‘ಅವಧಿ’ಯಲ್ಲಿ ಟಿ ಎನ್ ಸೀತಾರಾಂ ಹಾಕಿಕೊಂಡ ಆ ಚಪ್ಪಲಿ ಬರಹವನ್ನು ಪ್ರಕಟಿಸಿದ್ದೆವು. ಅದು ಎಷ್ಟು ಮನ ಕಲಕುವಂತಿತ್ತು ಎಂದರೆ ಸೀತಾರಾಂ ಅವರು ಬಯಸಿದ ಆ ಕೆಂಪು ಪಟ್ಟಿ ಇರುವ ಚಪ್ಪಲಿಯನ್ನು ಈಗ ನಾವೂ ಹುಡುಕುತ್ತಿದ್ದೇವೆ..
ಈ ಬರಹ ಅನೇಕರನ್ನು ಕಾಡಿದೆ. ಇದರ ಪರಿಣಾಮವಾಗಿ ಬಂದ ಇನ್ನೆರಡು ಕಥನಗಳನ್ನೂ ಪ್ರಕಟಿಸಿದ್ದೆವು .
ಈಗ ಹೊಸ ಕಥನ ರಾಜಕುಮಾರ್ ಮಡಿವಾಳರ ಅವರಿಂದ ಇಲ್ಲಿವೆ
ಜಯಂತ ಕಾಯ್ಕಿಣಿ ಅವರ ಪಾರ್ಲರ್ ಗೆ ಬಂದ ಪ್ರತಿಕ್ರಿಯೆ ಯ ಸುರಿಮಳೆ ಹೇಗಿತ್ತು ಎನ್ನುವುದು ನಿಮಗೆ ಗೊತ್ತು.
ಈಗ ಟಿ ಎನ್ ಸೀತಾರಾಂ ಅವರ ಚಪ್ಪಲಿ ಅನುಭವ ಇದೆ.
ಬನ್ನಿ ನಿಮ್ಮೊಳಗೆ ಇರುವ ಚಪ್ಪಲಿ ಕುರಿತ ಅನುಭವಗಳನ್ನು ಬರೆಯಿರಿ
[email protected] ಗೆ ಕಳಿಸಿಕೊಡಿ
ರಾಜಕುಮಾರ್ ಮಡಿವಾಳರ
ಅವು ಮಧ್ಯಾಹ್ನ ಉಂಡರೆ ರಾತ್ರಿ ಊಟಕ್ಕೆ ಪರದಾಡುವ ದಿನಗಳು, ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಕನಸು ಅವ್ವನಿಗೆ ಇರಲಿಲ್ಲ. ಅವಳಿಗೆ ಇದ್ದದ್ದು ಹಿಟ್ಟು ಬೇಯಿಸಿ ಉಣಿಸಲು ಹಿಟ್ಟು ಬಿಳಿ ಹಿಟ್ಟಿನ ಹುಡಿ ಹುಡಿ ಪುಡಿ ಪುಡಿ ಕನಸು.
ಶಾಲೆಗೆ ಕಳಿಸಬೇಕಾದರೆ ಡಬ್ಬಿಗೇನು ಕಟ್ಟಬೇಕು? ಅನ್ನುವ ಪ್ರಶ್ನೇ.
ಅಪ್ಪ ತುಸು ಬೀಸು ಮನುಷ್ಯ, ಅವನಿಗೆ ಹೊಟ್ಟೆಗಿಂತ ಮಗ ಬರಿಗಾಲಲ್ಲಿ ಶಾಲೆಗೆ ಹೊರಟಿರುವದ ನೋಡಲಾಗದ ಸಂಕಟ.
ಆ ಬಡತನ ಅಣಕಿಸುವಂತೆ ನನ್ನವು ಅಪ್ಪನ ಬೀಸಿಗಿಂತಲೂ ತುಸು ದೊಡ್ಡ ಪಾದ! 4 ನಂಬರ್ ಚಪ್ಪಲಿಗೆ ಇಪ್ಪತ್ತು ರೂಪಾಯಿ ನನ್ನವು 5 ನಂಬರ್ ಇಪ್ಪತ್ತೈದು ರೂಪಾಯಿ, ಅದೆಂಗೋ ಗೋತ್ತಿಲ್ಲ! ನಾನು ಶಾಲೆ ಸೇರಿಸುವ ಅಕ್ಟೋಬರ್ ರಜೆ ಮುಗಿಸಿ ಸರಿಯಾಗಿ ನವೆಂಬರ್ 2ನೇ ತಾರೀಖಿನ ದಿನ 5ನಂಬರ್ರಿನ ಪ್ಯಾರಾಗಾನ್ ಹವಾಯಿ ಚಪ್ಪಲಿ ತಂದಿಟ್ಟ ಅಪ್ಪ. ಅವತ್ತಿನ ನನ್ನ ಸಡಗರ ಇವತ್ತಿನ ತನಕ ಯಾವ ಹಬ್ಬವೂ ತಂದು ಕೊಟ್ಟಿಲ್ಲ.
