ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಂಥ ಮೊಕಾಶಿ ಇವರು..!

k v tirumalesh 3

ಕೆ.ವಿ.ತಿರುಮಲೇಶ್

ಪ್ರಿಯ ಸಂಯುಕ್ತ ಅವರೇ

ನಾನು `ಅವಧೇಶ್ವರಿ’ಯನ್ನು ಓದಿಲ್ಲ, ಆದರೆ ಅದರ ಕುರಿತು ಕೇಳಿದ್ದೇನೆ. ಶಂಕರ ಮೊಕಾಶಿ ಪುಣೇಕರ್ ಕನ್ನಡದ ಒಬ್ಬ ಉತ್ತಮ ಲೇಖಕರು ಎಂದೂ ಕೇಳಿ ಗೊತ್ತು. ಒಂದೆರಡು ಬಾರಿ ಅವರನ್ನು ಕಾಣುವ ಅವಕಾಶವೂ ನನಗೆ ಒದಗಿತ್ತು. ಬಹಳ ಹಾಸ್ಯದ ವ್ಯಕ್ತಿ. ಆದರೆ ಅಷ್ಟೇ ಜಿಗುಟು.

ನಿಮಗೆ ಗೊತ್ತಿರಲಾರದು ಎಂಬುದಕ್ಕೆ ಹೇಳುತ್ತಿದ್ದೇನೆ. ಮೊಕಾಶಿಯವರು ನವ್ಯ ಸಾಹಿತ್ಯವನ್ನು, ಅದು ಕನ್ನಡದಲ್ಲಿ ಬಂದ ಕಾಲದಲ್ಲಿ, ಬಹಳ ವಿರೋಧಿಸಿದವರು. ನವ್ಯಸಾಹಿತ್ಯ ನಮ್ಮ ಸಂಸ್ಕೃತಿಯನ್ನು ಹಾಳು ಮಾಡುತ್ತದೆ ಎಂಬ ಭಾವನೆಯನ್ನು ಇಟ್ಟುಕೊಂಡವರು ಅವರು. ಗೇಲಿ ಮಾಡುತ್ತಿದ್ದರು. (ಆದರೆ ತಾವು ಸ್ವತಃ ತಮ್ಮ ಇಂಗ್ಲಿಷ್ ಕವಿತೆಗಳ ಸಂಕಲನವೊಂದನ್ನು ಹೊರತಂದು ಇಂಡೋ ಆಂಗ್ಲಿಯನ್ ಪೋಯೆಟ್ ಅನಿಸಿಸಿಕೊಂಡವರು.) ಅವರ ಈ ಪ್ರತಿಕ್ರಿಯೆ ಸೈದ್ಧಾಂತಿಕಕ್ಕಿಂತ ಹೆಚ್ಚು ವೈಯಕ್ತಿಕವಾಗಿತ್ತು ಎಂದು ನನ್ನ ಭಾವನೆ.

shankar mokashi punekarಎರಡನೆಯದಾಗಿ, ೧೯೭೫ರಲ್ಲಿ ಇಂದಿರಾಗಾಂಧಿ ಎಮರ್ಜೆನ್ಸಿ ಘೋಷಿಸಿದಾಗ ಅದು ತಮ್ಮದೇ ಕಾರ್ಯಕ್ರಮ ಎಂಬಷ್ಟು ಬದ್ಧತೆಯಿಂದ ಮತ್ತು ಭಾವತೀವ್ರತೆಯಿಂದ ಅದನ್ನು ಬೆಂಬಲಿಸಲು ತೊಡಗಿದರು ನಮ್ಮ ಮೊಕಾಶಿ. ಇದು ನಮ್ಮಲ್ಲಿ ಹಲವು ಲೇಖಕರಿಗೆ ನೋವುಂಟುಮಾಡಿತು. ಒಬ್ಬ ಲೇಖಕನಿಗೆ ನಾಗರಿಕ ಸ್ವಾತಂತ್ಫ್ರ್ಯವೆನ್ನುವುದು ಜೀವಕ್ಕಿಂತ ಹೆಚ್ಚಿನದು. ಅದನ್ನೇ ಅದುಮಿದ ಎಮರ್ಜೆನ್ಸಿಯನ್ನು ಒಬ್ಬ ಲೇಖಕರೇ ಬೆಂಬಲಿಸುತ್ತಾರೆ ಎನ್ನುವುದನ್ನು ನಂಬಲೂ ಕಷ್ಟವಾಗುತ್ತದೆ ಅಲ್ಲವೇ?

ಆದರೆ ಮೊಕಾಶಿಯವರು ನಮ್ಮ ನಡುವೆ ಅದಕ್ಕೊಂದು ಉದಾಹರಣೆಯಾಗಿ ಇದ್ದವರು. ಇಂಥ ಬೇರೆಯವರೂ ಇದ್ದರು–ಉದಾಹರಣೆಗೆ ಖುಷ್ವಂತ್ ಸಿಂಗ್. (ಬಹುಶಃ ನೀವು ಪೋಸ್ಟ್ ಎಮರ್ಜೆನ್ಸಿ ತಲೆಮಾರಿನವರು ಇರಬಹುದು. ಆದ್ದರಿಂದ ಆ ಎಮೆರ್ಜೆನ್ಸಿ ಹೇಗಿತ್ತು ಎನ್ನುವುದು ನಿಮಗೆ ಗೊತ್ತಿರಲಾರದು.)

ಮೊಕಾಶಿಯವರು ಇಂದಿರಾಗಾಂಧಿಯ ಭಕ್ತರೇ ಆಗಿಬಿಟ್ಟಿದ್ದರು; ಆಕೆಯ ಹೆಸರಿನಲ್ಲಿ ಅವರೊಂದು ಹಿಂದುಸ್ತಾನೀ ರಾಗವನ್ನು ಕೂಡ ಯೋಜಿಸಿದ್ದರು!

ಮೊಕಾಶಿ ಎಂದಾಗ ನನಗಿದೆಲ್ಲವೂ ನೆನಪಾಗುತ್ತದೆ.

ಅವರ `ಅವಧೇಶ್ವರಿ’ ಇಂದಿರಾಗಾಂಧಿಯನ್ನು ಸಮರ್ಥಿಸುವ ಕೃತಿ ಎಂದೂ ನಾನು ಕೇಳಿದ್ದೇನೆ: ಮಿಲ್ಟನ್ ದೇವರ ಕಾರ್ಯಗಳನ್ನು ಮನುಷ್ಯರಿಗೆ ತಿಳಿಯಪಡಿಸಲು `ಪ್ಯಾರಡೈಸ್ ಲಾಸ್ಟ್’ ಬರೆದಂತೆ! ಆದರೆ ಎಮರ್ಜೆನ್ಸಿ ಕಾಲದ ಇಂದಿರಾಗಾಂಧಿ ಮಾತ್ರ ದೈವೀಶಕ್ತಿಯಾಗಿರಲಿಲ್ಲ, ಸೈತಾನೀ ಶಕ್ತಿಯಾಗಿದ್ದಳು.ಈ ಶಕ್ತಿಯ ಕರಾಳ ಕ್ರಿಯೆಗಳನ್ನು ಸಮರ್ಥಿಸಲು ಶಂಕರ ಮೊಕಾಶಿ ಒಂದು ಕಾದಂಬರಿಯನ್ನು ಬರೆಯಬೇಕಾಯಿತು!

ಒಬ್ಬ ಲೇಖಕನೆಂದು ನನಗೆ ಮೊಕಾಶಿಯ ಬಗ್ಗೆ ಆದರವಿದೆ–ಆದರೆ ಅವರ ಕೆಲವು ನಡವಳಿಕೆಗಳ ಬಗ್ಗೆ ಇಲ್ಲ.

ಕೆ.ವಿ.ತಿರುಮಲೇಶ್

‍ಲೇಖಕರು Admin

12 July, 2016

3 Comments

  1. Avadhi

    we have carried this comment already

  2. shama nandibetta

    “ಒಬ್ಬ ಲೇಖಕನೆಂದು ನನಗೆ ಮೊಕಾಶಿಯ ಬಗ್ಗೆ ಆದರವಿದೆ–ಆದರೆ ಅವರ ಕೆಲವು ನಡವಳಿಕೆಗಳ ಬಗ್ಗೆ ಇಲ್ಲ.”

    Nimma neravanthike, prasthutha padisida reethi eradooo sooooopaer sir

  3. ಗುಡ್ಡ

    ಇದನ್ನು ಓದಿದ ಮೇಲೆ ನನಗೆ ‘ಗಂಗವ್ವ ಗಂಗಾಮಾಯಿ’ಯಲ್ಲೂ ಇಂದಿರಾ ಗಾಂಧಿ ಕಾಣ್ತಾ ಇದಾಳೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading