ಡಾ ನಿರ್ಮಲಾ ಬಟ್ಟಲ
ವಿಶ್ವ ರಂಗಭೂಮಿಯ ದಿನಾಚರಣೆಯ ನಿಮಿತ್ಯ ಬೆಳಗಾವಿಯ ರಂಗಸಂಪದವು ಹಮ್ಮಿಕೊಂಡಿದ್ದ ಮೂರು ದಿನಗಳ ನಾಟಕೋತ್ಸವವನ್ನು ಹಮ್ಮಿಕೊಂಡಿತ್ತು. ದಿನಾಂಕ ೨೭.೩.೨೦೨೨ರಂದು ಬೆಂಗಳೂರಿನ ಅನನ್ಯ ತಂಡವು ಪ್ರಸ್ತುತ ಪಡಿಸದ ನಾಟಕ ಉಚ್ಚಿಷ್ಟ
ರಂಗಪ್ರೇಕ್ಷಕರನ್ನು ಆಕರ್ಷಿಸಿತು. ಸೇತುರಾಮ ಅವರು ಬರೆದು ನಿರ್ದೇಶನ ಮಾಡಿ, ಅಭಿನಯಿಸಿದರು. ಹೆಚ್ಚಿನ ರಂಗಾಡಂಬರವಿಲ್ಲದೆ, ಕೇವಲ ನಾಲ್ಕು ಪಾತ್ರಗಳಲ್ಲಿ ನಾಟಕವನ್ನು ಯಶಶ್ವಿಯಾಗಿ ಕಟ್ಟಿಕೊಟ್ಟರು.
ಹೆಣ್ಣಿನ ಅಸಹಾಯಕತೆ ಗಂಡಿನ ದೌರ್ಬಲ್ಯದ ಮೂಲ ಎಳೆಯ ಮೇಲೆ ಉಚ್ಚಿಷ್ಟದ ಕಥಾಹಂದರ ವಿಸ್ತಾರವಾಗುತ್ತದೆ. ವಿಶ್ವವಿದ್ಯಾಲಯಗಳಲ್ಲಿ, ಸಾಹಿತ್ಯಿಕ ವಲಯಗಳಲ್ಲಿ ಬೌಧ್ಧಿಕ ಸಾಂಗತ್ಯ ಎನ್ನುವ ಹೆಸರಲ್ಲಿ ನಡೆಯುವ ವಿಶ್ಲೇಷಣೆ ಬೌಧ್ಧಿಕ ಹಾದರದ ಚಿತ್ರಣವನ್ನು ಬಿಚ್ಚಿಡುತ್ತದೆ. ಗಂಡ ಇನ್ನೊಂದು ಹೆಣ್ಣಿನ ಜೊತೆಗೆ ಸಂಬಂಧ ಹೊಂದಿದ್ದರು ಅದನ್ನು ಪ್ರಶ್ನಿಸದೆ ಅವನ ಆಸ್ತಿ ಅಂತಸ್ತು ಹಣಕ್ಕಾಗಿ ಗಂಡನ ತಪ್ಪನ್ನು ಕಂಡು ಕಾಣದಂತೆ ಸುಮ್ಮನಿರುವ ಪ್ರೋಪೆಸರ್ ಹೆಂಡತಿಯದು ಒಂದು ರೀತಿಯ ಬೌಧ್ಧಿಕ ಹಾದರ.
ಉನ್ನತ ಸ್ಥಾನಮಾನ, ರಾಜಕೀಯ ಪ್ರಭಾವವಿರುವ, ಸಾಹಿತ್ಯಿಕ ವಲಯದಲ್ಲಿ ಹೆಸರು ಮಾಡಿದ ವ್ಯಕ್ತಿಯ ಅನೈತಿಕ ಸಂಬಂಧವನ್ನು ಕಂಡರು ಸಮಾಜ ಜಾಣ ಕುರುಡುವಹಿಸಿ ಅದನ್ನು ಗೌರವಿಸುವುದು ಹಾದರವೆ. ಹೆಣ್ಣು ಗಂಡು ಕೂಡಿ ತಪ್ಪು ಮಾಡಿದರೂ ಸಮಾಜ ಮಾತ್ರ ಹೆಣ್ಣಿಗೆ ಹಾದರದ ಪಟ್ಟ ಕಟ್ಟುತ್ತದೆ ಎನ್ನುವ ಪ್ರಶ್ನೆ ಎತ್ತುವ ವಿಶ್ವವಿದ್ಯಾಲಯದ ಪ್ರೊಪೆಸರ್ನ ಕೃಪೆಗೆ ಒಳಗಾಗಿರುವ ಅವಳ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಂಡ ಪ್ರೊಪೆಸರ್ ತೋರುವ ಆಮಿಶಗಳು ಒಂದೆಡೆಯಾದರೆ, ಬೆಳೆದ ಮಗಳು ಕೇಳುವ ಪ್ರಶ್ನೆಗಳು ಇನ್ನೊಂದುಕಡೆ.
ಬಯಸಿದರೋ ಹೊರಬರಲಾರದ ಜಾಲದಲ್ಲಿ ಸಿಕ್ಕಿಸಿ ಇಬ್ಬರು ಹೆಣ್ಣು ಮಕ್ಕಳನ್ನು ಶೋಷಿಸುವ ಮುದಿ ಪ್ರೊಪೆಸರ್ ಒಡ್ಡುವ ಒತ್ತಡಗಳು, ಬೆದರಿಕೆಗಳನ್ನು ಆಮಿಷಗಳನ್ನು ಮೀರಿ ಅವನಿಂದ ಬಿಡುಗಡೆ ಬಯಸುವ ತಾಯಿ ಗಟ್ಟಿಗಿತ್ತಿಯಾಗಿ ಕಾಣುತ್ತಾಳೆ. ಪರಿಣಾಮಕಾರಿಯಾದ ಸಂಭಾಷಣೆ, ನಾಲ್ಕು ಜನ ಪಾತ್ರಧಾರಿಗಳ ಮನೋಜ್ಞ ಅಭಿನಯ, ಸರಳವಾದ ರಂಗಸಜ್ಜಿಕೆ, ಬೆಳಕು, ಹಿನ್ನಲೆ ಸಂಗೀತ ರಂಗದ ಮೇಲೆ ನಾಟಕ ಮುಗಿದರೂ ಪ್ರೇಕ್ಷಕನ ಮನೋರಂಗದಲ್ಲಿ ಮರುಪ್ರಸಾರವಾಗುತ್ತ ಚಿಂತನೆಗೆ ಒಡ್ಡುತ್ತವೆ.
0 ಪ್ರತಿಕ್ರಿಯೆಗಳು