒಂಟೆ ಸಫಾರಿಗಳನ್ನೂ ಆಯೋಜಿಸಲಾಗುತ್ತದೆ, ಪ್ರವಾಸಿಗರು ಮರಳಿನ ಸ್ಯಾಡ್ ಡ್ಯೂನ್ಗಳಲ್ಲಿ ಏರಿಳಿದು ಅದರ ಮಜಾ ಸವಿಯಬಹುದು. ಈಗ ನಾವು ಪುಷ್ಕರದಲ್ಲಿದ್ದೆವು. ರಾತ್ರಿ ಪುಷ್ಕರಗೆ ತೆರಳಿ ನಮಗೆ ನಿಗದಿ ಪಡಿಸಿದ ಲಾಡ್ಜ್ನಲ್ಲಿ ತಂಗಿದೆವು.
ಬೆಳಿಗ್ಗೆ ಬೇಗ ಎದ್ದು ತಯಾರಾಗಿ ಬ್ರಹ್ಮನ ದರ್ಶನಕ್ಕೆ ತೆರಳಿದೆವು. ಅಲ್ಲಿಯೇ ಪುಷ್ಕರಣಿಯ ದಂಡೆಯ ಮೇಲೆ ಆಗಲೇ ನೂರಾರು ಭಕ್ತರು ನೆರೆದು ತಮ್ಮ ಪೂರ್ವಜರ ಆತ್ಮಗಳಿಗೆ ಶಾಂತಿ ಕೋರಿ, ಪೂಜಾರಿಗಳಿಂದ ಮಂತ್ರ ಪಠಣಗಳ ಆಚರಣೆಗಳನ್ನು ಕೈಗೊಳ್ಳುತ್ತಿದ್ದುದು ಕಣ್ಣಿಗೆ ಬೀಳುತ್ತಲೇ ನಮಗೂ ಒಬ್ಬ ಆಚಾರರ ಪುಷ್ಕರದ ದಂಡೆಯ ಘಾಟಿಯ ಪಾವಟಿಗೆಗಳ ಮೇಲೆ ಕುಳಿತು ನಮ್ಮ ಪೂರ್ವಜರ ಆತ್ಮಕ್ಕೆ ಶಾಂತಿ ಕೋರುವ ಪೂಜೆಯನ್ನು ನಮ್ಮಿಂದ ಮಾಡಿಸಿದರು. ನಾವು ಪೂಜೆ ಮಾಡುತ್ತಿರುವ ಸಂದರ್ಭದಲ್ಲಿ ಒಮ್ಮಲೇ ಮೋಡದ ಮಂಜು ಮುಸುಕಿ ನಮ್ಮ ಅಂಗೈಗಳೇ ಕಾಣದಷ್ಟು ದಟ್ಟ ಮಂಜು ನಮ್ಮನ್ನು ಪುಷ್ಕರವನ್ನು ಕಾಣದಂತೆ ಆವರಿಸಿಬಿಟ್ಟಿತು, ಬಹುಹೊತ್ತಿನ ವರೆಗೆ. . ಅದೊಂದು ಅಭೂತಪೂರ್ವ ಸನ್ನಿವೇಷ..
ತಟ್ಟನೆ ಗುಲ್ಜಾರರ ಬಹು ಜನಪ್ರಿಯ
‘ರೂಹ್ ದೇಖೀ ಹೈ ಕಭೀ’ ಕವನ ನೆನಪಾಯಿತು.
ರೂಹ್ ದೇಖೀ ಹೈ, ಕಭೀ ರೂಹ್ ಕೋ ಮಹಸೂಸ್ ಕಿಯಾ ಹೈ?
ಜಗತೇ-ಜೀತೇ ಹುಯೇ ದೂಧಿಯಾ ಕೊಹರೇ ಸೆ ಲಿಪಟ್ಕರ್
ಸಾಂಸ್ ಲೇತೇ ಹುಯೇ ಇಸ್ ಕೊಹರೇ ಕೋ ಮಹಸೂಸ್ ಕಿಯಾ ಹೈ?
(ನೋಡಿರುವೆಯಾ ಎಂದಾದರೂ, ಆತ್ಮವನ್ನು,
ಬಂದಿದೆಯಾ ಎಂದಾದರೂ, ಅನುಭಾವಕ್ಕೆ
ಜೀವಂತ ಜಾಗೃತ ಮಿಡಿವಾತ್ಮವು
ಈ ಶ್ವೇತ ಮಂಜನ್ನು ತಬ್ಬಿ ಉಸಿರೆಳೆವುದನ್ನು,)
