ರಹಮತ್ ತರೀಕೆರೆ ಕಂಡ ತೇಜಸ್ವಿ

ತೇಜಸ್ವಿಯವರು ಇಲ್ಲವಾಗಿ ಇಂದಿಗೆ ೧೪ ವರ್ಷ.

ಕನ್ನಡದ ಖ್ಯಾತ ಸಂಸ್ಕೃತಿ ಚಿಂತಕ ರಹಮತ್ ತರೀಕೆರೆ ಈ ಹಿಂದೆ ತೇಜಸ್ವಿಯವರನ್ನು ಸ್ಮರಿಸಿದ್ದು ಇಲ್ಲಿದೆ-

ಪ್ರೊ ರಹಮತ್ ತರೀಕೆರೆ

ತೇಜಸ್ವಿಯವರ ನಿಧನದ ಸುದ್ದಿಯಿದ್ದ ‘ಪ್ರಜಾವಾಣಿ’ಯಲ್ಲಿ ಆಕಸ್ಮಿಕವೆಂಬಂತೆ ಇನ್ನೊಂದು ವರದಿಯಿತ್ತು. ಅದು ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಲು ಬಂದ ರಾಜಕಾರಣಿಗಳನ್ನು ಹೆಜ್ಜೇನು ನೊಣಗಳು ಭಾಷಣ ಮಾಡಲು ಬಿಡದೆ ಕಚ್ಚಿ ಓಡಿಸಿದ್ದು. ತೇಜಸ್ವಿ ಬದುಕಿದ್ದರೆ ಇದನ್ನು ಆನಂದದಿಂದ ಓದಿರುತ್ತಿದ್ದರು. ಅವರ ಪ್ರಸಿದ್ಧ ಕಾದಂಬರಿ ‘ಕರ್ವಾಲೊ’ದಲ್ಲಿ ಇಂತಹುದೇ ಸನ್ನಿವೇಶವಿದೆ.

ತೇಜಸ್ವಿ ಸಾಹಿತ್ಯದಲ್ಲಿ, ಜೇನುಹುಳ ಪ್ರಾಣಿ ಪಕ್ಷಿ ನದಿ ಕಾಡ್ಗಿಚ್ಚು ಮುಂತಾದುವು, ನಿರಂಕುಶಮತಿಯೂ ಸಹಜವೂ ಆದ ತಮ್ಮ ವರ್ತನೆಯಿಂದ ಮನುಷ್ಯರನ್ನು ಕಂಗೆಡಿಸುವ ಸನ್ನಿವೇಶಗಳು ಮತ್ತೆಮತ್ತೆ ಬರುತ್ತವೆ. ಭೂಮಿ ಮೇಲಣ ಬಲಿಷ್ಠ ಜೀವಿ ಎಂದುಕೊಂಡಿರುವ ಮನುಷ್ಯನ ಹಿಡಿತಕ್ಕೆ ಸಿಗದೆ, ನಿಸರ್ಗ ಅತೀತವಾಗಿ ವರ್ತಿಸುವುದನ್ನು ಮತ್ತು ಮನುಷ್ಯರನ್ನು ಕಂಗಾಲು ಮಾಡುವುದನ್ನು ಅವರ ಸಾಹಿತ್ಯ ವಿಚಿತ್ರ ಖುಷಿಯಲ್ಲಿ ಚಿತ್ರಿಸುತ್ತದೆ. ಇದನ್ನು ‘ಕರ್ವಾಲೊ’ನ ಹಾರುವ ಓತಿ, ‘ಚಿದಂಬರ ರಹಸ್ಯ’ದ ಕಾಡ್ಗಿಚ್ಚು, ನಿಗೂಢ ಮನುಷ್ಯರು’ ಕತೆಯ ಗುಡ್ಡದ ಕುಸಿತ, ‘ಕಿರಗೂರಿನ ಗಯ್ಯಾಳಿಗಳು’ ಕಥೆಯಲ್ಲಿ ಉರುಳಿ ಬರುವ ಹೆಬ್ಬಂಡೆ, ‘ಮಾಯಾಲೋಕ’ದ ಹೊಳೆಗಳ ಚಿತ್ರಗಳಲ್ಲಿ ನೋಡಬಹುದು.

