ಹುಲಿಕುಂಟೆ ಮೂರ್ತಿ
‘ಕಾಕಮುಟ್ಟೈ’ ಸಿನಿಮಾ ನೋಡಿ ವಾರವಾದರೂ, ಅದರ ಕುರಿತು ಏನನ್ನೂ ಬರೆಯಬಾರದು ಅಂದುಕೊಂಡರೂ ಅದ್ಯಾಕೋ ಬೆನ್ನಿನಲ್ಲಾದ ಕೀವು ತುಂಬಿದ ಗಾಯದ ಹಾಗೆ ಜುವುಗುಟ್ಟುತ್ತಿದೆ…
ಸಿನಿಮಾ ಚೆನ್ನಾಗಿದೆ. ಈ ನೆಲದ ಕತೆಗಳನ್ನು ತಣ್ಣಗೆ ಆಡಂಬರವಿಲ್ಲದೆ ಹೇಳುವ ಕಲೆ ಗೊತ್ತಿರುವ ತಮಿಳರ ಯಥಾವತ್ತು ಶ್ರದ್ಧೆ ಸಿನಿಮಾವನ್ನು ಗೆಲ್ಲಿಸಿದೆ. ಆದರೆ, ಶೋಷಣೆಯ ನೋವನ್ನು ಎದೆಗಳಲ್ಲಿ ಹೊತ್ತು ಅದರಿಂದ ಬಿಡಿಸಿಕೊಳ್ಳುವ ಔಷಧಿಗಾಗಿ ಎಲ್ಲೆಂದರಲ್ಲಿ ತಡಕುತ್ತಿರುವ ಕೋಟ್ಯಂತರ ಜನರಿಗೆ ಈ ಸಿನಿಮಾ ಮಾಯದ ವ್ರಣದ ನೋವು.
ಶೋಷಿತರ ಸಂಕಷ್ಟಗಳನ್ನು ಕಲಾಕೃತಿಯನ್ನಾಗಿಸುವಾಗ ತುಂಬಾ ಎಚ್ಚರಿಕೆಯಿಂದಿರಬೇಕಾಗುತ್ತದೆ ಹಾಗೂ ಇರುವುದನ್ನು ಇದ್ದಹಾಗೇ ಹೇಳುವ ಜೊತೆಗೆ ಹೊಸದೊಂದು ಸಾಧ್ಯತೆಯನ್ನೂ ಅದರಲ್ಲಿ ಹೊಳೆಸಬೇಕಾಗುತ್ತದೆ. ಇಲ್ಲದೆ ಹೋದರೆ, ದಲಿತರ, ಬಡವರ ಬದುಕು ‘ಕಚ್ಛಾವಸ್ತು’ ಆಗಿಬಿಡುವ ಅಪಾಯವಿದೆ. ತಮಿಳಿನ ಬಹಳಷ್ಟು ನಿರ್ದೇಶಕರು ಇಂತಹ ‘ದುಃಸ್ಥಿತಿ’ಗಳನ್ನು ಚೆನ್ನಾಗಿಯೇ ಬಳಸಿಕೊಂಡು ‘ಹೆಸರು’ ಮಾಡಿದ್ದಾರೆ ಆದರೆ, ಕಾಲದ ಅಗತ್ಯಕ್ಕೆ ತಕ್ಕಂತೆ ಸಮುದಾಯದ ಬೆನ್ನಿಗಂಟಿದ ವ್ರಣವನ್ನು ವಾಸಿಮಾಡಬಹುದಾದ ಮುಲಾಮು ಹುಡುಕುವುದರಲ್ಲಿ ಯಾರೂ ಆಸಕ್ತಿವಹಿಸಿಲ್ಲ.. ಇಲ್ಲಿ ಆಗಿರುವುದೂ ಅದೇ…
ದಲಿತ ಬದುಕಿನ ಸ್ಪಷ್ಟ ಅನುಭವವಿರದೆ, ಇದ್ದರೂ ದೂರದ ‘ಸಿಂಪಥೈಸರ್’ಗಳ ಸಾಲಿನಲ್ಲಿ ನಿಂತು ದಲಿತ ಬದುಕನ್ನು ಕಂಡು ಮರುಗುವ, ‘ನಮ್ಮವರ ಬದುಕು ಇನ್ನೂ ಹೀಗೇ ಇದೆ ನೋಡಿ’ ಎಂದು ಎಸಿ ರೂಮುಗಳಲ್ಲಿ ಕೂತು ತಲೆಬಿಸಿ ಮಾಡಿಕೊಳ್ಳುವ ಹೊಸದೊಂದು ‘ಸಂವೇದನಾ ವಲಯ’ಕ್ಕೆ ಇಂತಹ ಚಿತ್ರಗಳು ‘ಅಬ್ಬಾ….’ ಅನ್ನಿಸಬಹುದು. ನಾವೂ ಹಾಗೆ ಇದನ್ನು ನೋಡುತ್ತಾ ನಮ್ಮ ಗಾಯಗಳನ್ನು ನಾವೇ ನೆಕ್ಕಿಕೊಳ್ಳುತ್ತಾ ಚಪ್ಪರಿಸುತ್ತಿದ್ದರೆ…
ಹಾಗೆ ನೋಡಿದರೆ ಈ ವರ್ಷಾರಂಭದಲ್ಲಿ ಕನ್ನಡದಲ್ಲಿ ಬಂದ ಗಿರಿರಾಜರ ‘ಮೈತ್ರಿ’ ಸಿನಿಮಾ ಶೋಷಿತರ ಬದುಕಿನ ಜಿಗಿತದ ಸಾಧ್ಯತೆಯನ್ನು ತೋರಿಸಿದೆ. ಜಾತಿ- ಶೋಷಣೆ ಅಸ್ಪೃಷ್ಯರ ರೋಗವಲ್ಲ; ಅದನ್ನು ಆಚರಿಸುವವರ ರೋಗ; ಅದನ್ನು ಅವರೇ ಗುಣಪಡಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ಗಿರಿರಾಜ್ ಹೊಳೆಸಿದ್ದಾರೆ. ಸಮಾಜದ ಹೊರಗೆ ನಿಂತು ಬಾಯಿಬಡಿದುಕೊಳ್ಳುವುದಕ್ಕಿಂತ ಒಳಗೆ ನುಗ್ಗಿ ಪಿಸುಮಾತನ್ನಾದರೂ ಆಡಬೇಕಲ್ಲವೇ….
ಒಟ್ಟಿನಲ್ಲಿ ಸಿನಿಮಾದ ಕೊನೆಯಲ್ಲಿ ಫಿಜ್ಞಾ ತಿನ್ನುತ್ತಾ ವಾಕರಿಸಿಕೊಳ್ಳುವ ಹುಡುಗ ಸಿಕ್ಕಾಪಟ್ಟೆ ಕಾಡುತ್ತಿದ್ದಾನೆ…
ಆಡಿಕೊಳ್ಳಲುಬ್ಯಾಡಿ ಬಡವಾರ ಬದುಕಾ….
ಒಳ್ಳೆಯ ಅಭಿಪ್ರಾಯ ಮೂರ್ತಿಯವರೆ. ೯೦ ಶತಾಂಶ ಪ್ರಶಸ್ತಿ ವಿಜೇತ ಚಿತ್ರಗಳ ಹಣೆಬರಹ ಇದೇ ಅಲ್ಲವೇ???