ರವಿಕುಮಾರ್ ಟೆಲೆಕ್ಸ್
ದೇವರು ಹುಟ್ಟಿದ್ದ
ಇಲ್ಲೆಲ್ಲಾ ನಡೆದಾಡಿದ್ದ ಎಂದಿದ್ದರಲ್ಲವೆ?!
ಈ ದೇವ ನೆಲವೆಲ್ಲಾ ಈಗ
ಹಿಂಸೆಯ
ಕುದಿವ ಕುಲುಮೆ
ಪ್ರೇಮವನ್ನೂ
ಕರುಣೆಯನ್ನೂ
ಕ್ಷಮೆಯನ್ನೂ ಶಿಲುಬೆಗೇರಿಸಲಾಗಿದೆ
ಇಸ್ಲಾಂ
ಯಹೂದಿ
ಕ್ರಿಶ್ಚಿಯನ್ನೋ… ಧರ್ಮವೆಂಬ
ಧರ್ಮಗಳೆ ನಿಗಿನಿಗಿ ಬೇಯುವುದು
ಗಾಯಗೊಂಡವರ
ಎಲ್ಲವನ್ನೂ ಕಳಕೊಂಡವರ
ಆಕ್ರಂದನ ಸಾವಿನ ಸಾಮ್ರಾಟರಿಗೆ
ದರವೇಶಿಯ ಹಾಡಿನಂತೆ ಕೇಳಿಸುತ್ತಿರಬಹುದು
ಅವರು ಉನ್ಮತ್ತಗೊಳ್ಳುತ್ತಾರೆ
ರಕ್ತಕ್ಕಾಗಿ; ತಾಯಿ ಮಕ್ಕಳ ನರಳಾಟಕ್ಕಾಗಿ
ಪರಮ ಪ್ರವಾದಿಗಳ ಪಾದಗಳನ್ನು
ಎಳೆಮಕ್ಕಳ ರಕ್ತ – ಕಣ್ಣೀರಿನಿಂದ
ತೊಳೆಯುವುದು ಇಲ್ಲಿ ಮಾತ್ರ

ಸ್ವರ್ಗ ಸೇರುವ ದಾರಿಗಳಿಗೆಲ್ಲಾ
ಹೆಣಗಳ ತೋರಣ ಶೃಂಗಾರ
ಮದ್ದು- ಗುಂಡು ಸಿಡಿತಲೆಗಳ ಸದ್ದು
ಅಧಿಕಾರ ಗದ್ದುಗೆಗಳ ಅಬ್ಬರದೊಳಗೆ
ಮಿನಾರು- ಶಿಲುಬೆ
ಪ್ರಾರ್ಥನೆ ಯ ಪವಿತ್ರಗೋಡೆಗಳೂ
ಮರುಗಿ ನಲುಗಿ ಅಳುವುದು
ಮನುಷ್ಯರಿಗೆ ಮಾತ್ರ ಕೇಳಿಸುತ್ತದೆ
ಸೈತಾನರಿಗಲ್ಲ;
ಈ ನೆಲದಲ್ಲಿನ್ನು ರಸತುಂಬಿ ಗೊನೆ ತೂಗುವ
ಖರ್ಜೂರದ ಮರಗಳು ಹುಟ್ಟಲಾರವೇನೋ!
ಗುಲಾಬಿ ಹೂಗಳು ಅರಳಲಾರವೇನೋ!
ಸುಗಂಧ ಹೊತ್ತ ಗಾಳಿ ಬೀಸಲಾರದೇನೋ!






0 Comments