ಹಂದಲಗೆರೆ ಗಿರೀಶ್
ನೇತಾರ
ಕಾಲ ಚರಕದಲ್ಲಿ
ಅಹಿಂಸೆಯ ನೂಲಿದ
ಹಿಂಸೆಗಾಗಿ,
ಸ್ವರಾಜ್ಯದ ಹಾದಿಗೆ
ತನ್ನ ತಾ ತೇದುಕೊಂಡ
ಸ್ವಾರ್ಥಕ್ಕಾಗಿ,
ಸನಾತನ ಧರ್ಮ
ಪರಿಷ್ಕಾರಕ್ಕಿಳಿದ
ಫಕೀರ ಪೋಷಾಕಿಗಾಗಿ,
ಆಶ್ರಮ
ಜೀವನಕ್ರಮ
ಮಹಾತ್ಮ ಬಿರುದಿಗೆ
ಮಲಬಾಚಿದ ನಾಟಕಕ್ಕೆ
ಉಳಿದ ಅಸ್ಪೃಶ್ಯತೆಗೆ
ಒಡೆದ ದೇಶಕ್ಕೆ
ಬಹುತ್ವಕ್ಕೆ ಅಸಹಿಷ್ಣುತೆಗೆ,

ನುಡಿದದ್ದಕ್ಕೆ ನಡೆದದ್ದಕ್ಕೆ
ಅದಕೂ ಇದಕೂ
ಎಲ್ಲಕ್ಕೂ..
ಹಠಮಾರಿ ಮುದುಕನೇ ಕಾರಣ
ದೂಷಿಸಿದರು ನಿಂದಿಸಿದರು
ಆಶ್ರಮ ನಡುಗುವಂತೆ
ಗಾಂಧಿ ಟೋಪಿತೊಟ್ಟವರು
ಸಮರ್ಥನೆಗಿಳಿದರು
ಪ್ರಶ್ನೆ
ಉತ್ತರ
ನಡುವೆ ಸತ್ಯ ನರಳುತಿತ್ತು
ಚರಿತ್ರೆಯ ಗೋರಿಯೊಳಗಿಂದ
ಹೊತ್ತು ತಂದು
ಗಾಂಧಿ ಶವಪರೀಕ್ಷೆಗಿಳಿದರು
ಗಾಂಧಿಯ ಮೂರು ಕೋತಿಗಳು
ಮೂಗಿನ ಮೇಲೆ ಬೆರಳಿಟ್ಟು!
ಹೇಳಿದವು
ಮಹಾತ್ಮನ ದ್ವೇಷಿಸುವವರು ಪ್ರೀತಿಸುವವರು
ಅರ್ಧಸವೆದ ಗಾಂಧಿ ಮೆಟ್ಟಿನಲ್ಲಿ ನಿಂತು
ನಿಂತ ಚರಕವ ತಿರು ತಿರುಗಿಸಿ ಬನಿಯಾ
ಗಳಿಸಿಟ್ಟಿರುವ ಆಸ್ತಿ
ಅಸ್ಥಿಯನ್ನೊಮ್ಮೆ ಎಣಿಸಲಿ
ಅವನ ಸೊನ್ನೆ ಚಾಳೀಸಿನಿಂದ
ಗಾಂಧಿ ಕಂಡ ಜಗವನ್ನೊಮ್ಮೆ ಕಾಣಲಿ
ಅರಳುವ ಹೂವಿಗೆ
ಬೀಸುಗಾಳಿ ಹರಿವ ನದಿ
ಪ್ರೀತಿ ತ್ಯಾಗಕ್ಕೆ ಸತ್ಯ ಶೂನ್ಯಕ್ಕೆ
ಅರ್ಥಹುಡುಕುವುದು
ಬೆಂಕಿಗೆ ತೊಡಿಸುವ ಬಟ್ಟೆ






0 Comments