ಇರುಳು
ಸರೋಜಿನಿ ಪಡಸಲಗಿ
ಚಿತ್ರಗಳು: ಶಿವಶಂಕರ ಬಣಗಾರ್
ಮೆಲ್ಲ ಮೆಲ್ಲಡಿಯಿಡುತ
ತಿರು ತಿರುಗಿ ಜಗ ನೋಡುತ
ಪಡುವಣದತ್ತ ಸಾಗಿದ
ದಿನಮಣಿ ಭಾನು
ಬೇಲಿ ಹಸಿರು ಕೆಂಪಾಗಿ
ಧರೆಯೊಡಲು ತಂಪಾಗಿ
ತುಂಬಿತಲ್ಲಿ ಮೌನ ಸಾರುತ
ಇನ್ನು ರಾಜ ನಾನು.
ಬೆಳಕಿನ ಅಬ್ಬರಕೆ
ಹಗಲಿನ ಆರ್ಭಟಕೆ
ಹೆಪ್ಪುಗಟ್ಟಿದ ಭಾವ
ರೆಕ್ಕೆ ಬಿಚ್ಚಿ ಹಾರಿ ಬಂತಾಗ
ಮನದ ಗೂಡ ಬಿಟ್ಟು
ರಂಗಿನ ರೂಪ ತೊಟ್ಟು
ಇರುಳ ಸಾಮ್ರಾಜ್ಯದಿ
ಮೆರವಣಿಗೆ ಹೊರಟಿತಾಗ.
ಮಿಣ ಮಿಣನೇ ಮಿನುಗಿ
ಹಾಯಾದ ಬೆಳಕು ಸೂಸಿ
ನಕ್ಷತ್ರ ರಾಶಿ ಒಂದು
ಬೆಳ್ಳಿ ಪಥ ತೋರಿಸಿತಾಗ
ಮೆಲ್ಲ ಮೆಲ್ಲನೆ ಇಣುಕಿ
ನಸು ನಗುವ ಬಿರಿಸಿ
ತಿಂಗಳನು ಹರಿಸಿದ
ಹಾಲ ಹೊಳೆಯನಾಗ.
ಅಲ್ಲಿ ಇಲ್ಲಿ ಇಣುಕಿ
ಅತ್ತ ಇತ್ತ ಹುಡುಕಿ
ಚಿತ್ತ ಬಿತ್ತಿತಲ್ಲಿ ಹೊಸ
ಮುತ್ತಿನ ಚಿತ್ತಾರವಾಗ
ಹೆಜ್ಜೆ ಹೆಜ್ಜೆ ಸರಿಸಿ
ಗೆಜ್ಜೆ ಕಟ್ಟಿ ಕುಣಿದು
ಸಂಭ್ರಮದ ಸಂತೆ ಒಂದು
ನೆರೆಯತಲ್ಲಿ ಆಗ.
ರವಿ ರಶ್ಮಿ ಕಾಂತಿಗೆ
ಹುಚ್ಚ ಹಿಡಿಸೋ ಹೊಳಪಿಗೆ
ಉಬ್ಬರಿಸದೀ ಕಲ್ಪನೆಯ
ಕಡಲು ಎನಿಸಿತಾಗ
ಮೃದು ಮಧುರ ಭಾವುಕೆ
ರಾಗಿಣಿಯ ಉನ್ಮಾದಕೆ
ನಿಶೆಯು ಮೀಟೀದಳೇನೋ
ಒಂದು ಹೊಸ ತಂತಿ ಎನಿಸಿತಾಗ.





namaste ma’am …uttama kavana..oLLeyadagali..
ಧನ್ಯವಾದಗಳು ಸರ್ ನಿಮ್ಮ ಮೆಚ್ಚುಗೆಗೆ. ಶಿವಶಂಕರ ಬಣಗಾರ ಅವರೇ ನಿಮ್ಮ ರಮ್ಯ ಚಿತ್ರ ನನ್ನ ಕವನಕ್ಕೆ ಮೆರುಗು ಕೊಟ್ಟಿದೆ . ಅನಂತ ಧನ್ಯವಾದಗಳು ನಿಮಗೆ.