ಹೌದು ಈ ಪುಷ್ಕರದಲ್ಲಿ ಪುಣ್ಯಸ್ನಾಣ ಗೈಯ್ಯಲು ಮಹಾಭಾರತದ ಧರ್ಮರಾಜ ಅಂದರೆ ಹಸ್ತಿನಾವತಿಯ ಯುಧಿಷ್ಠಿರನೆಂಬ ಜೇಷ್ಠ ಪಾಂಡವನಿಲ್ಲಿ ಬಂದಿದ್ದನಲ್ಲವೇ? ನಂತರ ಕೇವಲ ಒಬ್ಬಂಟಿಯಾಗಿ ಅಜರ್ುನ , ಭೀಮ ನಕುಲ ಸಹದೇವರಾದಿಯಾಗಿ ಎಲ್ಲಾ ಅಣ್ಣ ತಮ್ಮಂದಿರನ್ನು,, ಸೈನ್ಯಬಲವನ್ನು, ಸಂಪತ್ತನ್ನು ಸಕಲ ಬದುಕಿನ ಮಹಾಭಾರತ ಜಾತ್ರೆಯನ್ನು ಈ ಧರೆಯಿಂದ ಒಂದೊಂದಾಗಿ, ಒಬ್ಬೊಬ್ಬರನ್ನಾಗಿ ಹಿಂಬಿಡುತ್ತ, ಸ್ವರ್ಗಕ್ಕೆ ನಡೆದಿದ್ದನಲ್ಲವೇ ಏಕಾಂತವಾಗಿ, ಒಬ್ಬಂಟಿಯಾಗಿ, ಒಂದೊಂದೇ ಹೆಜ್ಜೆಗಳನ್ನು ಊರುತ್ತ ಸ್ವರ್ಗದ ದಾರಿಯಲ್ಲಿ ಏರಿದ್ದನಲ್ಲವೇ….. ಹರಿದ್ವಾರ ಋಷಿಕೇಶಗಳ ಮೂಲಕ ಸ್ವರ್ಗಾರೋಹಣದ ದಾರಿಯಲ್ಲಿ. ಒಬ್ಬರೆಂದರೆ ಒಬ್ಬ ಮನುಷ್ಯನೂ ಅವನ ಜೊತೆಯಾಗಲಿಲ್ಲವಲ್ಲ, ಆ ಪಯಣದಲ್ಲಿ, ಕೇವಲ ಒಂದೇ ಒಂದು ನಾಯಿ ಮಾತ್ರ ಅವನ ಜೊತೆಯ ಪಥಿಕ. …… ‘ಚಲ್ ಅಕೇಲಾ ಚಲ್ ಅಕೇಲಾ ಚಲ್ ಅಕೇಲಾ, ತೇರಾ ಮೇಲಾ ಪೀಛೇ ಛೂಟಾ ರಾಹೀ ಚಲ್ ಅಕೇಲಾ’…..ಕೆಲವೊಂದು ಸಂದರ್ಭದಲ್ಲಿ ಮನುಷ್ಯ ಒಂಟಿಯಾಗಲೇ ಬೇಕಲ್ಲವೇ! ಇದೇ ವಿಚಾರ ಹೊತ್ತು ನನ್ನೊಳಗೆ ನಾನು ಒಂಟಿಯಾಗಿ ಒಳಪ್ರಯಾಣದಲ್ಲಿದ್ದೆ ಈಗ…
ಈ ದಟ್ಟ ಮಂಜಿನಲ್ಲಿ ಅದೇ ಧರ್ಮಜನ ಒಂದಲ್ಲ ಅನೇಕ ಆಕಾರಗಳು ಕಂಡಂತಾಗುತ್ತಿದ್ದವು. ಅದೇ ನಾಯಿಯನ್ನು ಹುಡುಕುತ್ತಿದ್ದೆ ನಾನೂ ಕೂಡ ಆ ನೆರಳುಗಳಲ್ಲಿ. ಅದು ಕಂಡರೆ ಧರ್ಮಜ ಕಂಡಂತೆಯೇ ಅಲ್ಲವೇ?, ಅವೆಲ್ಲ ನೆರಳುಗಳು ಶ್ವೇತವಸ್ತ್ರಧಾರಿಗಳಾಗಿ ಅಲ್ಲಿ ಕಣ್ಣಮುಂದಿನ ಬಹುದೊಡ್ಡ ಗಾವುದ ವ್ಯಾಪ್ತಿಯ ಪುಷ್ಕರದಲ್ಲಿ ಚಲಿಸಿ ಮಂಜನ್ನು ತಬ್ಬಿದಂತೆನಿಸುತ್ತಿತ್ತು. ನಮ್ಮ ಪೂರ್ವಜ ಅಜ್ಜ ಮುತ್ತಾತರೆಲ್ಲರೂ ಬಂದು ಬಂದು ನಮ್ಮೆಡೆ ನೋಡಿದಂತೆನಿಸುತ್ತಿತ್ತು.. ಆ ಶ್ವೇತ ಮಂಜು ನನ್ನ ಗದ್ದ ಗಲ್ಲಗಳನ್ನು ನೇವರಿಸಿ ಅತ್ತಿತ್ತ ಹಾರಾಡುತ್ತಿತ್ತು ತಂಪುತಂಪಾದ ಅನುಭವವನ್ನು ಧಾರೆ ಎರೆಯುತ್ತಿತ್ತು. ನಾನು ಹೊದ್ದ ಟಾವೆಲ್ನ್ನು ಅತ್ತಿತ್ತ ಸರಿಸುತ್ತಿತ್ತು. ಆಚಾರರ ಮಂತ್ರ ಪಠಣ ಅನೂಚಾನವಾಗಿ ನಡೆದಿದ್ದರೂ, ಇದೆಲ್ಲ ಆಗ ನನ್ನ ಸುತ್ತ ನಡೆಯುತ್ತಲೇ ಇತ್ತು. ಮನೆಯ ಹಿರಿಯರಾದಿಯಾಗಿ ಎಲ್ಲಾ ಆತ್ಮಗಳಿಗೆ ಶಾಂತಿ ಕೋರುವ ಪೂಜಾ ವಿಧಾನ ಮುಗಿದಾಗ, ಎಲ್ಲರಿಗು ಶಾಂತಿ ಕೋರಿ ಪುಷ್ಕರಕ್ಕೆ ಪ್ರಾರ್ಥಿಸಿದೆ. ಈಗ ನಿರಾಳವಾಯಿತು ಮನ. ಹಗುರ ಮನದೊಂದಿಗೆ ಈಗ ಆ ಎಲ್ಲಾ ಆತ್ಮಗಳೊಂದಿಗೆ ಮಂದಿರದೆಡೆಗೆ ತೆರಳಿದೆವು.
ಮಂದಿರದ ದಾರಿಯ ಬದಿಗಳಲ್ಲಿ ಅಂಗಡಿ ಮುಂಗಟ್ಟುಗಳ ಸಾಲು. ಎಲ್ಲವೂ ಮಂದಿರಕ್ಕೆ ಬೇಕಾದ ಸಾಮಗ್ರಿಗಳನ್ನು ಮಾರುವ ಅಂಗಡಿಗಳೇ. ಅಂಗಡಿಯೊಂದರಲ್ಲಿ ಕಾಯಿ ಕರ್ಪೂರಗಳನ್ನು ಕೊಂಡು ಬ್ರಹ್ಮದೇವನ ದರ್ಶನಗೈದೆವು. ಮಂದಿರವನ್ನು ಶ್ವೇತ ಸಂಗಮರಮರಿ ಹಾಗು ಕುಸುರಿ ಕೆತ್ತನೆಯ ಕಲ್ಲುಗಳನ್ನು ಬಳಸಿ ನಿರ್ಮಿಸಲಾಗಿದೆ. ಬ್ರಹ್ಮನ ಮೂರ್ತಿಯನ್ನು ಸುಂದರವಾಗಿ ಅಲಂಕಾರಗೊಳಿಸಿದ್ದು, ಭಾವಪರವಶರಾಗಿ ದರ್ಶನ ಪಡೆದೆವು. ನನ್ನ ಎಲ್ಲಾ ಹಿರಿಯರ ಆತ್ಮಗಳಿಗೆ ಶಾಂತಿ ಕೋರಿದೆ. ನನ್ನ ಇನ್ನಿತರ ಕೋರಿಕೆಗಳನ್ನು ಬ್ರಹ್ಮನಲ್ಲಿ ಪ್ರಾಥರ್ಿಸಿದೆ. ಜಗತ್ತಿನಲ್ಲಿಯೇ ಏಕಮೇವಾದ್ವಿತೀಯ ಬ್ರಹ್ಮನ ಮಂದಿರದಲ್ಲಿ ಕುಳಿತು ಅವನ ಉಪಾಸನೆ ಮಾಡುತ್ತಿದ್ದೆವು ನಾವೀಗ.
ರಾಜೇಂದ್ರ ಕೃಷ್ಣರ ‘ಖುದಾ ಭೀ ಆಸಮಾಂ ಸೆ ಜಬ್ ಜಮೀಂ ಪರ್ ದೇಖತಾ ಹೋಗಾ
ಮೇರೇ ಮೆಹಬೂಬ್ ಕೊ ಕಿಸನೇ ಬನಾಯಾ ಸೋಚತಾ ಹೋಗಾ’
ಹಾಡನ್ನು ನನ್ನ ಮಗ ಗುಣಿಗುಣಿಸುವಂತಾಗಲಿ ಎಂದು ಸುಂದರ ಕವನದಂತಹ ಹೂ ಮನಸಿನ ಕನ್ಯೆಯೊಂದನ್ನು ನನ್ನ ಮಗನಿಗೆ ದಯಪಾಲಿಸಪ್ಪ ದೇವರೇ ಎಂದು ಕೋರಿದೆ…ಹಾಗೆಯೇ ಮಗಳಿಗೊಂದು ಸೂಕ್ತ ವರ…….ದೇವರು ತಥಾಸ್ತು ಎಂದನೇ?
ಮಂದಿರದ ಆವರಣದಲ್ಲಿ ಇನ್ನೂ ಅನೇಕ ಸಣ್ಣ ಸಣ್ಣ ದೇವಾಲಯಗಳು ಸಮುಚ್ಛಯದಲ್ಲಿವೆ. ಅಲ್ಲಿರುವ ದೇವಗಣಗಳ ದರುಶನ ಪಡೆದು ಪುಣೀತರಾದೆವು. ಬ್ರಹ್ಮನ ಮಂದಿರದ ಶಿಖರ ಗೋಪುರಕ್ಕೆ ಕೆಂಪು ಬಣ್ಣ ಬಳಿಯಲಾಗಿದೆ. ತುಂಬ ಭಕ್ತಿಮಯ ವಾತಾವರಣ ಸುತ್ತ ಮುತ್ತಲೂ.
