ಗಜಲ್
– ವೀರಣ್ಣ ಮಂಠಾಳಕರ್
ಹೇಳದೇ ಇರುವ ಮಾತುಗಳು ಮೌನದಲ್ಲೇ ಸತ್ತು ಹೋದರೆಷ್ಟು ಚೆಂದ ಸಖಿ
ನೀ ಕೇಳದಿದ್ದರಷ್ಟೇ ಸಾಕು ಈಗಿರುವ ಪ್ರೀತಿ ಚಿರಶಾಶ್ವತವಾಗುಳಿಯುವುದು ಸಖಿ
ನಿನ್ನ ಪ್ರೀತಿಗಾಗಿ ನೂರೆಂಟು ವಿಘ್ನಗಳು ಎದುರಾದರೂ ಎದೆಗುಂದುವುದಿಲ್ಲ ಸಖಿ
ಬರ ಸಿಡಿಲೇ ಬಡಿದು ಈ ಜೀವ ಕಳೆದು ಹೋದರೂ ಕಣ್ಣೀರು ಸುರಿಸಬೇಡ ಸಖಿ

ಪ್ರಾಣಕ್ಕೆ ಬೆಲೆಯಿಲ್ಲ ಜಗದೊಳಗೆ ಬದುಕಿದ್ದರೆಷ್ಟು, ಸತ್ತು ಸ್ಮಶಾನ ಹೋದರೇನು ಸಖಿ
ನಿನಗೊಬ್ಬಳಿಗೆ ತಿಳಿದಿದೆ ನನ್ನ ಬೆಲೆ ಗೊತ್ತಿಲ್ಲದವರಿಗೆ ನಾ ಬರೀ ನಿರ್ಜೀವ ವಸ್ತು ಸಖಿ
ಏನಾಗಿದೆ? ಎಂದು ಕೇಳಲೇಬೇಡ, ಮತ್ತೇರಿದಂತೆ ಮಾತನಾಡುತ್ತಿರುವೆ ಎನ್ನದಿರು ಸಖಿ
ಸಾಕಿಯ ಮನೆಗ್ಹೋಗಿ ಅದೇಷ್ಟೋ ದಿನಗಳಾದವು ಮಧು ಬಟ್ಟಲನ್ನು ಕಂಡು ಸಖಿ
ಹಗುರಗೊಳ್ಳಲೆಂದು ಮಾತಿಗಿಳಿದೆ ಹೇಳಲಾಗದೆ ಮೂಕವಾಯಿತು ಮನವು ಸಖಿ
ಎಲ್ಲರ ವಿರಹ ನನಗಿಂತ ಭಿನ್ನವೆಂದರಿತ ಪ್ರಜ್ಞೆ ಶೀಲ ಕರುಣೆ ಬಡಿದೆಚ್ಚರಿಸಿದವು ಸಖಿ
ಹೋಗಿ ಬಿಡು ಹೋಗುವುದಾದರೆ ಯಾರ ಕಣ್ಣಿಗೂ ಕಂಡು ಕಾಣದಂತೆ ‘ವೀರ’
ಯಾರ ಮನಸ್ಸಿಗೂ ನನ್ನ ಹೆಸರು ನೆನಪಾದಂತೆ ದಾರಿಗಳೆಲ್ಲ ಮುಚ್ಚಿಬಿಡು ಸಖಿ






ಯಾರ ಮನಸ್ಸಿಗೂ ನನ್ನ ಹೆಸರು ನೆನಪಾದಂತೆ ದಾರಿಗಳೆಲ್ಲ ಮುಚ್ಚಿಬಿಡು ಸಖಿ…..fine
koneya saalali ‘nenapaagadante’ irabekitteno…nice gazal..