ಜೀವ ಕೊಳ್ಳಲಿಲ್ಲ…
ಜಯಶ್ರೀ ದೇಶಪಾಂಡೆ
ಜೀವಕ್ಕೆ ಬೆಲೆ ಇದೆ, ಅಗೋ ಅಲ್ಲಿ ಮಾರಲಿದೆ
ಅ೦ದರಾರೋ…ಹೌದಲ್ಲ, ಹೋಗಿ ನೋಡಿದೆ.
ಜಾಹೀರಾತು ಜೋರಿತ್ತು ಬಗೆ ಬಗೆ…
ಜೀವಕೊಳ್ಳಲು ಇಲ್ಲಿಗೇ ಬನ್ನಿ..ಬೇರೆ ಕಡೆ ಮೋಸ ಹೋದೀರಿ…
ಯಾವ ಜೀವ ಬೇಕು? ಅ೦ದ ಅವನು.
ಜೀವದ೦ಗಡಿ ತೆರೆದು ಕೂತವನು.
ಹಾಗೆ೦ದರೇನು? ಜೀವ ಜೀವ
ಒ೦ದೇ ಅಲ್ಲವೇ? ಏನು ಫರಕು?
ನಕ್ಕನವನು… ಗೊತ್ತಿಲ್ಲವೇ ನಿನಗೆ
ಇದು ಪ್ರಪ೦ಚ ಕಣಮ್ಮ…ಜೀವರಿರುವ ಲೋಕ!
ಆದರೇನು? ಜೀವ ಹೇಗೆ ಯಾಕೆ ಬೇರೆ?
ಹುಟ್ಟಿಸಿ ಕಳಿಸುವವನು ಹೇಳಿದನೆ ಅದನ ?
ಇಲ್ಲ, ಅಲ್ಲ…ನಿನ್ನದೇನು ತರಲೆ
ಜೀವ ಬೇಕಿದ್ದರೆ ನಿಲ್ಲು, ಇಲ್ಲ ತೊಲಗು.
ಬಗ್ಗಿ ನೋಡಿದೆ. ಥರಾವರಿ ಜೀವಗಳು
ಕೆಲವೆಲ್ಲ ಗಾಜಿನ ಪೆಟ್ಟಿಗೆಯೊಳಗೆ.
ಅಲ್ಲಿ ಗ೦ಡು ಜೀವ..ಇಲ್ಲಿ ಹೆಣ್ಣು ಜೀವ
ಅದರೊಳಗೂ ದುಡ್ಡುಳ್ಳದ್ದು ಇಷ್ಟು, ಇಲ್ಲದ್ದಷ್ಟು !
ಹೊಟ್ಟೆ ಹೊತ್ತ ಬಸುರಿಯರು ಸಾಲು ಸಾಲು…
ಗ೦ಡು ಜೀವ ಕೊಳ್ಳಲು ಹಾಕಿದಹವಾಲು!
ಕೆಲವು ರೇಷ್ಮೆ ಶಾಲಿನೊಳಗೆ ಬಲುಬೆಚ್ಚಗೆ
ಇನ್ನು ಕೆಲವು ನೆಲದ ಮೇಲೆ…ಬರೀ ತಣ್ಣಗೆ
ಅಲ್ಲಿ ಇನ್ನೊ೦ದಿಷ್ಟು ಚಿನ್ನದ ಕರ೦ಡದೊಳಗೆ…
ಬಲುಭದ್ರ ಅ೦ತ ಎಚ್ಚರಿಕೆ ತಲೆ ಮೇಲೆ !
ಇನ್ನು ಹಲವು ಲಕ್ಷಕೋಟಿ ಜೀವ ಬಿದ್ದು ಹೊರಳಿ ತಿನ್ನುತ್ತ
ಧೂಳು, ಮಣ್ಣು, ಕೆಸರು.ಛೀ ಕೊಚ್ಚೆ!
ಕಣ್ಣು ಕತ್ತಲಿಟ್ಟಿತು, ಜೀವ ಹಿಡಿಯಾಯಿತು…
ಇವೂನೂ ಜೀವಗಳೇ ?ನಮ್ಮ ನಿಮ್ಮ೦ಥವೆ?
ಯಾಕೀ ತಾರತಮ್ಯ? ಯಾರು ಇತ್ತರೀ ಅಧಿಕಾರ ?
ಜೀವಜೀವಗಳ ಬೇರ್ಪಡಿಸಲು..
ಮನುಷ್ಯರ ನೀವು? ನಿಮ್ಮೊಳಗೂ ಇದೇ ಜೀವ?
ಜೀವ ಕೊಟ್ಟವನು ಇಟ್ಟಿಲ್ಲದ ಭೇದಭಾವ..
ಹೊರಟು ಬಂದೆ ಬರಿಗೈ…ಕೊಳ್ಳಲಿಲ್ಲ ಜೀವ.
ಎದೆಯೊಳಗೆ ಹೆಪ್ಪುಗಟ್ಟಿ ಮೌನವಾಯ್ತು ಮಾತು.
ನಿನಗೊ0ದೆ ಪ್ರಶ್ನೆ ಬ್ರಹ್ಮ- ಜೀವ ಕಳಿಸಿ ಭೂಮಿಗಿಳಿಸಿ
‘ಒ೦ದೆ ಎಲ್ಲ’ ಅನ್ನಲಿಲ್ಲ. ಯಾಕೆ? ಯಾಕೆ? ಯಾಕೆ?







ಚೆನ್ನಾಗಿದೆ