ಪ್ರಸಾದ್ ರಕ್ಷಿದಿ
ಗುಡ್ಡವನ್ನೇರಿ ನುಡಿಸುತ್ತಿದ್ದ ಚಂಡೆ ಮದ್ದಳೆಯ ದನಿ ಕೇಳಿ ಹರದಾರಿ ದೂರದಿಂದ ಜನರು ಯಕ್ಷಗಾನ ನೋಡಲು ಬರುತ್ತಿದ್ದರು.
ನಾವು ಚಿಕ್ಕವರಿದ್ದಾಗ ಮೈಕಿನ ಆಗಮನವಾಗಿತ್ತು. ಯಕ್ಷಗಾನವಿರಲಿ. ಹರಿಕಥೆಯಿರಲಿ ಸುತ್ತಲಿನ ಹಳ್ಳಿಗಳಿಂದ ಸಾವಿರ ಸಂಖ್ಯೆಯಲ್ಲಿ ಜನ ಬರುತ್ತಿದ್ದರು. ಪಂಡಿತ ಪಾಮರರು ಜೊತೆಯಾಗಿಯೇ ಕುಳಿತು ನಾಟಕ, ಯಕ್ಷಗಾನ ನೋಡುತ್ತಿದ್ದರು. ಕಲೆ ಅನುರಣನವಾಗುತ್ತಿತ್ತು. ಇನ್ನಷ್ಟು ಜನರನ್ನು ತನ್ನತ್ತ ಸೆಳೆದು ತರುತ್ತಿತ್ತು. ಅನುಕರಣಕ್ಕೆ ಸಾಧ್ಯವಿತ್ತು, ಮನೆಯಲ್ಲಿಯೇ ಒಂದೆರಡು ಪದ ಹಾಡಿ ಕುಣಿಯುವವರಿದ್ದರು.
ಹರಿಕಥೆ ಕೇಳಿ ನೋಡಿ ಮಕ್ಕಳು ಶಾಲೆಯಲ್ಲಿ ಹರಿಕಥೆ ಮಾಡಿದ್ದನ್ನು ನೋಡಿದ್ದೇನೆ. ನಮ್ಮೂರಲ್ಲಿ ನಡೆದ ಹಲವು ನಾಟಕಗಳನ್ನು ಸುತ್ತಲಿನ ಶಾಲೆಗಳ ಶಿಕ್ಷಕರು ಅನುಕರಿಸಿ ಸ್ಕೂಲ್ ಡೇ ಗಳಲ್ಲಿ ನಾಟಕ ಮಾಡಿಸಿದ್ದಾರೆ.
ನನ್ನ ದೃಷ್ಟಿಯಲ್ಲಿ ಅವೆಲ್ಲವೂ ಒಳ್ಳೆಯ ನಾಟಕಗಳೇ, ಸಮುದಾಯಿಕ ಕಲೆಯಾದ ನಾಟಕ ಬೆಳೆಯಬೇಕಾದ್ದು ಉಳಿಯಬೇಕಾದ್ದು ಹೀಗೆ. ಅನುಕರಣ , ಅನುರಣನ ಸಾಧ್ಯವಿಲ್ಲದ ಸಮುದಾಯಿಕ ಕಲೆ ಉಳಿಯಲಾರದು.
ಪೋನ್ ಮಾಡಿ, ಮೆಸೇಜ್ ಹಾಕಿ, ಪ್ರೇಕ್ಷಕರಿಗೆ ನೆನಪಿಸಿ ಕರೆಸಬೇಕಾದ ಸ್ಥಿತಿ ಯಾಕೆ ಬಂತೆಂದು ನಾವೆಲ್ಲ ಯೋಚಿಸಬೇಕು. ಅಷ್ಟೆಲ್ಲ ಮಾಡಿದರೂ ದೊಡ್ಡ ನಗರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಅನೇಕ ಬಾರಿ ನೂರನ್ನೂ ಮೀರುವುದಿಲ್ಲ (ಸಂಖ್ಯೆ ಮುಖ್ಯವಲ್ಲ ಎನ್ನುವವರಿಗೆ ನಾನೇನೂ ಹೇಳಲಾರೆ) ಸರ್ಕಾರಿ ಪ್ರಾಯೋಜಕತ್ವ ಇಲ್ಲದಿದ್ದರೆ ನಮ್ಮ ನಾಟಕೋತ್ಸವಗಳ ಅನೇಕ ನಾಟಕತಂಡಗಳ ಸ್ಥಿತಿ-ಗತಿ ಏನಾಗುತ್ತಿತ್ತು ಯೋಚಿಸಿ.
ದೊಡ್ಡ ನಾಟಕೋತ್ಸವಗಳಲ್ಲಿ ಪ್ರದರ್ಶನ ನೀಡುವುದೇ ಪರಮ ಗುರಿಯೇ. ನಾವು ಒಂದೂರಿಗೆ ಹೋಗಿ ನಾಟಕ ಪ್ರದರ್ಶನ ನೀಡಿದ ನಂತರ “ನಾವೂ ಇಂತಹ ನಾಟಕ ಮಾಡಬಹುದು” ಎಂದು ಆ ಊರಲ್ಲಿ ಒಬ್ಬನಿಗಾದರೂ ಅನ್ನಿಸದಿದ್ದರೆ ಅದು ಯಾರ ತಪ್ಪು?
kaalada anivaaryate rakshidi avare.