ರಾಜಸ್ಥಾನವೆಂಬ ಸ್ವರ್ಗದ ತುಣುಕು : 'ಶಿಲ್ಪಗ್ರಾಮ' ವೆಂಬ ಗ್ರಾಮಭಾರತದ ಆತ್ಮ

(ಇದಕ್ಕೂ ಮೊದಲು…)

ನಮ್ಮ ಬದುಕಿನ ಭಾಗವೇ ಆಗಿಹೋಗಿದ್ದ ಆ ಹಂತಿ ಪದ, ಚೌಡಕಿ ಪದಗಳು,… ಭಜನೆಗಳು..ಸೋಬಾನೆ ಪದಗಳು, ನಮ್ಮ ಯಕ್ಷಗಾನಗಳು,, ಬಯಲಾಟಗಳು, ಮೂಡಲಪಾಯಗಳು,,ನಾಟಕಗಳು, ಗೀಗಿ ಪದಗಳು… ಕೀಳಿಕೇತರ ತೊಗಲು ಗೊಂಬೆಯಾಟಗಳು, ..ನಾಡಿನ ಎಲ್ಲ ತರಹದ ಹಾಡುಗಳು ಕುಣಿತಗಳು, ನೃತ್ಯ ಪ್ರಕಾರಗಳು, ಎಲ್ಲಾ ಎಲ್ಲಿ ಕಳೆದು ಹೋದವು,,,ಕೆಲವು ಅಲ್ಲಲ್ಲಿ ಉಸಿರು ಹಿಡಿದಿದ್ದರೂ,, ಮೊದಲಿನ ವಾತಾವರಣ ಇದೆಯೇ?.
ನಮ್ಮ ಈಗಿನ ಪೀಳಿಗೆಗಳು ನಾಡಿನ ಈ ನೆಲದ ಕಲೆಗಳಿಂದ ವಂಚಿತರಾಗಿ, ಮೊಬೈಲ್ ಎಂಬ ಪುಟ್ಟ ಪೆಟ್ಟಿಗೆಯ ಪರದೆಯೇ ಅವರ ಅಂಗಳವಾಗಿ ಬಿಟ್ಟಿದೆ. ಯಾವುದೋ ಗೇಮ್ಸ್ ಆಡುತ್ತ, ಕಾಲ ಹರಣ ಮಾಡುವುದನ್ನು ಕಂಡಾಗ, ನಮ್ಮ ಬಾಲ್ಯದ ಆಟಪಾಟಗಳತ್ತ ಮನುಸ್ಸು ತಿರುಗುತ್ತದೆ, . ಆ ಗೋಲಿ, ಲಗೋರಿ, ಚಿನ್ನಿದಾಂಡು, ಕಬಡ್ಡಿ ಆಟಗಳೆಲ್ಲ,, ಎಲ್ಲಾ ಟೀಮ್ ಗೇಮ್ ಗಳೇ, ನಮ್ಮ ರಜೆಗಳೆಲ್ಲವೂ ಅಂಗಳಗಳಲ್ಲೇ ಕಳೆದುಹೋಗುತ್ತಿದ್ದವು ಈಗ ಏನಿದ್ದರೂ ಗೋಡೆಗಳೊಳಗೆ ಮಕ್ಕಳ ಆಟೋಟಗಳು. ಅವರು ನಿಜ ಅಂಗಳಕ್ಕೆ ಬರುವಂತೆಯೇ ಇಲ್ಲ.
ಈ ನಾಡಿನ ಮಕ್ಕಳ ಗಮನಕ್ಕೆ ಬರಲಾರದ ಅವು ನೋಡಲಾರದ ಯಾವದೇ ಕಲೆಗಳಿರಲಿ, ಅವು ಈ ಮಕ್ಕಳ ಕಣ್ಣು ಕಿವಿಗಳಿಗೆ ಬೀಳವಂತಾಗಬೇಕು. ಅವರೇ ಒಬ್ಬ ನೇಕಾರನ ಮನೆಯಲ್ಲಿ, ಬಟ್ಟೆ ನೇಯುವುದನ್ನು ನೋಡುವುದಷ್ಟೇ ಅಲ್ಲ.,, ಅವರೂ ಕೂಡ ನೇಯ್ದು ನೋಡುವುದಾದರೆ, ….ಒಬ್ಬ ಕುಂಬಾರ ತನ್ನ ತಿಗರಿಯಿಂದ ಗಡಿಗೆಯನ್ನು ಹೇಗೆ ಮಾಡುತ್ತಾನೆ,,ನೋಡುವುದಷ್ಟೇ ಅಲ್ಲ, ಆ ಮಗುವಿನ ಕೈಯಲ್ಲಿ ಒಂದು ಪುಟ್ಟ ಗಡಿಗೆಯನ್ನು ಮಾಡಿಸಿದರೆ ಅವನ ಎದೆಯಾಳದಲ್ಲಿ ಈ ನೆಲದ ಸಿಗ್ನೇಚರ್ ಬೀಳದೇ! …ಬಿದಿರಿನಿಂದ ಬುಟ್ಟಿ , ಮತ್ತಿತರೆ ಅನೇಕ ಕರಕುಶಲ, ಗ್ರಾಮೀಣ ಗೃಹೋಪಯೋಗಿ ಸಾಮಗ್ರಿ, ಸಾಮಾನುಗಳ ತಯಾರಿಕೆಯ ಕಲೆಯ ಪರಿಚಯವಷ್ಟೆ ಅಲ್ಲ, ಇದು ನನ್ನದು ಎಂಬ ಭಾವದ ಬೀಜ ಅವನ ಎದೆಯಲ್ಲಿ ಅರಳಬೇಕಲ್ಲವೇ. ಅದಕಷ್ಟು ನೀರು ಗೊಬ್ಬರ ಹಾಕಿದರೆ ಅದು ಚಿಗುರದೇ?