ನಳಿನ ಡಿ
ಮೂಜಗದ ಎದುರು ನೀಟಾಗಿ ನಿಂದ ಮಂಥರೆ!
ಭರತನೂ
ರಾಮನೂ
ನಡುವೆ ತಂದ ತಡೆಗೋಡೆ,
ಕೇಡು ಯಾರಿಗೆ ಎರಗಿತು,
ಪಾಪಿ ದಶರಥನ ತಲೆ ಒರಗಿತು.
ಕಕ್ಕುಲತೆಯಲಿ ಭರತನ ಕಂಡಳಾ ಮಂಥರೆ,
ಜನಕೆ ಕುರೂಪಿ, ಗೂನುಬೆನ್ನಿನವಳು,
ಭರತಂಗೆ ತಾಯಾದ ಮಂಥರೆ..
ಉರುಳಾಯಿತು ಆಯೋಧ್ಯೆಯ ಸಿಂಹಾಸನಕೆ,
ಸಿರಿಯ ಹೊತ್ತು ಸುಖವಾಗಿ ಮೆರೆಯಬೇಕಿದ್ದ ರಾಜಶ್ರೀ ಪ್ರಜೆಗಳ ಭಾಗ್ಯವಳಿದು,
ಶೋಕಸಾಗರದ ದೇವಿ ಮಿಕ್ಕುಮೀರಿ ಅಲೆ ಅಲೆಯಾಗಿ ಹರಿದು,
ಅಯೋಧ್ಯಾಪುರಿಯ ಒಳಸರಿದಳಾ.. ಅಕ್ಕಟಾ…

ಊರ್ಮಿಳಾ ವಿರಸ ಸಂಪನ್ನತೆಯ ಸೂಚನೆಯೂ ಅರಿಯದೆ,
ಬರದಿ ಇನಿಯನ ಅಣ್ಣನ ಪಟ್ಟಾಭಿಷೇಕದ ಸುಖಕೆ ಮನತುಂಬಿ ಮರೆಯುತಿಹಳು, ಕಣ್ತುಂಬಿ ಲಕ್ಷಣನ ಕಣ್ಗೊಂಬೆಯ.. ಆಹಾ!
ಅದೇನು ಆಕಾರ,
ಪುರುಷ ಸಿಂಹನೆದೆಯ ವಿಸ್ತಾರದೆ ಮೆರೆವ ನಾ ಧನ್ಯೆ..
ಬಹು ಅಪರೂಪದ ದಾಂಪತ್ಯ ಸುಖ ಎನದು…
ಎನುತ ಧೀನತೆಯಲಿ ಪರಶಿವನ ನೆನೆದಳು ಮಹಾಸತಿ..
ಮಂಥರೆಗೇನು ಕೇಡು ಬಗೆಯದ ನಿಷ್ಪಾಪಿಯ ಎದೆಯಲ್ಲಿ ಛೇ ಎಂಥಾ ಭಿರುಕು!
ಕೂಗಿದರೂ ದನಿಯಿಲ್ಲ, ಪಡೆದ ಪುಣ್ಯಸ್ವರೂಪಿ ಪತಿತಂದ ಸೌಭಾಗ್ಯ..
ಸಕಲ ನೀತಂದ ಲೀಲೆ.. ಕಣ್ತುಂಬಿ ಬಂದರೂ ತಲೆಬಾಗಿ ನಡೆದಳು ಸೀತಾ ಮಾಯಿ ಪತಿಯಂತೆಯೇ ನಾರುಮಡಿಯಲಿ..
ರಾಜ್ಯ, ಧನಕನಕ, ಮಣ್ಣು, ಹೆಣ್ಣೆಂಬುದರಿಂದಾಗಿ ಮನಹಾಳು, ಮನೆಹಾಳು, ಪುರವೂ ಹಾಳು.. ಸುಳ್ ಸುಳ್ಳು.. ಮನಕೆ ಹೊತ್ತಿದ ಕಾಮ, ಲೋಭ, ಮಧ, ಮತ್ಸರಗಳಿಗೀಡು ಉಳಿದವರ
ಬಾಳು, ಮನಸಿನ ಮುಂದಣ ಹಸಿ ಆಸೆಗೆ ಚಕ್ರಾಧಿಪತ್ಯವೇನು ಮಾನವನ ಇತಿಹಾಸವೇ ಹೋಳು.
ಕಾಮ, ಪ್ರೇಮ, ಸೋಮ ಅಡರಿ ಲೋಕದ ಕಣ್ಣು ಕುರುಡು..
ಮುದುಕಿ ಪಾಪ.. ಮಂಥರೆ.. ಆದರೂ ಶಿಕ್ಷೆ ಯಾರಿಗೆ?






0 Comments