ರಘುನಾಥ ಕೃಷ್ಣಮಾಚಾರ್
ಪೋಷಕ ಶಕ್ತಿಗಳು ಶೋಷಕ ಶಕ್ತಿಗಳಾಗಿ ಮಾರ್ಪಡುವ ವೈಪರೀತ್ಯ ಮತ್ತು ಅದರ ಪರಿಣಾಮವಾಗಿ, ಅದಕ್ಕೆ ಸಿಕ್ಕವರು ಪಡುವ ಯಾತನೆ ಇಲ್ಲಿನ ಕತೆಗಳ ಒಂದು ಮುಖ. ಆ ಶೋಷಕ ಶಕ್ತಿಗಳು ಕ್ರಮೇಣ ಮಾಗುವ ಪರಿವರ್ತನೆಯ ಹಾದಿಯನ್ನು ಹಿಡಿಯುವುದು ಇದರ ಇನ್ನೊಂದು ಮುಖ. ಮೊದಲನೆಯ ಪ್ರಕಾರದ ಕತೆಗಳಿಗೆ ರೂಪಕ ಸದೃಶವಾದ ಪ್ರಾತಿನಿಧಿಕ ಕತೆ ‘ಬೆಕ್ಕು ಹಾರುತಿದೆ ನೋಡಿದಿರಾ.’ ಇಲ್ಲಿ ಬರುವ ಬೆಕ್ಕು ತನ್ನ ನಯಗಾರಿಕೆಯಿಂದ ಮನೆಯವರನ್ನು, ಇಲಿಗಳನ್ನು ಭೇಟೆಯಾಡುತ್ತದೆ. ಇದಕ್ಕೆ ನಿದರ್ಶನವಾಗಿ ಇಲ್ಲಿನ ಬಹುತೇಕ ಕತೆಗಳು ಬರುತ್ತವೆ.
ಇಲ್ಲಿ ಅವರು ಬಳಸುವ ಸಾಧನಗಳು ಹಣ, ಅಧಿಕಾರ, ಜಾತಿ, ಜತೆಗೆ ಪ್ರಕೃತಿ ಕೂಡ ಅವುಗಳಲ್ಲಿ ಒಂದಾಗುವುದು. ವಿಷಮತೆಗೆ ಕಾರಣ. ಅದನ್ನು ಶೀರ್ಷಿಕೆಯ ಕತೆ ಅನನ್ಯವಾಗಿ ಸೆರೆಹಿಡಿಯುತ್ತದೆ. ಜೀವದಾಯಿಯಾದ ನದಿಯೆ ಜೀವ ಹರಣದ ಸಾಧನವಾಗಿಬಿಡುವ ವೈಪರೀತ್ಯ ಇಲ್ಲಿಯದು. ಅದರಿಂದ ಜೀವ ಉಳಿಸಿಕೊಳ್ಳಲು ಹೋರಾಡುವ ರಾಮಣ್ಣ ಮತ್ತು ಅವನ ಅಂಗವಿಕಲ ಮಗನ ಕತೆ ಇದು. ಕೆಲಸಕ್ಕಾಗಿ ಅವನನ್ನು ಬೆಂಗಳೂರಿಗೆ ಕಳಿಸಿ ಅವನ ಬರವಿಗಾಗಿ ಕಾಯುವ ಆಶಾವಾದದೊಂದಿಗೆ ಕತೆ ಕೊನೆಗೊಳ್ಳುತ್ತದೆ (ಮೊಲೆವಾಲು ನಂಜಾಗಿ).