…..,ಗಿಡದಲ್ಲಿ ಗಡಿಗೆಗಳು ಹುಟ್ಟುತ್ತವೆ ಎಂದರೂ ನಂಬುವ ಮಟ್ಟಕ್ಕೆ ನಮ್ಮ ಮಕ್ಕಳನ್ನು ಕತ್ತಲೆಯಲ್ಲಿ ಇಟ್ಟು ಬೆಳೆಸುತ್ತಿದ್ದೇವೆ…, ಕಂಬಾರ, ಕುಂಬಾರ, ಬಡಿಗ, ಕರಕುಶಲಿ, ನೇಕಾರ, ಆದಿವಾಸಿ, ಗಿರಿಜನ, ಲಂಬಾಣಿ, ಕುರುಬ.,,ರೈತ,, ಕರಾವಳಿಯ ಮೀನುಗಾರರು,….ಅಂಬಿಗರು. ಅವರ ಜೀವನ ಸಾಂಪ್ರದಾಯಿಕ ಪದ್ಧತಿಗಳು,.. . ಹೆಣ್ಣುಮಕ್ಕಳ ಹಾಡುಗಳು, ಪಂಚಮಿ ಹಾಡುಗಳು, ಜನಪದ , ಸುಗಮ ಸಂಗೀತಗಳು, ಶಾಸ್ತ್ರೀಯ ಸಂಗೀತಗಳು, …ವಿವಿಧ ಉಪಕರಣಗಳು ಅವುಗಳನ್ನು ನುಡಿಸುವ ಬಗೆ,,.. ಎಲ್ಲ ಜನಪದೀಯರ ಜೀವನ ರೀತಿ.,, ಅವರ ಹಾಡುಗಳು, ನಡೆನುಡಿಗಳು, ಸತ್ ಸಂಪ್ರದಾಯಗಳ ಪರಿಚಯ ಮಾಡಿಸಿದರೆ?
ಹೀಗೆ ಜನಪದೀಯ ಸಮೃದ್ಧಿಯ ಗ್ರಾಮೀಣ ಸೊಗಡಿನ ಈ ಗ್ರಾಮ ಭಾರತದ ಆತ್ಮವು ಇಷ್ಟು ಸಲೀಸಾಗಿ ವಿನಾಶವಾಗಬಾರದು ಅಲ್ಲವೇ.? ..ಅಷ್ಟೊಂದು ಸತ್ವಯುತ ಈ ಮಣ್ಣಿನಲ್ಲಿ ಹುಟ್ಟಿದ ಈ ಅಪೂರ್ವ ಕಲೆಗಳು ನಶಿಸಿದರೆ, ಇತಿಹಾಸಗಳ, ಸಂಸ್ಕೃತಿಯ ಬೇರುಗಳೇ ಕಳಚಿದಂತೆ. .. ಇದನ್ನೆಲ್ಲ ಮುಂದಿನ ಪೀಳಿಗೆಗೆ ಒಯ್ಯುವ ಸವಾಲುಗಳು ಕೂಡ ನಮ್ಮ ಮೇಲಿದೆ, ಅದು ನಮ್ಮ ಕರ್ತವ್ಯ ಕೂಡ …ಇವೆಲ್ಲ ಮತ್ತೆ ನಮ್ಮ ಪೀಳಿಗೆಯ ಮುಂದೆ ಮತ್ತೊಮ್ಮೆ ಸಾಕ್ಷಾತ್ಕರಿಸಲ್ಪಟ್ಟರೇ…..ಮತ್ತೊಮ್ಮೆ ಅಮೀನ್ ಸಯಾನಿಯ ‘ಬಿನಾಕಾ ಗೀತ ಮಾಲಾ’ ಕೇಳಲು ಸಾಧ್ಯವಾದರೆ?…ಹೌದು, ಇದು ಸಾಧ್ಯವೇ? ……ಅಂದಹಾಗೆ ಇದನ್ನು ಬರೆಯುತ್ತಿರುವ ಈ ದಿನ ಚನ್ನೈನಿಂದ ಆಗಮಿಸಿದ ಬಿಸಿನೆಸ್ಮನ್ರೊಬ್ಬರು ಕಾಳಿ ನದಿಯನ್ನು ನೋಡಿ, ಹೀಗೆ ಹರಿಯುತ್ತಿರುವ ನದಿಯೊಂದನ್ನು ನಾನು ಈ ಮೂವತ್ತು ವರ್ಷಗಳಲ್ಲಿಯೇ ಪ್ರಥಮವಾಗಿ ನೋಡಿದೆ. ಮೊದಲು ನನ್ನ ಮಕ್ಕಳನ್ನು ಕರೆತಂದು ಇದನ್ನು ಅವರಿಗೆ ತೋರಿಸಬೇಕು ಎನ್ನುತ್ತಿದ್ದರು, ಬಂದ ಬಿಸಿನೆಸ್ ಮರೆತು, ಅಷ್ಟೊಂದು ಭಾವುಕರಾಗಿದ್ದರು, ಹರಿಯುವ ನದಿಯನ್ನು ನೋಡಿ, ಬಾಲ್ಯದಲ್ಲಿ ಕಳೆದುಕೊಂಡ ಆ ಗ್ರಾಮಭಾರತದ ಆತ್ಮವೊಂದು ಮತ್ತೆ ಸಿಕ್ಕಹಾಗಿತ್ತು ಅವರಿಗೆ.. ತನಗೆ ತನ್ನ ಅಪ್ಪ ಕೈಬೆರಳು ಹಿಡಿದು ತೋರಿದ ಆ ಜಾತ್ರೆಗಳು, ಮೇಳಗಳು, ಸಂತೆಗಳ ಆ ಮಧುರ ಕ್ಷಣಗಳನ್ನು ತನ್ನ ಮಕ್ಕಳಿಗೆ ಆ ಹೃದಯ ಸಂಪತ್ತನ್ನು ಧಾರೆಯೆರೆಯುವಾಸೆ ಯಂತೆ ಕಂಡಿತು ನನಗೆ, ಹಾಗೆ ಅವರು ಹೇಳುತ್ತಿರುವಾಗ. ‘ಬೀತೀ ಹುಯೀ ಯಾದೇಂ’ ಯಂತೆ,..ಕಳೆದು ಹೋದ ಆ ದಿನಗಳಿಗಾಗಿ ಮನಸ್ಸು ಯಾವತ್ತೂ ಹಪ ಹಪಿಸುತ್ತಿರುತ್ತದೆ ಈಗಲೂ ಎಂದಾಯಿತಲ್ಲವೇ?