ಆ ಚಪ್ಪಲಿ ನಾನು ಮೆಟ್ಟಿದ್ದು ಬರೊಬ್ಬರಿ 3 ವರ್ಷ! ಕಿತ್ತ ಉಂಗುಷ್ಟಕ್ಕೆ ಸೇಫ್ಟಿ ಪಿನ್ನು ಸಿಕ್ಕಿಸಿದ್ದರ ಲೆಕ್ಕ ನನಗೆ ಗೊತ್ತಿಲ್ಲ,ಅವ್ವನ ಹತ್ತಿರವಾಗಲಿ ಇಲ್ಲ. ಭಾನುವಾರಕ್ಕೊಮ್ಮ ಸ್ವಚ್ಚವಾಗಿ ತೊಳೆದು ಅಕ್ಷರಶಃ ಅಂಗಿ ತುದಿಯಿಂದ ಒರೆಸಿ, ಬಿಸಿಲಿಗೆ ಒಣಗಿಸಿ, ನಂತರ ಚಪ್ಪಲಿಯನ್ನ ತೊಡೆದ ಮೇಲಿಟ್ಟುಕ್ಕೊಂಡು ಬೆನ್ನು ಮೇಲಾಗಿಸಿ ಮಲಗಿಸಿ, ಅದರ ಬೆನ್ತುಂಬ ಚುಚ್ಚಿರುವ ಸಣ್ಣ ಮುಳ್ಳು ಚಿಕ್ಕ ಹರಳು ತೆಗೆವ ಸಂಭ್ರಮ!
ಈ ಶ್ರದ್ಧೆ ಆಗ ಓದಿನ ಮೇಲೆ ಕೂಡ ಇರಲಿಲ್ಲ ಅನ್ನುವುದು ನೀವು ನಂಬಬೇಕು.
ಅದೊಂದು ದಿನ ಅಮಿತಾಬಚ್ಚನ್ ಅವರ್ “ಹಮ್” ಸಿನಿಮಾ ನೋಡುತ್ತಿದ್ದೆ, ಅದರಲ್ಲಿ ಅಣ್ಣನಾದ ಅಮಿತಾಭ್ ಕೊನೆಯ ತಮ್ಮನ್ನ ಮದುವೆಗೆ ಹೆಣ್ಣು ಕೇಳಲು ಮಿಲ್ಟ್ರಿ ಆಫೀಸರ್ ವೇಷದಲ್ಲಿ ಬರುತ್ತಾನೆ. ಹಾಗೆ ಬಂದವನು ಬೀಗನಾದ ಖಾದರಖಾನ್ ಎದುರು ಕಾಲಮೇಲೆ ಕಾಲು ಹಾಕಿ ಕಾಲು ಕುಣಿಸುತ್ತ ಕೂತಾಗ ಖಾದರಖಾನ್ ದೃಷ್ಟಿ ಅಮಿತಾಭ್ ಬೂಟಿನ ಮೇಲೆ ಬೀಳುತ್ತದೆ.
ಬೂಟಿನ ಒಂದು ತುದಿ ಹರದಿದ್ದು ಕಂಡು “ಒಬ್ಬ ಮನುಷ್ಯನ ಯೋಗ್ಯತೆ ಆತನ ಬಟ್ಟೆಯಿಂದಲ್ಲ ಆತನ ಚಪ್ಪಲಿಯಲ್ಲಿ ಗೊತ್ತಾಗುತ್ತದೆ! ಇಷ್ಟು ಶಿಸ್ತಿನ ಉಡುಗೆ ಅಲ್ಲ ನಿಮ್ಮ ಹರಿದ ಬೂಟು ನಿಮ್ಮ ಯೋಗ್ಯತೆ ಹೇಳುತ್ತಿದೆ, ನೀವು ಅಸಲಿ ಆಫಿಸರ್ ಅಲ್ಲ ನಿಮಗೆ ಮಗಳನ್ನು ಕೊಡುವುದಿಲ್ಲ ಎದ್ದು ಹೊರಡಿ” ಈ ಡೈಲಾಗ್ ಕೇಳಿ ಈ ಚಪ್ಪಲಿಯ ಯೋಗ್ಯತೆ ನನ್ನ ಎದೆಯ ಪಾದದಲ್ಲಿ ಅಚ್ಚಾಗಿ ಕುಳಿತಿತು.
ದರಿದ್ರ ದಿನಗಳು ಒಂದು ಮಟ್ಟಿನ ಚಂದಕ್ಕೆ ಬಂದವು, ಮನೆಮಂದಿಯರೆಲ್ಲ ಪಾದ ಚಪ್ಪಲಿ ಕಂಡವು! ನನಗೆ ಮಗ ಹುಟ್ಟಿದ ಸುದ್ದಿ ಕೇಳಿದಾಗ ನಾನು ಮಗನನ್ನು ನೋಡಲು ಆಸ್ಪತ್ರೆಗೆ ಹೋಗಿದ್ದು just born baby ಸೈಜಿನ ಬಟ್ಟೆಯಿಂದ ತಯಾರಿಸಿದ ಬಣ್ಣದ ಚಪ್ಪಲಿ ಸಹಿತ! ಮತ್ತು ಯಾರದೇ ಪುಟ್ಟ ಮಕ್ಕಳಿಗೆ ನಾನು ಒಯ್ಯುವ gift ಇಂತಹ ಬಣ್ಣದ ಚಪ್ಪಲಿ.
“ಮನೆ ಮುಂದಿನ ಚಪ್ಪಲಿ ಮನೆಯವರ ಶಿಸ್ತನ್ನು ತೋರಿಸುವುದಂತೆ” ಎಲ್ಲೊ ಓದಿದ ನೆನಪು ಮತ್ತೆ ನೆನಪಿಗೆ ಬಂತು ಈ ಬರಹ ಓದಿ.
ಚೆನ್ನಾಗಿದೆ ಬರಹ