ರಾಟುವಾಣದ ತೊಟ್ಟಿಲೊಳಗೆ..
ಟಿ ಕೆ ದಯಾನಂದ್

ಕಡುಹಸುರು ತೊಗಟೆಯ ಹೆಸರಿಲ್ಲದ ಮರದ ಟೊಂಗೆಯೊಳಗೆ
ಒಣಗಿದೆಲೆ, ಸವುದೆಪುಳ್ಳೆ, ಅದ್ಯಾವುದೋ ಗಿಡದ ನರಗಳ ಬಲೆ,
ಇಟ್ಟು ದಿನವಾದ ಮೊಟ್ಟೆಗಳ ಕಂದುಸಿಪ್ಪೆಯತ್ತಲೇ ಕಣ್ಣು ನೆಟ್ಟ
ಒಕ್ಕಣ್ಣು ಗಿಣಿಯ ರೆಕ್ಕೆಗಳೊಳಗೆ ಮಡಚಿಟ್ಟ ನೆನಪುಗಳ ಸಂತೆ.
ದೂರವಲ್ಲದ ದೂರದಲ್ಲಿ ಯಾರೂ ಹುಟ್ಟಿಸದ ತಲಪರಿಕೆಯ ಒರತೆ,
ಪೊದೆಮುಚ್ಚಿದ ಹಳ್ಳಕ್ಕೆ ಅಡ್ಡಬಿದ್ದ ಕಾಂಡವೊಂದರ ತುದಿಗೆ ಕೂತ,
ನೆರಿಗೆ ಬಿದ್ದ ಕಣ್ಣಲ್ಲೇ ಮೋಡಕ್ಕೆ ಬಣ್ಣ ಬಳಿಯುವ ವೃದ್ಧೆಯೊಬ್ಬಳು..
ಹೊಲೆದಿಟ್ಟ ಬದುಕನ್ನು ಎಲೆಯಡಿಕೆಯ ಸಂಚಿಯಲ್ಲಿ ಹುಡುಕುತ್ತಾಳೆ.
ಐದು ತುದಿಗೂ ಮೊಳೆ ಹೊಡೆಸಿಕೊಂಡು ಆಕಾಶದಿಂದ ನೆಲಕ್ಕೆ
ಮಕಾಡೆಬಿದ್ದ ಅರ್ಧಜೀವ ನಕ್ಷತ್ರದ ತುಂಡೊಂದಕ್ಕೆ ಇನ್ನಿಲ್ಲದ ಆಸೆ.
ನಿಚ್ಚಣಿಗೆಯ ಕಟ್ಟುವ ಜೀವಕ್ಕೆ ಅದ್ಯಾವಾಗಿಂದಲೋ ಕಾಯ್ದ ಉಸುರು,
ತುಯ್ಯುತ್ತದೆ, ಅತ್ತಲೂ ಇತ್ತಲೂ ಮುತ್ತಲೂ ಎತ್ತಲೂ ಕತ್ತಲಕಾವಳ.
ಆಸೆಗೂಡೊಳಗಿನಿಂದ ತಲೆ ಹೊರಗಿಟ್ಟ ಇರುವೆಗೆ ತುಂಬುಜ್ವರ,
ಬಿಡುಬೀಸು ಬಿಸಿಲಿಗೆ ಇಟ್ಟ ಹೆಜ್ಜೆಯೇ ಸುಟ್ಟುಹೋಗುವ ಭಯ,
ಗೂಡುಮಾಡಿನ ಗೋಡೆಗಳಿಗೆ ನೆತ್ತಿಯಾನಿಸುವ ಪುಟ್ಟಜೀವಕ್ಕೆ,
ಇನ್ನೇನು ನೆಲತಬ್ಬಲು ಹೊರಟ ಮಳೆನೀರ ಮೇಲೆ ಗ್ಯಾನವು.
ಎದೆನೀವುವ ಜನರಿಗಾಗಿ ಹುಬ್ಬಿನ ಮೇಲಿಟ್ಟ ಮಡಚಿದ ಅಂಗೈಗೆ
ಆಗೀಗ ಗಾಳಿಸೋಕುವ ಪುಳಕಕ್ಕೆ ನೇಣುಹಾಕಿಕೊಳ್ಳುವ ಆಸೆ.
ಮೈ ತುಂಬ ಕಣ್ಣು ಮೆತ್ತಿಕೊಂಡ ರಾಟುವಾಣದ ತೊಟ್ಟಿಲೊಳಗೆ
ಮೆಲ್ಲಗಿಳಿದ ಕುಂಟುಕಾಲಿನ ಹುಡುಗಿಗೆ ಬದುಕಿಬಿಡುವ ಆತುರ.
]]>
Like this:
Like Loading...
Related
Nice Poem. Lankesh chaaye eddu kaanuttide.