ಆದರ್ಶ ಅಧ್ಯಾಪಕನೊಬ್ಬ ಹಣದ ಝಣತ್ಕಾರಕ್ಕೆ ಮರುಳಾದರು, ಅವನಿಂದ ಪಾಠ ಕಲಿತ ವಿದ್ಯಾರ್ಥಿಯೊಬ್ಬ ಅವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿಗೆ ಶಿಫಾರಸು ಮಾಡಿ, ಅದನ್ನು ತಿಳಿಸಲು ಅವರ ಬಳಿಗೆ ಬಂದಾಗ ಎದುರಿಸುವ ತಾಕಲಾಟವನ್ನು ಒಂದು ಕಥೆ ಸಮರ್ಥವಾಗಿ ಸೆರೆಹಿಡಿದಿದೆ. (ಒಂದು ಎರಡು ಬಾಳೆಲೆ ಹರಡು). ‘ಒಂದು ಊರಿನ ಕತೆ’ಯ ಶ್ರೀಮಂತ ಶ್ಯಾಮರಾಯ ನಡೆಸುವ ಶೋಷಣೆಯ ವಿವಿಧ ಮುಖಗಳನ್ನು ಈ ಕತೆ ಅನಾವರಣ ಮಾಡುವುದರೊಂದಿಗೆ ಅವನ ವಿರುದ್ಧವಾಗಿ ಸೆಟೆದು ನಿಂತ ಅವನಿಂದ ಕೊಲೆಯಾದ ಪೂಜಾರಿಯ ಗಟ್ಟಿ ವ್ಯಕ್ತಿತ್ವವನ್ನು ಇಲ್ಲಿ ಮುಖಾಮುಖಿಯಾಗಿಸಲಾಗಿದೆ. ಇನ್ನೊಂದು ಕತೆಯಲ್ಲಿ ತನಗೆ ನ್ಯಾಯಬದ್ಧವಾಗಿ ಬರಬೇಕಾದ ಸಂಬಳ ಕೇಳಿದ್ದಕ್ದೆ ಜಾತಿರಾಜಕಾರಣದಿಂದ ಎತ್ತಂಗಡಿಯಾಗಬೇಕಾದ ಪ್ರಾಮಾಣಿಕ ಅಧ್ಯಾಪಕನೊಬ್ಬನ ದುರಂತ ಕತೆಯನ್ನು ಒಳಗೊಂಡಿದೆ(ಅವನತಿ,).
ಈ ಎಲ್ಲಾ ಕತೆಗಳು ಮೇಲೆ ಉಲ್ಲೇಖ ಮಾಡಿದ ‘ಬೆಕ್ಕುಹಾರುತಿದೆ ನೋಡಿದಿರಾ’ ಕತೆಯ ರೂಪಕಕ್ಕೆ ನಿದರ್ಶನಗಳು. ಆ ಮೂಲಕ ಸಮಕಾಲೀನ ಸಮಾಜದ ಅವನತಿಗೆ ಇವು ಒಂದು ಬಗೆಯಲ್ಲಿ ಸಾಕ್ಷಿ ನುಡಿಯುತ್ತವೆ. ಇದಕ್ಕೆ ಪರ್ಯಾಯವಾಗಿ ಇವುಗಳಿಂದ ಮುಕ್ತಗೊಳ್ಳಲು, ಮಾಗಲು ಆಗಬೇಕಾದ ಪ್ರಕ್ರಿಯೆಯನ್ನು ಮೂರು ಕತೆಗಳು ಸಮರ್ಥವಾಗಿ ನಿರೂಪಿಸುವೆ. ಗಂಡನ ಸಾವಿನ ಸಮ್ಮುಖದಲ್ಲಿ ಜೀವಪರ ನಿಲುವು ತಳೆವ ಹೆಣ್ಣೊಬ್ಬಳ ಕತೆ,( ತಯಾರಿ). ‘ಶಬ್ದ ನಿಶ್ಯಬ್ದ’ ಕತೆಯಲ್ಲಿ ೧೨ ನೆ ಶತಮಾನದ ಮುಕ್ತಾಯಕ್ಕ ‘ಶರಣರು ನುಡಿದು ಸೂತಕಿಗಳಲ್ಲ’ ಎಂಬುದನ್ನು ಅಲ್ಲಮನ ಮೂಲಕ ತನ್ನ ಅಣ್ಣನ ಸಾವಿನ ಸಮ್ಮುಖದಲ್ಲಿ ಆತ್ಮಸಾತ್ ಮಾಡಿಕೊಳ್ಳುತ್ತಾಳೆ.