ಒಮ್ಮೆ ರಾಜಸ್ಥಾನಕ್ಕೆ ಬನ್ನಿ, .. ಉದಯಪುರದಲ್ಲಿ ಆಶ್ಷರ್ಯವೆಂಬಷ್ಟು ರೀತಿಯಲ್ಲಿ ಸ್ಥಾಪಿತವಾದ, ‘ಶಿಲ್ಪಗ್ರಾಮ’ ವೊಂದನ್ನು ನೋಡುವ ಅವಕಾಶ ಮಾಡಿಕೊಳ್ಳಿ. . ಇಡೀ ರಾಜಸ್ಥಾನವನ್ನು ಒಂದೇ ಆವರಣದಲ್ಲಿ, ಅಲ್ಲಿಯ ಎಲ್ಲಾ ಜನಪದದ ಜೀವನ.,, ಅವರ ಗ್ರಾಮೀಣ ಕೈಗಾರಿಕೆಗಳು,, ಅವರ ಹಾಡುಗಳು, ಅವರ ಸಂಪ್ರದಾಯಗಳು,.. ಅವರದೇ ಮನೆಗಳನ್ನು ಯಥಾವತ್ತಾಗಿ ನಿಮರ್ಿಸಿದ್ದಾರೆ.. ಅವರ ಎಲ್ಲ ಚರಿತ್ರೆ , ಪರಿಚಯಗಳನ್ನೆಲ್ಲ ಬರೆದು ಫಲಕಗಳಲ್ಲಿ ಹಾಕಿದ್ದಾರೆ,.. ಅವರ ಮನೆಗಳಲ್ಲಿ ತಮ್ಮ ತಮ್ಮ ಮನೆಯ ಮೂಲೋದ್ಯೋಗವನ್ನು ಅವರು ಮಾಡುತ್ತ, ತಮ್ಮ ಉತ್ಪನ್ನಗಳನ್ನು ಮಾರಲು ಕೂಡ ಅನುಕೂಲ ಮಾಡಿಕೊಟ್ಟಿದ್ದಾರೆ.. ಒಂದು ಗೊಂಬೆಯಾಟವನ್ನು ನೋಡುತ್ತ, .. ಅವನ ಕಲೆಯನ್ನು ಪ್ರೋತ್ಸಾಹಿಸಲು ಅವನಿಂದ ಸೂತ್ರದ ಗೊಂಬೆ ಖರೀದಿಸಬಹುದು,.. ರಾಧೆ ಶ್ಯಾಮನ ಅನುಯಾಯಿಗಳು, ಅವರ ಕುಣಿತಗಳು,.. ಕಾನ್ ಬೇಲಿಯನ್ಜನಜೀವನ ಶೈಲಿ, ಅವರ ನೃತ್ಯಗಳು..ಲಾಂಗಡಾ, . ಮಂಗಾನೇರಿಯನ್, ರಾಜಸ್ಥಾನದ ಜೈಸಲ್ಮೇರ್, ಬಾರ್ಮೇರ್ನ ಅಪ್ಪಟ ಸಂಗೀತವನ್ನೇ ಕಸುಬನ್ನಾಗಿ ರೂಪಿಸಿಕೊಂಡಿರುವ ಆ ನೆಲದ ಸೂಫಿ ಹಾಡುಗಾರರು.. ಅವರ ವಾಸದೊಂದಿಗೆ ಅವರು ನುಡಿಸುವ ವಿಶೇಷ ಸಂಗೀತ ಸಲಕರಣೆಗಳನ್ನು ನುಡಿಸುತ್ತ, ಅವರೊಂದಿಗೆ ಕುಣಿದು ಕುಪ್ಪಳಿಸುವ ಅವಕಾಶ.. ಜನಪದದ ಮ್ಯೂಜಿಯಂ.,,, ಬಿಲ್ಲುಗಾರರು., ಒಂಟೆ ಮಾವುತರು , ಮೀನುಗಾರರು, ಗಿರಿಜನರು, ನೋಮಾಡಿಕ್ ಲಂಬಾಣಿ ಮನೆಗಳು, ಅವರ ಒಡನಾಟಗಳು …ಒಂದಿಡೀ ರಾಜಸ್ಥಾನವನ್ನು ಎಪ್ಪತ್ತು ಎಕರೆಯಲ್ಲಿ ಪುನರ್ಸ್ಥಾಪಿಸಿದ್ದಾರೆ. ಅತ್ಯಂತ ಶ್ಲಾಘನೀಯ ಕಾರ್ಯ.. ಆ ಶಿಲ್ಪಗ್ರಾಮದಿಂದ ಆಯ್ಕೆಯಾದ ಒಂದು ತಂಡ ಸುಮಾರು ಹದಿನೈದು ದಿನಗಳ ವರೆಗೆ ತಮ್ಮದೇ ಮನೆಯಂತೆ ಅಲ್ಲಿದ್ದು, ತಮ್ಮ ಕಲೆ ಪ್ರದಶರ್ಿಸುತ್ತ, . ತಮ್ಮ ವಸ್ತುಗಳನ್ನು ಮಾರಲು ಅವಕಾಶವಿದೆ.’ಹಾಥ್’ ಎಂಬ ಸಣ್ಣ ಬಜಾರವೂ ಇದೆ ಅಲ್ಲಿ.

ರಾಜಸ್ಥಾನವಲ್ಲದೇ ಪಶ್ಚಿಮ ಭಾರತದ ಐದು ರಾಜ್ಯಗಳ ಗ್ರಾಮೀಣ ಪರಿಸರದ ಮನೆಗಳನ್ನು ಇಲ್ಲಿ ಯಥಾವತ್ತಾಗಿ ನಿಮರ್ಿಸಿದ್ದಾರೆ. ರಾಜಸ್ಥಾನದ ಮಾರವಾರ ನೇಕಾರರ ಮನೆಗಳು, ಜೈಸಲ್ಮೇರ್ ಬಾರಮೇರ್ ಮರುಭೂಮಿಗಳ ಗುಡಿಸಲಿನಂತಹ ಮನೆಗಳು, ಮೇವಾರದ ಕುಂಬಾರನ ಮನೆ, ದಕ್ಷಿಣ ರಾಜಸ್ಥಾನದ ಭಿಲ್ಲ, ಹಾಗೂ ಸೆಹರಿಯನ್ ಗಿರಿಜನರ ರೈತಾಪಿ ಮನೆಗಳು, ಗುಡಿಸಲುಗಳನ್ನು ಇಲ್ಲಿ ನಿರ್ಮಿಸಲಾಗಿದೆ.
ಗುಜರಾತಿನ ಬನಿ ಭಾಗದ ರೇಬಾರಿ, ಹರಿಜನ, ಮುಸ್ಲಿಮ್, ನೇಕಾರರ, ಕರಕುಶಲಗಾರ, ಆಟಿಕೆ ತಯಾರಕರ ಮಣ್ಣಿನ ಮನೆಗಳನ್ನು, ಹಾಗೂ ಕಛ್ಛನ ಭುಜೋಡಿಯ ಮರುಭೂಮಿಯ ಗುಡಿಸಲುಗಳು, ಲಾಮಡಿಯಾ ಗ್ರಾಮದ ಕುಂಬಾರರ ಮನೆಗಳು ಇಲ್ಲಿ ಇವೆ.ಗುಜರಾತಿನ ಛೋಟಾ ಉದಯಪುರದ ನೇಕಾರನ ಮನೆ ಅವನ ವಖಾರ ಎಲ್ಲಾ ತದ್ರೂಪ ಹುಬಹು ಹಾಗೆಯೇ ಇವೆ. ಅಲ್ಲಿನ ಗಿರಿಜನರ ಮನೆಗಳೂ, ಅವರ ಕಸಬುಗಳು ನೋಡಲು ಸಿಗುತ್ತವೆ. ಮಹಾರಾಷ್ಟ್ರ , ಗೋವಾ ರಾಜ್ಯಗಳ ಮೀನುಗಾರರ ಗುಡಿಸಲುಗಳು, ರಾಯಘರ ಜಿಲ್ಲೆಯ ಕೋಳಿ ಜನಾಂಗದ ಗುಡಿಸಲುಗಳು . ದಮನ ದೀವ್ ಪ್ರಾಂತಗಳ ಸಾಂಪ್ರದಾಯಿಕ ಮನೆಗಳು, ಇಲ್ಲಿಯ ಮ’ನೆಗಳನ್ನು ಸ್ಥಳೀಯ ಕಲ್ಲು ಮಣ್ಣುಗಳಿಂದಲೇ ನಿಮರ್ಿಸಿ, ಹುಲ್ಲಿನ, ಬಿದಿರಿನ, ಇಲ್ಲವೇ ತಾರಸಿಗಳಿಗೆ ಗಚ್ಚು ಬಳಸಿದ್ದಾರೆ, ರಸ್ತೆಗಳಿಗೆ ಮೆಟಲಿಂಗ್ ಮಾಡಿ ಬಿಟ್ಟು ಬಿಟ್ಟಿದ್ದಾರೆ. ಟಾರು ಹೊದಿಸದೇ ಹಾಗೆಯೇ ಬಿಟ್ಟಿದ್ದಾರೆ. ಆದಷ್ಟು ನೈಜತೆಯನ್ನೂ ನೂರು ಪ್ರತಿಶತ ತರಲು ಪ್ರಯತ್ನಿಸಿದ್ದು ಎದ್ದು ಕಾಣತ್ತದೆ….ಬಲು ಅನುಕರಣಿಯವಾದ ಕೆಲಸವನ್ನು ಸದ್ದಿಲ್ಲದೇ ಮಾಡಿಬಿಟ್ಟಿದ್ದಾರೆ,…