ಜಗತ್ಪಿತಾ ಬ್ರಹ್ಮದೇವರ ದರ್ಶನ ಪಡೆದು ಅಲ್ಲಿಯೇ ಎಡಬಲಗಳ ಸಾಲು ಸಾಲು ಅಂಗಡಿಗಳಲ್ಲಿ ಮಾರುವ ಪೂಜಾ ಮೂರ್ತಿಗಳು, ಪೂಜಾ ಸಲಕರಣೆಗಳ ಅಂಗಡಿಗಳಲ್ಲಿ ಕುಬೇರ, ಗಜಾನನ ಮೂರ್ತಿಗಳನ್ನು ಮನೆಯಲ್ಲಿಯ ಪೂಜೆಗಾಗಿ ಖರೀದಿಸಿದೆವು. ಅಲ್ಲಿಯ ಗುಲ್ ಕಂದ ಬಲು ಪ್ರಸಿದ್ಧವಂತೆ ಹೀಗಾಗಿ ರೋಜವಾಟರ್ ಹಾಗೂ ಗುಲ್ ಕಂದ ಕೂಡ ನಮ್ಮ ಕೈಚೀಲ ಸೇರಿದವು. ರಜಪೂತ ಮದುವೆಗಳಲ್ಲಿ ವರನ ಕೈಯಲ್ಲಿ ಖಡ್ಗವೊಂದನ್ನು ಹಿಡಿದುಕೊಳ್ಳಲು ನೀಡಲಾಗುತ್ತದೆ. ಈ ಖಡ್ಗಗಳು ಇಲ್ಲಿ ತರತರಹದ ಅಲಂಕಾರಗಳು, ಕುಸುರಿ ಕಲೆಗಳೊಂದಿಗೆ ಅವುಗಳ ಮಾರಾಟ ಮಳಿಗೆಗಳೇ ಇರುತ್ತವೆ. ನಾವೂ ಕೂಡ ಒಂದು ಕುಸುರಿ ಕೆತ್ತನೆ ಹೊಂದಿದ ಸಣ್ಣ ಖಡ್ಗವೊಂದನ್ನು ದಸರೆಯ ಖಂಡೇ ಪೂಜೆಯಲ್ಲಿ ಪೂಜಿಸಲು ಕೊಂಡೆವು. ಇನ್ನು ಹೆಚ್ಚೇನೂ ನೋಡುವುದು ಇಲ್ಲದ್ದರಿಂದ ಭಕ್ತಿಯಿಂದ ಜಗತ್ಪಿತಾ ಬ್ರಹ್ಮನಿಗೆ ಮತ್ತೊಮ್ಮೆ ನಮಿಸಿ ಜಯಪುರದೆಡೆಗೆ ಪಯಣಿಸಲು ಅಣಿಯಾದೆವು.
ಅಲ್ಲಿ ಒಂದೆಡೆ ಧಾಬಾದಲ್ಲಿ ಚಹ ಕುಡಿಯಲು ತುಸು ಹೊತ್ತು ನಿಂತೆವು. ಚಹವನ್ನು ಸಣ್ಣ ಸಣ್ಣ ಮಣ್ಣಿನ ಕುಡಿಕೆಗಳಲ್ಲಿ ನೀಡುತ್ತಿರುವುದು ಖುಷಿ ತಂದಿತು. ಕಿವಿಯಲ್ಲಿ ಸುಂದರವಾಗಿ ಬಂಗಾರದ ಲೋಲಕಗಳನ್ನು ಹಾಕಿಕೊಂಡ ಅಲ್ಲಿನ ಸ್ಥಳೀಯರು ಮಾತಿಗೆ ಸಿಕ್ಕರು. ವಯಸ್ಸಾದ ಅಜ್ಜಿಯೊಂದು ಏನಾದರೂ ನೀಡಲು ಕೈಚಾಚಿ ನಿಂತಿತು. ಅವಳಿಗೂ ಚಹ ಕೊಡಲು ಹೇಳಿ, ತುಸು ಕಾಸು ನೀಡಿ ಕಳುಹಿದೆ. ‘ಜೀತೆ ರಹೋ ಬೇಟಾ’ ಅಂದು ಮಂದಹಾಸದಿಂದ ಮುಂದೆ ಸಾಗಿತು. ಬ್ರಹ್ಮನೇ ಬರೆಯುತ್ತಾನಲ್ಲವೇ ಎಲ್ಲರ ಹಣೆಬರಹಗಳನ್ನು. ಅವಳ ಬದುಕನ್ನು ಹೇಗೆ ಬರೆದಿದ್ದಾನೆಯೋ!, ಆದರೆ ಅವಳ ಬದುಕಿನ ಆ ಒಂದು ಕ್ಷಣದ, ಅವಳ ಮುಖದ ಮೇಲಿನ ಆ ಕ್ಷಣದ ನಗುವನ್ನುಮಾತ್ರ ನಾನು ಬರೆದೆನೆ!, ಅಥವಾ ಬ್ರಹ್ಮ ನನ್ನ ಕೈಯಿಂದ ಬರೆಯಿಸಿದನೋ ಅರಿಯೆ, ಹಾಗೊಂದು ಯೋಚನೆ ಹೊಳೆಯುತ್ತಲೇ ಮನಸ್ಸು