‘ಮಾಗಿ’ಯಲ್ಲಿ ಪ್ರಕೃತಿಯ ಮಡಿಲಲ್ಲಿ ಮತ್ತು ಅಲ್ಲಿ ಜೀವಿಸುವವರ ಮೂಲಕ ನಾಗರಿಕ ವ್ಯಕ್ತಿಗಳು (ಗೌಡರ ಮತ್ತು ಹುದ್ದಾರ) ತಮ್ಮ ಅಹಂಕಾರವನ್ನು ಕಳಚಿಕೊಳ್ಳುವ, ಮಾಗುವ ಬಗೆಯನ್ನು ಈ ಕತೆ ಅದ್ಬುತವಾದ ವಾತಾವರಣ ಸೃಷ್ಟಿಯ ಮೂಲಕ ಆಗುಮಾಡಿಸುತ್ತದೆ. ಅವರ ‘ಯಾಣ’ದ ಪಯಣ ಪುನರ್ ಜೀವನದ ಯಾನಕ್ಕೆ ದಾರಿಮಾಡಿಕೊಡುವುದು ಇಲ್ಲಿನ ವಿಶೇಷ.
ಲೇಖಕನೊಬ್ಬ ನಮ್ಮ ನಡುವಿನ ಸಮಸ್ಯೆಗಳಿಗೆ ಪರಿಹಾರ ಸೂಚಿಸಬೇಕು ಎಂದು ನಾವು ನಿರೀಕ್ಷೆ ಮಾಡಬೇಕಾಗಿಲ್ಲ. ಆದರೆ ಆ ಕಡೆಗೆ ದಿಕ್ಸೂಚಿಯಾಗಬಹುದು ಅಲ್ಲವೇ. ಅಂತಹ ಮಹತ್ವದ ಇತ್ಯಾತ್ಮಕ ಕತೆಗಳನ್ನು ನಮಗೆ ಕೊಟ್ಟ, ಪುಸ್ತಕವನ್ನು ಕಳುಹಿಸಿದ ಮಲ್ಲಿಕಾರ್ಜುನ ಹಿರೇಮಠರ ಸೌಜನ್ಯಕ್ಕೆ ವಂದನೆ, ಅಭಿನಂದನೆ. ಅವರ ಒಂದೆರಡು ಕತೆಗಳನ್ನು ಓದಿ ಅವರ ಕಥನ ಕೌಶಲಕ್ಕೆ, ಅವರ ‘ಜ್ಞಾನೇಶ್ವರನ ನಾಡಿ’ನಲ್ಲಿ ಓದಿ ಅವರ ಪ್ರವಾಸ ಕಥನಕ್ಕೆ ಮರಳಾಗಿದ್ದೆ. ಈ ಪುಸ್ತಕದ ಮೂಲಕ ಅವರ ಕತೆಗಳನ್ನು ಇಡಿಯಾಗಿ ಗ್ರಹಿಸಲು ಅವಕಾಶ ಮಾಡಿದ ಅವರಿಗೆ ನಾನು ಋಣಿ. ಇದನ್ನು ಮನೋಹರ ಗ್ರಂಥಮಾಲೆ ಎರಡು ಬಾರಿ ಮುದ್ರಿಸಿರುವುದು ಅದರ ಜನಪ್ರಿಯತೆ ಮತ್ತು ಮಹತ್ವಕ್ಕೆ ಸಾಕ್ಷಿ ನುಡಿಯುತ್ತದೆ
0 ಪ್ರತಿಕ್ರಿಯೆಗಳು