ಇಲ್ಲಿ ನಿಸರ್ಗ ಅಜೇಯವಾಗಿ ಮಾತ್ರವಲ್ಲ, ಮಾನವರ ಅರಿವಿಗೆ ಪೂರ್ತಿ ಅರ್ಥವಾಗದೆ ವಿಸ್ಮಯವಾಗಿ ಉಳಿಯುವಂತಹ ನಿಗೂಢ ಒಗಟು ಕೂಡ. ತನ್ನದೇ ಲಯದಲ್ಲಿ ಸ್ವತಂತ್ರವಾಗಿ ವರ್ತಿಸುವ ನಿಸರ್ಗದ ವಿದ್ಯಮಾನಗಳನ್ನು, ತಾನೇ ನಿರ್ಮಿಸಿಕೊಂಡ ಕಟ್ಟುಕಟ್ಟಳೆಗಳಲ್ಲಿ ಸಿಲುಕಿರುವ ಮಾನವ ಸಮಾಜದ ಎದುರು ತೇಜಸ್ವಿ ಸಾಹಿತ್ಯ ಮುಖಾಮುಖಿ ಮಾಡುತ್ತದೆ. ಈ ಮುಖಾಮುಖಿಯಲ್ಲಿ ಅದು ಸಮಾಜದ ಚಲನಶೀಲತೆಯನ್ನು ಗ್ರಹಿಸುತ್ತ ಬಂದಿದೆ.

ಪ್ರಕೃತಿಯ ಅನಿಯಂತ್ರಿತ ವಿದ್ಯಮಾನಗಳು ಜೀವಿ ವಿಕಾಸದ ಚರಿತ್ರೆಯುದ್ದಕ್ಕೂ ನಾಶ ಹಾಗೂ ಹೊಸ ಹುಟ್ಟಿನ ಲಯವನ್ನು ನಿರ್ಮಿಸಿವೆ. ಅದರ ವಿಶಾಲ ಹಾಸಿನಲ್ಲಿ ಮಾನವ ಬದುಕನ್ನಿಟ್ಟು ಅದರ ಜೀವಂತಿಕೆ ಮತ್ತು ಕ್ಷುದ್ರತೆಗಳನ್ನು ಶೋಧಿಸುವ ಕೆಲಸವನ್ನು ಅವರ ಸಾಹಿತ್ಯ ಮಾಡುತ್ತದೆ. ಈ ಶೋಧವೇ ತೇಜಸ್ವಿ ಸಾಹಿತ್ಯದ ಹೊಸ ಸಮಾಜದ ಕಲ್ಪನೆಗೂ ದಾರ್ಶನಿಕ ಹುಡುಕಾಟಕ್ಕೂ ಕಾರಣವಾಗಿದೆ.

ಆಧುನಿಕ ವಿಜ್ಞಾನವು ಜೀವವಿಕಾಸದ ಬಗ್ಗೆ ಸೃಷ್ಟಿಸಿರುವ ಜ್ಞಾನವನ್ನು ವರ್ತಮಾನದ ರಾಜಕೀಯ ಸಾಮಾಜಿಕ ಪ್ರಜ್ಞೆಯೊಂದಿಗೆ ಬೆಸೆದು ನೋಡುವ ಅಪೂರ್ವ ಪ್ರಯೋಗವನ್ನು ತೇಜಸ್ವಿ ಮಾಡಿದರು. ಅವರನ್ನು ಪರಿಸರವಾದಿ ಬರಹಗಾರ ಎಂದೊ ವಿಜ್ಞಾನದ ಲೇಖಕ ಎಂದೊ ಕರೆಯುವುದು ಸರಳೀಕರಣವಾಗುತ್ತದೆ. ನಿಗೂಢತೆಯು ನಿಸರ್ಗದಲ್ಲಿ ಮಾತ್ರವಲ್ಲ, ಮಾನವ ಬದುಕಲ್ಲೂ ಇದೆ. ಅವನತಿ ‘ಅಬಚೂರಿನ ಪೋಸ್ಟಾಫೀಸು’, ‘ನಿಗೂಢ ಮನುಷ್ಯರು’, ‘ಕುಬಿ ಮತ್ತು ಇಯಾಲ’ ಮುಂತಾದ ಕತೆಗಳು ಇದನ್ನು ಶೋಧಿಸುತ್ತವೆ.

ಮನುಷ್ಯ ತಿಳಿವಿಗೆ ಪೂರಾ ದಕ್ಕದೆ ಸವಾಲಿನಂತೆ ಉಳಿಯುವ ನಿಸರ್ಗ ಹಾಗೂ ಮಾನವ ಬದುಕಿನ ನಿಗೂಢವನ್ನು ಕುತೂಹಲದಲ್ಲಿ ಹುಡುಕುತ್ತಲೇ ಇರಬೇಕು. ಈ ಹುಡುಕಾಟದಲ್ಲೆ ನಿಸರ್ಗ ಮತ್ತು ಮಾನವರ ಸೃಜನಶೀಲತೆ ಪ್ರಕಟವಾಗುತ್ತದೆ ಎನ್ನುವುದು ತೇಜಸ್ವಿ ಸಾಹಿತ್ಯದ ಆಶಯ. ಇಲ್ಲಿ ಹುಡಕಾಡುವ ಮನುಷ್ಯ ಯತ್ನ ಮುಖ್ಯವೇ ಹೊರತು, ಅದರಿಂದ ಪಡೆಯುವ ಉತ್ತರವಲ್ಲ. ಕೆಲವೊಮ್ಮೆ ಉತ್ತರಗಳು ಸಿಗುವುದೇ ಇಲ್ಲ. ( ‘ನಿರುತ್ತರ’ ಎಂಬ ಅವರ ಮನೆಯ ಹೆಸರು ಸಾಂಕೇತಿಕ.) ‘ಕರ್ವಾಲೊ’ನಲ್ಲಿ ಎಲ್ಲರೂ ಸೇರಿ ಹುಡುಕುವ ಹಾರುವ ಓತಿ ಕೊನೆಗೂ ಸಂಶೋಧಕರ ಕೈಗೆ ಸಿಕ್ಕುವುದಿಲ್ಲ; ‘ಮಾಯಾಲೋಕ’ದಲ್ಲಿ ಕೂಡ ನದಿಯ ಮೂಲವನ್ನು ಅರಸಲು ಸಾಧ್ಯವಾಗುವುದಿಲ್ಲ.

ತೇಜಸ್ವಿ ಸಾಹಿತ್ಯದಲ್ಲಿ ಬೇಟೆಯಾಡುವ ನಾಯಿ, ಮುಖ್ಯ ಪಾತ್ರವಾಗಿ ಬರುವುದನ್ನು ಇದೇ ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕು. ನಿಗೂಢತೆಯನ್ನು ಬಿಡಿಸುವ ಗುಣದಿಂದ ಅವರ ಬರೆಹಕ್ಕೆ ‘ಪತ್ತೇದಾರಿತನ’ ಒದಗಿದೆ. ಈ ಪತ್ತೇದಾರಿತನವು ಮೂಲತಃ ಆಧುನಿಕ ವಿಜ್ಞಾನದ ಸಾಹಸಗಳಿಂದ ಪ್ರೇರಿತವಾದುದು. ತೇಜಸ್ವಿ ಹದಿಹರೆಯದ ಓದುಗರ ಮೆಚ್ಚಿನ ಲೇಖಕರಾಗಲು ಇದೂ ಒಂದು ಕಾರಣ. ಆದರೆ ತಮ್ಮ ದಾರ್ಶನಿಕ ಗುಣದಿಂದ ತೇಜಸ್ವಿ ಥ್ರಿಲ್ಲರ್ ಬರೆಯುವ ಲೇಖಕರಾಗುವ ಅಪಾಯದಿಂದ ಪಾರಾದರು.

ನಿಸರ್ಗದ ವಿದ್ಯಮಾನಗಳ ಹುಡುಕಾಟದಲ್ಲಿ ತನ್ಮಯವಾಗಿ ಕಳೆದು ಹೋಗುವಂತೆ ಕಾಣುತ್ತಿದ್ದ ಅವರಿಗೆ, ಆಧುನಿಕ ವಿಜ್ಞಾನ ಹಾಗೂ ತಂತ್ರಜ್ಞಾನಗಳ ಬಗ್ಗೆ ಮಹಾ ಸೆಳೆತವಿತ್ತು. ಜೇನ್ನೊಣದ ಅಥವಾ ನಾಯಿಯ ಹಾಗೆ ಅವರ ಕಾದಂಬರಿಗಳಲ್ಲಿ ಜೀಪೊ, ಸ್ಕೂಟರೊ, ನೀರೆತ್ತುವ ಇಂಜಿನ್ನೊ ಒಂದು ಪಾತ್ರವಾಗಿ ಬರುವುದನ್ನು ಗಮನಿಸಬೇಕು. ಆಧುನಿಕ ವಿಜ್ಞಾನ, ತಂತ್ರಜ್ಞಾನ ಹಾಗೂ ವೈಚಾರಿಕತೆಗಳ ಒಲವು ಅವರನ್ನು ಸದಾ ಹೊಸತನ್ನು ಶೋಧಕ ಲೇಖಕನನ್ನಾಗಿಟ್ಟವು.

ಯೂರೋಪಿನ ವಿಜ್ಞಾನದ ಸಂಶೋಧಕರು ಮಾಡಿದ ಸಾಹಸ ಹಾಗೂ ಸಾಧನೆಗಳ ಬಗ್ಗೆ ಅವರಿಗೆ ಬಹಳ ಗೌರವ. ಕರ್ವಾಲೊ ಒಬ್ಬ ಯೂರೋಪಿಯನ್ ಮನಸ್ಸಿನ ವೈಚಾರಿಕತೆ ಮಾನವೀಯತೆ ಆಧುನಿಕತೆ ಗುಣವುಳ್ಳ ವಿಜ್ಞಾನಿ ಎಂಬುದು ಗಮನಾರ್ಹ. ನೈಲ್ ನದಿಯ ಶೋಧನೆ ಮಾಡಿದ ಕಥನದಲ್ಲಿ, ಶೋಧ ಮಾಡುವ ಪ್ರಕ್ರಿಯೆಯಲ್ಲಿ ತನ್ನ ಪ್ರಾಣವನ್ನೇ ಬಲಿಗೊಟ್ಟ ಲೀವಿಂಗ್‌ಸ್ಟೋನ್ ಕುರಿತ ಅವರ ಆದರವನ್ನು ಗಮನಿಸಬೇಕು. ಪಶ್ಚಿಮ ಘಟ್ಟಗಳನ್ನು ಉಳಿಸುವುದು ಹಾಗೂ ಕನ್ನಡಕ್ಕೊಂದು ಸಾಫ್ಟ್ ವೇರ್ ರೂಪಿಸುವುದು; ಹಕ್ಕಿಯೊಂದರ ಜೀವನ ಕ್ರಮದಲ್ಲಿ ಹಾಗೂ ಮೋಟಾರು ಯಂತ್ರವೊಂದರಲ್ಲಿ ಆಸಕ್ತಿ ತಾಳುವುದು, ಅವರಿಗೆ ಪರಸ್ಪರ ವಿರುದ್ಧ ಸಂಗತಿಗಳಾಗಿಲಿಲ್ಲ.

ಸಾಮಾನ್ಯವಾಗಿ ಪರಿಸರವಾದಿಗಳು ಆಧುನಿಕತೆ, ಆಧುನಿಕ ವಿಜ್ಞಾನ ಹಾಗೂ ತಂತ್ರಜ್ಞಾನದ ವಿರೋಧಿಗಳು; ಸಾಂಪ್ರದಾಯಿಕ ಸಮಾಜಕ್ಕೆ ಮರಳಿ ಹೋಗಬೇಕೆನ್ನುವವರು. ತೇಜಸ್ವಿ ಇದಕ್ಕೆ ಭಿನ್ನವಾಗಿದ್ದರು. ಅವರು ನಗರ ಬದುಕಿನ ಗೊಂದಲ ಕೃತಕತೆ ಬಿಟ್ಟು ಕಾಡಿಗೆ ಹೋಗಿ ನೆಲೆಸಿದ್ದರೂ-ಅಥವಾ ಹಾಗೆ ನೆಲೆಸಿದ್ದ ಕಾರಣದಿಂದಲೇ- ಅವರಿಗೆ ನಾಡಿನ ಸೆಳೆತವಿತ್ತು. ಅವರೊಬ್ಬ ಆಧುನಿಕತೆ ಮತ್ತು ತಂತ್ರಜ್ಞಾನದ ಅವಿಮರ್ಶಾತ್ಮಕ ಆರಾಧಕರೂ ಆಗಿದ್ದರು.

ತೇಜಸ್ವಿ ಸಾಹಿತ್ಯದಲ್ಲಿ ದೊಡ್ಡ ಶಕ್ತಿಸ್ರೋತವಾಗಿರುವ ವೈಚಾರಿಕತೆ ಹಾಗೂ ಸಂಪ್ರದಾಯ ವಿರೋಧವನ್ನು ಇಲ್ಲೇ ವಿಶ್ಲೇಷಿಸಬೇಕು. ಅವರಿಗೆ ಸಾಂಪ್ರದಾಯಿಕ ಜಾತಿಧರ್ಮಗಳ ಬಗ್ಗೆ ಆಕ್ರೋಶವಿತ್ತು. ಅವು ಸೃಜನಶೀಲವಾದುದನ್ನು ಹುಟ್ಟಿಸಲಾರವು ಮತ್ತು ಸೃಜನಶೀಲ ವ್ಯಕ್ತಿಗಳು ಹೊಸ ಪ್ರಯೋಗ ಮಾಡುವುದನ್ನು ನಿರ್ಬಂಧಿಸುತ್ತವೆ ಎಂದು ನಂಬಿದ್ದರು. ನಾಗರಿಕ ಸಮಾಜ ಸೃಷ್ಟಿಸಿಕೊಂಡಿರುವ ಶಿಷ್ಟಾಚಾರ ಹಾಗೂ ಯಾಂತ್ರಿಕ ಶಿಸ್ತುಗಳು ಕೂಡ ಈ ಸಂಪ್ರದಾಯದ ಭಾಗವಾದ್ದರಿಂದ, ಅವರು ಉದ್ದೇಶಪೂರ್ವಕವಾಗಿ ಅವನ್ನು ಉಲ್ಲಂಘಿಸುತ್ತಿದ್ದರು. ಅವು ವಿಧಿಸುವ ಕಟ್ಟುಪಾಡುಗಳನ್ನು ಉಲ್ಲಂಘಿಸುವುದು ಸೃಜನಶೀಲತೆ ಪ್ರಕಟಿಸುವ ಅನಿವಾರ್ಯ ವಿಧಾನವೆಂದು ನಂಬಿದ್ದರು.

ಈ ಹಿನ್ನೆಲೆಯಲ್ಲಿ ಅವರ ಕತೆ-ಕಾದಂಬರಿಗಳಲ್ಲಿ ಬರುವ ನಿರಂಕುಶಮತಿ ತರುಣ-ತರುಣಿಯರ ಪಾತ್ರಗಳನ್ನು ಗಮನಿಸಬೇಕು. ಅವರ ಸಾಹಿತ್ಯದಲ್ಲಿ ಜನಜಂಗುಳಿಯು ಯಾವಾಗಲೂ ಜಡ ಮತ್ತು ನೇತ್ಯಾತ್ಮಕ; ಗುಂಪಿನಲ್ಲಿ ಸೇರದೆ ಒಂಟಿಯಾಗಿರುವ ಸ್ವತಂತ್ರ ಮನೋಧರ್ಮದವರು ವಿಶಿಷ್ಟ ವ್ಯಕ್ತಿಗಳು. ಇವರು ತಮಗೆ ಸರಿ ಕಂಡಂತೆ ಚಿಂತಿಸುವವರು ಹಾಗೂ ಬದುಕುವರು; ವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಊರು ಮನೆ ಬಿಟ್ಟು ಹೊರ ನಡೆದವರು. ಸಂಸಾರದ ನಿತ್ಯ ರಗಳೆಯಿಂದ ತಪ್ಪಿಸಿಕೊಂಡ ಅಲೆಮಾರಿಗಳು.

ಲೋಕದ ಕಣ್ಣಲ್ಲಿ ಪೋಲಿ ಎನಿಸಿಕೊಂಡ ಸಾಮಾಜಿಕವಾಗಿ ಪ್ರತಿಷ್ಠೆಯಿಲ್ಲದವರೇ ಅವರ ಕಥಾನಾಯಕರು. ಇಂತಹವರಿಂದಲೇ ಹೊಸತರ ಸೃಷ್ಟಿ ಸಾಧ್ಯ ಎಂದು ತೇಜಸ್ವಿ ಸಾಹಿತ್ಯ ಧ್ವನಿಸುತ್ತದೆ. ಅಲ್ಲಿ ಪ್ರಯಾಣ ಅಥವಾ ಸುತ್ತಾಟವು ಸೃಜನಶೀಲ ಸಂಗತಿಯಾಗಿದೆ. ನಗರ ಸಂಸ್ಕೃತಿಯಿಂದ ತೇಜಸ್ವಿ ಕಾಡಿನ ಪರಿಸರಕ್ಕೆ ಬರಲು ಇದೂ ಕಾರಣ. ತಮ್ಮಿಚ್ಛೆಯಂತೆ ಹಾರುವ ಬದುಕುವ ಹಕ್ಕನ್ನು ಚಲಾಯಿಸುವ ಹಕ್ಕಿಗಳು ತೇಜಸ್ವಿಯವರಿಗೆ ಪ್ರತೀಕಗಳಾಗಿರುವುದರಿಂದಲೇ, ಅವರು ಅವುಗಳ ಬಗ್ಗೆ ಮತ್ತೆಮತ್ತೆ ಬರೆಯುತ್ತಾರೆ ಎಂದು ಕೆ. ಪುಟ್ಟಸ್ವಾಮಿಯವರು ಅರ್ಥಪೂರ್ಣವಾಗಿ ವ್ಯಾಖ್ಯಾನಸಿರುವರು.

ತೇಜಸ್ವಿ ಪರಿಸರದ ಬಗ್ಗೆ ಬರೆಯುವುದಕ್ಕೂ ಅವರ ಸಾಮಾಜಿಕ ಬಂಡುಕೋರತನಕ್ಕೂ ಸುಪ್ತ ಸಂಬಂಧಗಳಿವೆ. ಇವೆರಡೂ ಆಯಾಮಗಳಲ್ಲಿ ಅವರ ಜೀವನ ಮೀಮಾಂಸೆಯು ಅಡಗಿದೆ. ಅವರ ಬಂಡುಕೋರತನವು ಅವರು ಕನ್ನಡದ ಇಬ್ಬರು ದೊಡ್ಡ ಲೇಖಕರಾದ ಕುವೆಂಪು ಹಾಗೂ ಕಾರಂತರಿಂದ ಪಡೆದ ಕಸುವಾಗಿದೆ. ಜಾತ್ಯತೀತವಾಗಿ ಬದುಕುವ ಮತ್ತು ಸಮಾಜ ಹಾಕುವ ಪ್ರತಿಬಂಧಗಳಾಚೆ ಸ್ವತಂತ್ರವಾಗಿ ಚಿಂತಿಸುವ ಗುಣವನ್ನು ತೇಜಸ್ವಿ ಇವರಿಬ್ಬರಿಂದಲೂ ಪಡೆದರು. ಆತ್ಮ ಶ್ರೀಗಾಗಿ ನಿರಂಕುಶಮತಿಗಳಾಗಿ ಕರೆಯನ್ನು ತೇಜಸ್ವಿ ತಮ್ಮದೇ ರೀತಿಯಲ್ಲಿ ಬದುಕಿದರು.