ಇವೆಲ್ಲ ಗುಡಿಸಲುಗಳು, ಮನೆಗಳು, ವಖಾರಗಳು,. ಹಿತ್ತಲುಗಳು. ಬಡಿಗ, ಕಂಬಾರ, ನೇಕಾರ, ಕುಂಬಾರ , ಕರಕುಶಲ, ಬಿದಿರು ಬುಟ್ಟಿ ಹೆಣೆಯುವ, ಗಿರಿಜನರ, ಹೀಗೆ ಒಂದು ಜೀವಂತ ಗ್ರಾಮವೊಂದರಲ್ಲಿ ಎಲ್ಲಾ ಸಮದಾಯಗಳು ಹೇಗೆ ಅನ್ಯೋನ್ಯವಾಗಿ ಸಹಬಾಳುವೆಯನ್ನು ನಡೆಸುತ್ತಿದ್ದರೋ, .ನಮ್ಮ ಗ್ರಾಮ ಭಾರತದ ಆತ್ಮವೊಂದು ಹೇಗೆ ದಿನಿನಿತ್ಯ ಉಸಿರಾಡುತ್ತಿತ್ತೋ, ಅವೆಲ್ಲ ಅಲ್ಲಿ ಅದೇ ಜನರ ಜೀವಂತ ಪಾಲ್ಗೊಳ್ಳುವಿಕೆಯಿಂದ ಅದನ್ನೊಂದು ಉಸಿರಾಡುವ ಮ್ಯೂಜಿಯಂನ್ನಾಗಿಸಿದೆ.. ಇವೆಲ್ಲ ಸಂಸ್ಕೃತಿ , ಜೀವನ ಪದ್ಧತಿ, ಗಾಂಧೀಜಿ ಕಂಡ ಕನಸು, ವಿನಾಶವಾಗಬಾರದಲ್ಲ, ಅದಕ್ಕೆ ರಾಜಸ್ಥಾನದ ಸರಕಾರವೊಂದು ಇದನ್ನು ಇಂದಿನ ಪೀಳಿಗೆಗೆ ಜೀವಂತ ಮನಗಾಣಿಸಲು, ಈ ಎಲ್ಲ ವೃತ್ತಿಗಳ ಜನರನ್ನು ಪ್ರತಿ ಹದಿನೈದು ದಿನಗಳಿಗೊಮ್ಮೆ ಒಂದು ತಂಡವನ್ನು ಸರತಿಯಂತೆ ಆಹ್ಹಾನಿಸಿ , ಅವರದೇ ಮನೆಯಂತೆ, .ಅದೆ ಪರಿಸರದಲ್ಲಿ ಯೇ, ಇರಲು ಬಿಟ್ಟು, ತಾವೇ ತಯಾರಿಸಿದ ವಸ್ತುಗಳನ್ನು ಅಲ್ಲಿಯೇ ತಯಾರಿಸಲು, ಹಾಗೂ ತಯಾರಿಸಿದ ಮಾಲನ್ನು ಮಾರಲು ಹಾಗೂ ಕಲಾಕಾರ ತಂಡಗಳಿಗೂ ಆಹ್ಹಾನಿಸಿ, ತಮ್ಮ ಕಲೆಯ , ನೃತ್ಯಗಳ ದರ್ಶನ ಮಾಡಲು ಅನುವು ಮಾಡಿದ್ದು ಮೆಚ್ಚುಗೆಯಾಯಿತು., ಕುಂಬಾರನೊಬ್ಬ ಒಂದು ಮಗುವಿಗೆ ಗಡಿಗೆಯನ್ನು ಮಾಡುವುದನ್ನು ತೋರಿಸುತ್ತಿದ್ದುದು. ಆ ಮಗು ಬಿಟ್ಟಗಣ್ಣು ಬಿಟ್ಟು ನೋಡುತ್ತಿದ್ದುದನ್ನು ಎಷ್ಟೋ ಹೊತ್ತು , ಆ ಮಗವೇ ನಾನಾಗಿ, ನೋಡುತ್ತ ನಿಂತುಬಿಟ್ಟಿದ್ದೆ.
..ಸುಮ್ಮನೆ ಒಂದು ಶಿಲ್ಪಗ್ರಾಮವಲ್ಲ ಅದು, ಒಂದು ದೇಶದ ಆತ್ಮದ ಒಳಪ್ರವೇಶವದು. ಅಂತಿಮವಾಗಿ ಈ ದೇಶ ಕಂಡುಕೊಳ್ಳಬೇಕಿರುವ, ಗುರುತಿಸಿಕೊಳ್ಳಬೇಕಾ ದ ಅಂತಿಮ ಸತ್ಯವದು. .ಮಹಾತ್ಮಾಜಿಯ ‘ಗಾಂಧಿ ಕುಟಿ’ ಇದೇ ತತ್ವವನ್ನು ಹೇಳುತ್ತದೆ ಅಲ್ಲವೇ…ಇದರಿಂದ ಇದಕ್ಕೊಂದು ಯುನೀಕ್ನೆಸ್ ಬಂದಿದೆ. ನಾನೊಬ್ಬ ನೇಕಾರನ ಮನೆಗೆ ಹೋಗಿ, ಅಲ್ಲಿ ಅವನೇ ನೇಯ್ದು, ಬೇರೆ ಬೇರೆ ಅಳತೆಗೆ ಹೊಲಿಸಿಟ್ಟ ರೆಡಿಮೇಡ್ ಮೇಲುಕೋಟೊಂದನ್ನು ಕೆಲನೂರರಲ್ಲಿ ಕೊಂಡೆ, ನಮ್ಮ ಜೈಪುರದಲ್ಲಿ ಅಂಗಡಿಯೊಂದರಲ್ಲಿ ಕಣ್ಣಿಗೆ ಬಿದ್ದ ಅದೇ ಮೇಲುಕೋಟು, ಹಲವಾರು ಸಾವಿರಗಳ ಚೀಟಿ ಅಂಟಿಸಿಕೊಂಡಿದ್ದುದನ್ನು ಗಮನಿಸಿದೆ.
..ಒಂದು ಮೆಚ್ಚುಗೆ ಎಂದರೆ, ಅಲ್ಲಿ ಒಂದೇ ಒಂದು ಆಧುನಿಕ ಶೈಲಿಯ ಮನೆಯನ್ನು ಆ ಇಡೀ ಎಪ್ಪತ್ತು ಎಕರೆಗಳ ಆವರಣದಲ್ಲಿ ಇರದಂತೆ ನೋಡಿಕೊಂಡಿದ್ದಾರೆ… ಒಂದು ಆರ್ಸಿಸಿ ಮನೆಯನ್ನೂ ಕೂಡ ಒಳಗೆ ಬಿಟ್ಟುಕೊಂಡಿಲ್ಲ… ಸುಮಾರು ಎಂಟು ಸಾವಿರ ಜನ ಆರಾಮವಾಗಿ ಕೂತು ನೋಡಬಹುದಾದ ಅಂಪಿಥೇಟರೊಂದು ಅಲ್ಲಿ ನನ್ನ ಗಮನ ಸೆಳೆಯಿತು. ಈ ರಂಗ ಸಜ್ಜಿಕೆಯನ್ನು ಬಹು ಸುಂದವಾಗಿ, ಗ್ರಾಮೀಣ ಸೊಗಡಿನಿಂದಲೇ, ಅಲ್ಲಿ ದೊರೆಯುವ ಸ್ಥಳೀಯ ಕಲ್ಲು ಮಣ್ಣುಗಳಿಂದಲೇ, ನಿಮರ್ಿಸಿದ್ದು ಬಲು ಮೆಚ್ಚುಗೆಯಾಯಿತು. ಇಲ್ಲಿ ಪ್ರತಿವರ್ಷವೂ ಡಿಸೆಂಬರ್ 20 ರಿಂದ 31 ವರೆಗೆ ‘ ಶಿಲ್ಪಗ್ರಾಮ ಫೆಸ್ಟಿವಲ್’ ಆಯೋಜಿಸಲಾಗುತ್ತದೆ. ಈ ಸಂದರ್ಭದಲ್ಲಿ ದೇಶ ವಿದೇಶಗಳಿಂದಲೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ನೆರೆಯುತ್ತಾರೆ. ಜನಪದೀಯ ಹಾಡುಗಳು, ನೃತ್ಯಗಳು, ಕುಣಿತಗಳು, ಬೇರೆ ಬೇರೆ ರಾಜ್ಯಗಳ ಕಲಾತಂಡಗಳು, ನೃತ್ಯತಂಡ, ನಾಟಕ ತಂಡ, ಥೇಟರ್ ಕಲಾವಿದರನ್ನು ಆಹ್ಹಾನಿಸಿ, ವಿವಿಧ ಕಲಾ ಪ್ರಕಾರಗಳನ್ನು ಪ್ರದಶರ್ಿಸಲು ಕ್ರಮ ಕೈಕೊಳ್ಳುತ್ತದೆ ಶಿಲ್ಪಗ್ರಾಮ .. ಉಳಿದಂತೆ ವರ್ಷವಿಡೀ ಕಲಾ ತಂಡಗಳು ತಮ್ಮ ಹಾಡು, ನೃತ್ಯ,ಗಳಿಂದ ಪ್ರವಾಸಿಗಳಿಗೆ ಒಂದೇ ಆವರಣದಡಿ ಒಂದಿಡೀ ಭಾರತವನ್ನು ತೋರಿಸುತ್ತ, ಜನಪದದ ಸೊಗಡನ್ನು ಪರಿಚಯಿಸುತ್ತಿದ್ದಾರೆ.
ಹೀಗೆಯೇ ನಮ್ಮ ನಾಡಿನಲ್ಲಿಯೂ ಕೂಡ ಸೂಕ್ತ ಕಂಡ ಸ್ಥಳಗಳಲ್ಲಿ ಇಂಥ ‘ಶಿಲ್ಪಗ್ರಾಮ’ಗಳನ್ನು, ನಿಮರ್ಿಸಿದರೆ ನಮ್ಮ ಮಕ್ಕಳಿಗೂ ಈ ಕಲೆಗಳನ್ನು ಎದೆಗೆ ಹಾಕುವುದರಿಂದ… ನಮ್ಮವೇ ಆದ ಈ ಕಲೆಗಳು ನಶಿಸಿ ಹೋಗುವುದನ್ನು ತಪ್ಪಿಸಿದಂತಾಗಬಹುದಲ್ಲವೇ.? ಹಾಗೂ ಈಗಿನ ನಮ್ಮ ಕಲಾವಿದರಿಗೂ ಅವರ ಕಲೆಯನ್ನು ತೋರ್ಪಡಿಸಲು ವೇದಿಕೆ ಮಾಡಿಕೊಟ್ಟಂತಾಗುತ್ತದೆ. ಇಲ್ಲಿ ಕಾರ್ಯಕ್ರಮ ನೀಡಿ ಬರುವುದು ಒಬ್ಬ ಕಲಾವಿದನ, ಒಂದು ತಂಡದ ಗೌರವ ಹೆಚ್ಚಿದಂತೆ ಎಂಬ ಪರಂಪರೆ ಬೆಳಸಬೇಕಿದೆ…. ನಮ್ಮ ಕಲೆಗಳು, ಆ ಜನಪದಗಳು, ಸಂಪ್ರದಾಯಗಳು,.. ರೀತಿ ರಿವಾಜುಗಳು, ಪದ್ಧತಿಗಳು , ಎಲ್ಲಾ ನಾಡಿನ ಸಂಗೀತ ಪ್ರಕಾರಗಳು, ನೃತ್ಯಗಳು ಅಳಿಯದೇ ಮುಂದಿನ ಪೀಳಿಗೆಗೆ ಯಶಸ್ವಿಯಾಗಿ ದಾಟಿಯಾವು ಎಂಬ ಅಭಿಲಾಷೆಯೊಂದಿಗೆ, ನಮ್ಮ ನಾಡಿನಲ್ಲಿಯೂ ಇಂತಹ ‘ಕಲಾಗ್ರಾಮ’ಗಳು ತಲೆಯೆತ್ತಲಿ ಎಂಬ ನಮ್ರ ಮನದ ಅರಿಕೆ, ಹಾರೈಕೆ ನನ್ನದು…
ಹಾಗಾದಲ್ಲಿ ನಮ್ಮಲ್ಲೂ ಇಲಕಲ್ ಸೀರೆ, ಗುಳೇದಗುಡ್ಡದ ಖಣಗಳು, ಬೆಳಗಾವಿಯ ಸೀರೆ, ಮೊಳಕಾಲ್ಮುರು, ದೊಡ್ಡಬಳ್ಳಾಪುರ, ಲಕ್ಷ್ಮೇಶ್ವರ, ಗದಗ ಬೆಟಗೇರಿಯ ಮಸರಾಯಿ ಸೀರೆ, ರಾಣೆಬೆನ್ನೂರ, ರಾಮದುರ್ಗ, ಗೋಕಾಕ,. ಸೂಳೇಭಾವಿ, ರಬಕವಿ ಬನಹಟ್ಟಿ, ಮಹಾಲಿಂಗಪೂರ, ಉಡುಪಿ, ಮೈಸೂರು ರೇಶ್ಮೆ, ಬೆಂಗಳೂರು ಸೀರೆಗಳು, ನಮ್ಮ ನವಲಗುಂದದ ಕಂಬಳಿಗಳು, ಜಮಖಾನೆಗಳು, ಹೀಗೆ ನಮ್ಮ ಸಹಸ್ರಾರು ಹಳ್ಳಿಗಳ ಕುಶಲಕಮರ್ಿಗಳನ್ನು , ಒಂದು ಹದಿನೈದು ದಿನಗಳ ವರೆಗೆ ಅಲ್ಲಿರಲು ಬಿಟ್ಟು, ಅವರಿಗೆ ತಮ್ಮ ತಯಾರಿಕೆಯ ವಸ್ತುಗಳನ್ನು ಮಾರಲು ಅನುಕೂಲ ಮಾಡಿದರೆ,. ಸರಕಾರವೇ ಪ್ರೋತ್ಸಾಹವನ್ನು ನೀಡಿದರೆ, ಜನರೂ ಕೂಡ ಮದುವೆ ಮುಂಜಿವೆ,. ಹಬ್ಬ ಹರಿದಿನಗಳಲ್ಲಿ ಇಲ್ಲಿಂದಲೇ ಮದುವೆಗಾಗಿ ಉತ್ಪನ್ನಗಳನ್ನು ಖರೀದಿಸುವಂತಾದರೆ, ದಲ್ಲಾಳಿಗಳ ಕಪಿಮುಷ್ಠಿಯಿಂದ ಅವರನ್ನು ಪಾರುಮಾಡಿ, ನೇರವಾಗಿ ಗ್ರಾಹಕರನ್ನು ಒದಗಿಸಿದಂತಾಗುವುದಲ್ಲವೇ? ಇಬ್ಬರಿಗೂ ಲಾಭ! ದೇಶದ ನಾಡಿಗೆ ಉಸಿರು ಉಣಿಸಿದಂತೆ!. ಕಲೆಯೊಂದಿಗೆ, ಇತಿಹಾಸದ ಮತ್ತೊಂದು ‘ಸಿಲ್ಕ್ ರೂಟ್ ‘ ಹುಡುಕಿಕೊಂಡಂತೆ. ಪ್ರತಿಯೊಬ್ಬರ ನರನಾಡಿಗಳಲ್ಲಿ ಮತ್ತೆ ಪರಿಶುದ್ಧ ಗಂಗೆ ಹರಿದಂತೆ!
(ಆಮೇಲೆ….)

‍ಲೇಖಕರು G

May 27, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

4 ಪ್ರತಿಕ್ರಿಯೆಗಳು

  1. Hanumanth Ananth Patil

    ಲಕ್ಷ್ಮೀಕಾಂತ ಇಟ್ನಾಳರವರಿಗೆ ವಂದನೆಗಳು
    ರಾಜಸ್ಥಾನದ ’ಶಿಲ್ಪ ಗ್ರಾಮ’ದ ಕುರಿತು ಬಹಳ ಅದ್ಬುತವಾಗಿ ಅದ್ಬುತವಾಗಿ ದಾಖಲಿಸಿದ್ದೀರಿ ಈ ಬಗೆಗೆ ನನಗೆ ಗೊತ್ತೆ ಇರಲಿಲ್ಲ. ನಮ್ಮ ಜನ ನಾಯಕರಿಗೆ ನಿಜವಾಗಿ ಜನತೆಯ ಬಗೆಗೆ ಮತ್ತು ತಮ್ಮ ಪ್ರದೇಶಗಳ ಬಗೆಗೆ ಗ್ರಾಮೋದ್ಯೋಗಗಳ ಕುರಿತು ಕಾಳಜಿ ಇದ್ದರೆ ಚೈನಾ ಸಿಂಗಾಪುರ ಜಪಾನ ಮತ್ತು ಪಾಶ್ಚಿಮಾತ್ಯ ದೇಶಗಳಿಗೆ ಭೇಟಿ ಕೊಡುವುದು ಬಿಟ್ಟು ನಮ್ಮ ದೇಶದಲ್ಲಿಯೆ ಇರಬಹುದಾದ ಇಂತಹ ಮಾದರಿ ವ್ಯವಸ್ತೆಯನ್ನು ನೋಡಿ ತಮ್ಮ ಕ್ಷೇತ್ರ ಕುರಿತು ಅಲೋಚಿಸಿ ಕಾರ್ಯರೂಪಕ್ಕೆ ತಂದರೆ ಅದರಂತಹ ಜನ ಸೇವೆ ಸಮಾಜ ಸೇವೆ ಮತ್ತೊಂದಿಲ್ಲ.ನಮ್ಮ ಗ್ರಾಮೀಣ ಪ್ರದೇಶದ ಕುಶಲ ಕಲೆಗಳು ಅವುಗಳ ಇತಿಹಾಸ ಅವು ಸಾಗಿ ಬಂದ ದಾರಿ ಮತ್ತು ಪರಂಪರೆಗಳು ಕಣ್ಮುಂದೆ ಸುಳಿದು ಹೋದವು, ನಮ್ಮ ಬಾಲ್ಯದ ದಿನಗಳಲ್ಲಿ ಕಮ್ಮಾರನ ಕುಲುಮೆ, ಕುಂಬಾರನ ತಿಗರಿ, ಮೇದಾರರ ಕರ ಕುಶಲತೆ ಇವುಗಳನ್ನು ನೋಡಿ ಬೆಳೆದವರೆ ಇಂದು ಅಲ್ಲಿಗೆ ಹೋಗಿ ನೋಡಿದರೆ ಅವೆಲ್ಲ ಮಾಯ. ಅಬಿವೃದ್ದಿ ಮತ್ತು ಸುಧಾರಣೆಗಳ ನೆಪದಲ್ಲಿ ನಾವು ನಮ್ಮ ಗುಡಿ ಕೈಗಾರಿಕೆಗಳನ್ನು ಮರೆತಿರುವುದು ವರ್ತಮಾನದ ದುರಂತ. ರಾಜಸ್ಥಾನದ ಶಿಲ್ಪಗ್ರಾಮವನ್ನು ಕೆಂದ್ರವಾಗಿಟ್ಟು ಕೊಂಡು ನಮ್ಮ ಇಡೀ ದೇಶದ ಗುಡಿ ಕೈಗಾರಿಕೆಗಳು ಮತ್ತು ಉಳಿಸಿಕೊಳ್ಳುವಿಕೆಯ ಕುರಿತು ತಾವು ವ್ಯಕ್ತ ಪಡಿಸಿದ ಕಳಕಳಿ ಮೆಚ್ಚುವಂತಹುದು.ತಮ್ಮ ಪ್ರವಾಸ ಕಥನ ಕಂತಿನಿಂದ ಕಂತಿಗೆ ಗರಿ ಗಟ್ಟುತ್ತ ವಿಶಿಷ್ಟ ಅನುಬವ ಕಟ್ಟಿಕೊಡುತ್ತ ಸಾಗಿದೆ ಮುಂದಿನ ಕಂತಿನ ನಿರೀಕ್ಷೆಯಲ್ಲಿ ದನ್ಯವಾದಗಳು.

    ಪ್ರತಿಕ್ರಿಯೆ
  2. ಲಕ್ಷ್ಮೀಕಾಂತ ಇಟ್ನಾಳ

    ಆತ್ಮೀಯ ಹಣುಮಂತ ಅನಂತ ಪಾಟೀಲ ಸರ್, ವಂದನೆಗಳು. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್…

    ಪ್ರತಿಕ್ರಿಯೆ
  3. Shrinivas. Huddar

    ಸರ್, ಇದು ಕೇವಲ ಪ್ರವಾಸ ಸಾಹಿತ್ಯವಲ್ಲ,ಇದು ಚಿಂತನಾ ಸಾಹಿತ್ಚ , ನಮ್ಮನ್ನು ನಾವು ಕಂಡು ಕೊಳ್ಲುತ್ತಲೇ ನಮ್ಮ ದೇಶ ಕಟ್ಟುವ ರೀತಿ ಹೇಗಿರಬೇಕು ಎಂಬುದನ್ನು ಕಂಡುಕೊಳ್ಲುವುದು. ಬಹುಶ: ದೇಶ ಸುತ್ತಬೇಕು ಅನ್ನುವುದು ಇದಕ್ಕಾಗಿ. ಸರಳ ಸುಂದರ ಲೇಖನ .ಭಾಳ ಛಂಧ ಅನ್ನಿಸ್ತು.

    ಪ್ರತಿಕ್ರಿಯೆ
    • ಲಕ್ಷ್ಮೀಕಾಂತ ಇಟ್ನಾಳ

      ಶ್ರೀನಿವಾಸ ಹುದ್ದಾರ ಸರ್ ತಮ್ಮ ಅನಿಸಿಕೆಗಳಿಗೆ ವಂದನೆಗಳು.

      ಪ್ರತಿಕ್ರಿಯೆ

Trackbacks/Pingbacks

  1. ರಾಜಸ್ಥಾನವೆಂಬ ಸ್ವರ್ಗದ ತುಣುಕು : ಮುಂದಿನ ಹೆಜ್ಜೆ ಬಿಕಾನೇರ್‌ ಕಡೆಗೆ « ಅವಧಿ / Avadhi - [...] ರಾಜಸ್ಥಾನವೆಂಬ ಸ್ವರ್ಗದ ತುಣುಕು : ಮುಂದಿನ ಹೆಜ್ಜೆ ಬಿಕಾನೇರ್‌ ಕಡೆಗೆ June 3, 2015 ( ಹಿಂದಿನ ತುಣುಕುಗಳು..) [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: