-ಶಿವಾನಂದ ತಗಡೂರು
(ಗಾಜಾ ಗಡಿಯಲ್ಲಿ ನಿಂತು
ಗಾಜಾ ಸ್ಥಿತಿಗೆ ಮರುಗಿ ಬರೆದದ್ದು…)
—
ನೆತ್ತರು…
ನೆತ್ತರು ಬಸಿದ ಜಾಗವದು
ಇನ್ನೂ ದಾಹ ತಣಿದಿಲ್ಲ
ಯುದ್ಧೋನ್ಮಾದ ನಿಂತಿಲ್ಲ…
ಗಾಂಜಾ, ಅಫೀಮುಗಳಂತೆ
ಯುದ್ಧದ ಮತ್ತೇರಿದೆ ಮನಕೆ
ಪಾತಕ ಉನ್ಮಾದ
ನಿತ್ಯವೂ ಬಲಿ
ಸಾವಿನದ್ದೆ ಲೆಕ್ಕ
ಸಾಕಾಗುತ್ತಿಲ್ಲ, ಧಣಿ ತಣಿಸಲು!
ಧರ್ಮಾಂಧರಿಗೆ
ಹೃದಯವಿರದು
ಕೊಂದಷ್ಟು ನಿಮ್ಮ
ಹಸಿವು ನೀಗದು
ನೋವಿನ ಚೀರಾಟಗಳಿಗೆ
ಕಿವಿ ಕಿವುಡು, ಕಣ್ಣು ಕುರುಡು
ಆರ್ತನಾದ ಸಂಗೀತ
ಕದನಕ್ಕೂ ದೇಶ ನೆಪ
ಎಲ್ಲೆಲ್ಲೂ ಆಕ್ರಮಣದ್ದೇ ಜಪ
ನಾವೇ ಗೆದ್ದೆವೆಂಬ ಹಮ್ಮು-ಬಿಮ್ಮು
ಕ್ಷಿಪಣಿ, ಮಿಸೈಲ್ಗಳು
ನಿತ್ಯವೂ ರೇಸಿಗಿಳಿದಿವೆ
ಬೇಟೆಗೆ
ಮೃತ್ಯು ರಣ ಕೇಕೆ
ರಣ ಭೂಮಿಯಲ್ಲಿ
ಹಸಿರು ಕೂಡ, ನೆತ್ತರುಂಡು ಬಸಿರಾಗಿದೆ.






0 Comments