ತೇಜಸ್ವಿ ಮೂಲತಃ ದಾರ್ಶನಿಕ ಹುಡುಕಾಟದ ಲೇಖಕರಾದರೂ ಬರೆಹವನ್ನು ಜಟಿಲ ಮಾಡಲಿಲ್ಲ ಎನ್ನುವುದು ದೊಡ್ಡ ಸಾಧನೆ. ಇದಕ್ಕೆ ಒಂದು ಕಾರಣ, ಬದುಕನ್ನು ತೇಜಸ್ವಿ ವ್ಯಂಗ್ಯವಾಗಿ ತಮಾಶೆಯಲ್ಲಿ ನೋಡುತ್ತ ಸೃಷ್ಟಿಸಿರುವ ಭಾಷೆ ಮತ್ತು ಕಥನಶೈಲಿ. ಈ ವಿನೋದ ಪ್ರಜ್ಞೆಯು ಅವರ ಸಾಹಿತ್ಯದಲ್ಲಿ ವ್ಯವಸ್ಥೆಯಲ್ಲಿ ಅಡಗಿಕೊಂಡಿರುವ ವೈರುಧ್ಯಗಳನ್ನು ಗುರುತಿಸುವ ಮತ್ತು ವಿಮರ್ಶಿಸುವ ಸಾಧನವಾಗಿ ಒದಗಿತು; ದುರ್ಭರ ಪರಿಸ್ಥಿತಿಯಲ್ಲೂ ಬದುಕನ್ನು ಪಾಸಿಟಿವಾಗಿ ನೋಡುವ ದೃಷ್ಟಿಕೋನವಾಗಿ ಕೆಲಸ ಮಾಡಿತು; ಬರಹಕ್ಕೆ ಲವಲವಿಕೆ ತಂದುಕೊಟ್ಟಿತು. ತೇಜಸ್ವಿಯವರ ಜನಪ್ರಿಯತೆಯು ಸಾಂಪ್ರದಾಯಿಕ ಮನೋಧರ್ಮಕ್ಕೆ ಬದಲು, ವೈಚಾರಿಕ ವೈಜ್ಞಾನಿಕ ಹಾಗೂ ಜೀವನಪ್ರೀತಿಯ ಮೌಲ್ಯಗಳನ್ನು ತುಂಬಿತು ಎನ್ನುವುದು ಮಹತ್ವದ ಸಂಗತಿ.

ಹೊಸತಲೆಮಾರಿನ ಬಹಳಷ್ಟು ಮಂದಿಯಲ್ಲಿ ಸಾಹಿತ್ಯಾಸಕ್ತಿ ಉಳಿದುಕೊಂಡಿದ್ದರೆ ಅದಕ್ಕೆ ಕಾರಣ, ತೇಜಸ್ವಿ ಬರೆಹವು ಅವರಿಗೆ ಯಾವುದೊ ಹಂತದಲ್ಲಿ ಪಠ್ಯವಾಗಿದ್ದುದೇ ಆಗಿದೆ. ಈ ಹೊತ್ತಿಗೂ ಹೊಸತಲೆಮಾರಲ್ಲಿ ಸಾಹಿತ್ಯಾಸಕ್ತಿ ಹುಟ್ಟಿಸಬೇಕೆಂದಿದ್ದರೆ, ತೇಜಸ್ವಿಯವರ ಪುಸ್ತಕಗಳ ಮೂಲಕ ಅದನ್ನು ಶುರುಮಾಡಬಹುದು. ತೇಜಸ್ವಿ ಅವರಂತೆ ಏಕಕಾಲಕ್ಕೆ ಖುಷಿಗಾಗಿ ಓದುವ ಓದುಗರಿಗೂ ಗಂಭೀರ ಜಿಜ್ಞಾಸೆ ಮಾಡುವ ಚಿಂತಕರಿಗೂ ಸಲ್ಲುವ ದ್ವಿಸ್ತರದ ಬರೆಹ ಮಾಡಿ ಯಶ ಕಂಡವರು ಕಡಿಮೆ.

ತೇಜಸ್ವಿ ಸಾಹಿತ್ಯದಲ್ಲಿ ಬದುಕಿನ ದುರ್ಭರ ಸನ್ನಿವೇಶದಲ್ಲೂ ಚೈತನ್ಯ ಪ್ರಕಟಿಸುವ ಸಾಮಾನ್ಯರಿದ್ದಾರೆ. ಆದರೆ ಅವರ ಬರೆಹವು ಈ ದುರ್ಭರತೆಗೆ ಕಾರಣವಾಗಿರುವ ಊಳಿಗಮಾನ್ಯ ಪದ್ಧತಿಯನ್ನು ವಿಮರ್ಶಾತ್ಮಕವಾಗಿ ಕಾಣಿಸುವುದಿಲ್ಲ. ಕುವೆಂಪು ಕಾದಂಬರಿಗಳು ಸಾಮಾನ್ಯರ ಚೈತನ್ಯಶೀಲತೆ ಪ್ರಕಟಿಸುವಾಗ, ಅವರ ಬದುಕನ್ನು ಆವರಿಸಿರುವ ಆರ್ಥಿಕ ಸಾಮಾಜಿಕ ಯಜಮಾನಿಕೆಯ ಕ್ರೌರ್ಯದ ಹಿನ್ನೆಲೆಯನ್ನು ತಪ್ಪದೆ ಚಿತ್ರಿಸುತ್ತವೆ ಎನ್ನುವುದನ್ನು ಇಲ್ಲಿ ನೆನೆಯಬೇಕು.

ವಿಶಿಷ್ಟ ವ್ಯಕ್ತಿಗಳ ಚೈತನ್ಯಶೀಲತೆಯ ಬಗ್ಗೆ ಆಸ್ಥೆಯಿದ್ದ ತೇಜಸ್ವಿ ಅವರಿಗೆ, ಸಮಾಜವನ್ನು ತನ್ನ ಸಂಘಟಿತವಾದ ಕ್ರಿಯೆಯಿಂದ ಬದಲಾಯಿಸುವ ಸಾಮೂಹಿಕ ಚಳುವಳಿಯಲ್ಲಾಗಲಿ ರಾಜಕೀಯ ಕ್ರಿಯೆಯಲ್ಲಾಗಲಿ ನಂಬಿಕೆ ಇರಲಿಲ್ಲ. ಎಂತಲೇ ಅವರ ಬರೆಹದಲ್ಲಿ ಚಳುವಳಿಗಾರರು ವ್ಯಂಗ್ಯಚಿತ್ರಗಳಾಗಿ ಕಾಣಿಸುತ್ತಾರೆ. ಮೇಲಾಗಿ ಅವರ ಸಾಹಿತ್ಯದಲ್ಲಿ ಸಮಾಜದ ಕಟ್ಟುಪಾಡು ಮೀರಿ ಚೈತನ್ಯ ಪ್ರಕಟಿಸುವ ವ್ಯಕ್ತಿಗಳೂ ಸಾಮಾನ್ಯವಾಗಿ ಗಂಡಸರು. ಇದನ್ನು ಮೀರಲೆಂದೊ ಏನೊ ಮಹಿಳೆಯರೆ ನಾಯಕಿಯರಾಗುವ ಕೃತಿಗಳನ್ನು ಕೊನೆಯ ಘಟ್ಟದಲ್ಲಿ ರಚಿಸಿದರೂ, ಅದು ಅವರ ಸಹಜ ಲಯಗಾರಿಕೆಯ ಬರೆಹವೆನಿಸುವುದಿಲ್ಲ.

ಯೂರೋಪಿನ ಆಧುನಿಕತೆ ವೈಚಾರಿಕತೆ ವೈಜ್ಞಾನಿಕ ಶೋಧಕ ಗುಣ ಇವುಗಳ ಬಗ್ಗೆ ಒಲವಿದ್ದ ತೇಜಸ್ವಿ ಅವರಿಗೆ, ಯೂರೋಪು ತನ್ನ ಬಂಡವಾಳಶಾಹಿ ವ್ಯವಸ್ಥೆಯ ಭಾಗವಾಗಿ ಹೇಗೆ ಬಡದೇಶಗಳ ಸಂಪತ್ತಿನ ದೋಚುವಿಕೆಗೂ ಹಿಂಸೆಗೂ ಕಾರಣವಾದ ಚರಿತ್ರೆಯ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಯೂರೋಪಿನ ಬಗ್ಗೆ ಅವರೆಷ್ಟು ಪಾಸಿಟಿವಾಗಿದ್ದರು ಎಂದರೆ, ಪ್ರಸ್ತುತ ಭಾರತದ ರಾಜಕಾರಣದ ಬಗ್ಗೆ ಬಹಳ ವಿಮರ್ಶೆಗೆ ಅದೊಂದು ನಿಕಷವಾಗಿತ್ತು. ಕಾರಂತರ ‘ಅಪೂರ್ವ ಪಶ್ಚಿಮ’ದ ಪರಿಕಲ್ಪನೆಯೂ ಇಂತಹುದೇ. ‘ಅವರತಬರನ ಕತೆ’ಯು ಮಾನವೀಯ ಸಂವೇದನೆ ಕಳೆದುಕೊಂಡಿರುವ ಭಾರತೀಯ ಆಡಳಿತಶಾಹಿಯನ್ನು ವಿಮರ್ಶಿಸುತ್ತಲೇ, ಪರೋಕ್ಷವಾಗಿ ವಸಾಹತುಶಾಹಿ ಕಾಲದ ಆಡಳಿತ ವ್ಯವಸ್ಥೆಯ ಬಗ್ಗೆ ಸಣ್ಣದಾಗಿ ಮೂಡಿಸುವ ಮೆಚ್ಚುಗೆಯನ್ನು ಗಮನಿಸಬೇಕು.