ಬದುಕಿನ ಸಂಕೀರ್ಣತೆಯ ಬಗ್ಗೆ ಆಲೋಚಿಸ ಒಳಹೊಕ್ಕಿತು. ಹೌದು ಬದುಕು ಕೂಡ ಬಲು ವಿಚಿತ್ರವಲ್ಲವೇ. ಅರಿತಷ್ಟು ಆಳಕ್ಕೆ ಕರೆದೊಯ್ಯುತ್ತದೆ. ನುರಿತಷ್ಟು ಅನುಭವವನ್ನು ನೀಡುತ್ತದೆ. ಇದೇ ವಿಚಾರದಲ್ಲಿ ಮುಳುಗಿದವನಿಗೆ ಆನಂದದ ‘ಜಿಂದಗೀ ಕೈಸೀ ಹೈ ಪಹೇಲಿ ಹಾಯೇ, ಕಭೀ ತೊ ಹಸಾಯೆ, ಕಭೀ ಯೆ ರುಲಾಯೆ’ (ಎಂಥ ಬದುಕಿನ ಪರೀಕ್ಷೆಯಿದು, ಕೆಲವೊಮ್ಮೆ ನಗಿಸಿ, ಇನ್ನೊಮ್ಮೆ ಅಳಿಸಿಬಿಡುತ್ತದಲ್ಲ’) ಆನಂದ ಬಕ್ಷಿಯ ಅರ್ಥಗರ್ಭಿತ ಹಾಡೊಂದು ಗುಣಿಗುಣಿಸಿಕೊಳ್ಳತೊಡಗಿತು ಮನದಲ್ಲಿ.
ಹೌದು ಇದೇ ತರಹದ ಹಾಡೊಂದು ಇನ್ನೊಂದು ಇದೆಯಲ್ಲವೇ? , ‘ಜಿಂದಗೀ ಕಾ ಸಫರ್ ಹೈ ಯೆ ಕೈಸಾ ಸಫರ, ಕೋಯೀ ಸಮಝಾ ನಹೀಂ, ಕೋಯೀ ಜಾನಾ ನಹೀಂ’ ಇಂದೀವರ್ ನ ಸಾಲುಗಳು. ಬದುಕು ಹೇಗೆ ಕರೆದೊಯ್ಯುವುದೋ ಯಾರೂ ಅರಿಯರಲ್ಲವೇ. ಇದನ್ನು ಅರಿತವರಾರೂ ಇಲ್ಲ, ಅಥೈಸಿಕೊಂಡವರೂ ಇಲ್ಲ. ಎಲ್ಲರೂ ಸುಮ್ಮನೆ ಗಮ್ಯದತ್ತ ನಡೆಯುವವರೇ! ವಿಚಿತ್ರವಲ್ಲವೇ ಈ ಬದುಕೆಂಬ ಬಂಡಿ. ದೊರೆತ ಕಾಲದ ಕ್ಷಣಗಳಲ್ಲಿಯೇ ಬದುಕೊಂದನ್ನು ರೂಪಿಸಿಕೊಳ್ಳುವುದೇ ನಮಗೊದಗಿದ ಅವಕಾಶವಷ್ಟೆ. ‘ಛೋಟಾ ಸಾ ಸಾಯಾ ಥಾ, ಆಂಖೋಂ ಮೇ ಆಯಾ ಥಾ, ಹಮ್ ನೆ ಭೀ ದೋ ಬೂಂದೋಂ ಸೆ ಮನ್ ಭರಲಿಯಾ’ ಎಂಥಾ ಸಾಲುಗಳು. ಕೆಲವೇ ಅಕ್ಷರಗಳಲ್ಲಿ ಇಡೀ ಬದುಕನ್ನು ದೊರೆತ ಎರಡು ಹನಿಗಳಲ್ಲಿಯೇ ರೂಪಿಸುವ ರೂಪಕದ ವ್ಯಾಖ್ಯೆಯನ್ನು ಹಿಡಿದಿಟ್ಟುಬಿಟ್ಟಿದ್ದಾರಲ್ಲವೇ ಗುಲ್ಜಾರರು, ಹ್ಯಾಟ್ಸ್ ಆಫ್ ಸರ್, ನಿಮಗೆ ನೀವೇ ಸಾಟಿ ಎಂದಿತು ಮನ.
ಇದೇ ಯೋಚನೆಯಲ್ಲಿದ್ದವನಿಗೆ ಜೈಪುರ ಬಂದಿದ್ದು ಗೊತ್ತಾಗಲೇ ಇಲ್ಲ. ಜೈಪುರ ತಲುಪುತ್ತಲೇ ಅಲ್ಲಿ ನಮಗಾಗಿ ವಿಶೇಷ ಆತಿಥ್ಯವೊಂದನ್ನು ನಮಗೆ, ನಮ್ಮ ಟ್ರಾವೆಲ್ ಎಜೆನ್ಸಿಯ ಮಾಲೀಕರಾದ ಜಾವೇದ್ ನೀಡಿದರು. ತರತರಹದ ಜೈಪುರಿ ವಿಶೇಷವಾದ ದಾಲ ಭಾಟಿ ಚೂರ್ಮ ಭೋಜನ ಸವಿದು, ಅವರಿಗೆ ವಿಶೇಷ ಆತಿಥ್ಯಕ್ಕಾಗಿ ವಂದಿಸಿದೆವು ಹಾಗೂ ಜಾವೇದ್ನಿಂದ ಹೃತ್ಪೂರ್ವಕವಾಗಿ ಬೀಳ್ಕೊಂಡು ಅಲ್ಲಿಯೇ ಸಮೀಪದಲ್ಲಿಯೇ ಇದ್ದ ಮಾಲ್ ಒಂದಕ್ಕೆ ಭೇಟಿ ನೀಡಿದೆವು. ದಾರಿಯಲ್ಲಿ ಅಲ್ಲಲ್ಲಿ ಒಂದರ ಮೇಲೊಂದು ಇರುವ ಸಾಕಷ್ಟು ಫ್ಲೈ ಓವರ್ಗಳು ಗಮನಸೆಳೆದವು.
ಅಲ್ಲಿಂದ ಸುಮಾರು ನಾಲ್ಕೈದು ಕಿಮೀಗಳ ದೂರದಲ್ಲಿರುವ ಜೈಪುರ ಹೊರವಲಯದ ಗ್ರಾಮದಲ್ಲಿ ಬಟ್ಟೆಗಳಿಗೆ ಅಚ್ಚು ಹಾಕಿ ಪ್ರದಶರ್ಿಸಿ ತೋರುವ, ಅವುಗಳನ್ನು ತಯಾರಿಸುವ ಫ್ಯಾಕ್ಟರಿಗೆ ಕರೆದೊಯ್ದರು. ಅಲ್ಲಿ ನುರಿತ ಕಾಮರ್ಿಕರಿಂದ ಸೀರೆಗಳಿಗೆ ಅಚ್ಚು ಹಾಕುವ ಕೆಲಸ ನಡೆದಿತ್ತು. ಇದಕ್ಕೆ ಬ್ಲಾಕ್ ಪ್ರಿಂಟಿಂಗ್ ಎನ್ನುವರು. ಅಲ್ಲಿ ‘ಬಾಂದಣಿ’ ಎಂಬ ಸ್ಥಳೀಯ ಜನಪ್ರಿಯ ಸೀರೆ ಹಾಗೂ ಜಮಖಾನೆಗಳನ್ನು ಕೊಂಡು ಅಲ್ಲಿಂದ ಸಿಂಗಾನೇರ್ ಏರ್ಪೋರ್ಟನತ್ತ ನಡೆದೆವು. ಏರ್ಪೋರ್ಟನಲ್ಲಿ ನಮ್ಮ ಲಗೇಜ್ಗಳನ್ನು ಒಳಹಾಕಿ ಬೋಡರ್ಿಂಗ್ ಪಾಸ್ನ್ನು ಕೈಲಿ ಹಿಡಿದು ಸಾಲಿನಲ್ಲಿ ನಿಂತಿದ್ದೆವು. ಮುಂದಿನ ಪ್ರಯಾಣಿಕನ ಮೋಬೈಲ್ನಲ್ಲಿ ಹಾಡೊಂದು ಕೇಳಿಸುತ್ತಿತ್ತು,
‘ಸಜನರೆ ಝೂಟ್ ಮತಬೋಲೋ, ಖುದಾ ಕೆ ಪಾಸ್ ಜಾನಾ ಹೈ,
ನ ಹಾಥೀ ಹೈ ನ ಘೋಡಾ ಹೈ, ವಹಾಂ ಪೈದಲ್ ಹೀ ಜಾನಾ ಹೈ”
ಎಂತಹ ಹಾಡು, ಹಾಡೆಂದರೆ ಇದು, ಎಲ್ಲಾ ಧರ್ಮಗಳ ಸಾರ ಸಂಗ್ರಹಗಳ ತಿರುಳು ಎಂದಿತು ಮನ. ಧರ್ಮಜನೇ ಹಾಡಿದಂತಿತ್ತು. ಕೆಲವೇ ಗಂಟೆಗಳಲ್ಲಿ ಬೆಂಗಳೂರಿನಲ್ಲಿದ್ದೆವು. ಅಲ್ಲಿಂದ ಊರು ಮತ್ತೆ…. ಮನೆ. .. ರಾಜಸ್ಥಾನವೆಂಬ ಸ್ವರ್ಗದ ತುಣುಕೊಂದನ್ನು ನಾವೆಲ್ಲ ಜೀವಂತವಾಗಿಯೇ ನೋಡಿ ಆನಂದಿಸಿ, ಮರೆಯಲಾರದ ಅನುಭವಗಳನ್ನು ನೀಡಿದ ಆ ನೆಲಕ್ಕೆ, ಆ ಸ್ವರ್ಗಸದೃಶ ಮರುಭೂಮಿಗೆ ವಿಶೇಷವಾಗಿ, ಮತ್ತೆ ಮತ್ತೆ ವಂದಿಸಿ. ರಾಜಸ್ಥಾನ ಇದೋ ನಿನಗೊಂದು ನಮನ, ಇದೋ ನಿನಗೊಂದು ಸಲಾಮ್ ಎಂದು ಮತ್ತೆ ಮತ್ತೆ ಹೇಳಿತು ಮನ.

(ಮುಗಿಯಿತು)

‍ಲೇಖಕರು G

July 22, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

13 ಪ್ರತಿಕ್ರಿಯೆಗಳು

  1. Anonymous

    ರಾಜಸ್ಥಾನದ ಚಿತ್ರ ಮನದಂಗಳದಲ್ಲಿ ನವುರಾಗಿ ರಂಗಿಸಿ,ಜೊತೆಗೆ ಹಳೆಯ ಎವರ್ ಗ್ರೀನ್ ಹಾಡುಗಳ ಬ್ಯಾಗೌಂಡ ಮ್ಯುಜಿಕ್ ಜೊತೆ ಶುಟಿಂಗಿಸಿದ ನಿಮ್ಮ ನಿರ್ದೇಶಕರ ಪಾತ್ರವನ್ನು ಬಹಳ ಚನ್ನಾಗಿ ನಿಭಾಯಿಸಿದ್ದಿರಿ ಸರ್, ಹ್ಯಾಟ್ಸಾಫ್

    ಪ್ರತಿಕ್ರಿಯೆ
  2. Hanumanth Ananth Patil

    ಲಕ್ಷ್ಮೀಕಾಂತ ಇಟ್ನಾಳರವರಿಗೆ ವಂದನೆಗಳು
    ಮರಭೂಮಿಯಲ್ಲಿ ನೀವು ಮೂಡಿಸಿದ ಹೆಜ್ಜೆ ಗುರುತುಗಳು ಅನುಪಮವಾದುವು.ನಿಮ್ಮ ಹೆಜ್ಜೆ ಗುರುತುಗಳಲ್ಲಿಯೆ ಸಾಗಿದ ನಮಗೆ ರಾಜಸ್ಥಾನದ ಆತ್ಮವನ್ನೆ ತೆರೆದಿಟ್ಟಿದ್ದೀರಿ ಜೊತೆಗೆ ಅದರ ಭೌತಿಕ ಮತ್ತು ಅಂತರಿಕ ದರ್ಶನ ಮಾಡಿಸಿ ಬಿಟ್ಟಿದ್ದೀರಿ. ಇದೊಂದು ಭೌತಿಕ ಅಭೌತಿಕ ಕಲೆ ಮತ್ತು ಸಂಸ್ಕೃತಿಗಳ ಸುಂದರ ದರ್ಶನ. ನಿಮ್ಮ ಪ್ರವಾಸ ಕಥನವನ್ನು ವರ್ಣಿಸಲು ಶಬ್ದಗಳು ಸಾಲವು. ವಿಚಾರ ಓಡುವುದಿಲ್ಲ ಲೇಖನಿ ಸಾಗುವುದಿಲ್ಲ ಬರಿ ರಾಜಸ್ಥಾನದ ಸುಂದರ ವಿಹಾರ ಮಾತ್ರ ಮನದ ಮೂಲೆಯಲ್ಲಿ ಸಾಗಿರುತ್ತದೆ. ಒಂದು ಸುಂದರ ಕನಸಿನ ಲೋಕದಿಂದ ವಾಸ್ತವದ ಬದುಕಿಗೆ ಬಂದ ಅನುಭವ. ಸೂಫಿ ಸಂಗೀತ ಭಾರತದ ಪುರಾಣ ಪುಣ್ಯ ಕತೆಗಳು ಜಗದ ಬ್ರಹ್ಮನ ಏಕೈಕ ಮಂದಿರದ ವಿವರಣೆ ಓದಿ ಭಾವ ಪರವಶನಾದೆ. ಇದರ ಪುಸ್ತಕ ರೂಪದ ನಿರೀಕ್ಷೆಯಲ್ಲಿ ಧನ್ಯವಾದಗಳು ಸರ್.

    ಪ್ರತಿಕ್ರಿಯೆ
  3. ಲಕ್ಷ್ಮೀಕಾಂತ ಇಟ್ನಾಳ

    ಆತ್ಮೀಯರೆ, ತಮ್ಮ ಮೆಚ್ಚುಗೆಯ ನುಡಿಗಳಿಗೆ ತುಂಬು ಹೃದಯದ ನಮನ. ವಂದನೆಗಳು ಸರ್,

    ಪ್ರತಿಕ್ರಿಯೆ
  4. ಲಕ್ಷ್ಮೀಕಾಂತ ಇಟ್ನಾಳ

    ಆತ್ಮೀಯರೆ, ಎರಡು ತಿದ್ದುಪಡಿಗಳನ್ನು ಹೇಳಬಯಸುತ್ತೇನೆ. ‘ಜಿಂದಗೀ ಕೈಸೀ ಹೈ ಪಹೇಲಿ ಹಾಯೇ, ಕಭೀ ತೊ ಹಸಾಯೆ, ಕಭೀ ಯೆ ರುಲಾಯೆ’ ಹಾಡನ್ನು ಯೋಗೇಶ ವಿರಚಿಸಿದ್ದು, ಅದು ಆನಂದ ಬಕ್ಷಿ ಅಂತಾಗಿದ್ದು, ಹಾಗೆ ಓದಿಕೊಳ್ಳಬೇಕು. ಹಾಗೆಯೇ ಆ ಪಿಂಕ್ ಸಿಟಿ ಟ್ರಾವೆಲ್ಸ್ ಮಾಲೀಕರ ಹೆಸರು, ಜಾವೇದ ಎಂದಾಗಿದ್ದು, ಅವರ ಹೆಸರು, ‘ಝಾಕಿರ್’ ಎಂದಿದ್ದು ಈ ಓದುಗರಲ್ಲಿ ಕ್ಷಮೆಕೋರಿ ಸರಿಪಡಿಸಿಕೊಳ್ಳಲು ಕೋರುತ್ತೇನೆ.ತಮ್ಮೆಲ್ಲ ಓದುಗ ಮಿತ್ರರಿಗೂ ವಂದನೆಗಳು ಮತ್ತೊಮ್ಮೆ.

    ಪ್ರತಿಕ್ರಿಯೆ
  5. ಲಕ್ಷ್ಮೀಕಾಂತ ಇಟ್ನಾಳ

    ಹನುಮಂತ ಅನಂತ ಪಾಟೀಲ ಸರ್, ತಮ್ಮ ಅಭಿಮಾನದ ಮಾತುಗಳಿಗೆ ಮೂಕನಾದೆ. ವಂದನೆಗಳು, ತಮ್ಮ ಪ್ರೀತಿ ಪೂರ್ವಕ ಒತ್ತಾಯಕ್ಕೆ ನಮ್ರನಾಗಿ ಸ್ಪಂದಿಸಿ, ಇದನ್ನು ಪುಸ್ತಕ ರೂಪದಲ್ಲಿ ತರಲು ಪ್ರಯತ್ನಿಸುತ್ತೇನೆ. ಸರ್,

    ಪ್ರತಿಕ್ರಿಯೆ
  6. Anil talikoti

    Very well written , enjoyed the narration and all those songs you have referenced. Thanks

    ಪ್ರತಿಕ್ರಿಯೆ
    • ಲಕ್ಷ್ಮೀಕಾಂತ ಇಟ್ನಾಳ

      ಅನಿಲ ಜಿ, ತಮ್ಮ ಕಥನದ ಶೈಳಿಗೆ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯತೆಯ ನಮನಗಳು. ನನ್ನ ಪ್ರವಾಸದ ಸಾಹಿತ್ಯಕ್ಕೆ ಚೂರ್ಣ ಒದಗಿಸಿದ ಆ ಹಾಡುಗಳಿಗೂ ಎಂದಿಗೂ ಋಣಿ ನಾನು ಸರ್,.

      ಪ್ರತಿಕ್ರಿಯೆ
    • ಲಕ್ಷ್ಮೀಕಾಂತ ಇಟ್ನಾಳ

      ಓಹ್ ಮೂವ್ಡ್, ವಾಟ್ ಎ ರಿಸ್ಪಾನ್ಸ್. ಥ್ಯಾಂಕ್ಯು ಸರ್ ಭವಾನಿ ಕುಮಾರರೇ, ವಂದನೆಗಳು….

      ಪ್ರತಿಕ್ರಿಯೆ
  7. Vithal Katti

    ಆತ್ಮೀಯ ಲಕ್ಷ್ಮಿಕಾಂತ, ವಂದನೆಗಳು.
    ರಾಜಸ್ಥಾನ ಪ್ರವಾಸ ಕಥನ ಮುಗಿಯಿತೇ? ಅದೇಕೋ ಬೇಸರವಾಗುತ್ತಿದೆ. ರಾಜಸ್ಥಾನವನ್ನು, ಅಲ್ಲಿಯ ಮರುಭೂಮಿಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದೀರಿ. ನಡು ನಡುವೆ ಹಾಡುಗಳು ತೂರಿಬಂದು ಮನಸ್ಸನ್ನ್ನು ಕಟ್ಟಿ ಹಾಕುತ್ತವೆ. ಆದರೆ ಒಂದು ಸಣ್ಣ ಮಾತು, ಈ ಪ್ರವಾಸ ಕಥನದ ಪುಸ್ತಕವೂ ಬರಲಿ. ‘ಜೈ ಹೋ’ದಂತೆ ವಿಳಂಬ ಬೇಡ. ಅದೆಲ್ಲ ಇರಲಿ.’ಖುದಾಭಿ’ಹಾಡನ್ನು ನೀವೂ ಅತ್ತಿಗೆಯವರಿಗಾಗಿ ಹಾಡಿ ಒಲಿಸಿಕೊಂಡಿರೆನೋ ಎಂಬ ಚಿಕ್ಕ ಸಂದೇಹ.
    ಶುಭಹಾರೈಕೆಗಳು
    ವೀಕೆ.

    ಪ್ರತಿಕ್ರಿಯೆ
    • ಲಕ್ಷ್ಮೀಕಾಂತ ಇಟ್ನಾಳ

      ಗೆಳೆಯ ವಿಠಲ್ ಕಟ್ಟಿ ಅವರೆ, ತಮ್ಮ ಪ್ರವಾಸ ಕಥನದ ಮೆಚ್ಚುಗೆಗೆ ವಂದನೆ. ಜೈಹೋ ಈಗ ಸಧ್ಯಕ್ಕೆ ಗರಿಗಟ್ಟಿಕೊಳ್ಳುತ್ತಿದೆ. ಇದನ್ನೂ ಕೂಡ ಪುಸ್ತಕದ ರೂಪ ಕೊಡಲು ಇನ್ನೂ ಕೆಲ ಗೆಳೆಯರು ಸೂಚಿಸಿದ್ದು, ಆ ಕುರಿತು ಪ್ರಯತ್ನಿಸುತ್ತೇನೆ ಸರ್, ಅಂದಹಾಗೆ, ನಿಮ್ಮ ಇನ್ನೊಂದು ಸಂದೇಹಕ್ಕೆ ನನ್ನ ಬಳಿಯೂ ಇಲ್ಲ ಬಿಡಿ ಉತ್ತರ! ಹ ಹ ಹ….ಧನ್ಯವಾದ.

      ಪ್ರತಿಕ್ರಿಯೆ
  8. mmshaik

    tumbaa chennaagide.. kannige kattuvante chitrisiddiri..nanna next tour..rajasthan..

    ಪ್ರತಿಕ್ರಿಯೆ
    • ಲಕ್ಷ್ಮೀಕಾಂತ ಇಟ್ನಾಳ

      ಆತ್ಮೀಯ ಎಮ್ ಎಮ್ ಶೇಖ ಮೇಡಂ ಜಿ, ತಮ್ಮ ಮೆಚ್ಚುಗೆಗೆ ಧನ್ವವಾದಗಳು. ಓಹೋ, ತಾವೂ ಹೊರಟಿದ್ದೀರಾ? ಸಂಧ್ಯಾ ಜಿ ಕೂಡ ಡಿಶೆಂಬರ್ ನಲ್ಲಿ ಹೋಗುತ್ತಿರುವುದು ತಿಳಿಯಿತು, ಇನ್ನೊಬ್ಬ ಓದುಗ ವಶಿಷ್ಟ ಅವರು ಅಕ್ಟೋಬರ್ ನಲ್ಲಿ, ಈಗ ನೀವು ಕೂಡ, ಹೋಗಿ ಬನ್ನಿ ಮೇಡಂ, ಇನ್ನಷ್ಟು ನಮ್ಮೊಂದಿಗೆ ಅನುಭವವನ್ನು ಹಂಚಿಕೊಳ್ಳಿ. ಪ್ರವಾಸ ಯಶಸ್ವಿಯಾಗಲಿ…..

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: