‘ಪಕ್ಕದ ಮನೆಯನ್ನ ಸುಡುತ್ತಿರುವ ಬೆಂಕಿ ತನ್ನದೇ ಮನೆಗೆ ತಾಗುವವರೆಗೆ ಅದೊಂದು ಚರ್ಚೆಯ ವಿಷಯವಾಗಿರುತ್ತದೆ. ಆಮೇಲಷ್ಟೇ ಅದನ್ನ ನಂದಿಸುವ ಕೆಲಸಗಳು ಜಾರಿಯಾಗುತ್ತವೆ’ ಎನ್ನುವ ರಾಜಶೇಖರ ಬಂಡೆ ಕನ್ನಡದ ಹೊಸ ಸಂವೇದನೆ.
ಇಂತಹ ರಾಜಶೇಖರ ಬಂಡೆಗೆ ಪ್ರತಿಷ್ಠಿತ ಟೋಟೋ ಪ್ರಶಸ್ತಿ ಬಂದಿದೆ. ಅವಧಿಯ ಅಭಿನಂದನೆಗಳು.
ಕನ್ನಡ ಕಾವ್ಯ ಲೋಕದ ಗಡ್ದಪ್ಪ ಎಂದೇ ಹೆಸರಾದ ಬಂದೆ ಅವರು ಪ್ರಶಸ್ತಿ ಪಡೆದಾಗ ನೀಡಿದ ಪ್ರತಿಕ್ರಿಯೆ, ಗೆಳೆಯರ ಅಭಿನಂದನೆ ಬಂದೆ ಕವಿತೆಯೊಂದು ಇಲ್ಲಿದೆ

ಅವ್ವಂಗೆ ಫೋನ್ ಮಾಡಿ ಅವ್ವ ಅವತ್ತು ಹೇಳಿದ್ನಲ್ಲ ಅವಾರ್ಡ್ ಫಂಕ್ಸನ್ನದೆ ಅಂತ, ಅದು ಬಂತು ಅಂದೆ. ನನ್ಮಗುನ್ಗೆನೆ ಬರ್ಲಿ ಅಂತ ದೇವ್ರತ್ರ ಕೇಳ್ಕೊಂಡಿದ್ದೆ ನಾನು ಅಂದ್ರು
ಟೋಟೋ ಮತ್ತು ಎಲ್ಲ ಗೆಳೆಯರಿಗೆ ಧನ್ಯವಾದ
-ರಾಜಶೇಖರ ಬಂಡೆ
ನಾವು ಚಿಕ್ಕಮಗಳೂರಿನ ಕಾಡಿನ ಪ್ರದೇಶದಲ್ಲಿ ಕಾರಿನಲ್ಲಿ ತಿರುಗುತ್ತಿದ್ದಾಗ,ಹೊರಗೆ ತಂಪು ಕಾಡಿದ್ದರೆ,ಒಳಗೆ ಪ್ರಶಾಂತವಾಗಿ ವಾತವರಣವಿತ್ತು.ಚಲಿಸುತ್ತಿದ್ದ ಕಾರು ಮತ್ತು ಮಾತು,ಮೌನ ಎಲ್ಲದರ ನಡುವೆಯೂ ನಾವು ಸುಮಾರು ಘಂಟೆಗಳ ಕಾಲ ಕೆಲ ಕವಿಗಳ ಹಾಡುಗಳನ್ನು ಕೇಳಿದ್ದೇವು..ನೀನಾಗ ಒಂದು ಮಾತು ಹೇಳಿದೆ..ನಾನು ಮತ್ತೆ ಹೊಸ ಪದ್ಯಗಳನ್ನು ಬರೆಯಬೇಕೆಂದೂ..
ನೋಡು ಈಗ ಪ್ರಶಸ್ತಿ ಸಿಕ್ಕಿದೆ..
ಬರೆಯುವುದಕ್ಕೆಂದೆ ಕೊಟ್ಟಿರುವ ಉಡುಗೊರೆಯಿದು..ಯಶಸ್ಸು ಸದಾ ಕಾಲ ನಿನ್ನ ಜೊತೆಗಿರಲಿ ಎಂದೂ ಆಶಿಸುತ್ತೇನೆ..
-ವಿನೋದ್ ಎನ್
ಫೇಸ್ಬುಕ್ನಲ್ಲಿ ಕವಿತೆ ಬರೆಯೋರಲ್ಲಿ, ನನ್ನನ್ನು ಸದಾ ಬೆರಗುಗೊಳಿಸುವ ಕವಿಗಳಲ್ಲಿ ನಮ್ಮ Rajashekara Channegowda ಕೂಡ ಒಬ್ಬರು.. ಆತ ಬರೆಯೊ ಪದ್ಯಗಳು ತೊಗಲು, ಬಣ್ಣಗಳಿಲ್ಲದೆ ನೇರವಾಗಿ ಆತ್ಮದಾಳದಿಂದ ಇಳಿದು ಅಕ್ಷರಗಳಾಗುವಂತವು.. ಅಭಿನಂದನೆಗಳು ಬಂಡೆ. ನಿನಗೆ ಬೆಳೆಯೊ ತಾಕತ್ತಿದೆ ಅನ್ನೋದಕ್ಕಿಂತ, ನಿನ್ನ ಪದ್ಯಗಳಿಗೆ ನಿನ್ನನ್ನು ಬೆಳೆಸೊ ತಾಕತ್ತಿದೆ ಎನ್ನಬಹುದು. ಇಂತಿಪ್ಪ ನಮ್ಮ ಬಂಡೆಗೆ ಟೋಟೋ ಅವಾರ್ಡ್ ಬಂದಿದೆ. ಅಭಿನಂದನೆಗಳು.. ಬರೀತಿರು ಮಾರಾಯ.. ಲವ್ ಯೂ…
-ಪ್ರಮೋದ್ ಮೈಸೂರು
Very first day when I met him I felt he was a bit reserved… ಹಾಯ್ ಹೇಳಿದ್ರೂ ಸ್ಮೈಲ್ ಅಷ್ಟೆ ಕೊಡ್ತಿದ್ದ ಶ್ರೀಯುತ ರಾಜಶೇಖರ್ ಬಂಡೆ, ಒಂದಿನ ನನ್ ಪದ್ಯ ಓದ್ರಿ ಅಂತ ಕೊಟ್ರು! ಓದಿದೆ..ಖುಷಿ ಜೊತೆಗೆ ಆಶ್ಚರ್ಯದ ಜೊತೆ ನೀವೇ ಬರ್ದಿದ್ದಾ? ಅಂದೆ..ಅದಕ್ಕೂ ಅದೇ ಕಿರುನಗೆಯಲ್ಲಿ..ಹ್ಹೂ ಯಾಕೆ ಡೌಟಾ? ಅಂದಿದ್ರು.. ಆಮೇಲೆ ಅವರ ಇನ್ನಷ್ಟು ಕವನಗಳನ್ನ ಓದಿದ್ದೆ..ಆಗ ಅನ್ನಿಸಿದ್ದು ಈ ಮನುಷ್ಯ ಬರೆಯೋದನ್ನ ನಿಲ್ಲಿಸ್ಬಾರ್ದು ಅಂತ.. ಇವತ್ತು ನಮ್ಮ ಸುದ್ದಿ ಟಿವಿಯ ಗಡ್ಡಪ್ಪನಿಗೆ ೨೦೧೭ರ ಟೊಟೊ ಪ್ರಶಸ್ತಿ ಬಂದಿದೆ..ಅದೆಷ್ಟೋ ಜನ ಹಿಂದಿ ಸಿನಿಗೀತೆಗಳನ್ನ ಕನ್ನಡಕ್ಕೆ ಯಥಾವತ್ತಾಗಿ ಇಳಿಸಿ ಕವಿ ಅಂತ ಸ್ವಘೋಷಣೆ ಮಾಡಿಕೊಳ್ಳುವರ ಮಧ್ಯೆ , ಸ್ವಂತಿಕೆಯನ್ನ ಉಳಿಸಿಕೊಂಡು ಬರೆಯುವ ಬಂಡೆ ಬರಹ ನಂಗಿಷ್ಟ! 🙂 Proud of you gadappa 🙂 long way to go and don’t stop writing 🙂 Congratulations!!!
-ಅಪರ್ಣಾ ರಾವ್ ಕುತ್ಯಾಡಿ
ನಮ್ ಬಂಡೆಗೆ ಟೊಟೊ ಅವಾರ್ಡ್ ಸಿಕ್ಕಿದೆ ಅನ್ನೋ ಸುದ್ದಿ ನಂಗೆ ತಲುಪುವಷ್ಟರಲ್ಲಿ ಗಂಟೆ 12 ಆಗಿತ್ತು. ನಮ್ಮ ಬಂಡೆಗೇ ಬರುತ್ತೆ ಅನ್ನೋ ಧೈರ್ಯ ಒಂದ್ಕಡೆ ಆದ್ರೂ ಸ್ಪರ್ದೆ ಅಂದಾಗ ಏನೋ ಪುಕು ಪುಕು ಅಂತಿತ್ತು ನನ್ನೊಳಗೆ. ಆ ಒಂದು ಆತಂಕ ರಾತ್ರಿ ಎದ್ನೋ ಬಿದ್ನೋ ಅಂತ ಓಡೋಗಿದೆ. ಅವಾರ್ಡ್ ಫಂಕ್ಷನ್ ಗೆ ಹೋಗಲೇಬೇಕು ಅಂದ್ಕೊಂಡಿದ್ದೆ. ಆದ್ರೆ ಆಗ್ಲಿಲ್ಲ. ಮೊನ್ನೆ ತಗೆಸಿಕೊಂಡ ಪಟ ಇವತ್ತು ಹೀಗೆ ಉಪಯೋಗಕ್ಕೆ ಬರ್ತಿದೆ.
ಪಾರ್ಟಿ ಕೊಡ್ಸೋವರೆಗೂ ವಿಶ್ ಮಾಡಲ್ಲ ಅಂತಿದ್ದೆ. ಆದ್ರೆ ಅವ್ನಿಗೆ ಬರ್ತಿರೋ ಹಾರೈಕೆಗಳನ್ನ ನೋಡಿ ಹಾರೈಸದವನೇ ಪಾಪಿಗಳು ಅಂತನ್ನಿಸ್ತಿದೆ. ಏನೇ ಇರಲಿ. ನಮ್ ಬಂಡೆಗೆ ಟೊಟೊ ಅವಾರ್ಡ್ ಬಂದಿದ್ದು ನಂಗಂತೂ ಯದ್ವಾತದ್ವಾ ಖುಷಿ ತಂದಿದೆ.
-ಪ್ರಗತ್ ಕೆ ಆರ್
ನಮ್ ಬಂಡೆಗೆ ” ಟೋಟೋ” ಅವಾರ್ಡ್ ಬಂದಿದೆ ಅಂತ ತಿಳಿದಾಗ ಸಖತ್ ಖುಷಿಯಾಯ್ತು..
ಈ ಪ್ರಶಸ್ತಿಗಳು..ಅವಾರ್ಡುಗಳು…ಪತ್ರಿಕೆಯ ಸಾಪ್ತಾಹಿಕಗಳಲ್ಲಿ ಜಾಗಗಳು ಇವುಗಳ ಬಗ್ಗೆ ಶಾನೆ ಬೇಸರ ಇದ್ರೂ ಈ Rajashekara Channegowda ಎಂಬ ಗೆಳೆಯನನ್ನು ಯಾರೋ ಗುರುತಿಸಿದ್ದಾರೆ ಅಂತ ಕೇಳೋದೆ ಒಂದ್ ಖುಷಿ..ಕಂಗ್ರಾಟ್ಸ್ ಬಂಡೆ..
-ಚಲಂ ಹಾಡ್ಲಹಳ್ಳಿ

ಬಂಡೆಯದೊಂದು ಕವನ..
ನಿನ್ನ ಉಪಸ್ಥಿತಿ ಅನುಪಸ್ಥಿತಿಗಳ
ಆಚೆಗೆ ನನ್ನದೊಂದು ಊರಿದೆ,
ಅಲ್ಲಿ ಗಲ್ಲಿ ಗಲ್ಲಿಗೂ ಮೈಖಾನಗಳು,
ಒನಪು ಒಯ್ಯಾರಗಳುಳ್ಳ ಸಾಕಿಯರು,
ಸದಾ ಮಿಡಿವ ವೀಣೆಗಳೂ ಇವೆ,
ಅದೆಲ್ಲಿಂದಲೋ ಅಲ್ಲಿಗೆ ನನ್ನ
ಪ್ರವೇಶವಾಗಿ
ದಾರಿಯೇ ಮರೆತುಹೋಗಿ
ಗಡಿಬಿಡಿಗೊಳಗಾದಂತಾಗಿ
ವಾಪಸ್ಸು ಬಂದುಬಿಡುತ್ತೇನೆ,
ನಿಜಕ್ಕೂ ಆ ದಾರಿ ಈಗಲೂ ನೆನಪಿಲ್ಲ,
ಇಲ್ಲಿ ಮತ್ತದೇ ಉಪಸ್ಥಿತಿ ಅನುಪಸ್ಥಿತಿಗಳ ಬಡಿವಾರ,
ಸಂದಿಗ್ಧಗಳ ದಿಂಬಿಗೆ ತಲೆಕೊಟ್ಟು
ಮಲಗಿ ಥಟ್ಟನೆ ಎಚ್ಚರಗೊಳ್ಳುವ
ನನ್ನಂತ ಜಂತುಗಳಿಗೆ
ನಿನ್ನಂತವರೇ ಹಾಸಿಗೆ
ವ್ಯಾಪಾರ ವ್ಯವಹಾರಗಳಿಲ್ಲದ
ಆ ಊರಿನ ಬಗ್ಗೆ ಇನ್ನೂ ಹೇಳಬೇಕೆಂದರೆ
ಕೊಟ್ಟು ತೆಗೆದುಕೊಳ್ಳುವ ಅಲ್ಲಿ
ಗುಟುಕು ಮದಿರೆಗೆ ನನ್ನ ಗಜಲುಗಳೇ ಬಂಡವಾಳ,
ಹಾಡುಗಾರನಿಗೆ ನನ್ನ ಶಹಬ್ಬಾಶ್ ಗಿರಿಗಳು
ವಿಶಾಲ ಕಣ್ಣುಗಳುಳ್ಳ ಆ ಹಾಡುಗಾರ
ಸಮುದ್ರವನ್ನೇ ತುಳುಕಿಸಿದಂತೆ ಮಾಡಿ
ಅಲೆಗಳಲ್ಲೇ ರಾಗಗಳನ್ನ ಜೋಡಿಸಿಬಿಡುತ್ತಾನೆ,
ನಿನ್ನ ನೆನಪುಗಳನ್ನ ಅಲ್ಲಿ ತೂರಿಬಿಡಲು ಆಶೆಯಾದರೂ
ಅದೆಂಥದೋ ಅಳುಕು, ಅದರ ವಿಷಯ ಆಮೇಲಿಗಿರಲಿ ಬಿಡು.
ಒಮ್ಮೊಮ್ಮೆ ಆ ಊರಿನ ಜನ
ತುಂಬುಗಣ್ಣುಗಳಲ್ಲಿ ಎದುರಾಗಿ ತಬ್ಬಿಬಿಡುತ್ತಾರೆ ಕಣೇ
ಮುಂದೆ ಹೇಳಲು ನನಗೂ ಇಷ್ಟ,
ಕಣ್ತುಂಬಿ ಕೊಚ್ಚಿ ಹೋಗುವ ಭಯ,
ಬಿಗಿದಪ್ಪಿ ಅತ್ತುಬಿಡಲು ನೀನೂ ಇಲ್ಲ.






Nammorina. Huduga bande avanige shubavagali. Avanu Kannada dali obba hesaranta kavi agali