ಕಳೆದರ್ಧ ಶತಮಾನದ ಕರ್ನಾಟಕ ಬದುಕಿನಲ್ಲಿ ತಮ್ಮ ಬರೆಹ ಮಾತು ಕ್ರಿಯೆಗಳ ಮೂಲಕ ವಾಗ್ವಾದ ಹುಟ್ಟಿಸಿ, ಜನರ ಮನಸ್ಸನ್ನು ಕಟ್ಟಿದ ತೇಜಸ್ವಿ, ನಂಜುಂಡಸ್ವಾಮಿ, ಲಂಕೇಶ್, ಕೆ. ರಾಮದಾಸ್ ನಿರ್ಗಮಿಸಿದರು. ಸದಾ ಹುಡುಗುತನದಲ್ಲಿ ಲೋಕವನ್ನು ನೋಡುತ್ತ, ಜೀವಂತಿಕೆಯಿಂದ ಬರೆಯುತ್ತ, ಓದುಗರನ್ನು ವ್ಯಾಮೋಹಕ್ಕೆ ಒಳಪಡಿಸಿದ್ದ ತೇಜಸ್ವಿ ಇಲ್ಲವಾಗಿದ್ದು ಒಂದು ಆಘಾತ. ಅನಿಸಿದ್ದನ್ನು ನೇರವಾಗಿ ಹೇಳುತ್ತಿದ್ದ, ನಾಗರಿಕ ಶಿಷ್ಟಾಚಾರಗಳನ್ನು ಗೇಲಿ ಮಾಡುತ್ತಿದ್ದ, ಸಭೆಗಳನ್ನು ದೂರವಿಟ್ಟಿದ್ದ, ನಗರಗಳನ್ನು ಇಷ್ಟಪಡದಿದ್ದ, ವಿದೇಶಿ ಪ್ರವಾಸಕ್ಕೆ ಬಯಸದ, ಕೆಲವೊಮ್ಮೆ ಅಸೂಕ್ಷ್ಮವವಾಗಿ ವಾದ ಮಾಡುತ್ತಿದ್ದ ಹಾಗೂ ತಮಗೆ ಸರಿ ಕಂಡಂತೆ ಬದುಕಿದ ತೇಜಸ್ವಿ, ಕರ್ನಾಟಕ ಕಂಡ ವಿಶಿಷ್ಟ ಸಾರ್ವಜನಿಕ ವ್ಯಕ್ತಿಯಾಗಿದ್ದರು.

ಖಾಸಗಿ ಬದುಕು ಹಾಗೂ ವ್ಯಕ್ತಿ ವಿಶಿಷ್ಟತೆಯನ್ನು ರಕ್ಷಿಸಿಕೊಳ್ಳಲೆಂದೇ ಒರಟುತನ ರೂಢಿಸಿಕೊಂಡಂತಿದ್ದ ತೇಜಸ್ವಿ, ಆಳದಲ್ಲಿ ಸೂಕ್ಷ್ಮ ಸಂವೇದನೆಯ ಮಾನವೀಯ ಲೇಖಕರಾಗಿದ್ದರು. ಸಾಹಿತ್ಯ ಸಂವೇದನೆಗೆ ಹೊರತಾದ ಓದುಗರು ರಾಜಕೀಯ ಸಿದ್ಧಾಂತಕ್ಕಾಗಿ ಹೆಣೆದ ಬರೆಹಗಳನ್ನು ಹೊತ್ತು ತಿರುಗುತ್ತಿರುವ ಹೊತ್ತಲ್ಲಿ, ಅವರ ಸಾಹಿತ್ಯವು ನಿರ್ವಹಿಸಿರುವ ಸಾಂಸ್ಕೃತಿಕ ಹೊಣೆಗಾರಿಕೆ ಬಹಳ ದೊಡ್ಡದು.

‍ಲೇಖಕರು Avadhi

April 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: